‘ಹೋಗೋಣ ಜಂಬೂ ಸವಾರಿ’ ಇದು ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ರಚಿಸಿದ ಕೃತಿ. ಇವರು ಉದಯೋನ್ಮುಖ ಲೇಖಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯಾಗಿರುವಾಗಲೇ ಬರೆಯುವ ಹವ್ಯಾಸವಿದ್ದು ಈಗ ಅದನ್ನು ಮುಂದುವರಿಸುತ್ತಿದ್ದಾರೆ. ಲೇಖಕಿಯಾಗಿ ಬರೆಯುವ ಕಾಯಕದಲ್ಲಿ ತೊಡಗಿಸಿಕೊಳ್ಳುವಲ್ಲಿ ಪತಿ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ಪ್ರೋತ್ಸಾಹವೂ ಇವರಿಗಿದೆ.
ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ಹಣಕಾಸು ಸಂಸ್ಥೆಯ (ಕರ್ನಾಟಕ ಬ್ಯಾಂಕ್) ಉದ್ಯೋಗಸ್ಥೆಯಾಗಿ, ಲೇಖಕಿಯಾಗಿ ಎಲ್ಲರಿಗೂ ಪರಿಚಿತರು. ಈ ಪುಸ್ತಕದಲ್ಲಿ ಇವರು ಬರೆದ ಮೂವತ್ತು ಲೇಖನಗಳಿವೆ. 2015ರಿಂದ ತೊಡಗಿ ಬರೆದ ಲೇಖನಗಳಿವು. ಇವುಗಳಲ್ಲಿ ಅನೇಕ ಲೇಖನಗಳು ಉದಯವಾಣಿ, ತುಷಾರ, ಹೊಸದಿಗಂತ, ವಿಜಯಕರ್ನಾಟಕ, ಅಭ್ಯುದಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈ ವಿಚಾರವನ್ನು ಲೇಖಕಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ‘ಮನದ ಮಾತು’ ಎಂಬ ತಮ್ಮ ಬರಹದಲ್ಲಿ ತಿಳಿಸಿರುತ್ತಾರೆ. ಅಲ್ಲದೆ ಸಹಕರಿಸಿದ ಎಲ್ಲಾ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಈ ಕೃತಿಯು 2021ರಲ್ಲಿ ಮುದ್ರಿಸಲ್ಪಟ್ಟು ಓದುಗರ ಕೈಸೇರಿತ್ತು. ಇದು ಸುಮಾರು 122 ಪುಟಗಳ ಹೊತ್ತಗೆ. ಇದರ ಬೆಲೆ ನೂರು ರೂಪಾಯಿಗಳು. ಈ ಕೃತಿಯ ಪ್ರಕಾಶಕರು ಎಬಿಸಿ ಪಬ್ಲಿಕೇಷನ್ ಬೆಂಗಳೂರು.
ಈ ಕೃತಿಗೆ ಮುನ್ನುಡಿಯನ್ನು ಬರೆದವರು ಖ್ಯಾತ ಕವಿ, ಸಾಹಿತಿ ಎಚ್. ಡುಂಡಿರಾಜ್ ಅವರು. “ವಸ್ತು ವೈವಿಧ್ಯ ಮತ್ತು ಸರಳವಾದ, ಲವಲವಿಕೆಯ ಶೈಲಿ ವಿಭಾ ಅವರ ಈ ಕೃತಿಯ ಶಕ್ತಿ ಎನ್ನಬಹುದು. ಪುಸ್ತಕವನ್ನು ಓದಿ ಮುಗಿಸಿದಾಗ ಲೇಖಕಿ ಬಣ್ಣಿಸಿದ ಎಷ್ಟೋ ಅನುಭವಗಳು, ವ್ಯಕ್ತಪಡಿಸಿದ ಅನಿಸಿಕೆಗಳು ನಮ್ಮದೂ ಹೌದು ಅನಿಸುತ್ತದೆ. ಮೊದಲ ಪ್ರಯತ್ನದಲ್ಲೇ ಸಾಕಷ್ಟು ಒಳ್ಳೆಯ ಕೃತಿಯನ್ನು ನೀಡಿದ ಲೇಖಕಿ ಶ್ರೀಮತಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಅವರನ್ನು ನಾನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಇವರು ಇನ್ನಷ್ಟು ಅಚ್ಚುಕಟ್ಟಾದ, ಆಳ ವಿಸ್ತಾರ ಉಳ್ಳ ಲಲಿತ ಪ್ರಬಂಧಗಳನ್ನು ಬರೆಯಲಿ ಎಂದು ಹಾರೈಸುತ್ತೇನೆ”. (ಎಚ್. ಡುಂಡಿರಾಜ್ ಅವರ ಮುನ್ನುಡಿ ಬರಹದಿಂದ)
ಈ ಕೃತಿಗೆ ಬೆನ್ನುಡಿ ಬರೆದವರು ಹಿರಿಯರಾದ ಕವಿ, ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಅವರು.
ಲೇಖಕಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯರ ಈ ಕೃತಿಯೊಳಗೆ ‘ರೈನ್ ರೈನ್ ಗೋ ಅವೇ … ಬಾರೋ ಬಾರೋ ಮಳೆರಾಯ, ಜಾತಕ ಅವಾಂತರ, ಆಟಿ/ ಆಷಾಢ ಅಮಾವಾಸ್ಯೆಯ ಒಂದು ನೆನಪು, ಪ್ರಯಾಸವಾಗದ ಪ್ರವಾಸ, ಶ್ವಾನಪುರಾಣ, ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತ, ಒಂದು ರುಬ್ಬುವ ಕಲ್ಲಿನ ಸುತ್ತ, ಅರಿತು ಬಾಳಿದರೆ ಸ್ವರ್ಗಸುಖ, ರುಪಾಯಿಯ ಬೆಲೆ, ಕೃಷ್ಣಾ ನೀ ಬೇಗನೆ ಬಾರೋ, ಹೂವು ಹೊರಳುವುದು ದೇವರ ಕಡೆಗೆ, ಬಸುರಿಯ ಬಯಕೆ, ಶ್ರುತಿ ಸೇರಿದಾಗ, ಪಾಸ್ ಪುಸ್ತಕದ ಒಳಗೆ ಸವಿರುಚಿ, ಬ್ಯಾಲೆನ್ಸ್, ಹೆಲ್ಮೆಟ್ ಅವಾಂತರ, ಬಾರೆ ರಾಜಕುಮಾರಿ ಹೋಗೋಣ ಜಂಬೂಸವಾರಿ, ಫೋನ್ ಇನ್ ಕಾರ್ಯಕ್ರಮ, ನೋಟಾಯಣ, ಅಮ್ಮಾ ನಾನೂ ಓಟು ಹಾಕ್ತೇನೆ, ಟೊಂಯೋ ಟೊಂಯೋ ಎಂದು ಹಾಡುವ ಸೊಳ್ಳೆ, ಲಹರಿ, ದೀಪಾವಳಿಯ ವಿಜಯೋತ್ಸವ, ಕಟೀಲಮ್ಮ ಮನೆಯಲ್ಲಿ, ವಸ್ತ್ರ ಇಸ್ತ್ರಿ ಕಥನ, ದಿಂಬು, ಕೊರೋನಾ.. ಇದು ಸರೀನಾ.. ?, ಸ್ಟೂಡೆಂಟ್ ಅಕೌಂಟ್, ಹ್ಯಾಪಿ ಬರ್ತ್ ಡೇ ಟು ಯು, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ’ ಎಂಬ ಮೂವತ್ತು ಲೇಖನಗಳಿವೆ.
ಲೇಖಕಿ ಶ್ರೀಮತಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ತೆಂಕುತಿಟ್ಟು ಯಕ್ಷಗಾನದ ಹಿರಿಯ, ಖ್ಯಾತ ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಪುತ್ರಿ. ಇವರಿಂದ ಸಾಹಿತ್ಯ ಸೇವೆಯು ನಿರಂತರವಾಗಿ ನಡೆಯಲಿ. ಬರೆಯುವಲ್ಲಿ ಸರಸ್ವತೀ ಮಾತೆಯ ಅನುಗ್ರಹವು ಸದಾ ಇರಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ.
ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ
- ಮಂಜೇಶ್ವರದ ಕುಂಜತ್ತೂರಿನಲ್ಲಿ ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ದುರ್ಮರಣ