Thursday, May 7, 2026
Homeಯಕ್ಷಗಾನಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಬೈಲೂರು ವತಿಯಿಂದ ಶಿಕ್ಷಕ ,ಪ್ರಸಂಗ ಕರ್ತ, ಅರ್ಥದಾರಿ, ಸಾಹಿತಿ ಮತ್ತು ಅಭಿನವ        ಪಾರ್ತಿಸುಬ್ಬ ಬಿರುದಾಂಕಿತ  ಸೀತಾನದಿ ಗಣಪಯ್ಯ ಶೆಟ್ಟಿ ಅವರ 35ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವು ಗುರುವಾಯನಕೆರೆ ಬದ್ಯಾರಿನ ಹಂಸಗಿರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ  ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ  ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ ಶಿಕ್ಷಕರಾಗಿದ್ದುಕೊಂಡು ಯಕ್ಷಗಾನ ಕ್ಷೇತ್ರಕ್ಕೆ ಗಣನೀಯವಾದ ಕೊಡುಗೆಗಳನ್ನು ನೀಡಿದ ಸೀತಾನದಿಯವರ ಸಂಸ್ಮರಣೆಯನ್ನು 35 ವರ್ಷಗಳಿಂದ ವಿವಿಧಡೆಗಳಲ್ಲಿ ನಡೆಸುತ್ತಾ ಬಂದಿರುವುದು ಅವರಿಗೆ ನಿಜವಾಗಿ ಸಲ್ಲುವ ಗೌರವ.  ಅವರು ರಚಿಸಿದ ಹಲವು ಕನ್ನಡ  ಮತ್ತು ತುಳು ಪ್ರಸಂಗಗಳು ಈಗಲೂ ಜನಪ್ರಿಯವಾಗಿ ರಂಗದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.

ಸೀತಾನದಿ ಸಂಸ್ಮರಣೆಯ 50ನೇ ವಾರ್ಷಿಕ ಪ್ರಶಸ್ತಿಯನ್ನು ಕಲಾವಿದ ಮತ್ತು ಪ್ರಸಂಗಕರ್ತ ದೇವದಾಸ ಈಶ್ವರಮಂಗಲ ಇವರಿಗೆ ಪ್ರಧಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ  ಪಿ.  ಕಿಶನ್ ಹೆಗ್ಡೆ ಮಾತನಾಡಿ ಕಿರಿವಯಸ್ಸಿನಲ್ಲಿ 80 ಪ್ರಸಂಗಗಳನ್ನು ಯಕ್ಷಗಾನ ರಂಗಕ್ಕೆ ನೀಡಿದ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಇವರಿಂದ ಇನ್ನಷ್ಟು ಮೌಲ್ಯಯುತವಾದ ಕಥಾನಕಗಳು ಮೂಡಿ ಬರಲಿ ಎಂದರು. ಕಳೆದ 35 ವರ್ಷಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ದುಡಿದ 50 ಮಂದಿ ಗಣ್ಯರನ್ನು ಸನ್ಮಾನಿಸಿರುವುದು ಪ್ರತಿಷ್ಠಾನಕ್ಕೆ ಅಭಿಮಾನದ ಸಂಗತಿಯಾಗಿದೆಯೆಂದರು.

ಪ್ರಶಸ್ತಿ ಸ್ವೀಕರಿಸಿದ ದೇವದಾಸ್ ಈಶ್ವರಮಂಗಲ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಥಾನಕಗಳನ್ನು ಆಧರಿಸಿ ಪ್ರಸಂಗಗಳನ್ನು ರಚಿಸಿದ್ದೇನೆ. ಈ ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು ನನ್ನ ಜೀವನದಲ್ಲಿ ಒಂದು ಅಪೂರ್ವ ಯೋಗ, ಭಾಗ್ಯವೆಂದು ತಿಳಿಸಿದರು. 

ಮುಖ್ಯ ಅತಿಥಿ ಬರೋಡಾದ ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿ ಮೌಲಿಕವಾದ ಕಥಾನಕಗಳಿಗೆ ಪ್ರಸಂಗ ಸಾಹಿತ್ಯ ರಚಿಸಿ ಜೀವಂತವಾಗಿರಿಸಿದ ಮತ್ತು ಆ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರ ನೆನಪು ನಮ್ಮಲ್ಲಿ ಉಳಿದಿರುವುದು ಯಕ್ಷಗಾನದ ಜೀವಂತಿಕೆಯಾಗಿದೆ  ಎಂದರು.

ವೇದಿಕೆಯಲ್ಲಿ ಪೋಲ್ಯ ಉಮೇಶ್ ಶೆಟ್ಟಿ ಮುಂಬೈ ಕಾರ್ಯಕ್ರಮದ ಸಂಯೋಜಕರಾದ ಹಂಸಗಿರಿ ಬಾಲಕೃಷ್ಣ. ಸಿ ನಾಯಕ್, ಸೀತಾನದಿಯವರ ಹಿರಿಯ ಪುತ್ರ ಪಡಂಗಡಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿ. ಭುಜಬಲಿ  ಧರ್ಮಸ್ಥಳ, ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಧರ್ಮಸ್ಥಳ ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ ಮತ್ತು ಸೀತಾನದಿ  ಪ್ರತಿಷ್ಠಾನದ ಪದಾಧಿಕಾರಿಗಳು, ಬಂಧುಗಳು, ಕಲಾಭಿಮಾನಿಗಳು ಭಾಗವಹಿಸಿದ್ದರು.

ಸೀತಾನದಿ ಗಣಪಯ್ಯರ ಸಂಸ್ಮರಣೆಯನ್ನು ಭುವನ ಪ್ರಸಾದ ಹೆಗ್ಡೆ ಮತ್ತು ಪ್ರಶಸ್ತಿ ಪುರಸ್ಕೃತರ ಅಭಿನಂದನಾ ನುಡಿಗಳನ್ನು ಮಣಿಪಾಲದ ಎಸ್ .ವಿ ಉದಯಕುಮಾರ್ ಶೆಟ್ಟಿ ನಿರ್ವಹಿಸಿದರು.

ಭಾಸ್ಕರ ಶೆಟ್ಟಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಎಸ್. ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸೀತಾನದಿ ವಿಟ್ಟಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸೀತಾ ನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ವತಿಯಿಂದ 35ನೇ ವರ್ಷದ ಸಂಸ್ಮರಣೆಯಂಗವಾಗಿ ಪ್ರಸಂಗ ಕರ್ತ ದೇವದಾಸ ಈಶ್ವರಮಂಗಲ ಇವರಿಗೆ ಸೀತಾನದಿ  ಪ್ರಶಸ್ತಿಯನ್ನು ಬದ್ಯಾರು ಹಂಸಗಿರಿಯಲ್ಲಿ  ಜರಗಿದ ಕಾರ್ಯಕ್ರಮದಲ್ಲಿ ಡಿ. ಹರ್ಷೇಂದ್ರ ಕುಮಾರ ಧರ್ಮಸ್ಥಳ ,ಪ್ರತಿಷ್ಠಾನದ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಉದ್ಯಮಿ ಶಶಿಧರ ಶೆಟ್ಟಿ, ಪಡಂಗಡಿ ಜಯರಾಮ ಶೆಟ್ಟಿ ಪ್ರದಾನ ಮಾಡಿದರು. ಪ್ರಶಸ್ತಿಯು ರೂಪಾಯಿ 20,000 ನಗದು ಪುರಸ್ಕಾರವನ್ನು ಕೂಡ ಒಳಗೊಂಡಿದೆ.

ಸಭಾ ಕಾರ್ಯಕ್ರಮದ ಬಳಿಕ ಸಾಲಿಗ್ರಾಮ ಮೇಳದ ಕಲಾವಿದರಿಂದ  ಮಾಗದವಧೆ  ಯಕ್ಷಗಾನ ಪ್ರದರ್ಶನ ಜರಗಿತು.

ವರದಿ :ದಿವಾಕರ ಆಚಾರ್ಯ ಗೇರುಕಟ್ಟೆ, 9449076275

ವರದಿ :ದಿವಾಕರ ಆಚಾರ್ಯ ಗೇರುಕಟ್ಟೆ,9449076275

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments