Friday, August 21, 2026
HomeUncategorizedದಮಯಂತಿ ಪುನಃ ಸ್ವಯಂವರ ಯಕ್ಷಗಾನ - 'ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..' ಪದ್ಯದ...

ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ 

ರಾಮಾಯಣ, ಮಹಾಭಾರತಾದಿ ಪೌರಾಣಿಕ ಮಹಾಕಾವ್ಯಗಳ ಅಥವಾ ಇನ್ನಿತರ ಭಾರತೀಯ ಪುರಾಣದ ಕಥಾಹಂದರದ ಒಳಹೊಕ್ಕು ನೋಡಿದಾಗ ಅದ್ಭುತವಾದ ಪಾತ್ರಸೃಷ್ಟಿ ಮತ್ತು ಸಾಮಾಜಿಕ ಸಂದೇಶಗಳು ಗೋಚರಿಸುತ್ತವೆ. ಬರಹರೂಪದಲ್ಲಿರುವ ಮಹಾಕಾವ್ಯಗಳಲ್ಲಿ ಗೋಚರವಾಗದ ಎಷ್ಟೋ ಮಹಾನ್ ವಿಚಾರಗಳು ವಿದ್ವಾಂಸರು ಅದೇ ಮಹಾಕಾವ್ಯವನ್ನು ಮಾತಿನ ರೂಪದಲ್ಲಿ ಪ್ರಸ್ತುತಪಡಿಸುವಾಗ ಸಾಮಾನ್ಯ ಜನರಿಗೆ ತಿಳಿಯುತ್ತದೆ. ಕೆಲವೊಮ್ಮೆ ಬರಹರೂಪದಲ್ಲಿ ಸಂಕ್ಷಿಪ್ತವಾಗಿರುವ ವಿಷಯಗಳು ಮಾತಿನಲ್ಲಿ ಅಥವಾ ವಿಷಯ ಮಂಡನೆಯಲ್ಲಿ ವಿವರವಾದ ಆಕಾರವನ್ನು ಪಡೆಯುತ್ತದೆ. ಮಹಾಕಾವ್ಯಗಳಲ್ಲಿ ಸುಪ್ತವಾಗಿರುವ ಎಷ್ಟೋ ಸಂಗತಿಗಳನ್ನು ಮಾತಿನ ಮಲ್ಲರು ತರ್ಕದ ಮಂಡನೆಯಲ್ಲಿ ಹೊರತೆಗೆಯುತ್ತಾರೆ. 

ಈ ರೀತಿಯ ಪ್ರಸ್ತುತಪಡಿಸುವಿಕೆಯಲ್ಲಿ ಯಕ್ಷಗಾನವು ಮುಂಚೂಣಿಯಲ್ಲಿ ನಿಂತಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು. ಯಕ್ಷಗಾನ ಪ್ರದರ್ಶನವೇ ಇರಲಿ ಅಥವಾ ತಾಳಮದ್ದಳೆಯೇ ಇರಲಿ ವಾದ ಪ್ರತಿವಾದಗಳಲ್ಲಿ ಪ್ರತಿದಿನ ಪ್ರತಿ ಸನ್ನಿವೇಶಗಳಲ್ಲಿ ಹೊಸ ಹೊಸ ವಿಚಾರಗಳು ಹೊರಬರುತ್ತವೆ. ಕಲಾವಿದನ ತರ್ಕಕ್ಕೆ ನಿಲುಕಿದ ವಿಚಾರಗಳನ್ನು ಆತನ ಬಾಯಿಯಿಂದಲೇ ಕೇಳಿದಾಗ ಕೆಲವೊಮ್ಮೆ ‘ಹೀಗೂ ಉಂಟಲ್ಲ’ ಎಂಬ ಉದ್ಘಾರಗಳು ಕೇಳುಗರ ಬಾಯಿಯಿಂದ ಹೊರಹೊಮ್ಮುವುದುಂಟು. 

ಇಂತಹಾ ಮಹಾನ್ ಪೌರಾಣಿಕ ಪ್ರಪಂಚವನ್ನು ಸಾಮಾನ್ಯ ಮನುಷ್ಯನಿಗೂ ಅರ್ಥವಾಗುವಂತೆ ಮಾಡಿದ ಕೀರ್ತಿ ಯಕ್ಷಗಾನಕ್ಕೆ ಸಲ್ಲುತ್ತದೆ. 

ಆದರೆ ಕೆಲವೊಮ್ಮೆ ಯಕ್ಷಗಾನ ಪ್ರಸಂಗದಲ್ಲಿರುವ ವಿಚಾರಗಳು ಅಥವಾ ಪದ್ಯಗಳು ಇದೇಕೆ ಹೀಗೆ ಎಂಬ ಜಿಜ್ಞಾಸೆಯನ್ನು ಹುಟ್ಟುಹಾಕುತ್ತದೆ. ಪೌರಾಣಿಕ ಯಕ್ಷಗಾನ ಪ್ರಸಂಗ ಅಥವಾ ಕಥೆ ಎಂದರೆ ಅದೇನು ಸ್ವತಂತ್ರ ರಚನೆಯಲ್ಲ. ಮೂಲ ಕಾವ್ಯ ಅಥವಾ ಪುರಾಣವನ್ನು ಆಧರಿಸಿದ ಕಥಾ ರಚನೆಗಳಷ್ಟೆ. ಆದರೆ ಪದ್ಯಗಳು ಯಕ್ಷಗಾನ ಪ್ರಸಂಗಕರ್ತರ ಸ್ವಂತ ರಚನೆಗಳೇ ಆಗಿವೆ. ಇನ್ನು ಕಾಲ್ಪನಿಕ ಪ್ರಸಂಗಗಳೆಲ್ಲವೂ ಪ್ರಸಂಗಕರ್ತರ ಕಲ್ಪನೆಯ ರಚನೆಗಳೇ ಆಗಿವೆ.  ಮಹಾಭಾರತ ಸಂಬಂಧೀ ಯಕ್ಷಗಾನ ಪ್ರಸಂಗಗಳು ಹೆಚ್ಚಾಗಿ ಕುಮಾರವ್ಯಾಸ ಭಾರತವನ್ನೇ ಅವಲಂಬಿಸಿದೆ. 

ಯಕ್ಷಗಾನ ರಂಗಕಲೆಯಲ್ಲಿ ‘ನಳದಮಯಂತಿ’ ಮತ್ತು ‘ನಳ ಚರಿತ್ರೆ’ ಪ್ರಸಂಗವು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಯಕ್ಷಗಾನ ಪ್ರದರ್ಶನದಲ್ಲಿ ಜನಪ್ರಿಯತೆಯನ್ನು ಗಳಿಸಿದಷ್ಟು ಯಕ್ಷಗಾನ ತಾಳಮದ್ದಳೆಯಲ್ಲಿ ಈ ಪ್ರಸಂಗ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ತಾಳಮದ್ದಳೆ ಪ್ರಾಕಾರದಲ್ಲೂ ಈ ಪ್ರಸಂಗಗಳು ಕಾಣಿಸಿಕೊಂಡಿವೆ. 

ನಳ ಚರಿತ್ರೆ (ದಮಯಂತಿ ಪುನಃಸ್ವಯಂವರ) ಪ್ರಸಂಗದಲ್ಲಿ ಬಹಳ ಆಸಕ್ತಿದಾಯಕ ಸನ್ನಿವೇಶವೊಂದಿದೆ. ದಮಯಂತಿಗೆ ಪುನಃಸ್ವಯಂವರ ಏರ್ಪಡಿಸುವ ವಿಚಾರವನ್ನು ತಿಳಿದು ಕೋಪಗೊಂಡ ಋತುಪರ್ಣ ಮಹಾರಾಜನು ಅದನ್ನು ನಿಲ್ಲಿಸುವ ಉದ್ದೇಶವನ್ನು ಹೊಂದಿದ್ದರೂ ಅಲ್ಲಿಗೆ ತಲುಪಲು ಸಮಯಾವಕಾಶವಿಲ್ಲ ಎಂದು ಹತಾಶನಾಗುವ ಸಂದರ್ಭ. ಆಗ ಬಾಹುಕನು ಮಹಾರಾಜನನ್ನು ಅಲ್ಲಿಗೆ ಯೋಗ್ಯ ಸಮಯಕ್ಕೆ ತಲುಪಿಸುವ ಹೊಣೆಯನ್ನು ಹೊತ್ತುಕೊಂಡು ರಥವನ್ನು ಬಹಳ ವೇಗವಾಗಿ ಓಡಿಸುತ್ತಾನೆ. ರಥವು ವೇಗವಾಗಿ ಸಂಚರಿಸುವ ಸಮಯದಲ್ಲಿ ಆಕಸ್ಮಿಕವಾಗಿ ಮಹಾರಾಜನ ಕರವಸ್ತ್ರವು ಕೈಜಾರಿ ಕೆಳಕ್ಕೆ ಬೀಳುತ್ತದೆ. ಆಗ ವೇಗವಾಗಿ ಧಾವಿಸುತ್ತಿರುವ ರಥವನ್ನು ನಿಲ್ಲಿಸೆಂದು ಋತುಪರ್ಣ ಮಹಾರಾಜನು ಬಾಹುಕನಿಗೆ ಸೂಚಿಸುತ್ತಾನೆ. ಆದರೆ ಬಾಹುಕನು ಮಹಾರಾಜನಿಗೆ ”ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು…” ಎಂದು ಹೇಳುತ್ತಾನೆ. ಬಾಹುಕನ ಈ ಮಾತುಗಳನ್ನು ಕೇಳಿ ಪರಮಾಶ್ಚರ್ಯಗೊಂಡ ರಾಜನು ಆತನನ್ನು “ನೀನಾರು, ಸತ್ಯ ಹೇಳು” ಎಂದು ಕೇಳುತ್ತಾನೆ. ಆದರೆ ಬಾಹುಕನ ಈ ಮಾತುಗಳನ್ನು ಕೇಳಿದ ಪ್ರೇಕ್ಷಕರ ಮನಸಿನಲ್ಲಿ ಪ್ರಶ್ನೆಯೊಂದು ಮಾತ್ರ ಹಾಗೆಯೇ ಉಳಿದುಬಿಡುತ್ತದೆ. 

ಅದೇನೆಂದರೆ 62 ಯೋಜನ ದೂರವನ್ನು ಅಷ್ಟು ಅಲ್ಪ ಸಮಯದಲ್ಲಿ ಕ್ರಮಿಸಿದ ಬಾಹುಕನಿಗೆ ಋತುಪರ್ಣ ಹೇಳಿದಂತೆ ಪುನಃ ಹಿಂದಕ್ಕೆ ರಥವನ್ನು ತಿರುಗಿಸಲು ಬೇಕಾದಷ್ಟು ಕಾಲಾವಕಾಶ ಇತ್ತು. ಆದರೂ “ದೊರಕದಿನ್ನದು ನಿನಗೆ..” ಎಂದು ಬಾಹುಕನು ಯಾಕೆ ಹೇಳಬೇಕು? ರಥವನ್ನು ಓಡಿಸುವ ಬಾಹುಕನಿಗೆ ಆ ಕರವಸ್ತ್ರವನ್ನು ಮರಳಿ ರಾಜನ ಕೈಗೊಪ್ಪಿಸುವ ಸಾಮರ್ಥ್ಯ ಇರುವಾಗ ಆತನ ಬಾಯಿಯಿಂದ ಆ ಮಾತುಗಳು ಯಾಕೆ ಬಂದುವು ಎಂಬುದು ಕುತೂಹಲಕರವಾದ ವಿಷಯ! ಆದರಿಲ್ಲಿ ವಿದ್ವಾಂಸರು, ತಾಳಮದ್ದಳೆ ಅರ್ಥಧಾರಿಗಳು ಇದಕ್ಕೆ ಸೂಕ್ತ ವ್ಯಾಖ್ಯಾನವನ್ನು ಕೊಡಬಹುದೇನೋ. ಅದನ್ನು ಕೇಳುವ ಕುತೂಹಲ ನಮಗೂ ಇದೆ. ಈ ಒಂದು ಸನ್ನಿವೇಶದ ಮಾತುಗಳಿಂದ ಹಲವು ಸಂಭಾವ್ಯ ವಿಚಾರಗಳು ನಮ್ಮ ತಲೆಯಲ್ಲಿ ಓಡುತ್ತವೆ. ಅವುಗಳಲ್ಲಿ ಕೆಲವು ಕೆಳಗಿನಂತಿದೆ. 

1. ನಿಮಿಷಗಳ ಮಾತ್ರದಲ್ಲಿ 62 ಯೋಜನ  ಮುಂದಕ್ಕೆ ಬಂದಿರುವ  ರಥದ ವೇಗಕ್ಕೆ ಸಂಚರಿಸುವ ಗಾಳಿಯ ವೇಗವೂ ಸೇರಿದಾಗ ಕರವಸ್ತ್ರವು ಎಲ್ಲೆಲ್ಲಿಗೋ ಹಾರಿರಬಹುದು. ಆದ ಕಾರಣ ಹಿಂದಕ್ಕೆ ಹೋದರೂ ಕರವಸ್ತ್ರವನ್ನು ಹುಡುಕುವುದು ಕಷ್ಟಸಾಧ್ಯ. ದೊರಕದು ಎಂದು ಹೇಳುವುದಕ್ಕೆ ಇದೇ ಕಾರಣವಾಗಿರಬಹುದು. 

2. ಕರವಸ್ತ್ರದ ಪ್ರಕರಣ ಒಂದು ನೆಪವಷ್ಟೆ. ರಥ ಎಷ್ಟು ವೇಗದಲ್ಲಿ ಸಂಚರಿಸುತ್ತದೆ ಮತ್ತು ಬಾಹುಕನಾರೆಂದು ಋತುಪರ್ಣನಿಗೆ ತಿಳಿಯುವುದಕ್ಕೆ ಈ ಪ್ರಕರಣವನ್ನು ಸೂಚ್ಯವಾಗಿ ಹೇಳಲಾಗಿದೆ. 

3. ಋತುಪರ್ಣನಿಗೂ ರಥ ಅಪರಿಮಿತ ವೇಗದಲ್ಲಿ ಸಂಚರಿಸುತ್ತಾ ಇದೆ ಎಂದು ಮೊದಲೇ ತಿಳಿದಿರುತ್ತದೆ. ಯಾಕೆಂದರೆ ಯಾವಾಗಲೂ ರಥದಲ್ಲಿಯೇ ಪ್ರಯಾಣಿಸುವ ಮಹಾರಾಜರು ರಥದ ವೇಗದಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸದಷ್ಟು ಅಜ್ಞಾನಿಯಲ್ಲ. 

4. ಆದರೆ ನಿಖರವಾದ ವೇಗ ಎಷ್ಟು ಎಂದು ತಿಳಿದಿರಲಿಕ್ಕಿಲ್ಲ. ಕರವಸ್ತ್ರ ಬಿದ್ದಾಗ ಅದಕ್ಕೊಂದು ಕಾರಣ ಸಿಕ್ಕಿತು ಎಂದು ರಥವನ್ನು ನಿಲ್ಲಿಸಲು ಸೂಚಿಸಿರಬಹುದು. ಇಲ್ಲದೆ ಹೋದರೆ ಬಿದ್ದ ಒಂದು ಕರವಸ್ತ್ರಕ್ಕಾಗಿ ರಥವನ್ನು ನಿಲ್ಲಿಸಿ ಋತುಪರ್ಣ ಮಹಾರಾಜರಂತಹವರು ಅದನ್ನು ಹೆಕ್ಕಿಕೊಳ್ಳುತ್ತಾರೆ ಎಂಬುದನ್ನು ಭಾವಿಸುವುದೂ ತಪ್ಪಾದೀತು. ಅಷ್ಟು ದೂರಕ್ಕೆ ಪ್ರಯಾಣಿಸುವ ರಥದಲ್ಲಿ ವಸ್ತ್ರ, ಸುಗಂಧ ದ್ರವ್ಯಾದಿಗಳು ಇನ್ನೂ ಇರಬಹುದು ಎಂದೂ ತಿಳಿದುಕೊಂಡರೆ ತಪ್ಪೇನಿಲ್ಲ. ರಥದ ವೇಗವನ್ನು ಕಂಡ ಋತುಪರ್ಣನಿಗೆ ಬಾಹುಕನಾರೆಂದು ತಿಳಿಯಬೇಕಾಗಿತ್ತು. ಅದಕ್ಕೆ ಕರವಸ್ತ್ರದ ನೆವನದಿಂದ ರಥವನ್ನು ನಿಲ್ಲಿಸಲು ಸೂಚಿಸಿರಬಹುದು. 

5. ಒಂದು ಒಳ್ಳೆಯ ಕಾರ್ಯಕ್ಕೆ ಹೊರಟಾಗ ಅಲ್ಪ ಸಮಯಕ್ಕಾದರೂ ಅರ್ಧದಿಂದ ಹಿಂತಿರುಗುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಬಾಹುಕನ ಬಾಹ್ಯ ರೂಪದ ಒಳಗಿರುವ ನಳ ಭಾವಿಸಿರಬಹುದು. ಅಥವಾ ಒಮ್ಮೆ ಯಾವುದೋ ಕಾರಣಕ್ಕಾಗಿ ಹಿಂತಿರುಗಿದ ರಾಜನು ಮನಸ್ಸು ಬದಲಾಯಿಸಿ ಮತ್ತೆ ತನ್ನ ಅರಮನೆಯತ್ತ ಪ್ರಯಾಣ ಬೆಳೆಸಿದರೆ ಎಂಬ ಭಯದಿಂದ ‘ದೊರಕದಿನ್ನದು ನಿನಗೆ’ ಎಂದು ಹೇಳಿರಬಹುದು. ಇದೆಲ್ಲಾ ಸಾಮಾನ್ಯ ಪ್ರೇಕ್ಷಕನಾದ ನನ್ನ ಪ್ರಶ್ನೆಗಳಷ್ಟೆ. ಇನ್ನೂ ವಾದಗಳಿರಬಹುದು.

ಆದರೂ ಕೊನೆಯಲ್ಲಿ ಬಾಹುಕನು ‘ದೊರಕದಿನ್ನದು ನಿನಗೆ..’ ಎಂದು ಯಾಕೆ ಹೇಳುತ್ತಾನೆ ಎಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. 

  • – ಮನಮೋಹನ್ ವಿ. ಎಸ್


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments