ರಾಜ್ಯಸಭಾ ಸಂಸದರೊಬ್ಬರ ಮಗ ಚಲಾಯಿಸುತ್ತಿದ್ದ ಅತಿವೇಗದ ಐಷಾರಾಮಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಲ್ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ.

ಹೈದರಾಬಾದ್: ರಾಜ್ಯಸಭಾ ಸಂಸದರೊಬ್ಬರ ಮಗ ಚಲಾಯಿಸುತ್ತಿದ್ದ ಅತಿವೇಗದ ಐಷಾರಾಮಿ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೃತರನ್ನು 26 ವರ್ಷದ ಭಾರತಿ ಮುಖಿ ಎಂದು ಗುರುತಿಸಲಾಗಿದೆ. ಜನಸೇನಾ ಪಕ್ಷದ ಸಂಸದ ಲಿಂಕಮನೇನಿ ರಮೇಶ್ ಅವರ ಪುತ್ರ ಲಿಂಕಮನೇನಿ ಸಂಜುಶ್ (21) ಈ ವಾಹನವನ್ನು ಚಲಾಯಿಸುತ್ತಿದ್ದರು. ಭಾರತಿ ನಗರದ ‘ಇನ್ಆರ್ಬಿಟ್ ಮಾಲ್’ನಲ್ಲಿರುವ ಬಟ್ಟೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಈ ಘಟನೆಯು ಆಗಸ್ಟ್ 16 ರಂದು ನಡೆಯಿತು. ಮಾಧಾಪುರದಲ್ಲಿರುವ ತಮ್ಮ ಕೆಲಸದ ಸ್ಥಳದ ಬಳಿ ಭಾರತಿ ಮತ್ತು ಅವರ ಸ್ನೇಹಿತೆಯೊಬ್ಬರು ರಸ್ತೆ ದಾಟುತ್ತಿದ್ದಾಗ, ವೇಗವಾಗಿ ಬಂದ ಕಾರೊಂದು ಭಾರತಿ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದರು. ತಲೆಗೆ ತೀವ್ರ ಗಾಯಗೊಂಡಿದ್ದ ಅವರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು.
ಹೈದರಾಬಾದ್ ಪೊಲೀಸರು ಈ ಘಟನೆಗೆ ಸಂಜುಶ್ ಕಾರಣ ಎಂದು ಗುರುತಿಸಿದ್ದರೂ, ಅವರನ್ನು ಇದುವರೆಗೆ ಬಂಧಿಸಲಾಗಿಲ್ಲ. ಸಂಜುಶ್ ಅವರ ತಂದೆ ಲಿಂಗಮನೇನಿ ರಮೇಶ್ ಅವರು, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಸಂಸದರಾಗಿದ್ದಾರೆ.

