Thursday, May 14, 2026
Homeಯಕ್ಷಗಾನದಿವಾಕರ ರೈ ಸಂಪಾಜೆ - ಯಕ್ಷಗಾನದ ಸಿಡಿಲಮರಿ 

ದಿವಾಕರ ರೈ ಸಂಪಾಜೆ – ಯಕ್ಷಗಾನದ ಸಿಡಿಲಮರಿ 

ಪೂರ್ವ ರಂಗದಲ್ಲಿ ವೇಷಗಳನ್ನು ಮಾಡಿ, ನಾಟ್ಯದಲ್ಲಿ ಲಯಸಿದ್ಧಿಯನ್ನು ಪಡೆದು, ಬಳಿಕ ಪ್ರಹ್ಲಾದ, ಲೀಲೆಯ ಕೃಷ್ಣ ಮೊದಲಾದ ಬಾಲಪುಂಡುವೇಷಗಳನ್ನು ಮಾಡಿ ಮಾತುಗಾರಿಕೆಯಲ್ಲೂ ಬೆಳೆದರೆ ಮತ್ತೆ  ಅಭಿಮನ್ಯು, ಬಭ್ರುವಾಹನ, ಭಾರ್ಗವ, ಅಶ್ವತ್ಥಾಮ, ಲಕ್ಷ್ಮಣ, ಚಂಡ-ಮುಂಡರು, ಷಣ್ಮುಖ ಇಂತಹ ಪಾತ್ರಗಳನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ.

ಕಲಾವಿದರು ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಪಾತ್ರಗಳನ್ನು ನಿರ್ವಹಿಸುವಾಗ ಎಲ್ಲೂ ಸೋಲದೆ ಪ್ರೌಢತೆಯು ಪ್ರಕಟವಾಗುತ್ತದೆ. ಕುಡಾಣ ಗೋಪಾಲಕೃಷ್ಣ ಭಟ್ (ಗೋಪಿ ಅಣ್ಣ) ಕ್ರಿಶ್ಚನ್ ಬಾಬು ಮೊದಲಾದವರು ಇಂದು ನಮ್ಮ ಜತೆ ಇಲ್ಲವಾದರೂ ಪುಂಡುವೇಷಧಾರಿಗಳಿಗೆ ಅವರು ಆದರ್ಶರು. ದೈಹಿಕ ಬಲವೊಂದಿದ್ದರೆ ಸಾಲದು. ಮಾನಸಿಕವಾಗಿಯೂ ಬಲಿಷ್ಠನಾಗಿರಬೇಕು. ಇವೆರಡೂ ಇಲ್ಲದೆ ಬರಿದೆ ಸಾಹಸವನ್ನು ತೋರಿದರೆ ಕಲಾವಿದರು ಗೆಲ್ಲಲಾರರು. ಪ್ರದರ್ಶನವೂ ಗೆಲ್ಲಲಾರದು.

ಯಕ್ಷಗಾನದಲ್ಲಿ ಪ್ರಸ್ತುತ ಪುಂಡುವೇಷಧಾರಿಗಳಾಗಿ ಅಭಿನಯಿಸುತ್ತಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿರುವ ಕಲಾವಿದರನೇಕರು. ಅವರಲ್ಲೊಬ್ಬರು ಶ್ರೀ ದಿವಾಕರ ರೈ ಸಂಪಾಜೆ. ಪೂರ್ವರಂಗದಿಂದ ತೊಡಗಿ ಎಲ್ಲಾ ಹಂತಗಳನ್ನೂ ದಾಟಿ ಬೆಳೆದವರು.  ಹನುಮಗಿರಿ ಮೇಳದ ಕಲಾವಿದನಾದರೂ ಧರ್ಮಸ್ಥಳ, ಎಡನೀರು ಮೇಳಗಳಲ್ಲೂ ತಿರುಗಾಟ ಮಾಡಿದವರು.

(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )

ಇವರು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ 1977ನೇ ಇಸವಿ ಎಪ್ರಿಲ್ 15ರಂದು ಶ್ರೀ ಕೆ. ವಾಸು ರೈ ಮತ್ತು ಶ್ರೀಮತಿ ಇಂದಿರಾ ರೈ ದಂಪತಿಗಳಿಗೆ ಮಗನಾಗಿ ಜನಿಸಿದವರು.  ದಿವಾಕರ ರೈಗಳು ಓದಿದ್ದು ಕಲ್ಲುಗುಂಡಿ ಸರಕಾರೀ ಶಾಲೆಯಲ್ಲಿ. 7ನೇ ತರಗತಿಯ ವರೆಗೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ಕಲ್ಲುಗುಂಡಿ ಪರಿಸರದಲ್ಲಿ ಧರ್ಮಸ್ಥಳ, ಸುರತ್ಕಲ್, ಕರ್ನಾಟಕ, ಕದ್ರಿ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಆಟ ನೋಡುವ ಅವಕಾಶಗಳು ಸಿಕ್ಕಿತ್ತು. 

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಪ್ರದರ್ಶನಗಳನ್ನು ನೋಡುತ್ತಿದ್ದಂತೆಯೇ ದಿವಾಕರ ರೈಗಳಿಗೆ ತಾನೂ ಕಲಾವಿದನಾಗಬೇಕೆಂಬ ಬಯಕೆಯಾಗಿತ್ತು. ಹವ್ಯಾಸೀ ವೇಷಧಾರಿ ಶ್ರೀ ಲೋಕೇಶ್ ರಿಂದ ನಾಟ್ಯ ಕಲಿತರು.  ಗಜಾನನ ಯಕ್ಷಗಾನ ಸಂಘದ ಆಶ್ರಯದಲ್ಲಿ ನಾಟ್ಯ ತರಬೇತಿ ಮತ್ತು ಬಣ್ಣಗಾರಿಕಾ ಶಿಬಿರಗಳೂ ನಡೆಯುತ್ತಿತ್ತು. ಉತ್ತಮ ವೇಷಧಾರಿಯಾಗಿದ್ದ ಶ್ರೀ ಪರಮೇಶ್ವರ ಆಚಾರ್ಯರಿಂದಲೂ ನಾಟ್ಯ ಕಲಿತರು. ಹೆಚ್ಚಿನ ಕಲಿಕೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ತೆರಳಿದರು. ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ನಾಟ್ಯಾಭ್ಯಾಸ. 

ದಿವಾಕರ ರೈಗಳ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ (1991-92). ನಿರಂತರ 10 ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆ. ಪೂರ್ವರಂಗದಲ್ಲಿ ಬಾಲಗೋಪಾಲರು, ಮುಖ್ಯ ಸ್ತ್ರೀವೇಷ ನಂತರ ಪ್ರಸಂಗದಲ್ಲಿ ದೇವೇಂದ್ರ ಬಲ ಮೊದಲಾದ ಸಣ್ಣಪುಟ್ಟ ಪಾತ್ರಗಳು. ಹೆಚ್ಚು ಸ್ತ್ರೀಪಾತ್ರಗಳನ್ನೇ ಮಾಡಬೇಕಾಗಿತ್ತು.  ಕಡತೋಕಾ ಮಂಜುನಾಥ ಭಾಗವತರು  ‘ನೀನು ಸ್ತ್ರೀವೇಷ ಮಾಡುವುದು ಬೇಡ. ಪುಂಡುವೇಷವನ್ನೇ ಮಾಡು’ ಎಂಬ ಸಲಹೆಯನ್ನೂ ನೀಡಿದ್ದರು. ಪುಂಡುವೇಷಧಾರಿಯಾಗಿ ಭಡ್ತಿ ಸಿಕ್ಕಿತ್ತು.  ಕಲಾವಿದನಾಗಿ ಬೆಳೆಯಲು ಧರ್ಮಸ್ಥಳ ಮೇಳದ ಹತ್ತು ತಿರುಗಾಟಗಳೇ ಭದ್ರ ಅಡಿಪಾಯವಾಗಿತ್ತು. 

ಧರ್ಮಸ್ಥಳ ಮೇಳದಲ್ಲಿ 10 ವರ್ಷಗಳ ಕಲಾಸೇವೆಯನ್ನು ಮಾಡಿ ತಿರುಗಾಟ ನಿಲ್ಲಿಸಿದ್ದರು.  ಮನೆಯಲ್ಲೇ ಕೃಷಿಕಾರ್ಯಗಳಲ್ಲಿ ನಿರತನಾಗಿದ್ದಾಗ ಕಲಾಪೋಷಕ ಡಾ. ಟಿ. ಶ್ಯಾಮ ಭಟ್ಟರ  ಸಲಹೆಯಂತೆ ಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳಕ್ಕೆ ಸೇರಿದರು.ಮುಖ್ಯ ಪುಂಡುವೇಷಧಾರಿಯಾಗಿ ಕುಂಟಾರು ಮೇಳದಲ್ಲಿ 2 ವರ್ಷ ತಿರುಗಾಟ. ಮತ್ತೆ 2 ವರ್ಷ ಎಡನೀರು ಮೇಳದಲ್ಲಿ ಕಲಾಸೇವೆ. ಎಡನೀರು ಮೇಳದಲ್ಲಿ ಎರಡು ವರ್ಷ ತಿರುಗಾಟ. ನಂತರ ಹೊಸನಗರ ಮೇಳದಲ್ಲಿ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ವ್ಯವಸಾಯ.

 (ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)

“ಧರ್ಮಸ್ಥಳ ಮೇಳದ ತಿರುಗಾಟದ ಸಂದರ್ಭದಲ್ಲಿ ಅನಿವಾರ್ಯಕ್ಕೆ ಅಭಿಮನ್ಯು ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ನಾನು ಹೆದರಿಕೊಂಡಿದ್ದೆ. ಆದರೆ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರು ಧೈರ್ಯ ತುಂಬಿದರು. ಅವರೇ ಮೊದಲು ಪದ್ಯ ಹೇಳಿ ಪ್ರೋತ್ಸಾಹಿಸಿದ್ದರು.

ಇದನ್ನೂ ಓದಿ: ಆರ್.ಕೆ.ಭಟ್ ಕೊಂಗೋಟ್ ಮತ್ತು ಉಮಾ ಆರ್.ಕೆ.ಭಟ್ ದಂಪತಿಗಳ ನಿಸ್ವಾರ್ಥ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಷ್ – ಭಾಗ 1)

ನಾನು ಅಭಿಮನ್ಯು ಮಾಡಿದೆ ಎನ್ನುವುದಕ್ಕಿಂತ ಅವರು ನನ್ನಿಂದ ಮಾಡಿಸಿದರು ಎಂದು ಹೇಳುವುದೇ ಸರಿ. ಅಂದು ಉದ್ಯಾವರ ಜಯಕುಮಾರರು ಸುಭದ್ರೆಯಾಗಿ ಅಭಿನಯಿಸಿದ್ದರು.’’ ಹೀಗೆ ಅಂದಿನ ದಿನವನ್ನು ದಿವಾಕರ ರೈಗಳು ನೆನಪಿಸುತ್ತಾರೆ.  

“ಯಕ್ಷಗಾನವು ಏಕಪಾತ್ರಾಭಿನಯ ಅಲ್ಲ. ಸಹಕಲಾವಿದರ ಸಹಕಾರವಿಲ್ಲದೆ ಯಾವ ಕಲಾವಿದನೂ ಮೆರೆಯಲಾರ. ಕಲಾಭಿಮಾನೀ ಬಂಧುಗಳೂ ಪ್ರೋತ್ಸಾಹಿಸಿದ್ದಾರೆ. ಸರ್ವರ ಸಹಕಾರದಿಂದ ಇನ್ನಷ್ಟು ಕಲಾಸೇವೆ ಮಾಡುವ ಆಸೆಯಿದೆ’’ ಎನ್ನುವ ಶ್ರೀ ದಿವಾಕರ ರೈಗಳು  ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಮತ್ತು ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ಈ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. 

ಇದನ್ನೂ ಓದಿ: ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)  

2011ನೇ ಇಸವಿ ದಶಂಬರ 28ರಂದು ಆರತಿ ಕೆ. ರೈ ಜತೆ ವಿವಾಹ. ಆರತಿ ರೈ ಅವರು ಕಾಸರಗೋಡು ಕೂಡ್ಲು ಶ್ರೀ ವಿಠಲ ಶೆಟ್ಟಿ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಗಳ ಪುತ್ರಿ. ಶ್ರೀ ದಿವಾಕರ ರೈ ಮತ್ತು ಶ್ರೀಮತಿ ಆರತಿ ದಿವಾಕರ ರೈ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಮಾ| ಸಮೃದ್ಧ ಡಿ. ರೈ 2ನೇ ತರಗತಿಯ ವಿದ್ಯಾರ್ಥಿ. ಪುತ್ರಿ ಕು| ವಿಭಾ ಡಿ. ರೈ (5 ವರ್ಷ ಪ್ರಾಯ).   

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಲೇಖಕ: ರವಿಶಂಕರ್ ವಳಕ್ಕುಂಜ                  

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments