Friday, September 20, 2024
Homeಯಕ್ಷಗಾನಒಂದು ಕಾಲದಲ್ಲಿ ಪುಂಡುವೇಷಧಾರಿಯಾಗಿ ಮೆರೆದಿದ್ದ ಉದಯ ನಾವಡ ಮಧೂರು

ಒಂದು ಕಾಲದಲ್ಲಿ ಪುಂಡುವೇಷಧಾರಿಯಾಗಿ ಮೆರೆದಿದ್ದ ಉದಯ ನಾವಡ ಮಧೂರು

ಸ್ತ್ರೀವೇಷಗಳನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿದ ಶ್ರೀ ಉದಯ ನಾವಡ ಮಧೂರು ಇವರು ತೆಂಕುತಿಟ್ಟಿನ ಶ್ರೇಷ್ಠ ಪುಂಡುವೇಷಧಾರಿ. ಉದಯ ನಾವಡರು ಎಲ್ಲಾ ಹಂತಗಳನ್ನೂ ದಾಟಿಯೇ ಮುಂದೆ ಸಾಗಿದವರು. ಕಲಿಕೆಯಲ್ಲೂ ಅತೀವವಾದ ಆಸಕ್ತಿಯನ್ನು ತೋರಿದವರು. ನೃತ್ಯ, ಮಾತುಗಳೆಂಬ ಎರಡು ವಿಭಾಗಗಳಲ್ಲೂ ಹಿಡಿತವನ್ನು ಸಾಧಿಸಿ ಇನ್ನೇನು ಒಂದನೇ ಪುಂಡುವೇಷಧಾರಿಯಾಗಿ ಕಾಣಿಸಿ ಕೊಳ್ಳುತ್ತಾರೆ ಎನ್ನುವಾಗಲೇ ಉದಯ ನಾವಡರಿಗೆ ಅದೃಷ್ಟವು ಕೈಕೊಟ್ಟಿತ್ತು. ಆರೋಗ್ಯ ಸಮಸ್ಯೆಯು ಕಾಣಿಸಿಕೊಂಡು ಯಕ್ಷಗಾನದಿಂದ ದೂರವಾಗಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದರು. ಸ್ವಯಂನಿವೃತ್ತಿಯನ್ನು ಘೋಷಿಸಿ ಕಲಾಬದುಕಿಗೆ ವಿದಾಯವನ್ನು ಹೇಳಿದರು.

ಆದರೂ ರಂಗನಟರಾಗಿ ಇದ್ದಷ್ಟು ಸಮಯ ಇವರು ಉತ್ಕೃಷ್ಟವಾದ ನಿರ್ವಹಣೆಯನ್ನೇ ತೋರಿದ್ದರು. ಸಂಘಟಕರ, ಕಲಾಭಿಮಾನಿಗಳ, ಸಹಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು. ಉದಯ ನಾವಡರ ಮೈಕಟ್ಟು ಪುಂಡುವೇಷಗಳಿಗೆ ಹೇಳಿ ಮಾಡಿಸಿದಂತಿತ್ತು. ಸುಂದರ ರೂಪವೂ ಅವರಿಗೆ ವರದಾನವಾಗಿತ್ತು. ಇವರ ವೇಷಗಳು ರಂಗಪ್ರವೇಶವಾದಾಗಲೇ ಪ್ರೇಕ್ಷಕರು ಸ್ವೀಕರಿಸುತ್ತಿದ್ದರು, ಒಪ್ಪಿಕೊಳ್ಳುತ್ತಿದ್ದರು. ಮೊದಲ ನೋಟದಲ್ಲೇ ವೇಷ ಗೆಲ್ಲುತ್ತಿತ್ತು.

ಬಣ್ಣಗಾರಿಕೆ, ವೇಷಕಟ್ಟುವ ರೀತಿಗಳು ಅತ್ಯಂತ ಸೊಗಸಾಗಿ ಶಿಸ್ತುಬದ್ಧವಾಗಿರುತ್ತಿತ್ತು. ಮೈಬಿಟ್ಟು ಮಾಡುವ ವೇಷಗಳು, ಪಗಡಿ, ಕಸೆ ಸ್ತ್ರೀವೇಷಗಳು ಉದಯ ನಾವಡರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಪಾತ್ರೋಚಿತವಾದ ನಾಟ್ಯ, ಮಾತುಗಳಿಂದ ಸರ್ವತ್ರ ಪ್ರಶಂಸೆಗೆ ಪಾತ್ರರಾಗಿದ್ದರು. ಕುಣಿತದಲ್ಲಿ ಅತೀವ ಆಸಕ್ತಿಯನ್ನು ತೋರಿದ್ದ ಉದಯ ನಾವಡರು ಲೆಕ್ಕಮಾಡಿ ಹಾರುತ್ತಾ ದಿನದಿನವೂ ಗಿರ್ಕಿ ಸಂಖ್ಯೆಯನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದರಂತೆ. ಇವರು ಪದ್ಯಕ್ಕೆ ಕುಣಿಯಲು ಆರಂಭಿಸಿದಾಗ ಹೊರಗೆ ಹೋದ ಪ್ರೇಕ್ಷಕರು ಮರಳಿ ಬರುವಾಗಲೂ ಇವರು ಹಾರುತ್ತಿದ್ದುದನ್ನು ನೋಡಿ, ಮಾಣಿ ಇನ್ನೂ ಹಾರುತ್ತಾ ಇದ್ದಾನೆ! ಎನ್ನುತ್ತಿದ್ದರಂತೆ.

ಉದಯ ನಾವಡರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮದ ಬನ್ನೂರು ಎಂಬಲ್ಲಿ 1966ನೇ ಇಸವಿ ಮಾರ್ಚ್ 5ರಂದು ಬನ್ನೂರು ವಿಷ್ಣು ನಾವಡ ಮತ್ತು ಲೀಲಾವತಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಕಲ್ಲಕಟ್ಟ ಶಾಲೆಯಲ್ಲಿ 6ನೇ ತರಗತಿವರೇಗೆ ಓದಿದ್ದರು. ವಿಷ್ಣು ನಾವಡರು ಯಕ್ಷಗಾನಪ್ರಿಯರು. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಇವರಿಗೆ 5 ಮಂದಿ ಮಕ್ಕಳು (4 ಗಂಡು, ಒಬ್ಬಳು ಹೆಣ್ಣು). ಮಕ್ಕಳು ಯಕ್ಷಗಾನಾಸಕ್ತರಾಗಲು ವಿಷ್ಣು ನಾವಡರೇ ಕಾರಣರು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕಾಗಿ ಮರ್ಧಂಬೈಲು ಚಂದ್ರಶೇಖರ ರಾಯರಿಂದ ನಾಟ್ಯ ಕಲಿತ ಉದಯ ನಾವಡರು ಸೀತಾಪಹಾರ ಪ್ರಸಂಗದಲ್ಲಿ ವೇಷ ಮಾಡಿದ್ದರು.

ಶಾಲೆ ಬಿಟ್ಟ ನಂತರ ಪುತ್ತೂರು ತಾಲೂಕಿನ ಗೋಳಿತೊಟ್ಟು ಎಂಬಲ್ಲಿ ತನ್ನ ಸಣ್ಣಜ್ಜಿಯ ಮನೆಯಲ್ಲಿ ವಾಸವಾಗಿದ್ದರು. ವರ್ಷದ ನಂತರ ಮರಳಿ ಮನೆಗೆ. ಯಕ್ಷಗಾನ ಕಲಿಯುವ ಆಸಕ್ತಿ ಉಂಟಾಯಿತು. ಆಗ ಕೂಡ್ಲು ದೇವಸ್ಥಾನದಲ್ಲಿ ಕೂಡ್ಲು ನಾರಾಯಣ ಬಲ್ಯಾಯರು ತರಬೇತಿ ನೀಡುತ್ತಿದ್ದರು. ನಾಲ್ಕು ಮಂದಿ ನಾವಡ ಸಹೋದರರೂ ಇವರ ಬಂಧುಗಳಾದ ಗೋಪಾಲಕೃಷ್ಣ ನಾವಡರೂ (ಪ್ರಸ್ತುತ ಮದ್ದಳೆಗಾರರು) ನಾರಾಯಣ ಬಲ್ಯಾಯರಿಂದ ನಾಟ್ಯ ಕಲಿತರು.
                 

ಉದಯ ನಾವಡರ ಅಣ್ಣ ರಾಧಾಕೃಷ್ಣ ನಾವಡರು ಎಲ್ಲರಿಗೂ ಪರಿಚಿತರು. ವಾಸುದೇವ ನಾವಡರು ಒಳ್ಳೆಯ ವೇಷಧಾರಿ ಯಾಗಿದ್ದರು. ಪ್ರಸ್ತುತ ಕಾಸರಗೋಡು ಮುಖ್ಯ ಅಂಚೆ ಕಛೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ನಾರಾಯಣ ನಾವಡರು ಕೇರಳದ ಮಲಪ್ಪುರಂ ಎಂಬಲ್ಲಿ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಟ್ಯ ಕಲಿತ ನಂತರ ಉದಯ ನಾವಡರು ಗುರುಗಳ ಜತೆ ವೇಷ ಮಾಡುತ್ತಾ ಬೆಳೆದವರು. ಉಳಿಯ, ಕೋಟೂರಿನ ಸಂಘಗಳಲ್ಲಿ, ಮಲ್ಲ, ಉಪ್ಪಳ ಮೇಳದ ಪ್ರದರ್ಶನಗಳಲ್ಲಿ ಕಲಾಸೇವೆಯನ್ನು ಮಾಡಿದ್ದರು. ಬಾಲ ಗೋಪಾಲರು, ದೇವೇಂದ್ರನ ಬಲ, ಮಾರ್ಕಂಡೇಯ, ಧ್ರುವ, ಶ್ರೀಕೃಷ್ಣ, ಪ್ರಹ್ಲಾದ, ಷಣ್ಮುಖ, ಪರಶುರಾಮ, ಲಕ್ಷ್ಮಣ, ಬಬ್ರುವಾಹನ, ಕುಶಲವರು, ಚಂಡಮುಂಡರು ಮೊದಲಾದ ವೇಷಗಳಲ್ಲಿ ಮಿಂಚಿದರು. ಮೇಳದ ತಿರುಗಾಟದಲ್ಲಿ ಉದಯ ನಾವಡರಿಗೆ ಆಸಕ್ತಿ ಇರಲಿಲ್ಲ.

ಆದರೆ ಮಕ್ಕಳಿಗೆ ಭವಿಷ್ಯವಿದೆ. ಮೇಳಕ್ಕೆ ಕಳುಹಿಸಿ ಎಂದು ಊರವರು ವಿಷ್ಣು ನಾವಡರನ್ನು ಒತ್ತಾಯಿಸುತ್ತಿದ್ದರು. ತೀರ್ಥರೂಪರ ಒತ್ತಾಯದಂತೆ ಕುಬಣೂರು ಶ್ರೀಧರ ರಾಯರ ಸಂಚಾಲಕತ್ವದ ಕೂಡ್ಲು ಮೇಳಕ್ಕೆ ರಾಧಾಕೃಷ್ಣ ನಾವಡರೂ, ಉದಯ ನಾವಡರೂ ಸೇರಿದರು. ಮುಂದಿನ ವರ್ಷ ಇಬ್ಬರನ್ನೂ ಮಧೂರು ಗಣಪತಿ ರಾಯರು ಸುರತ್ಕಲ್ಲು ನವರಾತ್ರಿ ಯಕ್ಷಗಾನ ಪ್ರದರ್ಶನಗಳಿಗೆ ಕರೆದೊಯ್ದಿದ್ದರು. ಆ ವರ್ಷ ನಾವಡ ಸಹೋದರರಿಬ್ಬರೂ ಸುರತ್ಕಲ್ಲು ಮೇಳದಲ್ಲಿ ತಿರುಗಾಟ ನಡೆಸಿದರು. ಅಗರಿ, ಶೇಣಿ, ತೆಕ್ಕಟ್ಟೆ, ಕೊಕ್ಕಡ ಈಶ್ವರ ಭಟ್, ಎಂ. ಕೆ. ರಮೇಶ ಆಚಾರ್ಯ, ಬಣ್ಣದ ಮಹಾಲಿಂಗ, ಪ್ರಕಾಶ್‍ಚಂದ್ರ ಬಾಯಾರು ಮೊದಲಾದವರ ಒಡನಾಟ ಸಿಕ್ಕಿತ್ತು. ರಂಗದಲ್ಲಿ ಉದಯ ನಾವಡರಿಗೆ ಕುಣಿತಕ್ಕೆ ಪ್ರೋತ್ಸಾಹ ನೀಡಿದವರು ಪದ್ಯಾಣ ಶಂಕರನಾರಾಯಣ ಭಟ್ಟರು. ನನ್ನನ್ನು ಚೆನ್ನಾಗಿ ಹುರಿದುಂಬಿಸಿದರು. ನಾನು ಕುಣಿತದಲ್ಲಿ ರಂಜಿಸಲು ಅವರೇ ಕಾರಣರು ಎಂದು ಉದಯ ನಾವಡರು ಹೇಳುತ್ತಾರೆ.

ಮುಂದಿನ ವರ್ಷ ರಾಧಾಕೃಷ್ಣ ನಾವಡರು ಅನಿವಾರ್ಯವಾಗಿ ಪುತ್ತೂರು ಮೇಳಕ್ಕೆ ಸೇರಿದ್ದರು. ಅಣ್ಣ ತಮ್ಮಂದಿರು ಜತೆಯಾಗಿರಬೇಕೆಂಬ ತಂದೆಯವರ ಅಪೇಕ್ಷೆಯಂತೆ ಉದಯ ನಾವಡರೂ ಪುತ್ತೂರು ಮೇಳಕ್ಕೆ ಸೇರಿದ್ದರು. ಆ ವರ್ಷ ಸುರತ್ಕಲ್ಲು ಮೇಳದ ಆಟ ನೋಡಿದವರೆಲ್ಲಾ ಮೊದಲಿದ್ದ ಮಾಣಿ (ಉದಯ ನಾವಡ) ಎಲ್ಲಿದ್ದಾನೆ? ಅವನು ಮೇಳಕ್ಕೆ ಬೇಕು ಎಂದು ಸುರತ್ಕಲ್ಲು ಮೇಳದ ಯಜಮಾನರಲ್ಲಿ ಹೇಳಿದ್ದರಂತೆ. ಯಜಮಾನರ ಅಪೇಕ್ಷೆಯಂತೆ ನಾವಡ ಸಹೋದರರಿಬ್ಬರೂ ಸುರತ್ಕಲ್ಲು ಮೇಳ ಸೇರಿದರು. 2 ವರ್ಷದ ತಿರುಗಾಟದ ನಂತರ ಮೇಳ ಬೇಡವೆಂಬ ತೀರ್ಮಾನಕ್ಕೂ ಬಂದಿದ್ದರು.

ಅದೇ ವರ್ಷ ಶೇಖರ್ ಶೆಟ್ಟಿ ಬೆಳ್ಮಣ್ಣು ಅವರ ನೇತೃತ್ವದಲ್ಲಿ ಬಪ್ಪನಾಡು ಮೇಳ ಆರಂಭವಾಗಿತ್ತು. ಇಬ್ಬರೂ ಸದ್ರಿ ಮೇಳ ಸೇರಿ ಮೂವರು ಯಜಮಾನರ ಸಂಚಾಲಕತ್ವದಲ್ಲಿ (ಶೇಖರ ಶೆಟ್ರು, ಧರ್ಮಸ್ಥಳ ನಾರಾಯಣ ಕಂಮ್ತಿ, ಅಡ್ಯಾರು  ಶಂಕರ ಆಳ್ವ) 6 ವರ್ಷಗಳ ಕಲಾಸೇವೆಯನ್ನು ಮಾಡಿದ್ದರು. ಟೆಂಟು, ಬಯಲಾಟ ಮೇಳಗಳಲ್ಲಿ ತುಳು, ಪೌರಾಣಿಕ ವೇಷಗಳನ್ನು ನಿರ್ವಹಿಸುತ್ತಿದ್ದರು. ನಂತರ ಉದಯ ನಾವಡರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ 1 ವರ್ಷ, ಗೋಣಿಬೀಡು ಸಂಜಯ ಕುಮಾರರ ಗಣೇಶಪುರ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿದರು. ನಂತರ ಅಣ್ಣ ರಾಧಾಕೃಷ್ಣ ನಾವಡರ ಜತೆ ವೈ. ಕರುಣಾಕರ ಶೆಟ್ರ ಪೆರ್ಡೂರು ಮೇಳದಲ್ಲಿ ಕಲಸೇವೆ ಮಾಡಿದರು. ಆಗ ಧಾರೇಶ್ವರರು ಭಾಗವತರಾಗಿದ್ದರು.

ನಂತರ ನಾವಡ ಸಹೋದರರು ಕಿಶನ್ ಹೆಗ್ಡೆಯವರ ಸಾಲಿಗ್ರಾಮ ಮೇಳದಲ್ಲಿ ಶಬರಾಯರ ಭಾಗವತಿಕೆಯಲ್ಲಿ ಕಲಾಸೇವೆ ಮಾಡಿದರು. ಬಳಿಕ ಮಂಗಳಾದೇವಿ ಮೇಳದಲ್ಲಿ 3ನೇ ವರುಷದ ತಿರುಗಾಟ, ಮಾರ್ಚ್ ತಿಂಗಳಿನಲ್ಲಿ. ರಂಗದಲ್ಲಿ ಕುಣಿಯುತ್ತಿರುವಾಗ ತೀವ್ರ ಬೆನ್ನುನೋವು ಉದಯ ನಾವಡರನ್ನು ಕಾಡಿತು. ತಿರುಗಾಟ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದೇ ವರ್ಷ ಜನವರಿಯಲ್ಲಿ ಉದಯ ನಾವಡರು ವಿವಾಹವಾಗಿದ್ದರು. ಪತ್ನಿಯು ಸಾಂತ್ವನದ ನುಡಿಗಳಿಂದ ಆರೈಕೆ ಮಾಡಿದ್ದರು. ಅಣ್ಣಂದಿರು ಸಹಕರಿಸಿ, ಸಂತೈಸಿದ್ದರು. ಕಲಾವಿದರೂ, ಕಲಾಭಿಮಾನಿಗಳೂ ಉದಯ ನಾವಡರಿಗೆ ನೆರವಾಗಿದ್ದರು. ಮುಂದಿನ ಎರಡು ವರ್ಷಗಳ ಕಾಲ ಮನೆಯಲ್ಲಿದ್ದುಕೊಂಡು ಚಿಕಿತ್ಸೆ. ಮತ್ತೆ ಜೀವನೋಪಾಯಕ್ಕಾಗಿ ಮೇಳಕ್ಕೆ.

ಕುಣಿಯಲು ಅಸಾಧ್ಯವಾದ ಕಾರಣ ಸ್ತ್ರೀವೇಷ ಮಾತ್ರ ಮಾಡುತ್ತೇನೆಂಬ ಒಪ್ಪಂದದೊಂದಿಗೆ 4 ವರ್ಷಗಳ ತಿರುಗಾಟದ ನಂತರ, ಕುಂಟಾರು ಮೇಳದಲ್ಲಿ 1 ವರ್ಷ ವ್ಯವಸಾಯ. ಬೆನ್ನುನೋವಿನ ಸಮಸ್ಯೆಯಿಂದ ಇನ್ನು ತಿರುಗಾಟ ಅಸಾಧ್ಯ ಎಂಬ ನಿರ್ಧಾರಕ್ಕೆ ಉದಯ ನಾವಡರು ಬಂದಿದ್ದರು. ಮಾತ್ರವಲ್ಲ ಆ ನಿಟ್ಟಿನಲ್ಲಿ ದೃಢನಿರ್ಧಾರಕ್ಕೂ ಬಂದಿದ್ದರು. 2006ರಲ್ಲಿ ಕಲಾಬದುಕಿನಿಂದ ಸ್ವಯಂ ನಿವೃತ್ತಿಯನ್ನು ಹೊಂದಿ, ಬದುಕಿಗಾಗಿ ಬದಲಿ ಮಾರ್ಗವನ್ನರಸಿದರು. ಪ್ರಸ್ತುತ 12 ವರ್ಷಗಳಿಂದ ತನ್ನ ಭಾವ ಶ್ರೀ ಪಾರ್ಥಸಾರಥಿ ಹೊಳ್ಳರ ಜತೆ ಕಾಸರಗೋಡು, ಚಂದ್ರಗಿರಿ, ಕಾಂಞಂಗಾಡು ಭಾಗಗಳಲ್ಲಿ ಕೇಬಲ್ ನೆಟ್‍ವರ್ಕ್ ಉದ್ಯೋಗವನ್ನು ಮಾಡುತ್ತಿದ್ದಾರೆ.

ತನ್ನ ಕಷ್ಟಕಾಲಕ್ಕೆ ವಿವಿಧ ರೀತಿಗಳಲ್ಲಿ ಸ್ಪಂದಿಸಿ, ಸಹಕರಿಸಿದ ಕಲಾವಿದರು, ಕಲಾಭಿಮಾನಿಗಳು, ಸಂಘಟಕರು, ಸಂಘ-ಸಂಸ್ಥೆಗಳನ್ನೂ, ಸಹೋದರರನ್ನೂ, ಬಂಧುಗಳನ್ನೂ ಮರೆಯದೆ ಸದಾ ನೆನಪಿಸುತ್ತಾರೆ ಶ್ರೀ ಉದಯ ನಾವಡರು. ಉದಯ ನಾವಡರ ಪತ್ನಿ ಶ್ರೀಮತಿ ರಾಜೇಶ್ವರಿ ಗೃಹಿಣಿ. ಉದಯ ನಾವಡ ರಾಜೇಶ್ವರಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಸ್ವಾತಿ ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿ. ಪುತ್ರ ಕೃಷ್ಣಪ್ರಕಾಶ ನಾವಡ ಕಾಸರಗೋಡು ಬಿ.ಇ.ಎಂ. ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿ. ಒಂದು ಕಾಲದಲ್ಲಿ ಉದಯ ನಾವಡರು ಶ್ರೇಷ್ಠ ಪುಂಡುವೇಷಧಾರಿಯಾಗಿ ಮೆರೆದಿದ್ದರು.

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments