ಯಕ್ಷಲೋಕದ ತಾರೆ ಮಿನುಗಿ ಮರೆಯಾಯ್ತೇನು
ಸುತ್ತ ಪಸರಿಸಿದ ಬೆಳಕೆಲ್ಲ ತಿಮಿರವಾಗಿ
ದಶಕಗಳ ಕಾಲದಲಿ ಯಕ್ಷಲೋಕದಿ ಮೆರೆದ
ಅಗ್ರಗಣಿ ಪದ್ಯಾಣ ಗಣಪಣ್ಣ ಕಾಣದಾಗಿ.
ಭೌತಿಕದ ಈ ದೇಹ ತೊರೆದು ಸಾಗಿದರೇನು
ಶಾಶ್ವತದ ಸ್ಥಾನ ಜನರಮಾನಸದಲ್ಲಿ
ಅಪ್ರತಿಮ ಭಾಗವತರೆಂದು ಕೊಂಡಾಡುತಲಿ
ಗುಣಗಾನ ಗೈಯುತಿರೆ ಲೋಗರಿಲ್ಲಿ.
ಸಾಧನೆಯ ಮಾಡಿಹರು ಸನ್ಮಾನ ಪಡೆದಿಹರು
ಒಂದಲ್ಲ ಎರಡಲ್ಲ ಹಲವಾರು ಜಾಗದಲಿ
ಜನರೊಡನೆ ಒಡನಾಡಿ ಲಘುಹಾಸ್ಯದ ಮಾತು
ಮರೆಯಲಾರದ ಸತ್ಯ ಜೀವಂತವಾಗಿ.
ಖಾಲಿ ಮಾಡಿದಿರಲ್ಲ ನೀವಿದ್ದ ಜಾಗವನು
ಸರಿಸಾಟಿ ನಿಮಗ್ಯಾರು ನೀವೇ ಸಾಟಿ
ಸದ್ಗತಿಯು ನಿಮಗಿರಲಿ ದುಃಖ ಭರಿಸುವ ಶಕ್ತಿ
ಬಂಧುಗಳಿಗೆ ಮಿತ್ರರಿಗೆಲ್ಲ ಪ್ರಾಪ್ತವಾಗಿ.
ನಮನವಿದು ಅಗಲಿರುವ ನಿಮ್ಮ ದಿವ್ಯಾತ್ಮಕ್ಕೆ
ಸೇರಿದಿರಿ ಶಿವಪಾದ ಜಗವ ತೊರೆದಿಲ್ಲಿ
ನಮನವಿದೊ ಮತ್ತೊಮ್ಮೆ ನಿಮ್ಮ ವ್ಯಕ್ತಿತ್ವಕ್ಕೆ
ಬರೆದಿಹೆನು ಸಾಲುಗಳ ಅಕ್ಷರದ ರೂಪದಲ್ಲಿ.
ಕವಿ: ಗೋಪಾಲಕೃಷ್ಣ ಭಟ್, ಮನವಳಿಕೆ.12.10.2021
(ನಮ್ಮನ್ನಗಲಿದ ಯಕ್ಷಲೋಕದ ಧ್ರುವತಾರೆ ಪದ್ಯಾಣ ಗಣಪತಿ ಭಟ್ಟರಿಗೆ ನುಡಿನಮನ).
- ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ
- ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ
- ‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು
- ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ
- ಪತಿಯನ್ನು ಕಟ್ಟಿಹಾಕಿ, ಸಿಗರೇಟ್ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ