Thursday, May 14, 2026
Homeಯಕ್ಷಗಾನಯಕ್ಷಗಾನ ‘ಮಾನಸಚರಿತ್ರೆ’ ಬಿಡುಗಡೆ

ಯಕ್ಷಗಾನ ‘ಮಾನಸಚರಿತ್ರೆ’ ಬಿಡುಗಡೆ

ಮಾನಸಚರಿತ್ರೆ:
ಮೂಲಿಕೆ ವೆಂಕಣ್ಣ ಕವಿಯು (1750-1830) ರಚಿಸಿದ ಯಕ್ಷಗಾನ ‘ಮಾನಸಚರಿತ್ರೆ’ ಎಂಬ ಪ್ರಸಂಗದ ಬಗೆಗೆ ಡಾ. ಶಿವರಾಮ ಕಾರಂತರೇ ಮೊದಲಾಗಿ ಹಲವಾರು ವಿದ್ವಾಂಸರು ಉಲ್ಲೇಖಿಸಿದ್ದರೂ ಇದುವರೆಗೆ ಅದರ ಹಸ್ತಪ್ರತಿ ಲಭ್ಯವಾಗಿರಲಿಲ್ಲ. ಇತ್ತೀಚೆಗೆ ಉಡುಪಿ ತಾಲೂಕಿನ ದಿ|| ಶಿರೂರು ಫಣಿಯಪ್ಪಯ್ಯನವರ ಸಂಗ್ರಹದಲ್ಲಿ ಅದರ ತಾಳೆಗರಿ ಮತ್ತು ಶಿರೂರು ಫಣಿಯಪ್ಪಯ್ಯನವರೇ ಬರೆದುಕೊಂಡಿದ್ದ ಸ್ವಹಸ್ತಪ್ರತಿ ದೊರಕಿದ್ದು ಯಕ್ಷಗಾನ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಇದನ್ನು ಸಂಪಾದಿಸಿದ್ದಾರೆ.

ಮನುಷ್ಯನ ಮನಸ್ಸಿನ ಸಂಘರ್ಷವನ್ನು ಚಿತ್ರಿಸುವ ಈ ಪ್ರಸಂಗವು ಯಕ್ಷಗಾನ ಸಾಹಿತ್ಯದ ಇತಿಹಾಸದಲ್ಲೇ ಅನನ್ಯವಾಗಿದ್ದು ಆಟ ಮತ್ತು ಕೂಟಗಳೆರಡಕ್ಕೂ ಚೆನ್ನಾಗಿ ಒಪ್ಪುವಂತಿದೆ. ಇದು ಪುರಾಣದ ಕಥೆಯಲ್ಲವಾದರೂ ಉಪನಿಷತ್ತುಗಳ ಚಿಂತನೆಯನ್ನು ಬಹಳ ಅರ್ಥಗರ್ಭಿತವಾಗಿ ಚಿತ್ರಿಸಿದೆ.


ಮೂಲಿಕೆ ವೆಂಕಣ್ಣಕವಿಯು ಮೂಲತಃ ಉತ್ತರಕರ್ನಾಟಕದ ಬಂಕಾಪುರದವನಾಗಿದ್ದು ಹರಿದಾಸನಾಗಿ ಮೂಲ್ಕಿಗೆ ಬಂದು ನೆಲೆಸಿದವನು. ಅವನು ಯಕ್ಷಗಾನ ಕೃತಿಗಳಲ್ಲದೆ ಭಕ್ತಿಭಾವದ ಕೀರ್ತನೆಗಳನ್ನು ರಚಿಸಿದ್ದು, ಇವುಗಳನ್ನು ಈಗಲೂ ಭಜನಾತಂಡದವರು ಹಾಡುತ್ತಾರೆ. ಇವನು ಹಲವಾರು ಶಿಷ್ಯರಿಗೆ ಹರಿದಾಸದೀಕ್ಷೆಯನ್ನು ನೀಡಿದನೆಂದೂ ಹೇಳಲಾಗುತ್ತದೆ.


ವಾಜಿಗ್ರಹಣ ಅಥವಾ ಯೌವನಾಶ್ವನ ಕಾಳಗ:
ಈ ಪ್ರಸಂಗವನ್ನು ರಚಿಸಿದವರು ಪ್ರಸಿದ್ಧ ಯಕ್ಷಗಾನಕವಿ ದಿ|| ಶಿರೂರು ಫಣಿಯಪ್ಪಯ್ಯನವರು. ಇವರು ಹದಿನೈದು ಪ್ರಸಂಗಗಳನ್ನು ರಚಿಸಿದ್ದು ಯಕ್ಷಗಾನದ ನೂರಾರು ಹಸ್ತಪ್ರತಿ ಮತ್ತು ತಾಡವಾಲೆಗಳನ್ನು ಸಂರಕ್ಷಿಸಿಕೊಂಡು ಬಂದವರು. ‘ವಾಜಿಗ್ರಹಣ’ ಪ್ರಸಂಗವು ಪಾಂಡವರ ಅಶ್ವಮೇಧದ ಕಥೆಯನ್ನು ಒಳಗೊಂಡಿದ್ದು ರಂಗದಲ್ಲಿ ಜನಮನವನ್ನು ರಂಜಿಸುವ ಹಾಗೆ ರಚನೆಗೊಂಡಿದೆ. ಇವರು ರಚಿಸಿದ ‘ಶ್ರೀಕೃಷ್ಣ ಗಾರುಡಿ’ ಉಡುಪಿಯ ಪಾವಂಜೆಯವರಿಂದ 1963ರಲ್ಲಿಯೇ ಪ್ರಕಟವಾಗಿದ್ದು, ಈಗ ಅವರ ಎರಡನೆಯ ಈ ಪ್ರಸಂಗ ಲೋಕಾರ್ಪಣೆಗೊಳ್ಳುತ್ತಿದೆ.


ಫಣಿಗಿರಿ ಪ್ರತಿಷ್ಠಾನ:
ದಿ|| ಶಿರೂರು ಫಣಿಯಪ್ಪಯ್ಯನವರ ಸುಪುತ್ರರಾದ ಶ್ರೀ ಉಮೇಶ ಶಿರೂರು ಅವರು ಟೆಲಿಕಾಂ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿ ಈಗ ನಿವೃತ್ತರು. ‘ಫಣಿಗಿರಿ ಪ್ರತಿಷ್ಠಾನ ’ವನ್ನು ಆರಂಭಿಸಿ ತೀರ್ಥರೂಪರ ಎಲ್ಲಾ ಯಕ್ಷಗಾನ ಪ್ರಸಂಗಗಳನ್ನು ಪ್ರಕಟಿಸುವ ಹಂಬಲವನ್ನು ಹೊಂದಿದ್ದಾರೆ. ತಾಳೆಗರಿ ಸಂರಕ್ಷಣೆ ಮತ್ತು ಹಸ್ತಪ್ರತಿಗಳಲ್ಲಿರುವ ಕೃತಿಗಳ ಮುದ್ರಣದ ಸಂಕಲ್ಪದಿಂದ ಈ ‘ಫಣಿಗಿರಿ ಪ್ರತಿಷ್ಠಾನ ’ವು ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಉದ್ಘಾಟನೆಗೊಳ್ಳುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments