ಕೆ. ಜಿ. ಮಂಜುನಾಥ ಭಟ್ಟರು (ಬೆಳ್ಳಾರೆ ಮಂಜುನಾಥ ಭಟ್) ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಇದಿರು ವೇಷಧಾರಿ. ಕಲಾವಿದನಾಗಿ 44 ತಿರುಗಾಟಗಳನ್ನು ನಡೆಸಿದವರು. ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಕುಂಞಹಿತ್ತಿಲು ಗೋವಿಂದ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ 01-04-1960ರಲ್ಲಿ ಬೆಳ್ಳಾರೆ ಮಂಜುನಾಥ ಭಟ್ಟರು ಜನಿಸಿದರು. ಇವರದು ಪುರೋಹಿತ ಮನೆತನ. 8ನೇ ತರಗತಿಯ ವರೇಗೆ ಓದಿದ ಇವರು ಯಕ್ಷಗಾನದತ್ತ ಆಕರ್ಷಿತರಾದರು.
ಪ್ರಸಿದ್ಧ ಕಲಾವಿದರಾದ ಮಾಣಂಗಾಯಿ ಕೃಷ್ಣ ಭಟ್ಟರು ಇವರ ಬಂಧುಗಳೇ ಆಗಿದ್ದರು (ಅಜ್ಜ). ತಂದೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ಅಣ್ಣ ಬೆಳ್ಳಾರೆ ಸೂರ್ಯನಾರಾಯಣ ಭಟ್ ಉತ್ತಮ ಅರ್ಥಧಾರಿಗಳೂ, ಸಂಘಟಕರೂ, ಶ್ರೇಷ್ಠ ಲೇಖಕರೂ ಆಗಿರುತ್ತಾರೆ. ಬೆಳ್ಳಾರೆಯ ಮನೆಯಲ್ಲಿ ವಾರಕ್ಕೊಂದು ತಾಳಮದ್ದಳೆ ನಡೆಯುತ್ತಿತ್ತು. ಬೆಳ್ಳಾರೆ ಆಸುಪಾಸಿನ ಮನೆಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳು ಆಗಾಗ ನಡೆಯುತ್ತಿತ್ತು. ಸಹಜವಾಗಿ ಮಂಜುನಾಥ ಭಟ್ಟರಿಗೆ ಕಲಾವಿದನಾಗಬೇಕೆಂಬ ಬಯಕೆ ಮೂಡಿತು. ತನ್ನ 14ನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಲಾವಿದನಾಗಲು ಪ್ರೇರಣೆ ಸಿಕ್ಕಿದ್ದು ಹಿರಿಯರಿಂದ.
- 7th Standard, English – Unit 1 Prose – A Tiger in the House
- 7th Standard, Social – HISTORY CHAPTER 1 – MAJOR DEVELOPMENTS IN THE WORLD
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
1974-75ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಶ್ರೀ ಪಡ್ರೆ ಚಂದು ಅವರ ಶಿಷ್ಯನಾಗಿ ನಾಟ್ಯವನ್ನು ಕಲಿತರು. ಮೊದಲು ಗೆಜ್ಜೆ ಕಟ್ಟಿ ವೇಷ ಮಾಡಿದ್ದು ಅಜ್ಜ ಮಾಣಂಗಾಯಿ ಕೃಷ್ಣ ಭಟ್ಟರ ನೇತೃತ್ವದಲ್ಲಿದ್ದ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಮೇಳದಲ್ಲಿ (ಕುತ್ಯಾಳ). ಇದು ನನ್ನ ಸುಯೋಗ ಎಂದು ಬೆಳ್ಳಾರೆ ಮಂಜುನಾಥ ಭಟ್ಟರು ಹೇಳುತ್ತಾ ಆ ದಿನವನ್ನು ಇಂದಿಗೂ ನೆನಪಿಸುತ್ತಾರೆ. ನಂತರ ತಿರುಗಾಟ ಕಟೀಲು ಮೇಳದಲ್ಲಿ. ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ವಿಠಲ ಶೆಟ್ಟರು, ಪ್ರಸ್ತುತ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಪ್ರೋತ್ಸಾಹ, ಸಹಕಲಾವಿದರ, ಕಲಾಭಿಮಾನಿ ಗಳ ಪ್ರೋತ್ಸಾಹ, ಎಲ್ಲಕ್ಕಿಂತ ಹೆಚ್ಚು ಕಲಾಮಾತೆಯ ಅನುಗ್ರಹದಿಂದ ನಿರಂತರ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದೇನೆ ಎಂಬುದು ಶ್ರೀ ಭಟ್ಟರ ಅಭಿಪ್ರಾಯ.

ಪೂರ್ವರಂಗದಲ್ಲಿ ಬಾಲಗೋಪಾಲರಾಗಿ, ಸ್ತ್ರೀವೇಷಧಾರಿಯಾಗಿ, ಪೀಠಿಕಾ ಸ್ತ್ರೀವೇಷ… ಹೀಗೆ ಎಲ್ಲಾ ವೇಷಗಳನ್ನೂ ಮಾಡಿರುತ್ತಾರೆ. ಪೂರ್ವರಂಗದ ಎಲ್ಲಾ ಪ್ರದರ್ಶನಗಳನ್ನೂ ಹೀಗೆಯೇ ಎಂದು ಹೇಳಬಲ್ಲ, ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ಹಂತ ಹಂತವಾಗಿ ಬೆಳೆಯುತ್ತಾ ಬಂದ ಬೆಳ್ಳಾರೆ ಮಂಜುನಾಥ ಭಟ್ಟರು ಈಗ ಮೇಳದ ಇದಿರು ವೇಷಧಾರಿ. ಎಲ್ಲಾ ವೇಷಗಳ ಮುಖವರ್ಣಿಕೆ ಹೀಗೆಯೇ ಇರಬೇಕು ಎಂದು ನಿಖರವಾಗಿ ಹೇಳಬಲ್ಲರು. ಅಲ್ಲದೆ ವೇಗವಾಗಿ ಮೇಕಪ್ ಮಾಡಿ ಗೆಜ್ಜೆ ಕಟ್ಟಿ ಸಿದ್ಧವಾಗುವ ಕಲೆ ಇವರಿಗೆ ಕರಗತವಾಗಿದೆ. ಪುರಾಣಜ್ಞಾನ, ಪ್ರಸಂಗಗಳ ನಡೆ ಬಗ್ಗೆ ಚೆನ್ನಾಗಿ ತಿಳಿದಿರುವ ಕಾರಣವೇ ಇವರೊಬ್ಬ ಸಂಪನ್ಮೂಲ ವ್ಯಕ್ತಿ.

ಚೌಕಿಯಲ್ಲಿ ಇವರಿದ್ದರೆ ಎಲ್ಲರಿಗೂ ಸಂತಸ. ಇವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಅನನುಭವಿಗಳಿಗೆ ಅರ್ಥವಾಗುವಂತೆ ಚೆನ್ನಾಗಿ ಹೇಳಿಕೊಡಬಲ್ಲರು. ಹಾಗಾಗಿಯೇ ಬೆಳ್ಳಾರೆ ಮಂಜುನಾಥ ಭಟ್ಟರು ಮೇಳಕ್ಕೆ ಸಹಕಲಾವಿದರಿಗೆ ಆಸ್ತಿಯಾಗಿದ್ದಾರೆ. ಜಾಂಬವ, ವಾಲಿ, ಹಿರಣ್ಯಕಶ್ಯಪ, ಕಾರ್ತವೀರ್ಯ, ಕರ್ಣ, ರಕ್ತಬೀಜ, ಮಧು, ಕೈಟಭ, ದೇವೇಂದ್ರ, ಅರ್ಜುನ, ಅತಿಕಾಯ, ಭೀಷ್ಮ, ಕೌರವ ಮೊದಲಾದ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

1992ರಲ್ಲಿ ಅದಿತಿಯವರನ್ನು ವಿವಾಹವಾದರು. ಇವರು ಪ್ರಸಿದ್ಧ ಕಲಾವಿದ ನಿಡ್ಲೆ ಗೋವಿಂದ ಭಟ್ಟರ ಸಹೋದರಿ. ಬೆಳ್ಳಾರೆ ಮಂಜುನಾಥ ಭಟ್ ದಂಪತಿಗಳಿಗೆ ಮೂವರು ಮಕ್ಕಳು. (ಒಂದು ಹೆಣ್ಣು ಮತ್ತು ಇಬ್ಬರು ಪುತ್ರರು). ಪುತ್ರಿ ಸಾಯಿಸುಮಾ ಸ್ನಾತಕೋತ್ತರ ಪದವೀಧರೆ. ಯಕ್ಷಗಾನ ಕಲಾವಿದೆ. ವಿವಾಹಿತೆ. ರಾಮಕುಂಜ ಕಾಲೇಜಿನಲ್ಲಿ ಉಪನ್ಯಾಸಕಿ. ಹಿರಿಯ ಪುತ್ರ ಶ್ರೀಹರಿಶರ್ಮ ಪದವೀಧರ. ಕಿರಿಯ ಪುತ್ರ ಶ್ರೀರಾಮ ಶರ್ಮ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ. ನಿಡ್ಲೆ ನರಸಿಂಹ ಭಟ್ ಮತ್ತು ಇರಾ ಗೋಪಾಲಕೃಷ್ಣ ಭಾಗವತರು ನನ್ನನ್ನು ತಿದ್ದಿ ತೀಡಿದರು ಎನ್ನುವ ಬೆಳ್ಳಾರೆ ಮಂಜುನಾಥ ಭಟ್ಟರು ಕದ್ರಿ ವಿಷ್ಣು ಸ್ಮಾರಕ ಎಳೆಯರ ಬಳಗ ಕದ್ರಿ, ಚೊಕ್ಕಾಡಿ, ಶೇಣಿ, ಮಲ್ಲೂರು, ಕುಪ್ಪೆಪದವು, ತಲಕಳ, ಬಜಪೆ, ಬಂಟ್ವಾಳ ಮೊದಲಾದ ಕಡೆಗಳಲ್ಲಿ ನಾಟ್ಯ ತರಬೇತಿಯನ್ನೂ ನೀಡಿರುತ್ತಾರೆ. ಬೆಳ್ಳಾರೆ ಮಂಜುನಾಥ ಭಟ್ಟರು ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.
