ಪುತ್ತೂರು ಶ್ರೀ ಚಂದ್ರಶೇಖರ ಹೆಗ್ಡೆಯವರು ತೆಂಕುತಿಟ್ಟು ಕಂಡ ಒಬ್ಬ ಶ್ರೇಷ್ಠ ಕಲಾವಿದ. ಖಳಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದವರು. ವೃತ್ತಿಕಲಾವಿದರಾಗಿ ಅನೇಕ ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಖ್ಯಾತ ಯಕ್ಷಗಾನ ಕಲಾವಿದರಾಗಿ ಪ್ರೇಕ್ಷಕರ ಮನಗೆದ್ದಿದ್ದ ಪುತ್ತೂರು ಶ್ರೀ ನಾರಾಯಣ ಹೆಗ್ಡೆಯವರ ಸುಪುತ್ರರು.
ಪುತ್ತೂರು ಶ್ರೀ ನಾರಾಯಣ ಹೆಗ್ಡೆ ಮತ್ತು ಶ್ರೀಮತಿ ಸಂಜೀವಿನಿ ಅಮ್ಮ ದಂಪತಿಗಳ ಮಗನಾಗಿ ಪುತ್ತೂರು ಸಮೀಪ ಬಪ್ಪಳಿಗೆ ಎಂಬಲ್ಲಿ 1960ರಲ್ಲಿ ಜನನ. ಶಾಲಾ ವಿದ್ಯಾರ್ಥಿಯಾಗಿ ದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ಅದು ರಕ್ತಗತವಾಗಿಯೇ ಸಿದ್ಧಿಸಿತ್ತು. ತಂದೆಯವರ ಜತೆ ಸಾಗಿ ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನು ಕಲಾವಿದನಾಗಬೇಕೆಂಬ ಬಯಕೆಯೂ ಮೂಡಿತ್ತು. ನಾರಾಯಣ ಹೆಗ್ಡೆಯವರು ಮಗನ ಆಸೆಗೆ ಅಡ್ಡಿಪಡಿಸಿರಲಿಲ್ಲ.
ಯಕ್ಷಗಾನ ನಾಟ್ಯ ಕಲಿಯುವ ಆಸೆಯಿಂದ ಚಂದ್ರಶೇಖರ ಹೆಗ್ಡೆಯವರು 1979ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರವನ್ನು ಸೇರಿಕೊಂಡರು. ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಬಳಿಕ ಶ್ರೀ ಕ್ಷೇತ್ರ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ತಿರುಗಾಟ. ಪೂರ್ವರಂಗ ಮತ್ತು ಪ್ರಸಂಗಗಳಲ್ಲಿ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದವರು ಚಂದ್ರಶೇಖರ ಹೆಗ್ಡೆ. ಸುಂಕದಕಟ್ಟೆ ಮೇಳದಲ್ಲಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡಿದ್ದರು. ಶ್ರೇಷ್ಠ ಕಲಾವಿದರ ಒಡನಾಟವೂ ಕಲಿಕೆಗೆ ಅವಕಾಶವಾಗಿತ್ತು.
ಪುಂಡುವೇಷಗಳಿಂದ ತೊಡಗಿ ಪೀಠಿಕೆ ವೇಷಗಳನ್ನು ಮಾಡಿ ಎದುರು ವೇಷಗಳನ್ನು ನಿರ್ವಹಿಸುವಷ್ಟು ಕ್ಷಿಪ್ರವಾಗಿ ಬೆಳೆದಿದ್ದರು. ತೀವ್ರವಾದ ಯಕ್ಷಗಾನಾಸಕ್ತಿ ಮತ್ತು ಸತತ ಅಧ್ಯಯನ ಇದಕ್ಕೆ ಕಾರಣವಿರಬಹುದು. ಖ್ಯಾತ ಕಲಾವಿದರ ಒಡನಾಟ, ಸಹಕಾರಗಳಿಂದ ನಾನು ಕಲಾವಿದನಾಗಿ ಕಾಣಿಸಿಕೊಂಡೆ ಎಂದು ಆತ್ಮೀಯರಲ್ಲಿ ಚಂದ್ರಶೇಖರ ಹೆಗ್ಡೆಯವರು ಹೇಳುತ್ತಿದ್ದರಂತೆ. ಸುಂಕದಕಟ್ಟೆ ಮೇಳದ ತಿರುಗಾಟದ ನಂತರ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ. ತಂದೆ ಮಕ್ಕಳು (ಪುತ್ತೂರು ನಾರಾಯಣ ಹೆಗ್ಡೆ ಮತ್ತು ಪುತ್ತೂರು ಚಂದ್ರಶೇಖರ ಹೆಗ್ಡೆ). ಜತೆಯಾಗಿ ಅನೇಕ ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡಿದ್ದರು.
ಶ್ರೇಷ್ಠ ಕಲಾವಿದರಿಂದ ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳು ರಂಜಿಸುತ್ತಿದ್ದ ಕಾಲ. ಒಂದೆಡೆ ಸಮರ್ಥ ಹಿಮ್ಮೇಳ. ಇನ್ನೊಂದೆಡೆ ತಂದೆ ಜತೆಯಾಗಿ ತಿರುಗಾಟ. ಮತ್ತೊಂದೆಡೆ ನಾಟ್ಯ ಕಲಿಸಿದ ಗುರು ಕೆ. ಗೋವಿಂದ ಭಟ್ಟರು. ಮುಮ್ಮೇಳದ ಖ್ಯಾತ ಕಲಾವಿದರ ಒಡನಾಟ. ಪರುಷ ಶಿಲೆಗೆ ಯಾವ ಲೋಹ ಸೋಕಿದರೂ ಬಂಗಾರವಾಗುವಂತೆ ಚಂದ್ರಶೇಖರ ಹೆಗ್ಡೆಯವರು ಕಲಾವಿದನಾಗಿ ಕಾಣಿಸಿಕೊಂಡರು. ಹೆಚ್ಚಾಗಿ ಖಳಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಎಲ್ಲಾ ತರದ ಪಾತ್ರಗಳನ್ನೂ ಮಾಡಬಲ್ಲವರಾಗಿದ್ದರು. ಇವರು ಪಾತ್ರಗಳನ್ನು ನಿರ್ವಹಿಸುವ ರೀತಿ ಪುತ್ತೂರು ಶ್ರೀ ನಾರಾಯಣ ಹೆಗ್ಡೆಯವರನ್ನು ನೆನಪಿಸುತ್ತಿತ್ತು.
ಬಹುಬೇಡಿಕೆಯ ಕಲಾವಿದನಾಗಿ ಬೆಳೆಯುತ್ತಿರುವಾಗಲೇ ಆರೋಗ್ಯ ಕೈಕೊಟ್ಟಿತ್ತು. ಕಾಡಿದ ಅನಾರೋಗ್ಯ ಸಮಸ್ಯೆಯಿಂದಾಗಿ (ಹೃದಯ ಸಂಬಂಧೀ ಕಾಯಿಲೆ) ವೃತ್ತಿಜೀವನಕ್ಕೆ ವಿದಾಯ ಹೇಳುವಂತಹ ಅನಿವಾರ್ಯತೆಗೆ ಒಳಗಾಗಿದ್ದರು. ಆದರೂ ಪುತ್ತೂರು ಚಂದ್ರಶೇಖರ ಹೆಗ್ಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ನಂಟನ್ನು ಬಿಟ್ಟವರಲ್ಲ. ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ಪಳಗಿದ್ದ ಇವರು ಶ್ರೀ ಕ್ಷೇತ್ರದ ಖಾವಂದರ ಆಶ್ರಯದಲ್ಲೇ ಬದುಕುತ್ತಿದ್ದರು. ಮೇಳದ ಕಲಾವಿದನಾಗಿರುವಾಗಲೇ ಮಳೆಗಾಲದಲ್ಲಿ ವೇಷಭೂಷಣಗಳ ತಯಾರಿಕೆಯ ಜ್ಞಾನವನ್ನು ಗಳಿಸಿದ್ದರು.
ಹಿರಿಯ ಶ್ರೇಷ್ಠ ಕಲಾವಿದ ದಿ| ಕಡಬ ಸಾಂತಪ್ಪ ಅವರೂ ಯಕ್ಷಗಾನ ವೇಷಭೂಷಣಗಳನ್ನು ಸಿದ್ಧಪಡಿಸುವುದರಲ್ಲಿ ನಿಷ್ಣಾತರಾಗಿದ್ದವರು. ಇವರು ಧರ್ಮಸ್ಥಳದಲ್ಲಿ ಅಲ್ಲದೆ ಶ್ರೀ ದೇವಕಾನ ಕೃಷ್ಣ ಭಟ್ಟರ ಆಶ್ರಯದಲ್ಲೂ ಕೆಲಸ ಮಾಡಿದವರು. ದಿ| ಕಡಬ ಸಾಂತಪ್ಪರಂತೆ ಶ್ರೀ ಚಂದ್ರಶೇಖರ ಹೆಗ್ಡೆಯವರು ಕಲಾವಿದನಾಗಿಯೂ, ವೇಷಭೂಷಣ ತಯಾರಿಕೆಯಲ್ಲೂ ಒಳ್ಳೆಯ ಹೆಸರು ಗಳಿಸಿದ್ದರು. ವೇಷಭೂಷಣಗಳನ್ನು ಧರಿಸುವಾಗ ಇವರಿಬ್ಬರನ್ನು ಕಲಾವಿದರಿಗೆ ನೆನಪಾಗದೆ ಇರದು. ಇವರಿಬ್ಬರ ಅಳಿವು ಯಕ್ಷಗಾನಕ್ಕೆ ತುಂಬಲಾರದ ನಷ್ಟ. 2019 ಸೆಪ್ಟಂಬರ್ 14ರಂದು ಶ್ರೀ ಚಂದ್ರಶೇಖರ ಹೆಗ್ಡೆಯವರು ಮೃತ್ಯುವಶರಾದಾಗ ಸಹಜವಾಗಿ ಕಲಾಭಿಮಾನಿಗಳೆಲ್ಲರಿಗೂ ನೋವಾಗಿತ್ತು.
ಯಕ್ಷಕಲಾ ಕುಸುಮವಾಗಿ ಅರಳಿ ಪರಿಮಳಿಸಿದ ಶ್ರೀ ಪುತ್ತೂರು ಚಂದ್ರಶೇಖರ ಹೆಗ್ಡೆಯವರು ಪತ್ನಿ ಶ್ರೀಮತಿ ಶ್ಯಾಮಲ ಹೆಗ್ಡೆ, ಪುತ್ರಿಯರಾದ ಪಲ್ಲವಿ ಹೆಗ್ಡೆ, ಪ್ರತಿಮಾ ಹೆಗ್ಡೆ, ಪುತ್ರ ಚಂದನ್ ಹೆಗ್ಡೆ, ಸಹೋದರರಾದ ಶ್ರೀ ದೇವರಾಜ ಹೆಗ್ಡೆ (ಉಪನ್ಯಾಸಕ ಮತ್ತು ಕಲಾವಿದ), ಶ್ರೀ ಗಿರೀಶ್ ಹೆಗ್ಡೆ (ಶ್ರೀ ಧರ್ಮಸ್ಥಳ ಮೇಳದ ಮೆನೇಜರ್, ಕಲಾವಿದ) ಇವರುಗಳನ್ನು ಅಗಲಿರುತ್ತಾರೆ. ಹುಟ್ಟು ಆಕಸ್ಮಿಕ, ಮರಣವು ನಿಶ್ಚಿತ. ಲೋಕನಿಯಮವನ್ನು ಅವರು ಅನುಸರಿಸಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳಬೇಕಷ್ಟೆ. ಅವ್ಯಕ್ತ ಪ್ರಪಂಚದಲ್ಲಿ ಅವರು ಸುಖವಾಗಿರಲಿ. ಅವರ ಮಕ್ಕಳಿಗೆ ಉಜ್ವಲವಾದ ಬದುಕು ದೊರೆಯಲಿ. ಮನೆಯವರಿಗೆಲ್ಲಾ ಸಕಲ ಭಾಗ್ಯಗಳನ್ನು ಕಲಾ ಮಾತೆ ಮತ್ತು ನಟರಾಜನಾದ ಶ್ರೀ ಮಂಜುನಾಥ ಸ್ವಾಮಿಯು ಅನುಗ್ರಹಿಸಲಿ.

- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

