ಉದ್ಯೋಗಿಯಾಗಿದ್ದುಕೊಂಡು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದವರಲ್ಲಿ ಶ್ರೀ ಸತೀಶ ಪುಣಿಂಚತ್ತಾಯರೂ ಒಬ್ಬರು. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಅಧ್ಯಾಪಕರು. ತೆಂಕು-ಬಡಗಿನ ಸವ್ಯಸಾಚಿ ಭಾಗವತ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರ ಅಣ್ಣ. ಸತೀಶ ಪುಣಿಂಚತ್ತಾಯರು ಹವ್ಯಾಸಿ ಭಾಗವತರಾಗಿ ಗುರುತಿಸಿಕೊಂಡ ಸರಳ ಸಜ್ಜನ ಯಕ್ಷಗಾನ ಕಲಾವಿದ.
ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೆರ್ಲ ಸಮೀಪದ ಪಡ್ರೆ ಎಂಬಲ್ಲಿ 1970ನೇ ಇಸವಿ ಮೇ 16ರಂದು ಶ್ರೀ ಗಣಪತಿ ಪುಣಿಂಚತ್ತಾಯ ಮತ್ತು ಶ್ರೀಮತಿ ಗೀತಾ ದಂಪತಿಗಳ ಮಗನಾಗಿ ಜನಿಸಿದರು. ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ವರೆಗೆ ಓದಿ ಆಳಿಕೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದಿದ್ದರು. ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪದವೀಧರನಾಗಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು (ಎಂ.ಎ ) ಪಡೆದರು. ಮೈಸೂರಿನಲ್ಲಿ ಬಿಎಡ್ ಶಿಕ್ಷಣವನ್ನೂ ಪೂರೈಸಿದರು.
1994ರಲ್ಲಿ ಪೆರ್ಲ ಪೆರ್ಲ ಸತ್ಯನಾರಾಯಣ ಎಲ್.ಪಿ ಶಾಲೆಗೆ ಅಧ್ಯಾಪಕರಾಗಿ ಸೇರಿದ್ದರು. ಪ್ರಸ್ತುತ ಇವರು ಪ್ರೌಢಶಾಲಾ ಅಧ್ಯಾಪಕ. ಇವರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ತಂದೆ ಶ್ರೀ ಗಣಪತಿ ಪುಣಿಂಚತ್ತಾಯರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಇವರೂ, ಇವರ ಕಿರಿಯ ಸಹೋದರ ಸತ್ಯನಾರಾಯಣ ಪುಣಿಂಚತ್ತಾಯರೂ ತಂದೆಯ ಜತೆ ತಾಳಮದ್ದಲೆಗೆ ಹೋಗುತ್ತಿದ್ದರು. ಆಗ ಬಲಿಪ ಭಾಗವತರು ಆ ಪರಿಸರದಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದರು. (ಬಲಿಪರ ಹುಟ್ಟೂರು) ಧರ್ಮಸ್ಥಳ ಮೇಳದ ಮದ್ದಳೆಗಾರರಾದ ಶೇಣಿ ಸುಬ್ರಹ್ಮಣ್ಯ ಭಟ್ಟರು ಒತ್ತಾಯ ಮಾಡಿ ಪ್ರದರ್ಶನಗಳಿಗೆ ಕರೆದೊಯ್ಯುತ್ತಿದ್ದರಂತೆ. ಊಟ ಮಾಡಿ ತಾಳಮದ್ದಳೆ ಕೇಳುವುದು, ಆಯಾಸವಾದಾಗ ನಿದ್ದೆ ಮಾಡುವುದು. ಹೀಗೆ ಸಾಗಿತ್ತು ಬಾಲ್ಯದ ಬದುಕು.
ಚೆಂಡೆ, ಮದ್ದಳೆ, ಶ್ರುತಿಯ ನಿನಾದವನ್ನು ಕೇಳಿಯೇ ಬೆಳೆದವರು. ಹಾಗಾಗಿ ತಾಳ, ಲಯ, ಶೃತಿಜ್ಞಾನವು ಉಂಟಾಗಿತ್ತು. ಭಾಗವತಿಕೆಯನ್ನು ಸರಿಯಾಗಿ ಅಭ್ಯಸಿಸುವ ಮೊದಲೇ ಅನಿವಾರ್ಯವಾಗಿ ಆಟಕ್ಕೆ ಪದ್ಯ ಹೇಳುವ ಸಂದರ್ಭವೇರ್ಪಟ್ಟಿತ್ತು. ಪೆರ್ಲ ಶಾಲಾ ಮಕ್ಕಳ ಯಕ್ಷಗಾನ ಸ್ಪರ್ಧೆ. ಅತಿಕಾಯ ಮೋಕ್ಷ ಪ್ರಸಂಗ. ಭಯವಾಗಿತ್ತು ಇವರುಗೆ. ಆದರೆ ಅನಿವಾರ್ಯ. ಒತ್ತಾಯಕ್ಕೆ ಕಟ್ಟುಬಿದ್ದು ಪದ್ಯ ಹೇಳಿದ್ದರು. ಅಂದೇ ಸಭಾಕಂಪನ ದೂರವಾಗಿತ್ತು.

ಇವರು ಭಾಗವತಿಕೆ ಕಲಿತುದು ಕೋಟೆ ಶ್ರೀ ನಾರಾಯಣ ಭಟ್ಟರಿಂದ. ತಮ್ಮ ಸತ್ಯನಾರಾಯಣ ಪುಣಿಂಚತ್ತಾಯರೂ ಜತೆಯಾಗಿ ಕಲಿತುದು. ಇದಕ್ಕೆ ಪೂರಕವಾಗಿ ಶ್ರೀ ಪದ್ಮನಾಭ ಆಚಾರ್ಯ ಸ್ವರ್ಗ ಮತ್ತು ಶ್ರೀ ನರಸಿಂಹ ಹೇರಳ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ ಕಲಿಕೆ. ಸೀನಿಯರ್ ವರೆಗೆ ಪಾಠ. ಅಕ್ಕ ವತ್ಸಲಾ ಪುಣಿಂಚತ್ತಾಯಯರೂ ಕಲಿತಿದ್ದರು. ವತ್ಸಲಾ ವಿದ್ವತ್ ವರೆಗೆ ಕಲಿತಿದ್ದರು. ಅಕ್ಕ ವತ್ಸಲಾ ವಿವಾಹಿತೆ. ಶ್ರೀ ರಾಮಚಂದ್ರ ಬಡಿಕಿಲ್ಲಾಯರ ಪತ್ನಿ.
ಕಲಿಯುತ್ತಾ ಇರುವಾಗಲೇ ಆಟಕೂಟಗಳಿಗೆ ಪದ್ಯ ಹೇಳುವ ಅವಕಾಶಗಳೂ ಸಿಕ್ಕಿತ್ತು. “ಪೆರ್ಲ ಅಯ್ಯಪ್ಪ ಮಂದಿರದ ಆಟ. ಶ್ರೇಷ್ಠ ಕಲಾವಿದರ ಕೂಡುವಿಕೆ. ಭಾಗವತರು ಬಂದಿರಲಿಲ್ಲ. ಅಂದು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಚೆಂಡೆಗೆ. ಭಾಗವತರು ಬರುವ ವರೆಗೆ ಪದ್ಯ ಹೇಳಲು ಸೂಚನೆ ಬಂದಿತ್ತು. ನಾನು ಒಪ್ಪಲಿಲ್ಲ. ಹೆದರಿ ಕಂಗಾಲಾಗಿದ್ದೆ. ಚಿಪ್ಪಾರು ಮದ್ದಳೆಗಾರರು ಧೈರ್ಯ ತುಂಬಿದರು. ಪದ್ಯ ಹೇಳು ಎಂದು ಹೇಳಿದರು. ಅವರು ನನ್ನನ್ನು ಮುನ್ನಡೆಸಿದರು. ನಾಲ್ಕೈದು ಪದ್ಯ ಹೇಳಿದಾಗ ಭಾಗವತರು ಬಂದಿದ್ದರು. ಅವರನ್ನು ಕಂಡಾಗ ಬೆಟ್ಟವನ್ನು ತಲೆಯಿಂದ ಇಳಿಸಿದ ಅನುಭವವಾಯಿತು”. ಅಂದಿನ ದಿನವನ್ನು ಹೀಗೆ ನೆನಪಿಸುತ್ತಾರೆ ಶ್ರೀ ಸತೀಶ ಪುಣಿಂಚತ್ತಾಯರು.
ಸಾಮಾನ್ಯ 1990-91ರಲ್ಲಿ ಶ್ರೀ ಸಬ್ಬಣಕೋಡಿ ರಾಮ ಭಟ್ಟರು ಪಡ್ರೆಗೆ ಬಂದಾಗ ವಾಸ್ತವ್ಯ ಹೂಡಿದ್ದರು. ಅವರಿಂದ ಸಹಕಾರವೂ ಸಿಕ್ಕಿತ್ತು. ಅವರಿಂದ ಯಕ್ಷಗಾನ ಪಾಠಗಳನ್ನೂ ಕಲಿತಿದ್ದರು. “ಅಂದಿನಿಂದ ಇಂದಿನವರೆಗೆ ಶ್ರೀ ಸಬ್ಬಣಕೋಡಿ ರಾಮ ಭಟ್ಟರು ಆತ್ಮೀಯರಾಗಿ ಬಂಧುವಿನಂತೆ ಸಹಕರಿಸಿದ್ದಾರೆ” ಎಂಬುದು ಪುಣಿಂಚತ್ತಾಯರು ಅಭಿಪ್ರಾಯ. ಕಾರ್ಯಕ್ರಮ ಕಡಿಮೆಯಿದ್ದ ಕಾಲ. ಪ್ರತಿಭಾ ಪ್ರಕಟಣೆಗೆ ವೇದಿಕೆ ಬೇಕೆಂಬ ನೆಲೆಯಲ್ಲಿ ಮೇಳ ಮಾಡುವ ಯೋಚನೆಯನ್ನೂ ಮಾಡಿದ್ದರು. ಶ್ರೀ ಸತೀಶ ಪುಣಿಂಚತ್ತಾಯರಿಗೆ ಮೇಳ ನಡೆಸುವಂತೆ ಸೂಚನೆ ನೀಡಿದ್ದು ಮದ್ಲೆಗಾರ ಶ್ರೀ ಬಾಲಕೃಷ್ಣ ಕಾಟುಕುಕ್ಕೆ. ಕೊಲ್ಲಂಗಾನ ಮೇಳವನ್ನು ನಡೆಸುವ ನಿರ್ಧಾರ. ಆ ಕಾಲದಲ್ಲಿ ಕೊಲ್ಲಂಗಾನ ಕ್ಷೇತ್ರದಲ್ಲಿ ಶ್ರೀ ಅನಂತಪದ್ಮನಾಭ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ತಾಳಮದ್ದಳೆಗಳು ನಡೆಯುತ್ತಿತ್ತು.

ಪ್ರಸ್ತುತ ಶ್ರೀ ಕ್ಷೇತ್ರ ಕೊಲ್ಲಂಗಾನದ ಬ್ರಹ್ಮಶ್ರೀ ತಂತ್ರಿ ಗಣಧಿರಾಜ ಉಪಾಧ್ಯಾಯರು ಕಲಾ ಸಂಬಂಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ತಂತ್ರಿಗಳ ನಿರ್ದೇಶನದಂತೆ 1998ರಲ್ಲಿ ಕೊಲ್ಲಂಗಾನ ಮೇಳ ಆರಂಭ. ಪುತ್ತೂರು ಶೀನಪ್ಪ ಭಂಡಾರಿಗಳ ವೇಷಭೂಷಣ. ಅನಿವಾರ್ಯವಾದರೆ ಕಂಬನೆಡುವುದು, ರಂಗಸ್ಥಳ ಹಾಕುವುದು, ಭಾಗವತಿಕೆ ಹೀಗೆ ಎಲ್ಲಾ ಕೆಲಸಗಳ ಅನುಭವ. ಸರ್ವ ಹೊಣೆಯನ್ನೂ ಹೊತ್ತು ಮೇಳ ನಡೆಸಿದರು. ಇಷ್ಟೆಲ್ಲಾ ಮಾಡಿದ್ದು ಕೊಲ್ಲಂಗಾನ ಯಕ್ಷಪ್ರೇಮಿಗಳ ಸಹಕಾರದಿಂದ. ಕೊಲ್ಲಂಗಾನ ಶ್ರೀ ಕ್ಷೇತ್ರದ ಭಕ್ತರು – ಉಪಾಧ್ಯಾಯರ ನಿರ್ದೇಶನದಲ್ಲಿ ಮುನ್ನಡೆಯುವ ಕಲಾಸೇವಕರೇ ಕೊಲ್ಲಂಗಾನ ಯಕ್ಷಪ್ರೇಮಿಗಳು. ಕಾರ್ಯಕ್ರಮಗಳು ಹೆಚ್ಚಾಗಿ ಮೇಳಕ್ಕೆ ಒಳ್ಳೆಯ ಹೆಸರೂ ಬಂದಿತ್ತು.
ಶ್ರೀ ಸತೀಶ ಪುಣಿಂಚತ್ತಾಯರು 1999ರಲ್ಲಿ ಮಧುರಾ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು. ಸಾಂಸಾರಿಕ ಹೊಣೆಯಿದ್ದುದರಿಂದ ಮೇಳ ಬಿಡಬೇಕಾಯಿತು. ಆ ಸಮಯ ಶ್ರೀ ಗಣಾಧಿರಾಜ ಉಪಾಧ್ಯಾಯರು ಕೊಲ್ಲಂಗಾನ ಮೇಳದ ಹೊಣೆ ಹೊತ್ತು ಮುನ್ನಡೆಸಿದ್ದು ಇವರಿಗೆ ಅನುಕೂಲವೇ ಆಗಿತ್ತು. ಬಳಿಯೇ 8 ವರ್ಷ ಊರ ಪರವೂರಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ನಂತರ ಬಪ್ಪನಾಡು ಮೇಳಕ್ಕೆ. ಶಾಲೆಯ ರಜಾದಿನಗಳಲ್ಲಿ ಮಾತ್ರ ವ್ಯವಸಾಯ. ಒಳ್ಳೆಯ ಅವಕಾಶಗಳೂ ಸಿಕ್ಕಿತ್ತು. ಸಂಚಾಲಕರು ಮತ್ತು ವ್ಯವಸ್ಥಾಪಕರ ಸಹಕಾರ. ಅರುವ ಕೊರಗಪ್ಪ ಶೆಟ್ಟಿ, ಮಧೂರು ರಾಧಾಕೃಷ್ಣ ನಾವಡ, ಕಟೀಲು ಭಾಸ್ಕರ ಭಟ್, ಚಂದ್ರಶೇಖರ ಕಕ್ಕೆಪದವು, ನೆಕ್ಕರೆಮೂಲೆ ಗಣೇಶ ಭಟ್ ಮೊದಲಾದವರ ಒಡನಾಟವೂ ಸಿಕ್ಕಿತ್ತು.
ಮರುವರ್ಷ ಶ್ರೀ ಗಣಾಧಿರಾಜ ಉಪಾಧ್ಯಾಯರ ಮತ್ತು ಮ್ಯಾನೇಜರ್ ಮಹೇಶ ಮುಳಿಯಾರು ಅವರ ಕರೆಯಂತೆ ಮತ್ತೆ ಕೊಲ್ಲಂಗಾನ ಮೇಳಕ್ಕೆ. 4 ವರುಷಗಳಿಂದ ಕೊಲ್ಲಂಗಾನ ಮೇಳದ ಕಲಾಸೇವೆ ಮುಗಿಸಿ ಮಂಗಳಾದೇವಿ ಮೇಳದಲ್ಲೂ ಅವಕಾಶ ಸಿಕ್ಕಿತ್ತು. ಗೆಳೆಯ ಶ್ರೀ ಸುಬ್ರಹ್ಮಣ್ಯ ಶಗ್ರಿತ್ತಾಯ ಅವರ ಮೂಲಕ ಈ ಅವಕಾಶ ಸಿಕ್ಕಿತ್ತು. ಮೇಳದ ಯಜಮಾನರ ಮತ್ತು ಸರ್ವಕಲಾವಿದರ ಸಹಕಾರವೂ ಸಿಕ್ಕಿತ್ತು.
ಮಳೆಗಾಲದಲ್ಲಿ ಮಕ್ಕಳನ್ನೂ ಹಳ್ಳಿಗರನ್ನೂ ಯಕ್ಷಗಾನದತ್ತ ಆಕರ್ಷಿಸಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟರ ಮೊಮ್ಮಗ ಶೇಣಿ ವೇಣುಗೋಪಾಲ ಭಟ್ ಇವರ ಜತೆಗೂಡಿ :ಶೇಣಿ ರಂಗಜಂಗಮ ಟ್ರಸ್ಟ್ (ರಿ) ಎಂಬ ಸಂಸ್ಥೆಯಡಿ ಊರಿನ ಪ್ರತಿಭಾನ್ವಿತ ಕಲಾವಿದರನ್ನು ಸೇರಿಸಿ ತಾಳಮದ್ದಳೆ ಕೂಟಗಳನ್ನು ಏರ್ಪಡಿಸಲು ತೊಡಗಿದರು. ಕಳೆದ 5 ವರ್ಷಗಳಿಂದ ನೂರಕ್ಕೂ ಮಿಕ್ಕಿ ತಾಳಮದ್ದಳೆ ಕಾರ್ಯಕ್ರಮಗಳು ನಡೆದಿವೆ. ಇದನ್ನು ನಿರಂತರ ಮುಂದುವರಿಸುವ ಯೋಜನೆ ಇವರದು.
ಸತೀಶ ಪುಣಿಂಚತ್ತಾಯರು ಯಕ್ಷಗಾನ ಭಾಗವತನೊಬ್ಬ ಡಾಕ್ಟರೇಟ್ ಪದವಿ ಪಡೆದ ಅಪರೂಪದ ಸಾಧನೆ ಮಾಡಿದ್ದಾರೆ. ತೆಂಕು ಮತ್ತು ಬಡಗು ತಿಟ್ಟು ಭಾಗವತಿಕೆಗಳ ಬಗ್ಗೆ ತೌಲನಿಕ ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಮಂಡಿಸಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಶ್ರೀ ಸತೀಶ ಪುಣಿಂಚತ್ತಾಯ ಮತ್ತು ಮಧುರಾ ದಂಪತಿಗಳ ಪುತ್ರ ಮಾ| ಸಮೃದ್ಧ ಪುಣಿಂಚತ್ತಾಯ. ಪೆರ್ಲ ಶಾಲೆಯ ಆರನೇ ತರಗತಿ ವಿದ್ಯಾರ್ಥಿ. ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿ ಕೊಲ್ಲಂಗಾನ ಮೇಳದಲ್ಲಿ ಚಕ್ರತಾಳ ಬಾರಿಸುತ್ತಾನೆ. ಮಾ| ಸಮೃದ್ಧ ಪುಣಿಂಚತ್ತಾಯನಿಗೆ ಉಜ್ವಲ ಭವಿಷ್ಯವನ್ನು ನಾವೆಲ್ಲರೂ ಹಾರೈಸೋಣ. ಅಧ್ಯಾಪಕ, ಭಾಗವತ ಶ್ರೀ ಸತೀಶ ಪುಣಿಂಚತ್ತಾಯರಿಗೆ ಕಲಾಮಾತೆಯ ಸೇವೆಯನ್ನು ನಿರಂತರವಾಗಿ ಮಾಡುವ ಅವಕಾಶಗಳನ್ನು ಶ್ರೀ ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು.
ಬರಹ: ರವಿಶಂಕರ್ ವಳಕ್ಕುಂಜ 
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

