Friday, September 20, 2024
Homeಯಕ್ಷಗಾನವಾಸುದೇವ ಸಾಮಗ - ಎದೆಯೊಳಗಿನ ಮಾತು

ವಾಸುದೇವ ಸಾಮಗ – ಎದೆಯೊಳಗಿನ ಮಾತು

“ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ”  ಪ್ರತಿಯೊಂದು ಯಕ್ಷಗಾನ ಪ್ರದರ್ಶನಗಳಲ್ಲಿ ಯಾವನಾದರೂ ಒಬ್ಬ ಪಾತ್ರಧಾರಿಯ ಬಾಯಿಯಿಂದ ಈ ಮಾತಿನ ಮುತ್ತುಗಳನ್ನು ಕೇಳಿಯೇ ಇರುತ್ತೇವೆ. ಬಹಳಷ್ಟು ವ್ಯಾಪಕವಾದ ಅರ್ಥಗಳನ್ನು ಕೊಡುವ ಇಂತಹ ಮಾತುಗಳು ಬಹಳಷ್ಟು ವ್ಯಕ್ತಿಗಳಿಗೆ ಅನ್ವಯವಾಗುತ್ತವೆ. ಈ ಮಾತು ಯಕ್ಷಗಾನ ಕಲಾವಿದರಾದ ಶ್ರೀ ಮಲ್ಪೆ ವಾಸುದೇವ ಸಾಮಗರಿಗೆ ಅನ್ವಯವಾಗುತ್ತವೆಯೇನೋ ಎಂದು ನನಗೊಮ್ಮೆ ಅನ್ನಿಸಿದ್ದು ನಿಜ. ಹಾಗೆಂದು ನಾನೇನೂ ಅವರಲ್ಲಿ ಕಠಿಣತೆಯನ್ನು ಆರೋಪಿಸುವುದಿಲ್ಲ.

ಅಂತಹ ಒರಟು ಸ್ವಭಾವ ಅವರಲ್ಲಿ ಕಂಡೂ ಇಲ್ಲ. ನನಗವರು ಹೂವಿನಷ್ಟೇ ಮೃದುವಾಗಿ ಕಾಣಿಸುತ್ತಾರೆ. ಆದರೆ ಕೆಲವೊಮ್ಮೆ ಅವರಾಡುವ ನೇರ ಮಾತುಗಳಿಂದ ಅವರಲ್ಲಿ ಇಲ್ಲದ ಕಠಿಣತೆಯನ್ನು ಗುರುತಿಸಿ ಅಪಾರ್ಥ ಮಾಡಿಕೊಂಡವರೂ ಇರಬಹುದು. ಆದರೆ ವಾಸುದೇವ ಸಾಮಗರು ಒಬ್ಬ ಹೃದಯವಂತ. ಇನ್ನೊಬ್ಬರ ಕಷ್ಟಗಳನ್ನು ಕಂಡು ಮರುಗುವ, ಕರಗುವ ಸ್ನೇಹಜೀವಿ.

ಅವರೊಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ ಇರಬಹುದು ಎಂದು ಭಾವಿಸುವೆ. ಅರ್ಥಶಾಸ್ತ್ರಜ್ಞರೆಲ್ಲಾ ಆರ್ಥಿಕವಾಗಿ ಸದೃಢವಾಗಿರಬೇಕೆಂದೇನೂ ಇಲ್ಲ.  ಆರ್ಥಿಕ ಲೆಕ್ಕಾಚಾರಗಳನ್ನು ಮಾಡದೇ ಇರುತ್ತಿದ್ದರೆ ಈಗ ಕಾರ್ಯಕ್ರಮವೊಂದಕ್ಕೆ ಸಾವಿರಗಳ ಲೆಕ್ಕದಲ್ಲಿ ಕೋರಿಕೆ ಸಲ್ಲಿಸುವ ವ್ಯಕ್ತಿಗಳಿರುವಾಗ ಅತಿ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ನಡೆಸಿಕೊಡುವ ‘ಸಂಯಮಂ’ ತಾಳಮದ್ದಳೆ ತಂಡವನ್ನು ಹುಟ್ಟುಹಾಕುವ ಅವಶ್ಯಕತೆ ಅವರಿಗೆ ಇರುತ್ತಿರಲಿಲ್ಲ. ವರುಷಕ್ಕೊಮ್ಮೆ ಬಡ ಕಲಾವಿದರನ್ನು ಹುಡುಕಿ ಅವರಿಗೆ ಸನ್ಮಾನ ಮಾಡಿ ಜೊತೆಗೆ ತಮ್ಮ ಕೈಲಾದಷ್ಟು ಸನ್ಮಾನ ನಿಧಿಯನ್ನೂ ಅರ್ಪಿಸುತ್ತಿದ್ದಾರೆ. ವರ್ಷಕ್ಕೆ ಸುಮಾರು 40000 ರೊಪಾಯಿಗಳಷ್ಟು ವಿವಿಧ ಸಂಘ ಸಂಸ್ಥೆಗಳಿಗೆ ದಾನವನ್ನೂ ಮಾಡಿದ್ದಾರೆ. ಎಲ್ಲಿಯೂ ಯಾರೂ ಗುರುತಿಸದೆ ಅವಗಣಿಸಲ್ಪಟ್ಟ ಉತ್ತಮ ಕಲಾವಿದರನ್ನೇ ಗುರುತಿಸಿ ಹುಡುಕಿ ಸನ್ಮಾನ ಮಾಡುತ್ತಿರುವುದು ಸಾಮಗರ ವೈಶಿಷ್ಟ್ಯ. ಇಂದು ಯಕ್ಷಗಾನವೆನ್ನುವುದು ಅದು ಕೇವಲ ಒಂದು ವೈಭವದ ಕಲೆಯಾಗಿ ಉಳಿದಿಲ್ಲ.

ಸಂಪಾದನೆಯ  ಜೊತೆಗೆ ಅದೂ ಒಂದು ಉದ್ಯಮವಾಗಿ ಬದಲಾಗುತ್ತಿರುವುದು ವಿಪರ್ಯಾಸ ಎಂದು ವಾಸುದೇವ ಸಾಮಗರು ಖೇದ ವ್ಯಕ್ತಪಡಿಸುತ್ತಾರೆ. ಜೀವನದಲ್ಲಿ ಬರಬಹುದಾದ ಕಷ್ಟಕರವಾದ ಸನ್ನಿವೇಶಗಳನ್ನು ಊಹಿಸಿ ಅವುಗಳನ್ನು ನಿಭಾಯಿಸಲೋಸುಗ ಸಾಮಗರು ಒಂದಕ್ಕಿಂದ ಹೆಚ್ಚು ವಿಭಾಗಗಳಲ್ಲಿ ಪರಿಣತಿಯನ್ನು ಗಳಿಸಿಕೊಂಡಿದ್ದರು. ಒಬ್ಬ ಉತ್ತಮ ತಾರಾ ಮೌಲ್ಯದ ಕಲಾವಿದನಾಗಿದ್ದುದರ ಜೊತೆಗೆ ಅವರು ನುರಿತ ಚಾಲಕನೂ ಹೌದು. ವಿದ್ಯುತ್ ಸಂಬಂಧೀ ಕೆಲಸಗಾರನೂ ಹೌದು (ಎಲೆಕ್ಟ್ರೀಷಿಯನ್). ವೇಷಧಾರಿಯಾಗಿಯೂ ಒತ್ತು ಮದ್ದಳೆಗಾರನಾಗಿಯೂ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ತಾನು, ತನ್ನ ವೇಷ. ತನ್ನ ಪೆಟ್ಟಿಗೆ, ತನ್ನ ಅಭಿಮಾನಿಗಳು ಎಂಬ ಮನೋಭಾವ ಹೊಂದಿದವರ ನಡುವೆ ವಾಸುದೇವ ಸಾಮಗರಂತಹ ವ್ಯಕ್ತಿಗಳು ಕಾಣಲು ಸಿಗುವುದು ಅಪರೂಪ.

ಏನಾದರೂ ಹೆಚ್ಚು ಕಡಿಮೆ ಅವರ ಬಗ್ಗೆ ಒಂದೆರಡು ಶಬ್ದ ತಪ್ಪಿ ಹೇಳಿದರೆ ಅಥವಾ ಬರೆದರೆ ಎಂದೂ ಅಪಾರ್ಥ ಮಾಡಿಕೊಳ್ಳದ ವಾಸುದೇವ  ಸಾಮಗರಂತಹಾ ಹೃದಯವಂತರು ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತಾರೆ. ಸಾಮಗರು ಸತ್ಯವನ್ನಾಡುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರ್ಪಡಿಸುವುದಿಲ್ಲ. ಕಾಗದದಲ್ಲಿ ಬರೆದು ತಂದು ಹರಿಕಥೆ ಪ್ರದರ್ಶನ ಮಾಡುವವರಿಗೆ  ಕೊಡುವ ಸಂಭಾವನೆಗೂ ಸಾಮಗರು ಪರಿಶ್ರಮದಿಂದ  ಮಾಡುತ್ತಿದ್ದ ಹರಿಕಥೆಗೆ ಕೊಡುತ್ತಿದ್ದ ಸಂಭಾವನೆಗೂ ದೊಡ್ಡ ಅಂತರದ ತಾರತಮ್ಯವಿದ್ದುದನ್ನು ಅವರೊಮ್ಮೆ ಉಲ್ಲೇಖಿಸಿದ್ದರು. ಆದುದರಿಂದ ಈ ಕ್ಷೇತ್ರದಲ್ಲಿ ತರತಮ, ಭೇಧಭಾವಗಳನ್ನು ಕಂಡು ರೋಸಿಹೋಗಿ ಅವರು ಹರಿಕಥೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಎಂದೂ ಡಿಮ್ಯಾಂಡ್ ಮಾಡದ ಸಾಮಗರು ಇಷ್ಟೇ ಕೊಡಿ ಎಂದು ಎಲ್ಲಿಯೂ ಕೇಳುವ ಅಭ್ಯಾಸವನ್ನು ಇಟ್ಟುಕೊಂಡವರಲ್ಲ. ಸಂಘಟಕರು ಚಂದಾ ಎತ್ತಿ ಕಷ್ಟಪಟ್ಟು ನಡೆಸುವ ಕಾರ್ಯಕ್ರಮಗಳಲ್ಲಿಯೂ ತಮಗೆ ಇಷ್ಟೇ ಕೊಡಿ ಎಂದು ಹೇಳುವ ಕಲಾವಿದರನ್ನೂ ತಾವು ಬಯಸಿದಷ್ಟು ಸಿಗಲಾರದು ಎಂದು ಮುಂಚಿತವಾಗಿಯೇ ತಿಳಿದು ಸಮಯಕ್ಕೆ ಗೈರು ಹಾಜರಾಗಿ ಕೈ ಕೊಡುವ ಕಲಾವಿದರನ್ನೂ ವಾಸುದೇವ ಸಾಮಗರು ಎಂದೂ ಇಷ್ಟಪಡುವುದಿಲ್ಲ. 

ಕರೆದು ಕರೆದು ವಾರಕ್ಕೆರಡು ಸನ್ಮಾನ ಮಾಡಿಸಿಕೊಳ್ಳುವ ಗಡಣಗಳ ನಡುವೆ ವಾಸುದೇವ ಸಾಮಗರು ಪ್ರತ್ಯೇಕವಾಗಿ ಕಾಣುತ್ತಾರೆ. ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಆ ಪ್ರಶಸ್ತಿ ಬಂದದ್ದಕ್ಕೆ ಒಂದೆರಡು ಅಭಿನಂದನೆ ಸನ್ಮಾನ ಬಿಟ್ಟರೆ ಮತ್ತೇನೂ ಇಲ್ಲ. ಸಣ್ಣ ಪುಟ್ಟ ಸನ್ಮಾನಗಳು ಒಂದೆರಡು ಇರಬಹುದು . ಏನೇ ಆಗಲಿ. ಈಗ ವಾಸುದೇವ ಸಾಮಗರಿಗೆ ಆರ್ಥಿಕ ಸಂಕಷ್ಟ ಇರಲಿಕ್ಕಿಲ್ಲ. ಮಗ ಪ್ರದೀಪ ವಿ. ಸಾಮಗರೂ ಜೀವನದಲ್ಲಿ ಉನ್ನತ ನೆಲೆಯನ್ನು ಕಂಡುಕೊಂಡಿದ್ದಾರೆ. ಅದೂ ಅಲ್ಲದೆ ಸಂಯಮಂ ತಂಡ ಕಟ್ಟಿದ ಮೇಲೆ ತನ್ನ ಆರ್ಥಿಕ ಸಂಕಷ್ಟ ತುಂಬಾ ಕಡಿಮೆಯಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. 


ಕೊನೆಗೆ ಸಾಮಗರ ಒಂದು ಗುಣವನ್ನು ಹೇಳದಿದ್ದರೆ ಈ ಲೇಖನ ಅಪೂರ್ಣವಾದೀತು. ತಾವು ಎಷ್ಟೇ ಆರ್ಥಿಕವಾಗಿ ಅನಾನುಕೂಲತೆಯಲ್ಲಿದ್ದರೂ ಕೈಯೆತ್ತಿ ಕೊಡುವುದರಲ್ಲಿ ಅವರು ಧಾರಾಳಿ. ಏನನ್ನೂ ಬಯಸದೆ ಅವರಲ್ಲಿಗೆ ಸ್ನೇಹಪರರಾಗಿ ಹೋಗಿದ್ದರೂ ಅವರು ಮಾತ್ರ ಸುಮ್ಮನೆ ಕಳುಹಿಸುವವರಲ್ಲ. ಬರುತ್ತೇನೆ ಎಂದು ಹೊರಡಲು ಎದ್ದು ನಿಂತಾಗ ಒಳಹೋದ ಸಾಮಗರ ಕೈ ಕಪಾಟಿನ ಒಳಗೆಲ್ಲಾ ತಡಕಾಡುತ್ತದೆ. ಹಾಗೆ ತಡಕಾಡಿದಾಗ ಅವರ ಕೈಗೆ ಶಾಲುಗಳು ಸಿಗುತ್ತವೆ. ಅದನ್ನು ತಂದು ನಮ್ಮ ಭುಜಕ್ಕೆ ಜೋತು ಹಾಕುತ್ತಾರೆ. ಆ ಶಾಲಿನ ಜೊತೆಗೆ ಸಾಮಗರ ಹೃದಯವಂತಿಕೆಯೂ ಮುಗ್ಧತೆಯೂ ಮರೆಯಲಾಗುವುದಿಲ್ಲ. ಆ ಮನಸ್ಸನ್ನು ಕೂಡಾ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments