Saturday, May 18, 2024
Homeಯಕ್ಷಗಾನಸುಬ್ರಹ್ಮಣ್ಯ ಧಾರೇಶ್ವರರ ಜೊತೆಗೊಂದು ಆತ್ಮೀಯ ಸಂವಾದ

ಸುಬ್ರಹ್ಮಣ್ಯ ಧಾರೇಶ್ವರರ ಜೊತೆಗೊಂದು ಆತ್ಮೀಯ ಸಂವಾದ

ಬಡಗುತಿಟ್ಟಿನ ಶ್ರೇಷ್ಠ, ಪ್ರಸಿದ್ಧ ಭಾಗವತರು ಸುಬ್ರಹ್ಮಣ್ಯ ಧಾರೇಶ್ವರ. ಈ ಹೆಸರು ಕೇಳಿದಾಕ್ಷಣವೇ ಇವರ ಇಂಪಾದ ದನಿ ನೆನಪಬುತ್ತಿಯಲ್ಲಿ ಹಾಡಲಾರಂಭಿಸುತ್ತದೆ. 1957 ಸೆಪ್ಟೆಂಬರ್ 5ರಂದು ಲಕ್ಷ್ಮೀನಾರಾಯಣ ಭಟ್ಟ- ಲಕ್ಷ್ಮೀ ದಂಪತಿಗಳ ಪುತ್ರರಾಗಿ ಗೋಕರ್ಣದಲ್ಲಿ ಜನಿಸಿದರು. ನಾಲ್ಕು ದಶಕಗಳಿಂದ ತನ್ನ ಇಂಪಾದ ಕಂಠದಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಾಧನೆಯ ಮೂಲಕ ಎತ್ತರೆತ್ತರಕ್ಕೆ ಬೆಳೆದರೂ ವಿನಯಸಂಪನ್ನರು. ಯಕ್ಷಗಾನದ ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದ ಸ್ವರಸಂಯೋಜಕ. ಪೌರಾಣಿಕ, ಸಾಮಾಜಿಕ ಎರಡೂ ಪ್ರಸಂಗಗಳನ್ನು ಬಹಳ ಚೆನ್ನಾಗಿ ಆಡಿಸಬಲ್ಲ ಕೆಲವೇ ಭಾಗವತರಲ್ಲಿ ಓರ್ವರು. ಗುರುಗಳಾದ ನಾರಣಪ್ಪ ಉಪ್ಪೂರರನ್ನು ಸದಾ ಸ್ಮರಿಸುವ ಆದರ್ಶ ವ್ಯಕ್ತಿತ್ವ. ಈ ಸಂದರ್ಶನದಲ್ಲಿ ಪ್ರತಿ ಪ್ರಶ್ನೋತ್ತರದಲ್ಲಿ ಉಪ್ಪೂರರ ನೆನಪು ಮಾಡಿಕೊಳ್ಳದೆ ಮುಗಿಸಿದ್ದಿಲ್ಲ. ಅಂತಹ ಮೇರುಕಲಾವಿದರೊಂದಿಗೆ ಒಂದು ಆತ್ಮೀಯ ಸಂವಾದ ಇಲ್ಲಿದೆ.


ಪ್ರಶ್ನೆ : ಯಕ್ಷಗಾನದತ್ತ ನಿಮ್ಮ ಆಸಕ್ತಿಗೆ ಕಾರಣ ಯಾವುದು?
ಧಾರೇಶ್ವರ – ಕಾಳಿಂಗ ನಾವಡರ ಪದ್ಯ ಕಾರಣ. ಮೊದಲು ಯಕ್ಷಗಾನವೆಂದರೆ ನನಗೆ ಆಗುತ್ತಲೇ ಇರಲಿಲ್ಲ. ನಾಟಕ, ಭಜನೆ, ಹಿಂದುಸ್ಥಾನಿ ಸಂಗೀತದಲ್ಲಿ ಆಸಕ್ತಿ, ಪರಿಶ್ರಮವಿತ್ತು. ಶಂ. ಸಾಮಗ, ರಾ. ಸಾಮಗ, ವಾ. ಸಾಮಗ, ಭಾ. ಸಾಮಗ, ಹೊನ್ನಪ್ಪ ಗೋಕರ್ಣ, ಮಂಟಪ, ಕಾಳಿಂಗ ನಾವಡ, ಕಡತೋಕ ಕೃಷ್ಣ ಭಾಗವತರು ಮೊದಲಾದ ಮಹಾಕಲಾವಿದರಿದ್ದ ಮೊದಲಿನ ಪೆರ್ಡೂರು ಮೇಳವದು. ಕ್ಯಾಂಪ್ ಖಾಲಿ ಇದ್ದುದರಿಂದ ವಾ. ಸಾಮಗರು ನಮ್ಮ ಎಲೆಕ್ಟ್ರಿಕಲ್ ಅಂಗಡಿಗೆ ಬಂದರು. ನಮ್ಮ ಸೋದರಮಾವ ನಾಗೇಶ ಮಧ್ಯಸ್ಥರಲ್ಲಿ ಆಟದ ವ್ಯವಸ್ಥೆ ಬಗ್ಗೆ ಮಾತನಾಡಿದರು. ಸಿದ್ಧತೆಯ ಜವಾಬ್ದಾರಿ ನನ್ನ ಪಾಲಿಗೆ ಬಂತು. ನಡುರಾತ್ರಿ ಆಟದವರಿಗೆ ಚಹಾ ವ್ಯವಸ್ಥೆ ಮಾಡಿ ಟೆಂಟಿನ ಹೊರಗೆ ನಿಂತಿದ್ದೆವು. ಆಗ ನಾವಡರ ಪದ್ಯ ಕೇಳಿತು. ಆ ಪದ್ಯಗಳು ನಮ್ಮನ್ನು ಬೆಳಗಿನವರೆಗೂ ಆಟ ನೋಡಿಸಿದವು.

ವಿಜಯಶ್ರೀ ಪ್ರಸಂಗ. ಬೆಳಗಿನ ಜಾವದ ಹಿತವಾಯ್ತೆ ಪ್ರಿಯನೆ ಎಂಬ ಪದ್ಯ ತಲೆಯಲ್ಲಿ ಅಚ್ಚಾಯಿತು. ಸಂಗೀತ ಮೊದಲೇ ಗೊತ್ತಿದ್ದರಿಂದ ನಾವಡರ ಪದ್ಯ ಕೇಳಿ ಮತ್ತಷ್ಟು ಆಸಕ್ತಿ ಬೆಳೆಯಿತು. ಕೆಲವು ಆಟ ನೋಡಲು ಆರಂಭಿಸಿದೆ. ಕೆಲವೇ ಸಮಯದಲ್ಲಿ ನಮ್ಮ ಬ್ಯುಸಿನೆಸ್ ಸಹ ಲಾಸ್ ಆಯಿತು. ಆಗ ನನ್ನ 21ನೇ ವಯಸ್ಸಿನಲ್ಲಿ 1977-78ರಲ್ಲಿ ನನ್ನ ಸೋದರಮಾವ ನನ್ನನ್ನು ಕರೆದುಕೊಂಡು ಹೋಗಿ ಕೋಟ ಕೇಂದ್ರಕ್ಕೆ ಸೇರಿಸಿದರು. ಪ್ರವೇಶ ಪರೀಕ್ಷೆಯಲ್ಲಿ ಮಾರುತಿ ಪ್ರತಾಪದ ‘‘ಬಾರನ್ಯಾಕೆ ಮಾರಜನಕ ಸಾರ ಸಾಕ್ಷಿಯೇ’’ ಪದ್ಯ ಹೇಳಿದೆ. ತಾಳ ರಾಗಗಳ ಅರಿವಿಲ್ಲದಿದ್ದರೂ ಕೆಲವು ಆಟ ನೋಡಿ ನನಗೆ ಆ ಪದ್ಯ ಬಾಯಿಪಾಠವಾಗಿತ್ತು. ಹೀಗೆ ಕೋಟ ಕೇಂದ್ರದ ವಿದ್ಯಾರ್ಥಿಯಾದೆ.


ಪ್ರಶ್ನೆ : ನಿಮ್ಮ ಗುರುಗಳಾದ ಉಪ್ಪೂರರ ಬಗ್ಗೆ?

ಧಾರೇಶ್ವರ – ಉಪ್ಪೂರು ಅಂದ್ರೆ ನನ್ನ ಪಾಲಿಗೆ ಸರ್ವಸ್ವ. A to Z. ನನಗೆ ಮತ್ತೊಂದು ಜನ್ಮಕೊಟ್ಟ ತಂದೆ, ಗುರು. ಗುರು ಎಂಬ ಶಬ್ದಕ್ಕೆ ಸರಿಯಾದ ಅರ್ಥವೇ ನನ್ನ ಜೀವನದಲ್ಲಿ ಉಪ್ಪೂರು. ಕೇಂದ್ರ ಆರಂಭವಾಗುವ ದಿನ ಅಲ್ಲಿ ಗಣಹೋಮ ಮಾಡುತ್ತಾರೆ. ಅದಕ್ಕೆ ಉಪ್ಪೂರರೇ ಕುಳಿತುಕೊಳ್ಳುವುದು. ನಾನು ಮೊದಲಿಗೆ ಹೋಗುವಾಗ ಕಂಡಿದ್ದು ಆ ದೃಶ್ಯವನ್ನು. ಅದು ಅನಂತರ ನನಗೆ ಅನ್ನಿಸುವುದು “ಪರಮ ಋಷಿಮಂಡಲದ ಮಧ್ಯದಿ ಮೆರೆವ ಯಜ್ಞೇಶ್ವರನ ಪ್ರಭೆಯೊಳು’’ ಆ ಪದ್ಯದ ಅರ್ಥ ನನಗೆ ಆವಾಗಲೇ ದೃಶ್ಯದಿಂದ ಆಗಿತ್ತು. ಅಂದು ಅವರನ್ನು ನೋಡುವಾಗಲೇ ತಾನಾಗಿಯೇ ಕೈಮುಗಿದು ಹೋಯಿತು, ತಲೆಬಾಗಿತು.


ಪ್ರಶ್ನೆ : ಭಾಗವತಿಕೆಯ ಆರಂಭದ ಹಂತಗಳು ಹೇಗಿದ್ದವು?
ಧಾರೇಶ್ವರ – ಆರಂಭದಲ್ಲಿ ಮೇಳಕ್ಕೆ ಅಧಿಕೃತ ಸಂಗೀತಗಾರನಾಗಿ ಸೇರುವ ಧೈರ್ಯವಿರಲಿಲ್ಲ. ನಾನು ಎಲೆಕ್ಟ್ರಿಷಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದೆ. ದೇವರ ಸೇವೆಯ ದಿನ ‘‘ಒಂದಾದರೂ ಪದ್ಯ ಹೇಳುಕ್ಕೆ ಅಕ್ಕ’’ ಅಂತ ಉಪ್ಪೂರು ಕೇಳಿದರು. ದುರ್ಗಪ್ಪ ಗುಡಿಗಾರರಲ್ಲಿ ಗುರುಗಳು ಹೀಗೆ ಹೇಳಿದರು ಎಂದಾಗ ಅವರೇ ಮದ್ದಲೆಗೆ ಬರ್ತೇನೆ ಎಂದು ಧೈರ್ಯ ತುಂಬಿದರು. ರಂಗಸ್ಥಳದಲ್ಲಿ ತೆರೆಬಿಟ್ಟಿದ್ದರಿಂದ ಮುದದಿಂದ ಪದ್ಯವನ್ನು ಹೇಗೋ ಧೈರ್ಯ ಮಾಡಿ ಹೇಳಿದೆ. ಚೌಕಿಯಲ್ಲಿ ಗಣಪತಿಪೂಜೆ ಸರಿಯಾಗಿ ಆಗಬೇಕಿದ್ದರಿಂದ ಆ ಧೈರ್ಯ ಇರಲಿಲ್ಲ. ಹೀಗೆ ಆರಂಭವಾಗಿ ಕೆಲವು ವರ್ಷ ಕಳೆಯಿತು. ಗುರುಗಳಿಂದ ಕೇಂದ್ರದಲ್ಲೂ ಮೇಳದಲ್ಲೂ ಪಾಠವಾಗುತ್ತಿತ್ತು. ಹೀಗೆ ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಷಿಯನ್ ಆಗಿ, ಹಗಲು ಮೈಕ್ ಅಡ್ವರ್ಟೈಸ್ ಮಾಡುತ್ತಿದ್ದೆ.


ಪ್ರಶ್ನೆ : ರಂಗತಂತ್ರಗಳನ್ನು ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗ ಗಳೆರಡರಲ್ಲೂ ಬಹಳ ಚೆನ್ನಾಗಿ ಅಳವಡಿಸುತ್ತೀರಿ? ಅದು ಹೇಗೆ ಸಾಧ್ಯ ವಾಯಿತು?
ಧಾರೇಶ್ವರ – ಮೊದಲು ನಮ್ಮ ಪದ್ಯ ಆದಮೇಲೆ ಆಟ ನೋಡಲೇ ಬೇಕಿತ್ತು. ಅಲ್ಲಿಯ ಸೂಕ್ಷ್ಮಗಳನ್ನು ಗಮನಿಸಿ ಬರೆದಿಟ್ಟುಕೊಳ್ಳುತ್ತಿದ್ದೆ. ಒಮ್ಮೆ ಅಲ್ಲಿಯೇ ಸ್ವಲ್ಪ ನಿದ್ರೆಗೆ ಜಾರಿದಾಗ ಗುರುಗಳು ತಾಳ ತೆಗೆದು ನನ್ನ ಕಡೆಗೆ ಎಸೆದರು. ಅದು ನನ್ನ ಹಣೆಗೆ ತಾಗಿ ಆದ ಗಾಯದ ಕಲೆ ಇನ್ನೂ ಇದೆ. ಅದಕ್ಕೆ ಕಾರಣ, ಅಂದಿನ ಕೀಚಕವಧೆಯ ಪ್ರಸಂಗದಲ್ಲಿ ದ್ರೌಪದಿ ಭೀಮನಲ್ಲಿ ಎರಡನೇ ಬಾರಿ ಬರುವ ದೃಶ್ಯವನ್ನು ಕೈಬಿಟ್ಟು ನೇರ ನಾಟ್ಯಶಾಲೆಗೆ ಕೀಚಕ ಬರುವ ದೃಶ್ಯವನ್ನೆ ತೆಗೆದುಕೊಂಡಿದ್ದರು. ಆ ರಂಗತಂತ್ರವನ್ನು ನಾನು ಗಮನಿಸಲಿಲ್ಲವೆಂದು ಗುರುಗಳು ಹಾಗೆ ಮಾಡಿದ್ದರು. ಆದರೆ ಅವರ ಶಿಷ್ಯವಾತ್ಸಲ್ಯ ಎಷ್ಟೆಂದರೆ ಮರುದಿನ ಬೆಳಿಗ್ಗೆ ಅವರೇ ಔಷಧ ನೀಡಿ ರಂಗತಂತ್ರದ ವಿಷಯವನ್ನು ಹೇಳಿ, ಭಾಗವತ ಸಮಯ ನೋಡಿಕೊಂಡು ಇಂತಹ ತಂತ್ರಗಳನ್ನು ಮಾಡಬೇಕಾಗುತ್ತದೆ ಎಂದರು. ಆ ಘಟನೆಯಿಂದ ಅದರ ಮಹತ್ತ್ವವರಿತು ಆ ಬಗ್ಗೆ ಗಮನಹರಿಸುವಂತಾಯಿತು. ನಾನು ಎಲೆಕ್ಟ್ರಿಷಿಯನ್ ಆದ ಕಾರಣ ಬೆಳಕನ್ನು ರಂಗದಲ್ಲಿ ಹೇಗೆ ಉಪಯೋಗಿಸಬೇಕೆಂಬ ತಂತ್ರಕ್ಕೆ ಸಹಕಾರಿಯಾಯಿತು.


ಪ್ರಶ್ನೆ : ಕಲಾವಿದನ ಸಾಮರ್ಥ್ಯ ಮತ್ತು ಮನವರಿತು ಕುಣಿಸುವುದರಲ್ಲಿ ನೀವು ಕುಶಲಮತಿಗಳು, ಅದರಿಂದ ಆದ ಅನ್ವೇಷಣೆಗಳನ್ನು ಉದಾಹರಿಸಬಹುದೇ?
ಧಾರೇಶ್ವರ – ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಒಮ್ಮೆ ಚಿಟ್ಟಾಣಿಯವರು ಗದಾಪರ್ವದ ಅಂತಿಮಘಟ್ಟದ “ಕಪಟನಾಟಕ ರಂಗ ಗುಪಿತವೇನೋ ನಿನ್ನಂಗ” ಪದ್ಯಕ್ಕೆ ಅಭಿನಯಿಸುತ್ತಿದ್ದರು. ಅವರಿಗೆ ಒಂದು ಚಿಕ್ಕ ಗ್ಯಾಪ್ ಬೇಕು ಅಂತ ನನಗೂ ಅನಿಸಿತು. ಕೂಡಲೇ “ಎಲವೋ ಪಾತಕಿ” ಪದ್ಯವನ್ನು ಅದರಲ್ಲೇ ಜೋಡಿಸಿದೆ. ಕೃಷ್ಣನಾಗಿದ್ದ ಕಣ್ಣಿಯವರು ತಕ್ಷಣ ಹೆಜ್ಜೆ ಇಡುತ್ತಾ ರಂಗವನ್ನು ತುಂಬಿದರು. ಚಿಟ್ಟಾಣಿಯವರಿಗೂ ಸುಧಾರಿಸಿಕೊಳ್ಳಲು ಸಮಯ ಸಿಕ್ಕಿತು. ಸಂದರ್ಭಕ್ಕೆ ಸರಿಯಾದ ಒಂದು ಹೊಸ ಅನ್ವೇಷಣೆ ಹುಟ್ಟಿ ಅದನ್ನೇ ಅನುಸರಿಸುವಂತಾಯಿತು. ಹೀಗೆ ಅನೇಕ ಸನ್ನಿವೇಶಗಳು ಪ್ರೇಕ್ಷಕನ ಮನಮುಟ್ಟುವಲ್ಲಿ ಸಹಕಾರಿಯಾಗಿವೆ.


ಪ್ರಶ್ನೆ : ಕಾಳಿಂಗ ನಾವಡ ಎಂಬ ಪ್ರತಿಭೆ ಬಡಗಿನಲ್ಲಿ ಸರ್ವಾಂತರ್ಯಾಮಿಯಾದ ಸಂದರ್ಭದಲ್ಲಿಯೇ ನೀವು ಪ್ರಸಿದ್ಧರಾದವರು. ಹೇಗದು ಸಾಧ್ಯವಾಯಿತು?
ಧಾರೇಶ್ವರ – ಅದು ನನಗೇ ಆಶ್ಚರ್ಯ. ಅವರೊಂದು ಸಮುದ್ರ, ಅಸೂಯೆ, ದ್ವೇಷಗಳಾವುದೂ ಇಲ್ಲದ ವ್ಯಕ್ತಿತ್ವ. ನನ್ನ ಬೆಳವಣಿಗೆಗೆ ಅವರೂ ಕಾರಣರು. ಹೇಗೆಂದರೆ, ಮಳೆಗಾಲದ ಬಾಂಬೆಯ ಆಟಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಕೋಟ ಕೇಂದ್ರಕ್ಕೆ ಬಂದರು. ಆಗ ನಾನು ಕೇಂದ್ರದ ವಿದ್ಯಾರ್ಥಿಯಾಗಿಯೇ ಇದ್ದೆ. ಅವರೊಂದಿಗೆ ಮುಂಬಯಿಯ ಸಾಧುಶೆಟ್ರು, ಮೊಗವೀರ ಸಮಾಜದ ಪ್ರಮುಖರಾದ ಪುಂಡಲೀಕರವರು, ಕುಂದನ್, ಪ್ರೊ. ಅಧಿಕಾರಿ ಮೊದಲಾದವರು ಬಂದರು. ಉಪ್ಪೂರರು ನನ್ನನ್ನು ಚಹಾ ತರಿಸಲು ಕಳಿಸಿದರು. ಆಗ ಈ ಬಗ್ಗೆ ಉಪ್ಪೂರರಲ್ಲಿ ಮಾತಾಡಿದ್ದಾರೆ. ಗುರುಗಳು ಅಲ್ಲಿಯ ವ್ಯವಸ್ಥೆಯ ಬಗ್ಗೆ, ಪ್ರಸಂಗದ ಬಗ್ಗೆ, ಕಲಾವಿದರ ಬಗ್ಗೆ ಎಲ್ಲಾ ಮಾತನಾಡಿ ನನ್ನ ಯೋಗಕ್ಷೇಮದ ಬಗ್ಗೆ ಎಲ್ಲವನ್ನು ಮಾತನಾಡಿಯೇ ಒಪ್ಪಿಗೆ ಕೊಟ್ಟರು. ಅವರು ಹೊರಟು ಹೋದಮೇಲೆ ನನಗೆ ವಿಷಯ ತಿಳಿಸಿದರು. ಅಂದರೆ ಅವರಿಗೆ ಶಿಷ್ಯನನ್ನು ಕಳಿಸುವಾಗಲೂ ತಂದೆಗಿರಬೇಕಾದ ಜವಾಬ್ದಾರಿ. ಬಾಂಬೆಗೆ ಹೋದರೆ ನನ್ನಲ್ಲಿ ಪ್ರಸಂಗ ಪುಸ್ತಕ ಇರಲಿಲ್ಲ. ನಾವಡರಲ್ಲಿ ಕೇಳಿದಾಗ ಪುಸ್ತಕ ತರಲಿಲ್ಲ ಅಂದರು. ಅವರಿಗೆ ಎಲ್ಲಾ ಪದ್ಯವೂ ಕಂಠಸ್ಥವಾಗಿತ್ತು. ಆಮೇಲೆ ಅವರೇ ಗೋಪಾಲಾಚಾರ್ಯರಿಗೆ ಹೇಳಿದರು. ಅವರಿಗೂ ಸಹ ಪದ್ಯ ಬಾಯಿಪಾಠ. ಮಾತ್ರವಲ್ಲ ಯಾವ ಸೀನ್ ಎಷ್ಟು ಗಂಟೆಗೆ ಎಂಬುದನ್ನು ಕರಾರುವಾಕ್ಕಾಗಿ ಹೇಳಿದರು. ಪದ್ಯಗಳನ್ನು ಬರೆದು ಕೊಟ್ಟರು. ಹೀಗೆ ನನ್ನ ಪ್ರಸಿದ್ಧಿಯಲ್ಲಿ ನಾವಡರ ಪಾತ್ರವೂ ತುಂಬಾ ಮುಖ್ಯವಾದುದು.


ಪ್ರಶ್ನೆ : ದುರ್ಗಪ್ಪ ಗುಡಿಗಾರರ ಬಗ್ಗೆ?

ಧಾರೇಶ್ವರ – ಗುಡಿಗಾರ್ ನನ್ನ ಉಸಿರು. ಅದೊಂದು ಶಬ್ದ ಸಾಕು ಎನಿಸುತ್ತದೆ. (ಒಮ್ಮೆ ನಿಟ್ಟುಸಿರು ಬಿಟ್ಟು) ಆ ಉಸಿರು ದೂರವಾದ ಮೇಲೆ ಸ್ವಲ್ಪ ಡೋಲಾಯಮಾನವಾಯಿತು. ನನ್ನೆಲ್ಲಾ ಪದ್ಯಕ್ಕೂ ಅವರ ಸಾಥ್ ಅವಿಸ್ಮರಣೀಯ. ಅನೇಕ ಪ್ರಸಂಗದ ಕೆಲವು ಸನ್ನಿವೇಶಗಳಿಗೆ ಅವರ ಸಲಹೆ ಸಹಕಾರವಾಯಿತು. ಇಲ್ಲಿಗೆ ಬೇರೆ ಯಾವುದೋ ಬೇಕು. ಇಲ್ಲಿಗೆ ಈ ರಾಗ ಬೇಡ ಹೀಗೆ ಸಲಹೆ ನೀಡುತ್ತಿದ್ದ ಗುರುಸಮಾನರು. ಅವರಂತವರು ಲಕ್ಷಕ್ಕೊಬ್ಬರು.


ಪ್ರಶ್ನೆ : ಆಟ, ತಾಳಮದ್ದಲೆ, ಗಾನವೈಭವಗಳಲ್ಲಿ ಭಾಗವತಿಕೆಯ ವ್ಯತ್ಯಾಸವೇನು?
ಧಾರೇಶ್ವರ – ಆಟದಲ್ಲಿ ವೇಷಧಾರಿಯನ್ನು ನೋಡಿ, ಪ್ರಸಂಗಾವಧಾನತೆಯನ್ನು ಮೀರದಂತೆ ಭಾಗವತಿಕೆ ಇರಬೇಕು. ಉದಾಹರಣೆಗೆ ಸುಧನ್ವನ ಸೃಷ್ಟಿಗರ್ಜುನ ಪದ್ಯಕ್ಕೂ, ಅರ್ಜುನನ ಹುಡುಗ ನೀನು ಪದ್ಯಕ್ಕೂ ವ್ಯತ್ಯಾಸವಿದೆ. ಕೆಲವು ಕಡೆ ಸನ್ನಿವೇಶ ಕಳೆಕಟ್ಟಲು ಆ ಪ್ರಸಂಗದಲ್ಲಿಲ್ಲದ ಕಿಸೆಪದ್ಯಗಳ ಅಗತ್ಯವಿದೆ.
ತಾಳಮದ್ದಲೆ ಮಾತಿನಮಂಟಪ, ಅಲ್ಲಿ ಪದ್ಯಗಳ ಪುನರಾವರ್ತನೆಯು ಬೇಡ. ಕೆಲವು ಕಡೆ ಆರಂಭದ ಮುಕ್ತಾಯವೂ ಬೇಡ. (ಸಂಧಾನದ ನೋಡಿದೆಯಾ ವಿದುರ ಪದ್ಯ ಹೇಳಿ ತೋರಿಸಿದರು) ಆ ಸಮಯವನ್ನು ಅರ್ಥಧಾರಿಗೆ ನೀಡಬಹುದು.
ಗಾನವೈಭವ ಓಡಾಡಲು ದೊಡ್ಡ ಮೈದಾನ ಕೊಟ್ಟಂತೆ. ಪದ್ಯವನ್ನು ವಿಸ್ತರಿಸಬಹುದು, ಅನೇಕ ರಾಗಗಳನ್ನು ಅಳವಡಿಸಬಹುದು. ಹಿಮ್ಮೇಳ ವಾದಕರಿಗೆ ಸಾಕಷ್ಟು ಅವಕಾಶ. ಆದರೆ ಹಿಂದಿನವರು ಮಾಡಿಟ್ಟ ಪದ್ಯದ ವ್ಯವಸ್ಥೆಗಳನ್ನು ಮೀರಬಾರದು.
(ಒಂದೇ ಪದ್ಯವನ್ನು ಮೂರೂ ಸಂದರ್ಭದಲ್ಲಿ ಹೇಗೆ ಬಳಸಬೇಕೆಂಬುದನ್ನು ಹೇಳಿ ತೋರಿಸಿದರು)


ಪ್ರಶ್ನೆ : ಚಿಟ್ಟಾಣಿ ಮತ್ತು ಶೇಣಿಯವರೊಂದಿಗಿನ ಒಡನಾಟದ ಬಗ್ಗೆ?
ಚಿಟ್ಟಾಣಿ ಮತ್ತು ಶೇಣಿಯವರಿಗೆ ಪದ್ಯ ಹೇಳಿದರೆ ಸುಮಾರಿಗೆ ಭಾಗವತ ಆದ ಹಾಗೆ ಅಂತ ಉಪ್ಪೂರು ಹಿಂದೊಮ್ಮೆ ಹೇಳಿದ ಮಾತು. ಚಿಟ್ಟಾಣಿಯವರ ಅಭಿನಯ, ಹೆಜ್ಜೆಗಾರಿಕೆಯ ವಿನ್ಯಾಸ, ಸೂಕ್ಷ್ಮಗಳನ್ನು ಅರಿತು ಪದ್ಯ ಹೇಳಲು ತುಂಬಾ ಜಾಗೃತ ಆಗಿರಬೇಕು. ಹಾಗೆಯೇ ಶೇಣಿಯವರ ತಾಳಮದ್ದಲೆಯಲ್ಲಿ ಪದ್ಯ ಹೇಳಲು ಸಹ. ಒಮ್ಮೆ ಕಾರ್ಕಳದಲ್ಲಿ ವಾಲಿವಧೆ ಪ್ರಸಂಗ. ಸಾಮಾನ್ಯವಾಗಿ “ಚಿತ್ತದಲ್ಲಿ ಶಂಕೆ ಬೇಡ” ಪದ್ಯವನ್ನು ವೀರರಸದಲ್ಲಿಯೇ ಹೇಳುವ ವಾಡಿಕೆ. ಆದರೆ ಆ ದಿನ ಶೇಣಿಯವರು ವಾಲಿಯಾಗಿ “ತಾರೆ! ಇನ್ನೂ ನಿನ್ನ ಪತಿಯ ವ್ಯಕ್ತಿತ್ವದ ಮೇಲೆ ಅನುಮಾನವೇನೇ? ಅಂತ ಕರುಣೆಯ ಛಾಯೆಯಲ್ಲಿ ಅರ್ಥವನ್ನು ಮುಂದಿನ ಪದ್ಯಕ್ಕಾಗಿ ನಿಲ್ಲಿಸಿದರು. ನನಗದು ಅನಿರೀಕ್ಷಿತ. ಯೋಚಿಸಲೂ ಅವಕಾಶ ಅಲ್ಲಿಲ್ಲ. ಅಂದು ಕರುಣಾರಸದಲ್ಲಿಯೇ ಆ ಪದ್ಯವನ್ನು ಹೇಳಿದೆ. ಅದಕ್ಕೆ ಅರ್ಥ ಹೇಳುವಾಗ ಶೇಣಿಯವರು ಇದು ವಾಲಿಯ ನಿಜವಾದ ಮನಸ್ಸು, ಅಷ್ಟು ಬೇಗ ನಿನಗೆ ಅರ್ಥವಾಯಿತಲ್ಲ. ಅಂತ ನನ್ನನ್ನು ತೋರಿಸಿದರು. ಮರುದಿನ ಕೇಂದ್ರಕ್ಕೆ ಉಪ್ಪೂರರಿಗೆ ಶೇಣಿಯವರ ಪತ್ರ. ಮತ್ತೊಂದು ಉತ್ತಮ ರತ್ನವನ್ನು ಕೊಡುತ್ತಿದ್ದೀರಿ, ಧನ್ಯವಾದಗಳು, ನಿಮ್ಮ ನಿಯಂತ್ರಣದಲ್ಲಿರಲಿ. ಹೀಗೆ ಇತ್ತು.


ಪ್ರಶ್ನೆ : ಕರ್ಣಾಟಕದಾದ್ಯಂತ ಯಕ್ಷಗಾನ ಕಲೆಯನ್ನು ಪಸರಿಸುವಲ್ಲಿ ಇರುವ ಸಾಧ್ಯತೆಗಳೇನು?
ಧಾರೇಶ್ವರ – ಕರ್ಣಾಟಕದ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಅಲ್ಲಿಯ ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಯಕ್ಷಗಾನವನ್ನು ಪ್ರದರ್ಶಿಸಿ, ವೇಷಭೂಷಣ, ಬಣ್ಣಗಾರಿಕೆ ಇದರ ಬಗ್ಗೆ ಪರಿಚಯಿಸಿ, ಅವರನ್ನು ಪ್ರೇಕ್ಷಕರನ್ನಾಗಿಸಿ ಶಿಬಿರ ಪ್ರಾತ್ಯಕ್ಷಿಕೆಗಳ ಮೂಲಕ ಅವರು ವೇಷ ಮಾಡುವಂತೆ ಮಾಡಿ ಈ ಕಲೆಯನ್ನು ನಾಡಿನ ಉಸಿರಾಗಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಚಾರಿಟೆಬಲ್ ಟ್ರಸ್ಟ್ ಒಂದಷ್ಟು ಪ್ರಯತ್ನ ಮಾಡುತ್ತಿದೆ. ಸಂಪೂರ್ಣ ಕರ್ಣಾಟಕವನ್ನು ಪಸರಿಸುವ ಶ್ರೀಮಂತಿಕೆ ಈ ಕಲೆಗಿದೆ. ಅದಕ್ಕೆ ಬೇಕಾದ ಪ್ರಯತ್ನ ಅಗತ್ಯ.


ಪ್ರಶ್ನೆ : ಮೂಡುಬಿದಿರೆಯ ಆಳ್ವಾಸ್‍ನ ಯಕ್ಷಗಾನ ಡಿಪ್ಲೊಮಾ ಕೋರ್ಸ್‍ನಲ್ಲಿ ಗುರುಗಳಾಗಿದ್ದೀರಿ. ಡಾ| ಮೋಹನ್ ಆಳ್ವರ ಈ ಯೋಜನೆಯು ಹೇಗೆ ಯಕ್ಷಗಾನದ ಪ್ರಸಾರದಲ್ಲಿ ಸಹಕಾರಿ?
ಧಾರೇಶ್ವರ – ಸಮಗ್ರ ತೆಂಕು ಬಡಗು ಯಕ್ಷಪ್ರಪಂಚ ಅಭಿನಂದಿಸಬೇಕಾದ ವ್ಯಕ್ತಿ ಡಾ| ಎಂ. ಮೋಹನ ಆಳ್ವರು. ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಭಾಜ್ಯ ಅಂಗವಾಗಿ ಯಕ್ಷಗಾನವನ್ನು ಬೆಳೆಸುವ ಯೋಜನೆ ಅವರದು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ವಿಸ್ತರಿಸುವಂತೆ ಮಾಡುವ ಯೋಜಿತ ಯೋಚನೆ ಅವರಲ್ಲಿದೆ. ಈ ಕೋರ್ಸ್‍ಗೆ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಬಗ್ಗೆಯೂ ಸ್ಪಷ್ಟ ಪರಿಕಲ್ಪನೆ ಅವರಲ್ಲಿದೆ. ಇದೊಂದು ಅಭೂತಪೂರ್ವವಾದ ಯೋಜನೆಯಾಗಿದೆ.


ಪ್ರಶ್ನೆ : ಪೆರ್ಡೂರು ಮೇಳದೊಂದಿಗಿನ ನಿಮ್ಮ ನಂಟು?
ಧಾರೇಶ್ವರ – ಪೆರ್ಡೂರು ಮೇಳದಲ್ಲಿನ 26 ವರ್ಷದ ತಿರುಗಾಟ ಸದಾ ಸ್ಮರಣೀಯ. ನನ್ನೆಲ್ಲ ನವ್ಯತೆಯ ಪ್ರಯೋಗಗಳಿಗೂ ಮೇಳದ ಯಜಮಾನರಾದ ಕರುಣಾಕರ ಶೆಟ್ರು ಸಂಪೂರ್ಣ ಸಹಕಾರ ನೀಡುತ್ತಿದ್ದರು. ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಜನರೇಟರ್, ರಂಗಸ್ಥಳ ಮುಂತಾದವುಗಳ ಬಗ್ಗೆ ಇದರ ಅವಶ್ಯಕತೆ ಇದೆ ಎಂದಾಗ ಕೂಡಲೇ ವ್ಯವಸ್ಥೆ ಮಾಡುತ್ತಿದ್ದರು. ಇದರಿಂದ ಮೇಳದ ಪ್ರದರ್ಶನಗಳು ಯಶಸ್ವಿಯಾಗಲು ಸಾಧ್ಯವಾಯಿತು.


ಪ್ರಶ್ನೆ : ಧಾರೇಶ್ವರ ಚಾರಿಟೇಬಲ್ ಟ್ರಸ್ಟಿನ ಕಾರ್ಯ ಯೋಜನೆಯ ಬಗ್ಗೆ ತಿಳಿಸಿ?
ಧಾರೇಶ್ವರ – ವರ್ಷಕ್ಕೆ ನಲ್ವತ್ತು ನಲ್ವತೈದು ಆಟ, ಉಡುಪಿಯಲ್ಲೊಂದು ಅಷ್ಟಾಹ, ತಾಳಮದ್ದಲೆ ಸಪ್ತಾಹ ಇವೆಲ್ಲ ನಡೆಯುತ್ತಿವೆ. ಯಕ್ಷಗಾನಕ್ಕಾಗಿ ಹಿಂದೆ ತುಂಬಾ ಶ್ರಮಿಸಿದ, ಕೊಡುಗೆ ನೀಡಿದ ಕಲಾವಿದರನ್ನು ಗುರುತಿಸುವ ಅವರ ಕೊಡುಗೆಯ ಮಹತ್ತ್ವವನ್ನು ಸಾದರಪಡಿಸುವ ಯೋಜನೆ ಇದೆ.


ಪ್ರಶ್ನೆ : ನಿಮ್ಮ ಸುಪುತ್ರ ಕಾರ್ತಿಕ್ ಧಾರೇಶ್ವರರು ಹೇಗೆ ಯಕ್ಷಗಾನದಲ್ಲಿ ಸಕ್ರಿಯರಾಗಿದ್ದಾರೆ? ನಿಮ್ಮನ್ನು ಅವರಲ್ಲಿ ನೋಡುವ ನಿರೀಕ್ಷೆಯ ಕಣ್ಣುಗಳಿರಬಹುದು.
ಧಾರೇಶ್ವರ – ಅವನಿಗೆ ಸ್ವರ ಚೆನ್ನಾಗಿತ್ತು. ಶ್ರುತಿಜ್ಞಾನವಿದೆ. ಆದರೆ ಅವನ ಆಸಕ್ತಿ ಚಂಡೆಯಲ್ಲಿ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿದ್ದಾನೆ.


ಪ್ರಶ್ನೆ : ನಿಮ್ಮ ಸಾಧನೆಯಲ್ಲಿ ನಿಮ್ಮ ಪತ್ನಿಯ ಪಾತ್ರ?
ಧಾರೇಶ್ವರ – ನನ್ನ ಸಾಧನೆಗೆ ಕಾರಣಳಾದವಳು ಪತ್ನಿ. ಅವಳು ಭರತನಾಟ್ಯ ಕಲಾವಿದೆ. ಕೆಲವು ಹೊಸಪ್ರಸಂಗಗಳ ನೃತ್ಯದ ಸೆಟ್ಟಿಂಗ್, ಡೈಲಾಗ್ ಸೆಟ್ಟಿಂಗಿಗೆ ಸಹಕಾರ ಅವಳಿಂದಲೇ. ಅನೇಕ ರಾಗದ ಬಗ್ಗೆಯೂ ಅಲ್ಲಿಗೆ ಆ ರೀತಿ ಹೇಳಬೇಕು ಇತ್ಯಾದಿ ಸಲಹೆ ನೀಡುತ್ತಾಳೆ. ಮನೆಯ ಸಂಪೂರ್ಣ ಜವಾಬ್ದಾರಿ ಅವಳದೇ. ನನಗೆ ಮನೆಯ ಸಮಸ್ಯೆ ಗೊತ್ತಿಲ್ಲ. ಅಷ್ಟು ಜವಾಬ್ದಾರಿ ಹೊತ್ತು ಸಹಕರಿಸಿದ್ದಾಳೆ.


ಸುಮಾರು ಮೂರು ತಾಸು ಆತ್ಮೀಯತೆಯಿಂದ ಅನೇಕ ವಿಚಾರಗಳನ್ನು ಹಂಚಿಕೊಂಡರು ಧಾರೇಶ್ವರರು. ಅದರಲ್ಲಿ ಕೆಲವು ಅಂಶಗಳನ್ನಷ್ಟೆ ಲೇಖನದಲ್ಲಿ ಬರೆದಿದ್ದೇನೆ. ಅವರ ಸಂದರ್ಶನದ ಸಮಯದಲ್ಲಿ ಸಹಕರಿಸಿದ ವಿದ್ವಾನ್ ಗಾಳಿಮನೆ ವಿನಾಯಕ ಭಟ್ಟರಿಗೂ, ಸುನಿಲ್ ಕುಮಾರ್ ಹೊಲಾಡು ಇವರಿಗೂ ಧನ್ಯವಾದಗಳನ್ನರ್ಪಿಸುತ್ತ ಧಾರೇಶ್ವರರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ು

ಲೇಖಕ: ರಜನೀಶ ಹೊಳ್ಳ,
ಕೆಂಪಿನಮಕ್ಕಿ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments