Saturday, May 18, 2024
Homeಯಕ್ಷಗಾನಅರ್ಥಗರ್ಭಿತ ಜಗತ್ತು 

ಅರ್ಥಗರ್ಭಿತ ಜಗತ್ತು 

ದೈನಂದಿನ ಚಟುವಟಿಕೆ, ಉದ್ಯೋಗದಿಂದ ಬೇಸತ್ತು ಅಥವಾ ಅದರಿಂದ ಸ್ವಲ್ಪಮಟ್ಟಿಗೆ ಬದಲಾವಣೆ ಬಯಸಿ ಜನರು ಕಲೆ, ಕ್ರೀಡೆ, ಇತ್ಯಾದಿಗಳತ್ತ ಆಕರ್ಷಿತರಾಗುವುದು ಅಥವಾ ಅದರಲ್ಲಿ ಭಾಗವಹಿಸುವುದು ಹಿಂದಿನಿಂದಲೂ ನಡೆದು ಬಂದ ಸಹಜ ಪ್ರಕ್ರಿಯೆ. ತಾನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಅಥವಾ ಜನರು ತನ್ನನ್ನು ಗುರುತಿಸಿ ಗೌರವಿಸಬೇಕು ಎಂಬ ಮನೋಭಾವ ಪ್ರತಿಯೊಬ್ಬನಲ್ಲೂ ಇದೆ. ಆದರೆ ಈ ಹಂಬಲ ಅತಿರೇಕಕ್ಕೆ ಹೋದರೆ ಅಪಾಯಕಾರಿ. ಆದರೆ ಈ ಹುಚ್ಚು ಕೆಲವೊಮ್ಮೆ ನಿಯಂತ್ರಿಸಲಾಗದ ಮಟ್ಟಕ್ಕೆ ಬಂದುಬಿಡುತ್ತದೆ. ಆಗ ‘ನಾನೇ’ ಎಂಬ ಅಹಂಭಾವ ತಲೆಗಡರಿಬಿಡುತ್ತದೆ. ಆಮೇಲೆ ಅದರಿಂದ ಆ ವಿಷವರ್ತುಲದಿಂದ ಹೊರಬರಲಾರದ ಸ್ಥಿತಿ ಬಂದುಬಿಡುತ್ತದೆ.ಕೆಲವರಿಗೆ ಜನಪ್ರಿಯತೆಯ ಹುಚ್ಚು. ಇನ್ನು ಕೆಲವರಿಗೆ ಹಣ ಸಂಪಾದಿಸುವ ಹವ್ಯಾಸ. ಈ ಎರಡರಲ್ಲೂ ಬಹುಬೇಗನೆ ಯಶಸ್ಸು ಸಾಧಿಸಬೇಕಾದರೆ ಬದಲಾವಣೆ ಎಂಬ ಅಡ್ಡದಾರಿ ಹಿಡಿಯಬೇಕಾಗುತ್ತದೆ. ಆದ್ದರಿಂದ ಹಲವರು ತಾನು ಮಾಡುತ್ತಿರುವ ಕಾರ್ಯಕ್ಕೆ ಬದಲಾವಣೆ ಎಂಬ ಹಣೆಪಟ್ಟಿ ಕಟ್ಟಿ ಜನಪ್ರಿಯತೆ ಗಳಿಸಿ ಅದರಲ್ಲಿ ಅರ್ಥವನ್ನು ಹುಡುಕುತ್ತಾರೆ!

ತಾನು ಮಾಡುತ್ತಿರುವ ಕೆಲಸಕ್ಕೆ `ಅರ್ಥ’ವನ್ನು ಹುಡುಕುತ್ತಾ ನಿಜವಾದ ಉದ್ದೇಶವನ್ನು ಮರೆತುಬಿಡುತ್ತಾರೆ. ಪರೋಕ್ಷವಾಗಿ ತಾನು ಮಾಡುತ್ತಿರುವ ಉದ್ಯೋಗದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಿಫಲರಾಗುತ್ತಾರೆ.
ರಾಜಕೀಯ, ಶಿಕ್ಷಣ, ಮಾಧ್ಯಮ ಕಲೆ, ಕ್ರೀಡೆ, ಸಾರ್ವಜನಿಕ ಸೇವೆ ಹೀಗೆ ಹತ್ತು ಹಲವಾರು ರಂಗಗಳು ಈಗ ವ್ಯವಹಾರಮಯವಾಗಿದೆ. ಹಾಗೂ ವ್ಯಾಪಾರೀಕರಣಗೊಂಡಿವೆ. ಕೆಲವು ರಾಜಕೀಯ ಮುಂದಾಳುಗಳು ತಾವು ಜನರಿಂದ ಆರಿಸಿ ಬರಲು ಮಾಡಿದ ಖರ್ಚು-ವೆಚ್ಚಗಳನ್ನು ಭರಿಸಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹಾಗೂ ಹಣದ ಸಂಪಾದನೆಯಲ್ಲಿರುವ ಸಿಹಿರುಚಿಯನ್ನು ಅನುಭವಿಸಿ ಮತ್ತು ಮತ್ತೂ ಹಣವನ್ನು ಅಕ್ರಮವಾಗಿ ಸಂಪಾದಿಸಲು ತೊಡಗುತ್ತಾರೆ.ಕೆಲವು ಶಿಕ್ಷಣ ಸಂಸ್ಥೆಗಳು ಲಕ್ಷ ಲಕ್ಷ ಶುಲ್ಕಗಳನ್ನು ವಸೂಲು ಮಾಡಿ ಹಣವನ್ನು ಗುಡ್ಡೆಹಾಕುತ್ತಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಸಾರ್ವಜನಿಕ ಸೇವೆಗಳು, ಸರಕಾರಿ ಕಛೇರಿಗಳು, ಆಸ್ಪತ್ರೆಗಳು, ಎಲ್ಲವೂ ಈಗ ಕೇವಲ ಹಣ ಸಂಪಾದನೆಯ ಮಾರ್ಗವಾಗಿ ಪರಿವರ್ತಿತಗೊಂಡಿವೆ.ಹಾಗೆಂದು ಎಲ್ಲರೂ ಈ ರೀತಿ ಇರಬೇಕೆಂದೇನಿಲ್ಲ. ಹಣ ಸಂಪಾದನೆಯೂ ಇರಬೇಕು. ಸೇವೆಯ ಗುಣಮಟ್ಟವೂ ಸಮಾನಾಂತರವಾಗಿರಬೇಕು.

ಅಂತಹಾ ಕೆಲವು ಗುಣಾಗ್ರಣಿಗಳೂ ಇದ್ದಾರೆ. ರಾಜಕೀಯದಲ್ಲೂ ವ್ಯಾಪಾರ, ಕ್ರೀಡೆಯಲ್ಲೂ ವ್ಯಾಪಾರ, ಶಿಕ್ಷಣದಲ್ಲೂ ವ್ಯಾಪಾರ, ಸರಕಾರಿ ಮತ್ತು ಸಾರ್ವಜನಿಕ ಕಛೇರಿಗಳಲ್ಲೂ ವ್ಯಾಪಾರ- ಹೀಗೆ ಎಲ್ಲೆಂದರಲ್ಲೂ ವ್ಯಾಪಾರದ ಅರ್ಥ’ವನ್ನೇ ಕಾಣುವ ನಾವು ಯಾವುದರಲ್ಲೂ ನಿಜಾರ್ಥವನ್ನು ಕಾಣುವುದೇ ಇಲ್ಲ. ಇದು ಇಂದಿನ ಶೋಚನೀಯ ಪರಿಸ್ಥಿತಿ.ಎಲ್ಲ ರಂಗಕ್ಕೂ ಹಿಡಿದ ಪಿಡುಗು ಇಂದು ಕಲಾರಂಗಕ್ಕೂ ಹಿಡಿದಿದೆ. ಇದು ಒಮ್ಮೆ ಹಿಡಿದರೆ ಬಿಡುವ ಗ್ರಹಣವಲ್ಲ. ಪ್ರಜ್ಞಾವಂತ ಪ್ರೇಕ್ಷಕ ಈ ಗ್ರಹಣಕ್ಕೆ ಮೋಕ್ಷ ಯಾವಾಗ ಎಂದು ಕಾಯುತ್ತಿದ್ದಾನೆ. ನಾವೇ ತೋಡಿಕೊಂಡ ಗುಂಡಿಗೆ ನಾವೇ ಬೀಳುತ್ತಿದ್ದೇವೆ ಅಷ್ಟೆ.
ಈಚೆಗೆ ಯಕ್ಷಗಾನದ ಹಿರಿಯ ವಿದ್ವಾಂಸರೂ ಕಲಾಹಿತೈಷಿಗಳೂ ಆದ ಹಿರಿಯರೊಬ್ಬರು ಮಾತಾಡುತ್ತಾ ಈ ರೀತಿ ಹೇಳಿದರು. “ನಮಗೀಗ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ. ಯಕ್ಷಗಾನದಂತಹಾ ಪಾವಿತ್ರ್ಯತೆ ಹೊಂದಿದ ಕಲೆಯನ್ನು ವಿರೂಪಗೊಳಿಸಿ ಪ್ರದರ್ಶಿಸುವ ಪರಿಪಾಠವನ್ನು ಹೊರಗಿನವರಿಗೆ ತೋರಿಸಿಕೊಟ್ಟದ್ದು ಯಾರು? ನಾವೇ ಎಂಬುದರಲ್ಲಿ ಸಂದೇಹವಿದೆಯೇ? ದೀರ್ಘಾವಧಿಯ ಪ್ರದರ್ಶನಗಳಿಗೆ ಕತ್ತರಿ ಹಾಕಲಾಗಿದೆ. ಸಿನಿಮಾ ಹಾಡುಗಳು ಯಕ್ಷಗಾನದ ಜೊತೆಗೆ ಸಮ್ಮಿಳಿತಗೊಂಡಿವೆ. ಭಾವಗೀತೆಗಳೂ ಇವೆ. ಮುಮ್ಮೇಳ ಹಿಮ್ಮೇಳ ಎಲ್ಲ ವಿಭಾಗಗಳಲ್ಲೂ ವಿವಿಧ ರೀತಿಯ ಸರ್ಕಸ್‍ಗಳನ್ನು ನಾವು ಮಾಡುತ್ತಿದ್ದೇವೆ. ಬ್ಯಾಂಡ್, ವಾದ್ಯ, ವಾಲಗಗಳ ಸದ್ದು ಅಬ್ಬರಿಸತೊಡಗಿವೆ. ಸುಡುಮದ್ದುಗಳು ಸದ್ದುಮಾಡುತ್ತಿವೆ. ಸಿನಿಮಾ ಕತೆಗಳು ಯಕ್ಷಗಾನ ವೇದಿಕೆಯಲ್ಲಿ ರಾರಾಜಿಸತೊಡಗಿವೆ. ವಿವಿಧ ಸಿನಿಮಾ ನಟರ ಶೈಲಿಯ ಅನುಕರಣೆಯ ಹೆಜ್ಜೆಗಳ ನಡುವೆ ಯಕ್ಷಗಾನದ ನೈಜ ನಾಟ್ಯ ಮಾಯವಾಗಿದೆ.
ಹಲವು ಬಗೆಯ ವಿಚಿತ್ರ ರಾಗಾಲಾಪನೆಗಳ ಜೊತೆಗೆ ಚಿತ್ರ-ವಿಚಿತ್ರ ಭಂಗಿಯ ಕುಣಿತ ನಾಟ್ಯಗಳ ಭಾವಭಂಗಿಗಳು ರಂಗಪ್ರವೇಶ ಮಾಡಿವೆ. ರಾಗ ತಾಳ ನಾಟ್ಯಗಳು ಅತಿಯೆನ್ನಿಸುವಷ್ಟು ದೀರ್ಘವಾಗಿ ಸಂಭಾಷಣೆಯ ಅವಧಿ ತೀರಾ ಕುಂಠಿತವಾಗಿದೆ. ನೈಜ ಯಕ್ಷಗಾನ, ಪರಂಪರೆ ತಿಳಿದ ಕಲಾವಿದರಿದ್ದರೂ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಸಮರ್ಥ ಗುರುಗಳಿಲ್ಲ. ಇವೆಲ್ಲದರ ನಡುವೆ ಪ್ರಜ್ಞಾವಂತ ಪ್ರೇಕ್ಷಕ ಕಳೆದುಹೋಗುತ್ತಿದ್ದಾನೆ.’’ ಎಂದು ಹೇಳುತ್ತಾ ವಿಷಾದದ ನಿಟ್ಟುಸಿರುಬಿಟ್ಟರು. ಯಾಕೋ ಅವರ ಮಾತುಗಳೆಲ್ಲ ಆಗಾಗ ಮನಸ್ಸನ್ನು ಕಾಡುತ್ತಿದೆ.


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments