Friday, September 20, 2024
Homeಯಕ್ಷಗಾನಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 3) ಧರ್ಮಸ್ಥಳ ಲಲಿತ ಕಲಾ ಕೇಂದ್ರ...

ಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 3) ಧರ್ಮಸ್ಥಳ ಲಲಿತ ಕಲಾ ಕೇಂದ್ರ Dharmasthala Lalitha kala kendra

ಧರ್ಮಸ್ಥಳ ಲಲಿತ ಕಲಾ ಕೇಂದ್ರ (ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ):

ತೆಂಕುತಿಟ್ಟು ಯಕ್ಷಗಾನ ಕಲಿಕೆಗೂ ಸೂಕ್ತ ವ್ಯವಸ್ಥೆಗಳಿಲ್ಲದುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು ತಮ್ಮ ತೀರ್ಥರೂಪರೂ ಹಿಂದಿನ ಧರ್ಮಾಧಿಕಾರಿಗಳೂ ಆದ ಶ್ರೀ ರತ್ನವರ್ಮ ಹೆಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನಕ್ಕೊಂದು ಶಾಸ್ತ್ರೀಯ ಕಲಿಕಾ ಕೇಂದ್ರವನ್ನು ಒದಗಿಸುವ ಮಹತ್ತರವಾದ ಧೃಷ್ಟಿಯನ್ನಿರಿಸಿಕೊಂಡು 1972ರಲ್ಲಿ ‘ಲಲಿತ ಕಲಾ ಕೇಂದ್ರ’ವನ್ನು ಸ್ಥಾಪಿಸಿದರು. ಮೊದಲು ಮೇಳಕ್ಕೆ ಸೇರಿ ‘ಕೋಡಂಗಿ ವೇಷ’ಗಳನ್ನು ಮಾಡಿ ಹೆಜ್ಜೆ ಹೆಜ್ಜೆಗೂ ನಾಟ್ಯ ಕಲಿಯುತ್ತಾ ಔನ್ನತ್ಯವನ್ನು ಸಾಧಿಸುವುದು ಆಗಿನ ರಂಗ ಪದ್ಧತಿಯಾಗಿತ್ತು. ಈ ಅಲಿಖಿತ ನಿಯಮವನ್ನು ಸರಳೀಕರಿಸಲು ಪೂಜ್ಯ ಹೆಗಡೆಯವರು ತೆಂಕುತಿಟ್ಟಿಗೆ ಒಂದು ತರಬೇತಿ ಕೇಂದ್ರದ ಅವಶ್ಯಕತೆಯನ್ನು ಮನಗಂಡರು. ಮಳೆಗಾಲದ ಆರು ತಿಂಗಳುಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಕಲಿಸುವ ಯೋಜನೆ ಸಿದ್ಧವಾಯಿತು. ಮೊದಲ ವರ್ಷದ ಮುಮ್ಮೇಳ ಗುರುಗಳಾಗಿ ತೆಂಕುತಿಟ್ಟಿನ ಅದ್ವಿತೀಯ ಕಲಾವಿದರಾಗಿದ್ದ ಕುರಿಯ ವಿಠಲ ಶಾಸ್ತ್ರಿಗಳೂ ಹಿಮ್ಮೇಳಕ್ಕೆ ಮಾಂಬಾಡಿ ನಾರಾಯಣ ಭಾಗವತರೂ ಸಿದ್ಧರಾದರು.

ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ ಅಥವಾ ಲಲಿತ ಕಲಾ ಕೇಂದ್ರದಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಅನೇಕರು ಇಂದು ತೆಂಕುತಿಟ್ಟಿನಲ್ಲಿ ಅಗ್ರಗಣ್ಯ ಕಲಾವಿದರಾಗಿ ಮೆರೆಯುತ್ತಿದ್ದಾರೆ. ಆ ಕಾಲದಲ್ಲಿ ಒಂದು ಅತ್ಯುತ್ತಮ ತರಬೇತಿ ಕೇಂದ್ರವೆಂದು ಹೆಸರು ಗಳಿಸಿದ್ದ ಈ ಕೇಂದ್ರವು ಶಿಸ್ತಿನ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಗುರುಗಳಾಗಿದ್ದ ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತ, ಮಾಣಂಗಾಯಿ ಕೃಷ್ಣ ಭಟ್, ಕುಂಡಂಕುಳಿ ರಾಮಕೃಷ್ಣ ಮದ್ದಳೆಗಾರ, ಪಡ್ರೆ ಚಂದು, ನೆಡ್ಲೆ ನರಸಿಂಹ ಭಟ್, ಅಳಿಕೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್, ಗೋಪಾಲಕೃಷ್ಣ ಕುರುಪ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ, ತಾರಾನಾಥ ಬಲ್ಯಾಯ, ದಿವಾಣ ಶಿವಶಂಕರ ಭಟ್ ಮೊದಲಾದವರು ತಮ್ಮ ಶ್ರಮವನ್ನು ಧಾರೆಯೆರೆದು ಅನೇಕ ಕಲಾವಿದರನ್ನು ತಯಾರು ಮಾಡಿದ್ದರು. 

ಶ್ರೀ ಹರ್ಷೇಂದ್ರ ಕುಮಾರ್

ಈ ಎಲ್ಲಾ ಶ್ರಮದ ಹಿಂದೆ ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಮತ್ತು ಶ್ರೀ ಹರ್ಷೇಂದ್ರ ಕುಮಾರ್ ಅವರ ನಿರಂತರ ಬೆಂಬಲ ಪ್ರೋತ್ಸಾಹಗಳಿದ್ದುವು. ಪೂಜ್ಯ ಹೆಗಡೆಯವರೂ ಶ್ರೀ ಹರ್ಷೇಂದ್ರ ಕುಮಾರ್ ಅವರೂ ಆಗಾಗ ಈ ಲಲಿತ ಕಲಾ ಕೇಂದ್ರಕ್ಕೆ ಭೇಟಿಕೊಟ್ಟು ವಿದ್ಯಾರ್ಥಿಗಳ ಕಲಿಯುವಿಕೆಯನ್ನು ನಿರಂತರ ಪರಿಶೀಲಿಸುತ್ತಿದ್ದರು. ನೆಡ್ಲೆ ನರಸಿಂಹ ಭಟ್, ಕೆ. ಗೋವಿಂದ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಜೊತೆಯಾಗಿ ವಿದ್ಯಾರ್ಥಿಗಳಿಗೆ ಕಲಿಸಲು ಪಠ್ಯಕ್ರಮವೊಂದನ್ನು ಸಿದ್ಧಪಡಿಸಿದರು. ಈ ಪಠ್ಯಕ್ರಮದ ಆಧಾರದಲ್ಲಿ ಲಲಿತ ಕಲಾ ಕೇಂದ್ರದಲ್ಲಿ ತೆಂಕುತಿಟ್ಟಿನ ಹಿಮ್ಮೇಳ ಮುಮ್ಮೇಳಗಳ ಶಿಕ್ಷಣ ಮುಂದುವರಿಯಿತು. ಹೀಗೆ ಒಂದು ಹಂತದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಲಲಿತ ಕಲಾ ಕೇಂದ್ರಕ್ಕೆ ಕೆಲವು ವರ್ಷಗಳ ಹಿಂದೆ ಕಲಿಯುವ ಆಸಕ್ತ ವಿದ್ಯಾರ್ಥಿಗಳ ಕೊರತೆಯುಂಟಾಯಿತು. ಆ ಕಾಲದಲ್ಲಿ ಯಕ್ಷಗಾನದಿಂದ ಬರುವ ಆದಾಯ ಮತ್ತು ಜೀವನ ನಿರ್ವಹಣೆಯ ಮಟ್ಟವನ್ನು ಲೆಕ್ಕಹಾಕಿ ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಯುವುದಕ್ಕೆ ಪ್ರೇರಿಪಿಸದೆ ಇದ್ದುದೇ ಇದಕ್ಕೆ ಕಾರಣವಿರಬಹುದು. ಇದರ ಜೊತೆಗೆ ಹಲವಾರು ಯಕ್ಷಗಾನ ಕಲಾವಿದರು ಅಲ್ಲಲ್ಲಿ ತಮ್ಮ ತಮ್ಮ ಪ್ರದೇಶಗಳಲ್ಲಿ ಯಕ್ಷಗಾನ ತರಗತಿಗಳನ್ನು ಆರಂಭಿಸಿದ್ದೂ ಇನ್ನೊಂದು ಕಾರಣವಿರಬಹುದು. ಕಲಾಸಕ್ತರ ಕೊರತೆಯಿಂದ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ಶಿಕ್ಷಣ ಮತ್ತು ತರಬೇತಿ ಮುಂದುವರಿಯದೆ ಇದ್ದುದು ತೆಂಕುತಿಟ್ಟು ಯಕ್ಷಗಾನಕ್ಕೆ ಆದ ಒಂದು ದೊಡ್ಡ ನಷ್ಟವೆಂದೇ ಹೇಳಬಹುದು. (ಮುಂದಿನ ಸಂಚಿಕೆ ಭಾಗ – 4ರಲ್ಲಿ ಮುಂದುವರಿಯುವುದು)

ಲೇಖನ: ಮನಮೋಹನ್ ವಿ.ಎಸ್. 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments