Saturday, May 18, 2024
Homeಯಕ್ಷಗಾನ'ಜೋಶಿ'ಗಡಲಿನಿಂದ ನಾ ತೆಗೆದ ಬೊಗಸೆ ನೀರು

‘ಜೋಶಿ’ಗಡಲಿನಿಂದ ನಾ ತೆಗೆದ ಬೊಗಸೆ ನೀರು

ಹೌದು. ಎಷ್ಟು ಬರೆದರೂ ಅದು ಅಷ್ಟೇ ಆದೀತು. ತೆಗೆದಷ್ಟೂ ತುಂಬುವ ಬಾವಿಯ ನೀರಿನಂತೆ ಅವರ ಬಗ್ಗೆ ಎಲ್ಲವನ್ನೂ ತಿಳಿಯುವುದು ಮತ್ತು ಹೇಳುವುದು ಅಸಾಧ್ಯವೇ ಸರಿ. ಅವರ ಬಗ್ಗೆ ಅಷ್ಟನ್ನೂ ಹೇಳಿ ಮುಗಿಸಿದೆ ಎಂದು ಹೆಮ್ಮೆ ಪಡುವವರು ಅವರೊಂದು ತೆಗೆದಷ್ಟೂ ಮತ್ತೆ ತುಂಬಿಕೊಳ್ಳುವ ಜ್ಞಾನದ ಒರತೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸಮುದ್ರದಿಂದ ಸ್ವಲ್ಪ ನೀರನ್ನು ತೆಗೆದರೆ, ತೆಗೆದಷ್ಟು ನೀರಿನ ಬಗ್ಗೆ ಮಾತ್ರ ತಿಳಿಯಬಹುದು. ಆದರೆ ಶರಧಿಯ ಗರ್ಭದಲ್ಲಿ ಏನು ಅಡಗಿದೆ ಎಂದು ಹೇಳಲಾರೆವು. ಅದರಂತೆಯೇ ಜೋಶಿಯವರನ್ನೂ ಕೂಡಾ. 

ನನಗೆ ಗೊತ್ತು. ಡಾ. ಪ್ರಭಾಕರ ಜೋಶಿಯವರು ಹೊಗಳಿಕೆ ಮತ್ತು ವ್ಯಕ್ತಿತ್ವದ ವೈಭವೀಕರಣಗಳನ್ನು ಇಷ್ಟಪಡುವುದಿಲ್ಲ ಎಂದು. ಆದರೂ ಸಾಗರದಿಂದ ತೆಗೆದಷ್ಟು ನೀರಿನ ಗುಣಲಕ್ಷಣವನ್ನೂ ಹೇಳದೇ ಇದ್ದರೆ ಹೇಗೆ? 

ನನಗೆ ಪ್ರಭಾಕರ ಜೋಶಿ ಎಂಬ ವ್ಯಕ್ತಿತ್ವದ ಮೊದಲ ಪರಿಚಯವಾದದ್ದು ತಾಳಮದ್ದಳೆ ಕೂಟಗಳಿಂದಲೇ. ಸಣ್ಣವನಿದ್ದಾಗ ಶೇಣಿ, ಸಾಮಗ, ಪೆರ್ಲ, ತೆಕ್ಕಟ್ಟೆಯವರ ಎಲ್ಲಾ ಕೂಟಗಳಲ್ಲಿಯೇ ಜೋಷಿಯವರ ಮುಖ ಮತ್ತು ಅರ್ಥಗಾರಿಕೆಯ ಪರಿಚಯವಾಗಿತ್ತು. ಆದುದರಿಂದ ಪ್ರಭಾಕರ ಜೋಶಿ ಎಂಬ ವ್ಯಕ್ತಿತ್ವದ ಅನಾವರಣವಾದದ್ದು ಯಕ್ಷಗಾನ, ವಿಮರ್ಶೆ, ಸಾಹಿತ್ಯಗಳಿಂದಲೇ ಹೊರತು ಅವರ ವೃತ್ತಿಯಿಂದಲ್ಲ. ಕಲೆಯ ಮತ್ತು ಸಾಹಿತ್ಯ ಕೃಷಿಗಳಲ್ಲಿ ಇಂತಹಾ ಉನ್ನತ ಮಟ್ಟದ ಸಾಧನೆಯಿಂದಲೇ ಇಂದು ಜಾಗರದ ಜೋಶಿಯವರ ಹೆಸರು ಸಾಗರದಾಚೆಯಲ್ಲೂ ಜನಜನಿತವಾಗಲು ಸಾಧ್ಯವಾಯಿತೋ ಏನೋ.

ಜಾಹೀರಾತು

ಆದುದರಿಂದ ನಮಗೆ ಇಂದು ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ವಿಮರ್ಶಕ, ಸಾಹಿತಿ, ವಿದ್ವಾಂಸ ಜೋಶಿಯವರನ್ನು ಬಿಟ್ಟು ಬೇರೊಂದು ಸ್ಥಾನದಲ್ಲಿ ಜೋಶಿಯವರನ್ನು ಕಲ್ಪಿಸಲೂ ಅಸಾಧ್ಯ. ಕೆಲವೊಮ್ಮೆ ಅವಿಶ್ರಾಂತ ವ್ಯಕ್ತಿತ್ವಗಳನ್ನು ಕಂಡಾಗ ಆಶ್ಚರ್ಯ ಪಡುತ್ತೇವೆ. ಯಾಕೋ ಗೊತ್ತಿಲ್ಲ ಜೋಶಿಯವರದು ಕೂಡಾ ಅವಿಶ್ರಾಂತ ಜೀವನ ಎಂದೇ ನಾನು ಭಾವಿಸುತ್ತೇನೆ. ಇಲ್ಲದಿದ್ದರೆ ಇಷ್ಟೆಲ್ಲಾ ಮಾಡಲು ಅವರಿಗೆ ಸಮಯವೆಲ್ಲಿದೆ?! ಇದು ನನ್ನಂತಹಾ ಸಾಮಾನ್ಯರ ಆಲೋಚನೆ ಇರಬಹುದು.

ಒಬ್ಬ ಜವಾಬ್ದಾರಿಯುತ ಉಪಾನ್ಯಾಸಕನಾಗಿ, ಪ್ರಾಂಶುಪಾಲನಾಗಿ ಕಾಲೇಜಿನ ಕೆಲಸಗಳಲ್ಲೇ ಸೋತು ಸುಣ್ಣವಾಗುವ ಹಲವಾರು ವ್ಯಕ್ತಿತ್ವಗಳನ್ನು ನಾವು ಕಣ್ಣೆದುರಿಗೇ ಕಾಣುತ್ತೇವೆ. ಆದರೆ ಕಾಲೇಜಿನ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಅದಕ್ಕಿಂತಲೂ ಹೆಚ್ಚು ಸಾಹಿತ್ಯ ಸೇವೆ, ಕಲಾವಿದನಾಗಿ, ಭಾಷಣಕಾರನಾಗಿ, ವಿಮರ್ಶಕನಾಗಿ ಬರಹಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಜೋಶಿಯಂತಹವರಿಗೆ ದಿನವೊಂದರಲ್ಲಿರುವ ಇಪ್ಪತ್ತನಾಲ್ಕು ಘಂಟೆಗಳು ಹೇಗೆ ಸಾಕಾಗುತ್ತವೆ ಎಂದು ಬಹಳಷ್ಟು ಬಾರಿ ಆಶ್ಚರ್ಯಪಟ್ಟಿದ್ದೇನೆ. 

ಜೋಶಿಯವರು ತಾಳಮದ್ದಳೆಯೊಂದರಲ್ಲಿ  (ಫೋಟೋ: ಮಧುಸೂದನ ಅಲೆವೂರಾಯ) 

ಜೋಶಿಯವರು ಮನಸ್ಸು ಮಾಡಿದ್ದರೆ ಅವರು ಕಾಲೇಜಿನಲ್ಲಿ ಭೋದಿಸುತ್ತಿದ್ದ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಬಹುದಿತ್ತು. ಆದರೆ ಅವರು ತಾನು ಅತ್ಯಂತ ಪ್ರೀತಿಸುತ್ತಿದ್ದ ಯಕ್ಷಗಾನ ಕಲೆಯನ್ನು ಅದಕ್ಕೆ ಆರಿಸಿಕೊಂಡರು. ಅತ್ಯಂತ ಅಪರೂಪವಾದ ಆದರೆ ಅಷ್ಟೇ ಕ್ಲಿಷ್ಟಕರವಾದ ವಿಷಯವೊಂದನ್ನು ಆಯ್ದುಕೊಂಡು ಸಂಶೋಧನಾ ಪ್ರಬಂಧವನ್ನು ಸಿದ್ಧಪಡಿಸಿ ಅದರಿಂದ ಡಾಕ್ಟರೇಟ್ ಪದವಿ ಪಡೆಯುವುದು ಜೋಶಿಯಂತಹವರಿಂದ ಮಾತ್ರ ಸಾಧ್ಯ. ಅದರಲ್ಲೂ ತಾನು ಸಾಕಷ್ಟು ಬಾರಿ ಅರ್ಥ ಹೇಳಿದ ಕೃಷ್ಣ ಸಂಧಾನ ಪ್ರಸಂಗವನ್ನೇ ಆಯ್ದುಕೊಂಡರು. ‘ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ’ ಎಂಬ ಮಹಾಪ್ರಬಂಧವನ್ನು ಸಿದ್ಧಪಡಿಸಿ ಪಿ ಎಚ್ ಡಿ ಪದವಿಯನ್ನು ಪಡೆದರು. 

ಯಕ್ಷಗಾನ ಲೋಕ ಈವರೆಗೆ ಕಂಡ ವಿದ್ವಾಂಸರಲ್ಲಿ ಡಾ. ಪ್ರಭಾಕರ ಜೋಶಿಯವರು ಅತಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಯಕ್ಷಗಾನ ಮಾತ್ರವಲ್ಲ. ನೀವು ಯಾವುದೇ ವಿಷಯಗಳನ್ನು ಅವರಲ್ಲಿ ಕೇಳಿ. ಅದು ಹೀಗೆಯೇ ಎಂದು ಅವರು ಹೇಳಬಲ್ಲರು. ಯಕ್ಷಗಾನ, ಆಧುನಿಕ ಪ್ರಪಂಚದ ಆಗುಹೋಗುಗಳು, ವೇದ, ಪುರಾಣ, ತತ್ವಶಾಸ್ತ್ರ ಹೀಗೆ ಯಾವುದನ್ನೂ ಕೇಳಿದರೂ ಅದಕ್ಕೆ ಜೋಶಿಯವರ ಬಳಿ ಉತ್ತರವಿದೆ. ತಾನು ಭೋದಿಸುವ ವಾಣಿಜ್ಯಶಾಸ್ತ್ರದ ಉಪನ್ಯಾಸಕನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಯಕ್ಷಗಾನ ವಿದ್ವಾಂಸನಾಗಿ, ಕಾಲೇಜಿನ ಆಡಳಿತಾತ್ಮಕ ಹುದ್ದೆಯ ಪ್ರಾಂಶುಪಾಲನಾಗಿ, ಪ್ರಬುದ್ಧ ಲೇಖಕನಾಗಿ, ವಿಮರ್ಶಕನಾಗಿ, ಶೋಧನೆಯ ದೃಷ್ಟಿಯುಳ್ಳ ಸಂಶೋಧಕನಾಗಿ, ಅಂಕಣಕಾರನಾಗಿ, ಕಲಾವಿದನಾಗಿ, ಭಾಷಣಕಾರನಾಗಿ, ಅಪ್ರತಿಮ ವಾಕ್ಪಟುವಾಗಿ, ತತ್ವಶಾಸ್ತ್ರಜ್ಞನಾಗಿ, ಕವಿಯಾಗಿ, ನೂರಾರು ಕೃತಿಗಳು ಪ್ರಕಟಗೊಳ್ಳಲು ಕಾರಣರಾದ ಸಂಪಾದಕನಾಗಿ ಹೀಗೆ ಜೋಶಿಯವರು ಕೈ ಆಡಿಸದ ಕ್ಷೇತ್ರವಿಲ್ಲ.

ಆದುದರಿಂದ ಯಕ್ಷಗಾನ ಕಲಾವಿದನೊಬ್ಬ ಇಷ್ಟೆಲ್ಲಾ ಸಾಧಿಸಿದ್ದು ನಮಗೆ ಕಾಣಸಿಗುವುದು ಅಪರೂಪ. ಅಥವಾ ಇಷ್ಟೆಲ್ಲಾ ಸಾಧಿಸಿದವನೊಬ್ಬ ಯಕ್ಷಗಾನದ ಕಲಾವಿದನಾದದ್ದೂ ಕಾಣಸಿಗುವುದು ಅಪರೂಪ.  ಹೇಗೆ ಹೇಳಿದರೂ ಸರಿಯೇ. ಒಂದು ಕಾರ್ಯಕ್ರಮದಲ್ಲಿ ಹಿಂದೆ ಕುಳಿತು ಜೋಶಿಯವರ ಭಾಷಣ ಕೇಳುತ್ತಿದ್ದೆ. ಪರಿಚಿತರಲ್ಲಿ ಒಬ್ಬರು ಸೌಂಡ್ ಬಾಕ್ಸ್ ಹತ್ತಿರ ಕುಳಿತು ಅದನ್ನು ತಮ್ಮ ಮೊಬೈಲ್ ನಲ್ಲಿ ಧ್ವನಿಮುದ್ರಣ ಮಾಡುತ್ತಿದ್ದರು. ನಾನು ಯಾಕೆಂದು ಪ್ರಶ್ನಿಸಿದೆ. ‘ಇವರ ಒಂದು ಭಾಷಣ ಕೇಳಿದರೆ ಅದರಲ್ಲಿ ಹತ್ತು ಲೇಖನಗಳಿಗಿರುವ ವಸ್ತು ಸಿಗುತ್ತದೆ’ ಎಂದರು. ಅವರ ಮಾತು ನಿಜ ಎಂದು ಅನಿಸಿತು. 

ಬರಹ: ಮನಮೋಹನ್ ವಿ.ಎಸ್. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments