Wednesday, May 6, 2026
Homeಸುದ್ದಿವಿದ್ಯಾಪೋಷಕ್ ವಿನಮ್ರ ಸಹಾಯ ಕಾರ್ಯಕ್ರಮ ಉದ್ಘಾಟನೆ - ಒಟ್ಟು 1135 ವಿದ್ಯಾರ್ಥಿಗಳಿಗೆ 89,85,500/- ರೂಪಾಯಿ ವಿದ್ಯಾರ್ಥಿವೇತನ...

ವಿದ್ಯಾಪೋಷಕ್ ವಿನಮ್ರ ಸಹಾಯ ಕಾರ್ಯಕ್ರಮ ಉದ್ಘಾಟನೆ – ಒಟ್ಟು 1135 ವಿದ್ಯಾರ್ಥಿಗಳಿಗೆ 89,85,500/- ರೂಪಾಯಿ ವಿದ್ಯಾರ್ಥಿವೇತನ ವಿತರಣೆ

ಉಡುಪಿ : ಬಂಡೆಯನ್ನು ಶಿಖರದ ಎತ್ತರಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನಪಡಬೇಕು. ಆದರೆ ಅಲ್ಲಿಂದ ಉರುಳಿಸಿದರೆ ಯಾವುದೇ ಪ್ರಯತ್ನವಿಲ್ಲದೆ ಕೆಳಗೆ ಬೀಳುತ್ತದೆ. ನಮ್ಮ ವ್ಯಕ್ತಿತ್ವವೂ ಹಾಗೆ, ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಲು ನಿರಂತರ ಸಾಧನೆ ಬೇಕು. ವ್ಯಕ್ತಿತ್ವ ಪತನಗೊಳ್ಳಲು ಒಂದೇ ಒಂದು ತಪ್ಪು ಸಾಕಾಗುತ್ತದೆ.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಚ್ಚಾರಿತ್ರ‍್ಯವನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 09ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಿದ 18ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು.

ಅಧ್ಯಕ್ಷರಾಗಿ ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್, ಶ್ರೀ ಕುಂದೇಶ್ವರ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣಾನಂದ ಛಾತ್ರ ಇವರ ಗೌರವ ಉಪಸ್ಥಿತಿಯಲ್ಲಿ, ಶ್ರೀ ಕೃಷ್ಣಪ್ರಸಾದ ಅಡ್ಯಂತಾಯ, ಶ್ರೀ ಸಜಿತ್ ಹೆಗ್ಡೆ, ಶ್ರೀ ಜೆ.ಪಿ. ಶೆಟ್ಟಿ, ಶ್ರೀ ವಿ.ಜಿ. ಶೆಟ್ಟಿ, ಶ್ರೀ ಯು. ಶ್ರೀಧರ್, ಕುಮಾರಿ ಹಸ್ತಾ ಶೆಟ್ಟಿ, ಶ್ರೀಮತಿ ವಿಲಾಸಿನಿ ಬಾಬುರಾಯ ಶೆಣೈ, ಶ್ರೀ ಪ್ರವೀಣ್ ಗುಡಿ ಅಭ್ಯಾಗತರಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಹನಾ ಕನ್ವೆನ್ಷನ್ ಸೆಂಟರ್‌ನ ಮಾಲಕರಾದ ಶ್ರೀ ಸುರೇಂದ್ರ ಶೆಟ್ಟಿಯವರಿಗೆ ಸ್ವಾಮೀಜಿಯವರು ಅಭಿನಂದನ ಪತ್ರ ನೀಡಿ ಅನುಗ್ರಹಿಸಿದರು.


ಚೆನ್ನೈನ ಅಣ್ಣಾಮಲೈಯವರು ಕೊಡಮಾಡಿದ ರೂ. 25000/- ನೆರವನ್ನು ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ನಾಲ್ಕು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಯು. ಉಪೇಂದ್ರ ಅವರ ನೆನಪಿನಲ್ಲಿ ಉತ್ತಮ ಕಡತ ನಿರ್ವಹಣೆಗೆ ನೀಡುವ ಹಾಗೂ ಅಕ್ಷತಾ ದೇವಾಡಿಗ ಇವಳ ಸ್ಮರಣಾರ್ಥ ನೀಡುವ ಉತ್ತಮ ಪತ್ರ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಇದೇ ಸಂದರ್ಭದಲ್ಲಿ ಉದ್ಯೋಗ ದೊರೆತ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಭಹಾರೈಸಿದರು. ಉಪಾಧ್ಯಕ್ಷ ಎಸ್. ವಿ. ಭಟ್ ಸ್ವಾಗತಿಸಿ, ಸಕ್ರಿಯ ಕಾರ್ಯಕರ್ತ ನಟರಾಜ್ ಉಪಾಧ್ಯ ವಂದಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ನಿರೂಪಿಸಿದರು.


ಅಪರಾಹ್ನ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸಹಾಯಧನ ವಿತರಣಾ ಕಾರ್ಯಕ್ರಮ ಜರಗಿತು. ಶ್ರೀ ಆನಂದ ಸಿ. ಕುಂದರ್, ಶ್ರೀ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಶ್ರೀ ಹರೀಶ್ ರಾಯಸ್, ಶ್ರೀ ರವಿರಾಜ್ ಬೆಳ್ಮ, ಶ್ರೀ ಎಚ್. ನಾಗರಾಜ ಶೆಟ್ಟಿ, ಶ್ರೀ ಯು. ವಿಶ್ವನಾಥ ಶೆಣೈ, ಶ್ರೀ ಪುರುಷೋತ್ತಮ ಪಟೇಲ್, ಶ್ರೀ ಎಚ್. ಶಶಿಧರ ಶೆಟ್ಟಿ, ಶ್ರೀ ಎ. ಎಸ್. ಎನ್. ಹೆಬ್ಬಾರ್, ಶ್ರೀ ಯಶ್ಪಾಲ್ ಸುವರ್ಣ, ಶ್ರೀ ಶಶಿಧರ್ ಶೆಟ್ಟಿ, ಶ್ರೀ ಸುಧಾಕರ ಶೆಟ್ಟಿ, ಶ್ರೀ ಬಿಲ್ಲಾಡಿ ಸೀತಾರಾಮ್ ಶೆಟ್ಟಿ, ಶ್ರೀ ಸುಜಯ್ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಇಪ್ಪತ್ತು ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು. ಒಟ್ಟು 1135 ವಿದ್ಯಾರ್ಥಿಗಳಿಗೆ 89,85,500/- ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಮತಿ ಗೀತಾ ಎಲ್. ಎನ್. ಶೆಟ್ಟಿಯವರ ಪ್ರಾಯೋಜಕತ್ವದ ಲ್ಯಾಪ್‌ಟಾಪನ್ನು ವಿತರಿಸಲಾಯಿತು.

ಸಭಾಂಗಣದ ಪ್ರಬಂಧಕರಾದ ಶ್ರೀ ಅರುಣ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ನಿರೂಪಿಸಿದರು. ಕಾರ್ಯಕ್ರಮವನ್ನು ಶ್ರೀ ಬನ್ನಾಡಿ ಸಂತೋಷ್ ಕುಮಾರ್ ಶೆಟ್ಟಿ ಸಂಯೋಜಿಸಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments