Friday, September 20, 2024
Homeಯಕ್ಷಗಾನಉಚಿತ ಪುರಾಣ

ಉಚಿತ ಪುರಾಣ

ಈಗಿನ ಆಧುನಿಕ ಯುಗದಲ್ಲಿ ಜನರನ್ನು ಮರುಳು ಮಾಡೋದು ಅಷ್ಟು ಸುಲಭವಲ್ಲ. ಈಗಿನ ಜನರು ಬುದ್ಧಿವಂತರಿದ್ದ ಕಾರಣ ಅವರನ್ನು ಆಕರ್ಷಿಸಲು ಮೊದಲಿನಷ್ಟು ಸುಲಭವಲ್ಲ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ಇದು ಜಾಹೀರಾತುಗಳ ಯುಗವೆಂದೇ ಪರಿಗಣಿತವಾಗಿದೆ. ವ್ಯಾಪಾರಿಗಳು ಅಥವಾ ಉದ್ದಿಮೆದಾರರು ಜನರನ್ನು ಆಕರ್ಷಿಸಲು ಬಹಳಷ್ಟು ಪಾಡು ಪಡಬೇಕಾಗುತ್ತದೆ. ಹೇರಳವಾದ ಜಾಹೀರಾತುಗಳು ನಮಗೆ ಕಾಣಸಿಗುತ್ತವೆ. ಅದು ವಾರ್ತಾ ಮಾಧ್ಯಮಗಳಲ್ಲಿ ಆಗಿರಬಹುದು ಅಥವಾ ದೃಶ್ಯಮಾಧ್ಯಮಗಳಲ್ಲೂ ಆಗಿರಬಹುದು. ಒಂದು ನಿಮಿಷ ಕಾರ್ಯಕ್ರಮವನ್ನು ನೀಡಿ ಎರಡು ನಿಮಿಷ ಜಾಹೀರಾತು ಕೊಡುವುದೇ ಕಂಡುಬರುತ್ತದೆ. ಹೇಗೆ ಬೇಕಾದರೂ ಸರಿ, ಜನರನ್ನು ಆಕರ್ಷಣೆ ಮಾಡುವುದು ಈಗ ಮುಖ್ಯ ಉದ್ದೇಶವಾಗಿರುತ್ತದೆ.
ಜಾಹೀರಾತುಗಳ ವಿಷಯ ಬಂದಾಗ ನಾವು ವಿಭಿನ್ನವಾದ ಜಾಹೀರಾತುಗಳನ್ನು ವೀಕ್ಷಿಸಬಹುದು ಅಥವಾ ಓದಬಹುದು. ಯಾವುದೇ ಮಾಧ್ಯಮಗಳಲ್ಲಿ ಆಗಿರಲಿ ಸತ್ಯದ ತಲೆಯ ಮೇಲೆ ಹೊಡೆದಂತೆ ಎಂಬ ಮಾತಿನಂತೆ ಕೆಲವು ಜಾಹೀರಾತುಗಳು ನಮಗೆ ಕಾಣಸಿಗುತ್ತವೆ. ಜಾಹೀರಾತುಗಳು ಕೆಲವೊಮ್ಮೆ ಮುಖ್ಯ ಕಾರ್ಯಕ್ರಮಗಳಿಗಿಂತಲೂ ಆಕರ್ಷಕವಾಗಿರುತ್ತದೆ. ಕಾರ್ಯಕ್ರಮಗಳನ್ನು ನೋಡುವ ಬದಲು ಜಾಹೀರಾತುಗಳನ್ನೇ ನೋಡುವ ಹಲವಾರು ಮಂದಿ ನಮಗೆ ಕಾಣಸಿಗುತ್ತಾರೆ.
ಇಂತಹ ಹತ್ತು ಹಲವು ಜಾಹೀರಾತುಗಳ ನಡುವೆ ಉಚಿತ ಜಾಹೀರಾತುಗಳು ನಮ್ಮ ಗಮನಸೆಳೆಯುತ್ತವೆ. ಮೊದಲಿಂದಲೂ ಜನರಿಗೆ ಯಾವುದಾದರೂ ಒಂದು ವಸ್ತು ಉಚಿತ ಸಿಗುತ್ತದೆ ಎನ್ನುವುದರಲ್ಲಿ ಬಹಳವಾದ ಆಸಕ್ತಿ. ವಸ್ತುವಿನ ಗುಣಮಟ್ಟ ಹೇಗೇ ಇರಲಿ ಒಬ್ಬ ವ್ಯಾಪಾರಿ ನಿಮಗೆ ಉಚಿತ ಕೊಡುತ್ತಾನೆ ಎಂದರೆ ಅದು ನಿಜವಾದ ಒಂದು ಆಕರ್ಷಣೆ ಎಂದೇ ಜನ ಭಾವಿಸುತ್ತಾರೆ. ಆದ್ದರಿಂದ ಒಂದಕ್ಕೊಂದು ಫ್ರೀ (ಒಂದಕ್ಕೆ ಒಂದು ಉಚಿತ) ಎನ್ನುವುದರಲ್ಲಿ, ಮೊದಲಿನ ಒಂದರಲ್ಲಿ ಉಚಿತದ ಬೆಲೆಯು ಕೂಡಾ ಅಡಗಿರುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಎಲ್ಲರೂ ಉಚಿತದ ಬೆನ್ನುಬೀಳುತ್ತಾರೆ. ಈ ಉಚಿತದ ಆಕರ್ಷಣೆ ಇತ್ತೀಚೆಗೆ ಹಲವಾರು ವರ್ಷಗಳಿಂದ ನಡೆದು ಬಂದದ್ದು. ಒಂದಕ್ಕೆ ಒಂದು ಉಚಿತ. ಇದು ಕೆಲವು ಕಂಪನಿಗಳ ಕೆಲವು ವ್ಯಾಪಾರಿಗಳ ಧ್ಯೇಯವಾಕ್ಯದಂತೆ ರಾರಾಜಿಸುತ್ತಿದೆ. ಆದ್ದರಿಂದ ಉಚಿತವನ್ನು ನಂಬಿಹೋಗುವ ಜನರು ಬೇರೇನನ್ನೂ ಯೋಚಿಸುವುದಿಲ್ಲ.
ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂದೇಶಗಳು ಹೇರಳವಾಗಿ ಕಾಣಸಿಗುತ್ತದೆ. ಈ ಸಂದೇಶವನ್ನು ಹತ್ತು ಜನರಿಗೆ ಹಂಚಿದಾಗ ನಿಮಗೆ ಇಂತಿಷ್ಟು ಉಚಿತವಾಗಿ ಇಂಟರ್ನೆಟ್ (ಅಂತರ್ಜಾಲ) ಡಾಟಾ ಫ್ರೀ ಎಂದೂ, ಇಷ್ಟು ಜಿಬಿ ಡಾಟ ಫ್ರೀ ಎಂದೂ ನಿಮಗೆ ಸಂದೇಶಗಳು ಬರುತ್ತದೆ. ಅಥವಾ ಇದನ್ನ ಇಂತಿಷ್ಟು ಜನರಿಗೆ ಹಂಚಿದಾಗ ಒಂದು ಸಂದೇಶಕ್ಕೆ ಹತ್ತು ಪೈಸೆಯಂತೆ ಎಂಬ ನಿಖರವಲ್ಲದ, ಸುಳ್ಳಾದ ಸಂದೇಶಗಳ ಹೇರಳವಾಗಿ ಬರುತ್ತವೆ. ಯಾರೋ ಒಂದು ವಿಕೃತಮನಸ್ಕರು ಇಂತಹ ಸಂದೇಶಗಳನ್ನು ಹರಿಯಬಿಟ್ಟು ಚಂದ ನೋಡುತ್ತಾ ಇರುತ್ತಾರೆ. ಇದನ್ನು ನಂಬಿದವ ಮೂರ್ಖ ಎಂದು ಹೇಳದೆ ವಿಧಿಯಿಲ್ಲ.
ದಿನವೂ ಬೆಳಿಗ್ಗೆ ಪೇಪರ್ ಹಾಕುವ ಹುಡುಗ ಹೇಳಿದ ವಿಷಯ ಏನೆಂದರೆ- ಸಾಧಾರಣವಾಗಿ ಕೆಲವೊಂದು ಹೊಸ ವಾರ್ತಾ ಪತ್ರಿಕೆಗಳು ಪ್ರಾರಂಭವಾಗುವಾಗ ಒಂದು ವಾರದಿಂದ ಹದಿನೈದು ದಿನಗಳವರೆಗೆ ಉಚಿತವಾಗಿ ಕೆಲವು ಪ್ರದೇಶಗಳಲ್ಲಿ ಮನೆಮನೆಗೆ ಪೇಪರ್ ಹಾಕಲು ಆದೇಶ ಮಾಡಿರುತ್ತಾರೆ. ಆದರೆ ಈ ಒಂದು ತಿಂಗಳ ಅವಧಿ ಅಥವಾ ಹದಿನೈದು ದಿನಗಳ ಅವಧಿ ಮುಗಿದ ನಂತರ ಪುನಃ ಪ್ರತಿನಿಧಿಗಳು ಹೋದಾಗ “ನೀವು ಹದಿನೈದು ದಿನಗಳ ಉಚಿತ ಕೊಟ್ಟಿದ್ದೀರಿ. ಇನ್ನೂ ಹದಿನೈದು ದಿನಗಳು ಮುಂದುವರಿಸಬಹುದಿತ್ತಲ್ಲ” ಎಂಬ ಉಚಿತ ಸಲಹೆ ಗಳು ಕೆಲವರಿಂದ ಬಂದದ್ದು ಉಂಟಂತೆ. ಸಾಧಾರಣವಾಗಿ ಒಂದು ಪತ್ರಿಕೆಯ ಮುದ್ರಣ ವೆಚ್ಚ ಅದರ ಮುಖಬೆಲೆಗಿಂತ ಹೆಚ್ಚಿರುತ್ತದೆ. ಮುದ್ರಣ ವೆಚ್ಚ ಮತ್ತು ಅದರ ಇತರ ಖರ್ಚುಗಳು, ಸಂಬಳ ಹಾಗೂ ಎಲ್ಲಾ ಖರ್ಚುಗಳು ಸೇರಿದಾಗ ಅದರ ಮುಖಬೆಲೆಗಿಂತ ಜಾಸ್ತಿ ಹೆಚ್ಚಾಗಿರುತ್ತದೆ. ಆದರೆ ಪತ್ರಿಕೆಗಳ ಮಾಲೀಕರು ಈ ನಷ್ಟವನ್ನು ಜಾಹೀರಾತುಗಳಲ್ಲಿ ತುಂಬಿಕೊಳ್ಳುತ್ತಾರೆ. ಸಾಮಾನ್ಯ ಜನರಲ್ಲಿ ಇಂತಹ ತಿಳುವಳಿಕೆಗಳು ಕಡಿಮೆ ಇರುತ್ತದೆ. ಅವರು ಉಚಿತ ಕೊಡುತ್ತಾರೆ ಎಂದು ಸಂತೋಷಗೊಳ್ಳುತ್ತಾರೆ, ಉಚಿತ ಕೊಡುವುದನ್ನು ನಿಲ್ಲಿಸಿದರು ಎಂದಾಗ ಬೇಸರಪಟ್ಟುಕೊಳ್ಳುತ್ತಾರೆ. ಅವರಿಗೆ ಇದರ ಪೂರ್ವಾಪರಗಳು, ಹಿನ್ನೆಲೆಗಳು ಏನು ತಿಳಿದಿರುವುದಿಲ್ಲ. ಆದ್ದರಿಂದ ಇದಕ್ಕೆ ಅವರನ್ನು ದೂರುವುದು ಅಷ್ಟು ಸಮಂಜಸ ಎನಿಸುವುದಿಲ್ಲ.
ಅಲ್ಲದೆ ಕೆಲವೊಂದು ಬಾರಿ ಅನಿವಾರ್ಯ ಸಂದರ್ಭಗಳು ಎದುರಾಗುತ್ತವೆ. ಯಾಕೆಂದರೆ ಹೇಗೆ ಸಾಹಿತಿಗಳು ಅಥವಾ ಲೇಖಕರು ಶ್ರೀಮಂತರಲ್ಲವೋ ಹಾಗೆಯೇ ಓದುಗರು ಕೂಡ ಶ್ರೀಮಂತರಾಗಿರುವುದಿಲ್ಲ. ಸಾಹಿತ್ಯಾಸಕ್ತರಿಗೆ ಓದಬೇಕೆಂದು ಆಸೆ ಇರುತ್ತದೆ. ಆದರೆ ಬೆಲೆ ಜಾಸ್ತಿ ಎಂದೆನಿಸಿದಾಗ ಪುಸ್ತಕಗಳನ್ನು ಖರೀದಿಸುವ ಶಕ್ತಿ, ಆರ್ಥಿಕ ದೃಢತೆ ಎಲ್ಲರಲ್ಲಿಯೂ ಇರುವುದಿಲ್ಲ. ಹೇಳಲು ಸುಲಭವಾಗಿ ಹೇಳಬಹುದು “ಖರೀದಿಸಿ ಓದಿ, ಕೊಂಡು ಓದಿ” ಎಂಬುದಾಗಿ. ಆದರೆ ನಾವು ಓದುಗನ ಶಕ್ತಿಯನ್ನು ಪರಿಗಣಿಸಬೇಕಾಗುತ್ತದೆ. ಗ್ರಂಥಾಲಯಗಳಲ್ಲಿಯೂ ಹೋಗಿ ಓದುತ್ತಾರೆ. ಅವರಿಗೆಲ್ಲ ಕೆಲವೊಮ್ಮೆ ನೀವು ಉಚಿತವಾಗಿ ಕೊಟ್ಟರೆ ಬಹಳ ಸಂತೋಷವಾಗುತ್ತದೆ. ಹಾಗೆಂದವರು ಉಚಿತವಾಗಿ ನಿಮ್ಮಲ್ಲಿ ಕೇಳುವುದಿಲ್ಲ. ಆದರೂ ಕೆಲವೊಮ್ಮೆ ಅವರ ಇಚ್ಛೆ ಅರಿತು ಅದನ್ನು ನೀಡಿದರೆ ಅವರು ಬಹಳ ಖುಷಿಪಟ್ಟುಕೊಳ್ಳುತ್ತಾರೆ. ಇಂತಹ ಸಂದರ್ಭಗಳು ವಿರಳ. ಆದರೂ ಇದೆಲ್ಲವೂ ಆಗಾಗ ಲೇಖಕನಿಗೆ ಎದುರಾಗುವ ಸಂದರ್ಭಗಳಾಗಿವೆ.
ಯಕ್ಷಗಾನದ ಓದುಗರು, ಯಕ್ಷಗಾನ ಪತ್ರಿಕೆಗಳನ್ನು ಅಥವಾ ಯಕ್ಷಗಾನವನ್ನು ಆಸ್ವಾದಿಸುವವರು ಬಹಳ ಸುಸಂಪನ್ನರು ಎನ್ನದೇ ಸಂತೋಷವಾಗುತ್ತದೆ. ಯಾಕೆಂದರೆ ಅನುಭವಗಳೇ ಅದಕ್ಕೆ ಸಾಕ್ಷಿ. ಯಕ್ಷಗಾನ ಪತ್ರಿಕೆಗಳ ಪ್ರಸರಣ ಸಂಖ್ಯೆ ಉಳಿದ ಪತ್ರಿಕೆಗಳಿಂದ ತುಂಬ ಕಡಿಮೆ ಇರುತ್ತದೆ ಎಂದು ಎಲ್ಲರಿಗೂ ತಿಳಿದ ವಿಚಾರ. ಎಲ್ಲರೂ ಹೇಳುವಾಗ ದೊಡ್ಡ ದೊಡ್ಡ ಸಂಖ್ಯೆಗಳನ್ನು ಹೇಳಬಹುದು. ಆದರೆ ಪ್ರಜ್ಞಾವಂತ ಜನರಿಗೆ ಅದರ, ಆ ಹೇಳಿಕೆಯ ಆಳ ಅಗಲದ ಅರಿವಿರುತ್ತದೆ.
ಯಕ್ಷಗಾನದ ನಿಜವಾದ ಅಭಿಮಾನಿಗಳು, ಯಕ್ಷಗಾನದ ಆಸಕ್ತಿಯುಳ್ಳ ಜನರೂ, ಯಕ್ಷಗಾನ ಪತ್ರಿಕೆಗಳ ಓದುಗರೂ ಬಹಳ ಪ್ರಜ್ಞಾವಂತರು. ಪತ್ರಿಕೆಯ ಬಗ್ಗೆ ಹೇಳುವುದಾದರೆ ಬಹಳಷ್ಟು ಸಿಹಿ ಅನುಭವಗಳೇ ಆಗಿವೆ. ಎದುರಿಗೆ ಸಿಕ್ಕಿದಾಗ ಮಹನೀಯರೊಬ್ಬರು ಪ್ರೀತಿಯಿಂದ ಗದರಿಸಿದ್ದೂ ಇತ್ತು. ಒಬ್ಬರಿಗೆ ನಿರಂತರ ಪತ್ರಿಕೆಯನ್ನು ಕಳುಹಿಸುತ್ತಾ ಇದ್ದೆವು. ಆದರೆ ಅವರಲ್ಲಿ ಚಂದಾ ಹಣದ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಅವರು ಒಂದು ದಿನ ಸಿಕ್ಕಾಗ “ಯಾಕೆ ಪತ್ರಿಕೆ ಮಾತ್ರ ಕಳುಹಿಸುತ್ತಿದ್ದೀರಿ, ಕಳಿಸಿದ ಬಗ್ಗೆ ಚಂದಾ ಹಣ ಕೇಳುವುದಿಲ್ಲ? ನಾವು ನೂರೆಂಟು ವ್ಯವಹಾರಗಳಲ್ಲಿ ನಿರತರಾಗಿರುತ್ತೇವೆ. ನಮಗೆ ಅದು ನೆನಪಿರೋದಿಲ್ಲ. ನೀವಾದರೂ ಕೇಳಬಾರದೆ, ಪತ್ರಿಕೆ ಸುಮ್ಮನೆ ಬರುತ್ತದೆಯೇ” ಎಂದು ಪ್ರೀತಿಯಿಂದ ಗದರಿಸಿ ಹಣವನ್ನು ನಮ್ಮ ಕೈಗಿಟ್ಟಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments