ಕಲೆಯ ಮೂಲಸ್ವರೂಪ ಕಲುಷಿತಗೊಳ್ಳಬಾರದು : ಡಾ. ಆರ್.ಕೆ. ಪದ್ಮನಾಭ
ಪ್ರಶಸ್ತಿಗೆ ಕಲಾವಿದ ಅರ್ಜಿ ಹಾಕುವುದಲ್ಲ. ಪ್ರಭಾವದಿಂದ ಕೊಂಡುಕೊಳ್ಳುವುದಲ್ಲ. ಪ್ರತಿಭೆಯನ್ನು ನೋಡಿ ಗುರ್ತಿಸಿ ಕೊಡುವುದೇ ನಿಜವಾದ ಪ್ರಶಸ್ತಿ. ನಮ್ಮ ನಾಡಿನ ಹೆಮ್ಮೆಯ ಯಕ್ಷಗಾನ ಕಲೆಯನ್ನು ಜೀವಂತವಿರಿಸಿ ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಕಲಾಕದಂಬ ಸಂಸ್ಥೆ ಹಿರಿಯ ಪ್ರತಿಭಾನ್ವಿತ ಕಲಾವಿದರನ್ನು ಗುರ್ತಿಸಿ ಗೌರವಿಸುವ ಮೂಲಕ ಮಹತ್ತರ ಕೆಲಸ ಮಾಡುತ್ತಿದೆ ಎಂದು ನಾಡು ಕಂಡ ಅಪ್ರತಿಮ ದ್ವನಿಯ ಗಾಯಕ ಖ್ಯಾತ ಸಂಗೀತ ವಿದ್ವಾಂಸರಾದ ಡಾ. ಆರ್.ಕೆ. ಪದ್ಮನಾಭ ನುಡಿದರು.
ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಕಲಾಸಂಘದ ವೇದಿಕೆಯಲ್ಲಿ ಹಿರಿಯ ಚಂಡೆ ವಾದಕ ಶ್ರೀ ಶಿವಾನಂದ ಕೋಟ ಇವರಿಗೆ, ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ 2024 ರ ಸಾಲಿನ ’’ಕಾಳಿಂಗ ನಾವಡ ಪ್ರಶಸ್ತಿ”ಯನ್ನು ಪ್ರದಾನಿಸಿ ಮಾತನಾಡಿದರು. ನಮ್ಮ ಈ ಜಾನಪದ ಸಾಂಪ್ರದಾಯಿಕ ಕಲೆಗಳು ತಮ್ಮ ಮೂಲ ಸ್ವರೂಪದಲ್ಲೇ ಇರಬೇಕು. ಪಾಶ್ಚಾತ್ಯ ಸಂಗೀತ ಬೆರೆಸದೆ ಶುದ್ದ ರೂಪದಲ್ಲಿರಿಸಿ ಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಬೆಳ್ಳಿ ತಟ್ಟೆ, 15 ಸಾವಿರ ನಗದು ಸೇರಿದಂತೆ ಪ್ರಶಸ್ತಿ ಪತ್ರ ಸ್ವೀಕರಿಸಿ ಮಾತನಾಡಿದ ಶಿವಾನಂದ ಅವರು ತಮ್ಮನ್ನು ಮೇಳದಲ್ಲಿ ಈ ಮಟ್ಟಕ್ಕೆ ಬೆಳೆಯುವುದಕ್ಕೆ ಕಾರಣರಾದ ನಾವಡರನ್ನು ಬಾವುಕರಾಗಿ ನೆನೆಯುತ್ತಾ ಇಂದು ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ತಮ್ಮ ಭಾಗ್ಯ ಎಂದರು.
ತಮ್ಮ ಇಂದಿನ ಸಾಧನೆಗೆ ಕಾರಣ ತಂದೆ ತಾಯಿಯರ ಪ್ರೋತ್ಸಾಹ ಮತ್ತು ಯಕ್ಷಗಾನ ಗುರುಗಳಾದ ಎಂ.ಎನ್.ಮದ್ಯಸ್ಥರು ಕೊಟ್ಟ ಯಕ್ಷಶಿಕ್ಷಣ ಎಂದು ಸ್ಮರಿಸಿಕೊಂಡರು.
ಪ್ರಾಸ್ತಾವಿಕ ಮಾತನಾಡಿದ ಕಲಾ ಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಕಾಳಿಂಗ ನಾವಡರು ಅಳಿದ ಮೇಲೂ ಉಳಿದು ಇಂದಿನ ಪೀಳಿಗೆಗೂ ಯಕ್ಷಗಾನದ ವಿಚಾರದಲ್ಲಿ ಸ್ಪೂರ್ತಿಯಾದವರು. ಕಳೆದ 15 ವರುಷಗಳಿಂದ ನಾವಡರ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಿರುವ ಸಂಸ್ಥೆ ಮ್ವೆಸೂರು ಗಂಗೂಬಾಯಿ ವಿಶ್ವವಿದ್ಯಾಲಯದ ಒಡಂಬಡಿಕೆಯೊಂದಿಗೆ ಯಕ್ಷಗಾನ ಕಲೆಯಲ್ಲಿ ಇಂದು ಡಿಪ್ಲೊಮೋ ಸರ್ಟಿಪಿಕೆಟ್ ಕೋರ್ಸ ಆರಂಭಿಸಿದೆ ಎಂದರು.
ನಾವಡರ ನೆನಪು ಉಳಿಸುವ ಒಂದು ಪುತ್ಥಳಿ ಸ್ಥಾಪನೆಯಾಗಬೇಕೆಂಬ ಮುರಳೀಧರ ನಾವಡರ ಆಶಯಕ್ಕೆ ಸ್ಪಂಧಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಕಿರಣಕುಮಾರ್ ಕೊಡ್ಗಿ ಅವರು ಸೂಕ್ತ ಯೋಜನೆಯನ್ನ ಸಿದ್ಧಪಡಿಸಿಕೊಂಡು ಮುನ್ನಡೆಯೋಣ ಎಂಬ ಭರವಸೆಯ ಮಾತನಾಡಿದರು.
ಚಲನ ಚಿತ್ರ ಪತ್ರಕರ್ತರಾದ ಶ್ರೀ ಗಣೇಶ್ ಕಾಸರಗೋಡು ಮಾತನಾಡುತ್ತಾ ಚಲನ ಚಿತ್ರದಲ್ಲಿ ಶಂಕರ್ ನಾಗ್ರಂತೆ ನಾವಡರು ಕಿರಿಯ ವಯಸ್ಸಿನಲ್ಲೇ ಮಹತ್ತರ ಸಾದನೆ ಮಾಡಿದ ಮೇರುಕಂಠದ ಭಾಗವತರು ಎಂದರು.
ಯುವ ವಿಪ್ರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಅಡಿಗ, ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಸಹೋದರಿ ಸುಶೀಲ ಉರಾಳ, ಕಲಾ ಕದಂಬ ಆರ್ಟ್ ಸೆಂಟರ್ ನ ಗೌರವ ಅಧ್ಯಕ್ಷರಾದ ಶ್ರೀ ದೇವರಾಜ ಕರಬ ವಿಶ್ವನಾಥ ಉರಾಳ ಕಾರ್ಯಕ್ರಮದಲ್ಲಿ,ಉಪಸ್ಥಿತರಿದ್ದರು.
ಮುರಳೀಧರ ನಾವಡರ ಶಿಷ್ಯರ ಹಾಡುಗಳು, ಕುಮಾರಿ ಮಧುಮಿತ ರವೀಂದ್ರ ಹಾಗೂ ಭೂಮಿ ಶೆಟ್ಟಿ ಅವರ ಭರತನಾಟ್ಯ, ಹೊಸ್ತೋಟ ಮಂಜುನಾಥ ಭಾಗವತರ ತೀರಾ ಅಪರೂಪದ ರಾಮಾಯಣ ಯಕ್ಷಗಾನ ಪ್ರಸಂಗ ಕಾಲನೇಮಿ ಕಾಳಗ ತುಂಬಿದ ಸಭಾಂಗಣದ ಪ್ರೇಕ್ಷಕರನ್ನು ರಂಜಿಸಿತು.
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

