Saturday, May 4, 2024
Homeಪುಸ್ತಕ ಮಳಿಗೆಹೊಸ್ತೋಟ ಮಂಜುನಾಥ ಭಾಗವತರ ವೀರಾಂಜನೇಯ ವೈಭವಕ್ಕೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ 

ಹೊಸ್ತೋಟ ಮಂಜುನಾಥ ಭಾಗವತರ ವೀರಾಂಜನೇಯ ವೈಭವಕ್ಕೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ 

ಯಕ್ಷಋಷಿ ದಿ| ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ಪ್ರಸಂಗಗಳ ಗುಚ್ಛ ವೀರಾಂಜನೇಯ ವೈಭವಕ್ಕೆ(ಸಮಗ್ರ ಹನುಮಾಯನ ) 2019ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ದೊರಕಿದೆ. ಈ ಪ್ರಸಂಗ ಸಂಪುಟ ಒಟ್ಟು 27 ಪ್ರಸಂಗಗಳನ್ನೊಳಗೊಂಡಿದೆ. ಈ ಪ್ರಸಂಗ ಸಂಪುಟವನ್ನು ಪ್ರಕಾಶನಗೊಳಿಸಿದವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಪ್ರಕಾಶನ. 


ಯಕ್ಷಗಾನ ರಂಗದಲ್ಲಿ ಭೀಷ್ಮ ಪಿತಾಮಹನೆಂದೇ ಗುರುತಿಸಲ್ಪಟ್ಟ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ರಂಗದಲ್ಲಿ ಪರಿವ್ರಾಜಕನೆಂದೇ ಕರೆಯಲ್ಪಟ್ಟವರು. ಕಲಾತಪಸ್ವಿಯಾಗಿದ್ದ ಮಂಜುನಾಥ ಭಾಗವತರು ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದವರು. ಉತ್ತರ ಕನ್ನಡ ಜಿಲ್ಲೆಯ ಹೊಸತೋಟದಲ್ಲಿ ಜನಿಸಿದವರಾದರೂ ಯಕ್ಷಗಾನದ ಅಭ್ಯುದಯಕ್ಕಾಗಿ ಊರೂರು ಅಲೆದವರು. ಜೀವನದ ಕೊನೆಯ ಕ್ಷಣದ ವರೆಗೂ ಯಕ್ಷಗಾನವೇ ಅವರ ಉಸಿರಾಗಿತ್ತು. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಾ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಸದಾ ಯಕ್ಷಗಾನದ ವಿಷಯವನ್ನೇ ಮಾತನಾಡುತ್ತಿದ್ದರು. ಯಕ್ಷಗಾನವನ್ನೇ ಧ್ಯಾನಿಸುತ್ತಿದ್ದರು.
ಅವರು ಸದಾ ತಪಸ್ವಿ. ಕಾವಿ ಬಟ್ಟೆ ತೊಡದೆ ಸನ್ಯಾಸಿಯಂತೆ ಬದುಕಿದವರು. ಬಾಲ್ಯದ ಕಷ್ಟಕಾಲದಲ್ಲಿ ಹಠಕ್ಕೆ ಬಿದ್ದ ಸನ್ಯಾಸಿಯಂತೆ ಜೀವಿಸಿದರು. ಅನೇಕ ಮಹಾನುಭಾವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಆದರೂ ಧೃತಿಗೆಡದೆ ಸಾಧನೆ ಮಾಡಿದ ಅಪೂರ್ವ ಸಾಧಕ. ಯಕ್ಷ ಋಷಿ ಎಂಬ ಬಿರುದು ಇವರಿಗೆ ಸಾರ್ಥಕ ಮಾತ್ರವಲ್ಲದೆ ಅದರಂತೆಯೇ ಬದುಕಿ ಬಾಳಿದವರು.


ತನ್ನ ಇಡೀ ಬದುಕನ್ನೇ ಯಕ್ಷಗಾನಕ್ಕಾಗಿ ಸಮರ್ಪಿಸಿದ ಕಲಾತಪಸ್ವಿ ಹೊಸ್ತೋಟ ಮಂಜುನಾಥ ಭಾಗವತರು (80) ಬಾಲ್ಯದಲ್ಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿ. ಭಾಗವತಿಕೆ, ನೃತ್ಯ, ಚಂಡೆ, ಮದ್ದಲೆ, ವೇಷಗಾರಿಕೆ, ಅರ್ಥಗಾರಿಕೆಯ ಸಹಿತ ಯಕ್ಷಗಾನದ ಪ್ರತಿಯೊಂದು ವಿಭಾಗಗಳಲ್ಲೂ ಪ್ರಾವೀಣ್ಯತೆಯನ್ನು ಹೊಂದಿದ್ದರು. ಇವರು ಬಾಳೆಹದ್ದ ಕೃಷ್ಣ ಭಾಗವತ ಹಾಗೂ ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯರೂ ಆಗಿದ್ದರು. ವಾಸಿಸಲು ಸ್ವಂತ ಮನೆಯನ್ನೂ ಕಟ್ಟಿಕೊಳ್ಳದೆ ಸನ್ಯಾಸಿಯಂತೆ ಬದುಕಿ ತನ್ನ ಇಡೀ ಬದುಕನ್ನು ಯಕ್ಷಗಾನಕ್ಕಾಗಿಯೇ ಮೀಸಲಾಗಿಟ್ಟರು.
ಅನಿರೀಕ್ಷಿತವಾಗಿ ಯಕ್ಷಗಾನ ಕಲಿಸುವ ಸಂದರ್ಭವೊದಗಿತು. ಆಮೇಲೆ ಭಾಗವತರು ಹಿಂತಿರುಗಿ ನೋಡಲಿಲ್ಲ. ಅಲ್ಲಲ್ಲಿ ಯಕ್ಷಗಾನ ತರಗತಿಗಳಲ್ಲಿ ವಿದ್ಯಾದಾನ ಮಾಡತೊಡಗಿದರು. ಅದರ ಫಲವಾಗಿ ಸುಮಾರು 1500ಕ್ಕೂ ಹೆಚ್ಚು ಶಿಷ್ಯಂದಿರನ್ನು ಸಂಪಾದಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ತರಗತಿಗಳನ್ನು ನಡೆಸಿದ್ದಾರೆ.
ಅವರು ರಚಿಸಿದ 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳಲ್ಲಿ ರಾಮ ನಿರ್ಯಾಣ, ಶ್ರೀರಾಮ ಮಹಿಮೆ, ಶ್ರೀಕೃಷ್ಣ ಮಹಿಮೆ, ಮಹಾಭಾರತ, ಹನುಮಾಯಣ, ಗೋಮಹಿಮೆ, ರಾಮಕೃಷ್ಣ ಚರಿತೆ, ಭಾಸವತಿ, ಮೇಘದೂತ, ಉತ್ತರರಾಮ ಚರಿತೆ, ಪ್ರತಿಜ್ಞಾಯೌಗಂಧರಾಯಣ, ಚಂಡ ಮಹಾಸೇನ, ಸುಹಾಸಿನಿ ಪರಿಣಯ ಮೊದ ಲಾದವುಗಳು ಸೇರಿವೆ. ಇವುಗಳಲ್ಲದೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದರು.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, ಅಗ್ನಿ ಸೇವಾ ಟ್ರಸ್ಟ್‍ನ ಪರಮದೇವ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಮತ್ತು ವೀರಭದ್ರ ನಾಯಕ ಪ್ರಶಸ್ತಿ, ಸೀತಾನದಿ ಗಣಪಯ್ಯ ಭಾಗವತ ಪುರಸ್ಕಾರ, ಯಕ್ಷಗಾನ ಕಲಾರಂಗ ಉಡುಪಿ ನೀಡುವ ಉಪ್ಪೂರು ನಾರಾಯಣ ಭಾಗವತ ಪ್ರಶಸ್ತಿ, ರಾಮವಿಠ್ಠಲ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪುರಸ್ಕಾರ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಭಾಗವತರು ಪಡೆದಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತರ ಅಭಿನಂದನಾ ಸಮಿತಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಪ್ರಕಟಿಸಿದ ‘ಯಕ್ಷ ಋಷಿ’, ಸಾಕೇತ ಟ್ರಸ್ಟ್ ಹೆಗ್ಗೋಡು ಪ್ರಕಟಿಸಿದ ‘ಷಷ್ಠ್ಯಬ್ಧಿ’ ಮತ್ತು ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಪ್ರಕಟಿಸಿದ ‘ಬಹುಮುಖ’ ಮೊದಲಾದವುಗಳು ಅವರ ಬಗ್ಗೆ ಪ್ರಕಟಗೊಂಡಿರುವ ಅಭಿನಂದನಾ ಗ್ರಂಥಗಳು.


ತನಗಾಗಿ ಬಾಳದೆ ಜನರಿಗಾಗಿ ಬಾಳಿದ, ತನಗಾಗಿ ಸಂಪಾದಿಸದೆ ಎಲ್ಲವನ್ನೂ ಯಕ್ಷಗಾನಕ್ಕೆ ನೀಡಿದ, ತನ್ನ ಸರ್ವಸ್ವವನ್ನೂ ಹೆಚ್ಚೇಕೆ ತನ್ನ ಜೀವವನ್ನೇ ಯಕ್ಷಗಾನಕ್ಕಾಗಿ ಮುಂದಿನ ಪೀಳಿಗೆಗಾಗಿ ಸಮರ್ಪಿಸಿದ, ಗಂಧದ ಕೊರಡಿನಂತೆ ತನ್ನ ಜೀವನವನ್ನು ತೇದ ಹೊಸತೋಟ ಮಂಜುನಾಥ ಭಾಗವತರಂತವರನ್ನು ನಾವು ಮತ್ತೆ ಕಾಣಲಾರೆವು. ಅವರು ಎಲ್ಲವನ್ನೂ ಈ ರಂಗಕ್ಕೆ ಕೊಟ್ಟರು. ತನಗಾಗಿ ಏನನ್ನೂ ಉಳಿಸದೆ ಮರೆಯಾದರು.

RELATED ARTICLES

1 COMMENT

  1. ನಮಸ್ತೇ ಸಾರ್.
    ಶ್ರೀ ಹೊಸ್ತೋಟರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
    ವಂದನೆಗಳು.

LEAVE A REPLY

Please enter your comment!
Please enter your name here

Most Popular

Recent Comments