Saturday, May 4, 2024
Homeಪುಸ್ತಕ ಮಳಿಗೆ'ಶ್ರೀ ತಲೆಂಗಳ' - ವಿದ್ವಾನ್ ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ

‘ಶ್ರೀ ತಲೆಂಗಳ’ – ವಿದ್ವಾನ್ ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ

 ವಿದ್ವಾನ್ ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ ‘ಶ್ರೀ ತಲೆಂಗಳ’ ಪ್ರಕಟವಾಗಿ ಓದುಗರ ಕೈ ಸೇರಿದ್ದು 2006ರಲ್ಲಿ. ಶ್ರೀಯುತರು ಬಹುಮುಖ ಪ್ರತಿಭೆಯ ವಿದ್ವಾಂಸರಾಗಿದ್ದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.

ಜತೆಗೆ ಲೇಖಕರಾಗಿ, ಪ್ರಸಂಗಕರ್ತರಾಗಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ, ಯಕ್ಷಗಾನ ಕ್ಷೇತ್ರಕ್ಕೆ ಇವರ ಕೊಡುಗೆಯು ಅಭಿನಂದನೀಯವಾದುದು. ಯಕ್ಷಗಾನ ಪ್ರಸಂಗ, ಕಾದಂಬರಿ, ಕವನ, ಖಂಡಕಾವ್ಯ, ನಾಟಕ, ಲೇಖನ ಇತ್ಯಾದಿ ವಿಭಾಗಗಳಲ್ಲಿ ಕೃತಿಗಳನ್ನು ರಚಿಸಿರುತ್ತಾರೆ. ಇವರು ರಚಿಸಿದ ಪ್ರಸಂಗಗಳಲ್ಲಿ ವಾಸವದತ್ತಾ-ರತ್ನಾವಳಿ, ಚಂದ್ರಾಭ್ಯುದಯ, ಶ್ರೀದೇವೀ ಶಾಕಂಬರೀ ವಿಲಾಸ, ಛಲದಂಕ ಅಂಬೆ ಪ್ರಮುಖವಾದುವುಗಳು.

ಶ್ರೀಯುತರು ರಚಿಸಿದ ಎಲ್ಲಾ ಕೃತಿಗಳ ವಿವರಗಳನ್ನು ಈ ಸಂಸ್ಮರಣ ಗ್ರಂಥದಲ್ಲಿ ನೀಡಲಾಗಿದೆ. ಶ್ರೀಯುತರ ಪುತ್ರ ಶ್ರೀ ಅನಂತಕೃಷ್ಣ ಅವರ ಆಶಯದಂತೆ ಈ ಗ್ರಂಥವನ್ನು ಹೊರ ತರುವರೇ ನಿರ್ಣಯಿಸಲಾಗಿತ್ತು. ಸಂಪಾದಕರು ಶ್ರೀ ಉದಯಶಂಕರ್ ನೀರ್ಪಾಜೆ. ಸಹಸಂಪಾದಕರು ಕೆ.ವಿ. ರಾಜಗೋಪಾಲ ಕನ್ಯಾನ. ಸಂಚಾಲಕರು ಅನಂತಕೃಷ್ಣ ಟಿ.

ಪ್ರಕಾಶಕರು ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಸಮಿತಿ. ಶ್ರೀ ಉದಯಶಂಕರ ನೀರ್ಪಾಜೆ ಅವರು ಸಂಪಾದಕೀಯ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಈ ಸಂಸ್ಮರಣ ಗ್ರಂಥವು ವಿದ್ವಾನ್ ರಾಮಕೃಷ್ಣ ಭಟ್ಟರ ಕೃತಿ ದರ್ಶನ-ಖ್ಯಾತ ಸಾಹಿತಿಗಳಿಂದ, ಪ್ರತ್ಯೇಕ ಲೇಖನ, ವಿದ್ವಾನ್  ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸ್ನೇಹಿತರು, ಬಂದುಗಳು, ಅಪ್ರಕಟಿತ ಲೇಖನಗಳು, ಎಂಬ ಐದು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಒಟ್ಟು ಇಪ್ಪತ್ತಾರು ಲೇಖನಗಳಿಂದ ಕೂಡಿದೆ. ಲೇಖನಗಳನ್ನು ಬರೆದವರು ಕ್ರಮವಾಗಿ ಶ್ರೀ ಅಮೃತ ಸೋಮೇಶ್ವರ, ಸುಬ್ರಾಯ ಚೊಕ್ಕಾಡಿ, ಡಾ. ನಾ. ದಾಮೋದರ ಶೆಟ್ಟಿ, ಶ್ರೀಮತಿ ಗಂಗಾ ಪಾದೇಕಲ್, ಡಾ. ಎಂ. ಪ್ರಭಾಕರ ಜೋಷಿ, ಪ್ರೊ| ಟಿ ಕೇಶವ ಭಟ್ಟ, ಶಂ.ನಾ. ಖಂಡಿಗೆ, ಡಾ.ಸರಸ್ವತಿ.ಕೆ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ವಿ.ಬಿ. ಹೊಸಮನೆ, ಯು. ಗಂಗಾಧರ ಭಟ್, ಕೆ.ಪಿ. ರಾಜಗೋಪಾಲ ಕನ್ಯಾನ,

ಬಿ.ಎಸ್.ಆರ್. ಪದಕಣ್ಣಾಯ, ಶಂಕರಿ ಎಂ.ಭಟ್, ಮು. ಕೃಷ್ಣಪ್ಪ, ಕಳಂದೂರು ರಾಮ ಶರ್ಮ, ಸಾವಿತ್ರಿ ರಾಮ ಶರ್ಮ, ಸುಭಾಷಿಣಿ ಹಿರಣ್ಯ, ತಿರುಮಲೇಶ್ವರಿ ಆರ್.ಕೆ.ಭಟ್, ಅನಂತಕೃಷ್ಣ ಟಿ. ಇವರುಗಳು. ಕೊನೆಯಲ್ಲಿ ಅವರು ಬರೆದ ಲೇಖನಗಳ, ಪ್ರಸಂಗಗಳ, ಇವರ ಕೃತಿಗಳ, ಪಡೆದ ಸನ್ಮಾನಗಳ ವಿವರಗಳನ್ನು ನೀಡಲಾಗಿದೆ.

2006 ಅಕ್ಟೋಬರ್ 10 ರಂದು ಶ್ರೀಯುತರ ಪ್ರಥಮಾಬ್ಧಿಕ ಶ್ರಾದ್ಧದ ದಿನದಂದು ನಡೆದ ಸಂಸ್ಮರಣಾ ಸಮಾರಂಭದಲ್ಲಿ ಈ ಸಂಸ್ಮರಣ ಗ್ರಂಥವು ಬಿಡುಗಡೆಗೊಂಡಿತ್ತು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

RELATED ARTICLES

1 COMMENT

  1. ನನ್ನ ಸಹಸಂಪಾದಕತ್ವದ ಸಂಸ್ಮರಣಗ್ರಂಥವಿದು. ಮೊನ್ನೆ ಮೊನ್ನೆ ಇನ್ನೂ ಕೆಲವು ಅವರ ಅಪ್ರಕಟಿತ ಕೃತಿಗಳು ದೊರಕಿದ್ದು, (ಯಕ್ಷಗಾನ ಪ್ರಸಂಗಗಳು, ನಾಟಕಗಳು, ಕವನಗಳು..ಇತ್ಯಾದಿ) ಈ ಗ್ರಂಥದಲ್ಲಿ ಉಲ್ಲೇಖವಾಗಿಲ್ಲ.
    ಶ್ರೀ ವಳಕುಂಜರಿಗೆ ಧನ್ಯವಾದಗಳು.

    – ರಾಜಗೋಪಾಲ್ ಕನ್ಯಾನ
    30.10.2020.

LEAVE A REPLY

Please enter your comment!
Please enter your name here

Most Popular

Recent Comments