Saturday, May 18, 2024
Homeಪುಸ್ತಕ ಮಳಿಗೆದಿವಾಣ ಸಂಪದ - ದಿವಾಣ ಭೀಮ ಭಟ್ಟ ಜನ್ಮ ಶತಮಾನ ಸ್ಮೃತಿ ಸಂಚಯ

ದಿವಾಣ ಸಂಪದ – ದಿವಾಣ ಭೀಮ ಭಟ್ಟ ಜನ್ಮ ಶತಮಾನ ಸ್ಮೃತಿ ಸಂಚಯ

ಶ್ರೀ ದಿ| ದಿವಾಣ ಭೀಮ ಭಟ್ಟರು ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರರಾಗಿ ಮೆರೆದವರು. ಹಿರಿಯ ಬಲಿಪ ನಾರಾಯಣ ಭಾಗವತರ ಸಹಕಾರ ಪ್ರೋತ್ಸಾಹದಿಂದ ತಿರುಗಾಟವನ್ನೂ ಆರಂಭಿಸಿದ್ದರು. ಮದ್ದಳೆಗಾರರಾಗಿ ಮಹಾನ್ ಸಾಧನೆಯನ್ನು ಮಾಡಿದವರು. ಮೊದಲ ತಿರುಗಾಟ ಶ್ರೀ ಕದ್ರಿ ಮೇಳದಲ್ಲಿ. ಬಳಿಕ ಐದು ವರ್ಷ ಹಿರಿಯ ಬಲಿಪರ ಜತೆಯಾಗಿ ಕಟೀಲು ಮೇಳದಲ್ಲಿ. ಮತ್ತೆ ಹದಿನೈದು ವರ್ಷಗಳ ಕಾಲ ಕಲಾ ವ್ಯವಸಾಯದಿಂದ ದೂರ ಉಳಿದರೂ ಪುನರಪಿ ಮೂಲ್ಕಿ, ಇರಾ, ಕೂಡ್ಲು ಮೇಳಗಳಲ್ಲಿ ಹಲವು ವರ್ಷ ಕಲಾ ಸೇವೆಯನ್ನು ಮಾಡಿದ್ದರೆಂದು ತಿಳಿದುಬರುತ್ತದೆ.

ಕಟೀಲು ಮೇಳದಲ್ಲಿ ಸೇವಾ ರೂಪದ ಕೊನೆಯ ತಿರುಗಾಟವನ್ನು ಮಾಡಿ ಶ್ರೀಯುತರು ನಿವೃತ್ತರಾಗಿದ್ದರು. ಹಿರಿಯ ಬಲಿಪರು, ಅಗರಿ ಶ್ರೀನಿವಾಸ ಭಾಗವತರಂತಹ ಹಿರಿಯರ ಸಮಕಾಲೀನರಾದರೂ ಬಳಿಕ ತನಗಿಂತ ಕಿರಿಯ ಕಲಾವಿದರ ಜತೆಗೂ ಕಲಾವ್ಯವಸಾಯವನ್ನು ಮಾಡಿದರು. ಶ್ರೀಯುತರ ಅದ್ಭುತ ಪ್ರತಿಭೆಗೆ ಲಯಬ್ರಹ್ಮ ಎಂಬ ಬಿರುದು ಒಲಿದು ಬಂದಿತ್ತು. ಯಕ್ಷಗಾನ ವಾದನಕ್ರಮದಲ್ಲಿ ಅಸಾಮಾನ್ಯ ಸಾಧಕನಾಗಿ ಮೆರೆದ ದಿವಾಣ ಭೀಮ ಭಟ್ಟರ ಜನ್ಮ ಶತಮಾನ ಸ್ಮೃತಿ ಸಂಚಯ ದಿವಾಣ ಸಂಪದ ಪುಸ್ತಕವು 2015ರಲ್ಲಿ ಮುದ್ರಣಗೊಂಡು ಓದುಗರ ಕೈ ಸೇರಿತ್ತು.

ಮಂಗಳೂರು ಶಕ್ತಿನಗರದ ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವ ಸಮಿತಿಯು  ಈ ಪುಸ್ತಕದ ಪ್ರಕಾಶಕರು. ಶ್ರೀ ಡಾ. ಪ್ರಭಾಕರ ಜೋಶಿ ಮತ್ತು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಇದರ ಸಂಪಾದಕರು. ಈ ಸಂಸ್ಮರಣ ಗ್ರಂಥದ ಮುದ್ರಣ ಪ್ರಾಯೋಜಕರು ಅನನ್ಯ ಫೀಡ್ಸ್ ಹುಬ್ಬಳ್ಳಿ. ಶ್ರೀ ಮದ್ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರುಗಳ ಆಶೀರ್ವಚನಪೂರ್ವಕ ಸಂದೇಶಗಳು ಪುಸ್ತಕದ ಮೊದಲ ಪುಟಗಳಲ್ಲಿ ನಮಗೆ ಓದಬಹುದು. ಸಂಪಾಜೆ ಯಕ್ಷೋತ್ಸವದ ರೂವಾರಿ ಡಾ. ಶ್ರೀ ಟಿ. ಶ್ಯಾಮ ಭಟ್ಟರು ಶುಭಾಶಂಸನೆ ಮಾಡುತ್ತಾ ‘ಚೆಂಡೆ ಮದ್ದಳೆ ವಾದನ ತಪಸ್ವಿ’ ಎಂದು ದಿವಾಣ ಭೀಮ ಭಟ್ಟರನ್ನು ಪ್ರಶಂಸಿಸಿದ್ದಾರೆ.

ಸಂಪಾದಕರುಗಳಾದ ಶ್ರೀ ಡಾ. ಪ್ರಭಾಕರ ಜೋಶಿ ಮತ್ತು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ‘ಶ್ರೀ ಭೀಮಸ್ಮೃತಿ ಯೋಗ ‘ ಎಂಬ ಶೀರ್ಷಿಕೆಯಡಿಯಲ್ಲಿ ಸಂಪಾದಕೀಯ ನುಡಿಗಳನ್ನು ಬರೆದಿರುತ್ತಾರೆ. ದಿವಾಣ ಭೀಮ ಭಟ್ ಜನ್ಮಶತಮಾನೋತ್ಸವದ ಸರಣಿ ಕಾರ್ಯಕ್ರಮಗಳು ನಡೆದು ಸಮಾರೋಪ ಸಮಾರಂಭದಂದು ‘ದಿವಾಣ ಸಂಪದ’ ಎಂಬ ಈ ಗ್ರಂಥ ಲೋಕಾರ್ಪಣೆಗೊಂಡಿತ್ತು. ಭಾಗ ಒಂದರಲ್ಲಿ ಶ್ರೀ ಪು. ಶ್ರೀನಿವಾಸ ಭಟ್ಟ ಮತ್ತು ಡಾ. ಪ್ರಭಾಕರ ಜೋಶಿ ಅವರ ಲೇಖನಗಳಿವೆ. ಭಾಗ ಎರಡರಲ್ಲಿ 41 ಮಂದಿ ಮಹನೀಯರುಗಳು ದಿವಾಣ ಭೀಮ ಭಟ್ಟರ ಬಗೆಗೆ ತಮ್ಮ ಅನಿಸಿಕೆಗಳನ್ನು ಲೇಖನ ರೂಪದಲ್ಲಿ ನೀಡಿರುತ್ತಾರೆ.

ಭಾಗ ಮೂರರಲ್ಲಿ ಕಲಾ ಸಂಬಂಧೀ ಒಂಭತ್ತು ಲೇಖನಗಳಿವೆ. ಬಳಿಕ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ, ಯಕ್ಷಕಲಾ ವಿಶ್ವಸ್ತ ಮಂಡಳಿ ಕೋಡಪದವು ಈ ಸಂಸ್ಥೆಯ ಸಂಕ್ಷಿಪ್ತ ಪರಿಚಯವಿದೆ. ಈ ಸಂಸ್ಥೆಯು 2001ರಿಂದ ತೊಡಗಿ 2010 ರ ವರೆಗೆ ದಿವಾಣ ಪ್ರಶಸ್ತಿಯನ್ನು ಕಲಾಸಾಧಕರಿಗೆ ನೀಡುತ್ತಾ ಬಂದಿತ್ತು. ಬಳಿಕ ದಿವಾಣ ಭೀಮ ಭಟ್ಟ ಜನ್ಮಶತಮಾನೋತ್ಸವ ಸರಣಿ ಕಾರ್ಯಕ್ರಮ, ಭೀಮ ಭಟ್ಟ ವಂಶವೃಕ್ಷ ಮತ್ತು ಶತಮಾನೋತ್ಸವ ಸಮಿತಿಯ ಬಗೆಗೆ ವಿವರಗಳನ್ನೂ ನೀಡಲಾಗಿದೆ. ದಿವಾಣ ಭೀಮ ಭಟ್ಟರ ಕುಟುಂಬ ಮತ್ತು ಕಲಾವ್ಯವಸಾಯಕ್ಕೆ ಸಂಬಂದಿಸಿದ ಮೂವತ್ತರಷ್ಟು ಚಿತ್ರಗಳನ್ನೂ ಕೊನೆಯಲ್ಲಿ ನೀಡಲಾಗಿದೆ. ಇದು ಒಟ್ಟು ಇನ್ನೂರು ಪುಟಗಳಿಂದ ಕೂಡಿದೆ. ವಿದ್ವಾಂಸರೂ ಕಲಾವಿದರೂ ಬರೆದಂತಹ ಲೇಖನಗಳನ್ನು ಹೊಂದಿ ಉತ್ತಮ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಇದು. 

ಕಲಾವಿದ, ಸಂಚಾಲಕ ನಿಡ್ಲೆ ಗೋವಿಂದ ಭಟ್ (Nidle Govinda Bhat)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments