ಯಕ್ಷಗಾನ ಕಲಾವಿದ, ಕಲಾ ಪ್ರೋತ್ಸಾಹಕ ಶ್ರೀ ಕುಳಮರ್ವ ಸುಬ್ರಹ್ಮಣ್ಯ ಭಟ್ಟರಿಗೆ ಇದೀಗ ಎಪ್ಪತ್ತನಾಲ್ಕರ ಹರೆಯ. ಎಪ್ಪತ್ತಾದರೂ ಇಪ್ಪತ್ತರಂತೆ ಲವಲವಿಕೆಯಿಂದ ತನ್ನೊಡನಾಡಿಗಳೊಂದಿಗೆ ವ್ಯವಹರಿಸುವ ತರುಣ.
ಓರ್ವ ಅಧ್ಯಾಪಕ ತನ್ನ ವಿದ್ಯಾರ್ಥಿಗಳನ್ನು ಉತ್ತಮ ಪಾಠ ಪಠ್ಯಗಳಿಂದ ತಿದ್ದಿ ತೀಡಿ ಸತ್ಪ್ರಜೆಯನ್ನಾಗಿ ಮಾಡುತ್ತಾನೆ. ಓರ್ವ ವೈದ್ಯ ತನ್ನಲ್ಲಿಗೆ ಬರುವ ರೋಗಿಯ ಕಾಯಿಲೆಗಳ ಗುಣದೋಷ ಗಳನ್ನು ಅಧ್ಯಯನ ಮಾಡಿ ಸೂಕ್ತ ಚಿಕಿತ್ಸೆ ಸಲಹೆ-ಸೂಚನೆಗಳನ್ನು ನೀಡಿ ಆತನನ್ನು ನಿರೋಗಿಯನ್ನಾಗಿಸಿ ಉತ್ತಮ ಪ್ರಜೆಯನ್ನಾಗಿಸುತ್ತಾನೆ.
ನಮ್ಮ ಸಂಪ್ರದಾಯದಂತೆ ಓರ್ವ ತಂದೆ-ತಾಯಿ ಅಥವಾ ಪೋಷಕರು ಹುಟ್ಟಿದ ಮಗುವಿನ ಸಮಯಕ್ಕನುಗುಣವಾಗಿ ಜಾತಕ ತಯಾರಿಸಲು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಾರೆ. ಶತಮಾನಗಳ ಇತಿಹಾಸವಿರುವ ಜ್ಯೋತಿರ್ವಿಜ್ಞಾನ ಪಂಡಿತರುಗಳು ಸಮೂಲವಾಗಿ ನಕ್ಷತ್ರ ರಾಶಿಗಳನ್ನು ಅಧ್ಯಯನ ಮಾಡಿ ಹುಟ್ಟಿದ ಮಗುವಿನ ಸಮಗ್ರ ಜಾತಕ ಬರೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಂತೆಯೇ ನನ್ನ ಈ ಲೇಖನದ ನಾಯಕರಾದ ಕುಳಮರ್ವ ಸುಬ್ರಹ್ಮಣ್ಯ ಭಟ್ಟರು ತಮ್ಮ ತಲೆಮಾರಿನಿಂದ ಅನೂಚಾನವಾಗಿ ಬಂದಂತಹ ಜ್ಯೋತಿರ್ವಿದ್ಯೆಯನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆ ಯಿಂದ ಅಭ್ಯಾಸ ಮಾಡಿ ವಿಟ್ಲದಲ್ಲಿ ಸುಮಾರು 48 ವರ್ಷಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿ ಶ್ರೀ ಭಟ್ಟರು ತಮ್ಮ ದೊಡ್ಡಪ್ಪ ದಿ| ಕುಳಮರ್ವ ವೆಂಕಪ್ಪ ಭಟ್ಟ ಸಾಹಿತ್ಯ ಶಿರೋಮಣಿಯವರಿಂದ ಜ್ಯೋತಿಷವನ್ನು ಅಭ್ಯಸಿಸಿ, ಮಂತ್ರವಾದವನ್ನು ವೇದಮೂರ್ತಿ ದಿ| ಕಲ್ಲುಕುಟ್ಟಿಮೂಲೆ ನಾರಾಯಣ ಭಟ್ಟರಿಂದ ದೀಕ್ಷೆ ಪಡೆದಿದ್ದಾರೆ.
ಈ ಎರಡು ವಿದ್ಯೆಗಳ ಜೊತೆ ಜೊತೆಯಲ್ಲಿ ದೈವದೇವರುಗಳ ಪ್ರತಿಷ್ಠೆ, ಹೋಮ ಹವನಾದಿ ಕಾರ್ಯಕ್ರಮಗಳು ಇವರಲ್ಲಿ ಬಿಡುವಿಲ್ಲದೇ ನಡೆಯುತ್ತಿರುತ್ತದೆ. ಬಂದಂತಹ ಜನರಿಗೆ ಸೂಕ್ತ ಸಲಹೆ ಸೂಚನೆಗಳನ್ನು ಕೊಡುತ್ತಾ ಬೇಕುಬೇಕಾದ ಪರಿಹಾರ ಕಾರ್ಯಗಳನ್ನು ಮಾಡುತ್ತಾ ಇವತ್ತಿಗೂ ಸಹ ಊರ ಪರವೂರ ಜನರಿಗೆ ಕುಳಮರ್ವ ಜೋಯಿಸರೇ ಬೇಕು.
ಶ್ರೀಯುತರು ಕೇವಲ ಜ್ಯೋತಿಷ್ಯರಾಗಿರದೇ ಯಕ್ಷಗಾನ ನಾಟಕ ಮುಂತಾದ ಕಲೆಗಳಲ್ಲೂ ಕೈಯಾಡಿಸಿದವರು. ಬಾಲ್ಯದಲ್ಲಿ ಕುಳಮರ್ವ-ಕುಂಟಿಕಾನ ಮಠದಲ್ಲಿ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಚೆಂಡೆ-ಮದ್ದಳೆ ಕಲಾವಿದರಾಗಿ ಅರ್ಥಧಾರಿಯಾಗಿಯೂ ಮಿಂಚಿದರು. ಆ ಕಾಲಕ್ಕೆ ಅಂದರೆ ಅರುವತ್ತರ ದಶಕದಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯ ಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಉತ್ತಮ ಸಂಘಟಕರೂ ಆಗಿದ್ದರು. ಇಂದಿನ ಶ್ರೀ ಬಲಿಪ ನಾರಾಯಣ ಭಾಗವತರು, ದಿ| ಕುದ್ರೆಕೂಡ್ಲುರಾಮ ಭಟ್ಟರು, ದಿ| ಯೇರಿಕ್ಕಳ ಶ್ರೀನಿವಾಸ ರಾಯರೇ ಮೊದಲಾದ ಹಿರಿಯ ಕಲಾವಿದರು ಮಾತ್ರವಲ್ಲದೇ ಹಲವಾರು ಅರ್ಥಧಾರಿಗಳು ಭಾಗವಹಿಸುವಿಕೆಯ ತಾಳಮದ್ದಳೆ ಬಯಲಾಟಗಳ ರೂವಾರಿಯಾಗಿಯೂ ಆಗಿದ್ದವರು.
ಕಾರಣಾಂತರಗಳಿಂದ ಎಪ್ಪತ್ತರ ದಶಕದ ಆರಂಭದಲ್ಲಿ ವಿಟ್ಲಕ್ಕೆ ಶ್ರೀಯುತರು ಮತ್ತು ಅವರ ಕುಟುಂಬ ಬಂದು ವಿಟ್ಲದಲ್ಲಿ ವಾಸಿಸಲು ಆರಂಭಿಸಿದರು. ಇಲ್ಲಿಯೂ ಸಹ ಶ್ರೀ ಅನಂತೇಶ್ವರ ದೇವಾಲಯದ ಚಾವಡಿಯಲ್ಲಿ ನಡೆಯುತ್ತಿದ್ದ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿದ್ದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ವಾರ್ಷಿಕ ಜಾತ್ರೆಯಲ್ಲಿ ನಾಟಕಕಾರರಾಗಿ ಮಿಂಚಿದರು. ಆ ಕಾಲದಲ್ಲಿ ದಿ| ಡಾ| ಎಂ. ರಾಮಮೋಹನ, ದಿ| ಡಾ| ಕೆ.ಎಸ್.ಕೆ. ಮೂರ್ತಿಯವರ ಸಂಯೋಜನೆಯಲ್ಲಿ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆಗೆಲ್ಲಾ ಪ್ರತಿ ವರ್ಷ ಶ್ರೀ ಭಟ್ಟರು ಪುರಾಣ ಕತೆಗಳ ಸಂಭಾಷಣೆಗಳನ್ನು ಬರೆದು ನಾಟಕಕ್ಕೆ ಅಳವಡಿಸಿ ನಿರ್ದೇಶಿಸುತ್ತಿದ್ದರು. ಬಹುಶಃ ಅವುಗಳು ಇಂದು ಮುದ್ರಣದಲ್ಲಿರುತ್ತಿದ್ದರೆ ಹಲವಾರು ಪ್ರದರ್ಶನಗಳ ಭಾಗ್ಯ ಕಾಣುತ್ತಿತ್ತೋ ಏನೋ?
ಹಾಗೆಯೇ ತನ್ನ ಮನೆಯಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಹೋಮ ಹವನ ದೇವತಾರಾಧನೆ ಕಾರ್ಯಕ್ರಮಗಳಲ್ಲಿ ಕಲಾರಾಧನೆಯೊಂದಿಗೆ ದೇವತಾರಾಧನೆಯೆಂಬಂತೆ ಯಕ್ಷಗಾನ ತಾಳಮದ್ದಳೆಯನ್ನು ಸಂಘಟಿಸುತ್ತಾರೆ. ಹಿರಿಯ ಕಿರಿಯ ಕಲಾವಿದರನ್ನೆಲ್ಲಾ ಬರಮಾಡಿ ಪ್ರತೀ ವರ್ಷ ಬೇರೆ ಬೇರೆ ಕಥಾನಕಗಳನ್ನು ಆಖ್ಯಾಯಿಸುತ್ತಾರೆ. ಉತ್ತಮ ಪ್ರಸಂಗ ಅನುಭವಿ ಕಲಾವಿದರ ಭಾಗವಹಿಸುವಿಕೆಯಿಂದ ಪ್ರೇಕ್ಷಕರು ಗಣನೀಯ ಸಂಖ್ಯೆಯಲ್ಲಿ ಸೇರುತ್ತಾರೆ ಎಂಬುದನ್ನು ನಾವು ಗಮನಿಸತಕ್ಕ ಅಂಶ. ಇತ್ತೀಚಿನ ವರ್ಷಗಳಲ್ಲಿ ಈ ಪರಿಪಾಠ ಬೆಳೆದು ಬಂದಿದ್ದು ಕಲಾವಿದರೂ ಆಸಕ್ತ ಪ್ರೇಕ್ಷಕರು ಆ ದಿನಕ್ಕಾಗಿ ಕಾಯುವಂತಾಗಿದೆ.
ತನ್ನ ಸಹಧರ್ಮಿಣಿ ಶ್ರೀಮತಿ ಜಯಲಕ್ಷ್ಮೀ ಎಸ್. ಭಟ್ಟ ಹಾಗೂ ನಾಲ್ವರು ಮಕ್ಕಳು, ಎಂಟು ಜನ ಮೊಮ್ಮಕ್ಕಳೊಂದಿಗೆ ಸಹೋದರಿ ಸಹೋದರರ ಒಡನಾಟದಲ್ಲಿ ಅವರ ಮಕ್ಕಳು ಮೊಮ್ಮಕ್ಕಳೊಂದಿಗೂ ಸುಖೀ ಸಂಸಾರವನ್ನು ನಿಭಾಯಿಸುತ್ತಿರುವ ಶ್ರೀ ಭಟ್ಟರು ವಿಟ್ಲ ಹಾಗೂ ಸುತ್ತಮುತ್ತಲಿನ ಎಲ್ಲಾ ಊರುಗಳ ಜಾತಿ-ಮತ-ಬೇಧವಿಲ್ಲದೇ ಜನರಿಗೆ ಬೇಕಾದವರಾಗಿ ಇನ್ನೂ ನೂರ್ಕಾಲ ಬಾಳಲಿ ಎಂದು ಮನದುಂಬಿ ಹಾರೈಸುತ್ತೇನೆ.

(ಸದಭಿರುಚಿ ವಿಟ್ಲ)
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

