Friday, September 20, 2024
Homeಸುದ್ದಿಕರ್ಕಿ ಪಿ. ವಿ. ಹಾಸ್ಯಗಾರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ - 2023ರ ಪ್ರಶಸ್ತಿಗೆ ದಿ....

ಕರ್ಕಿ ಪಿ. ವಿ. ಹಾಸ್ಯಗಾರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ – 2023ರ ಪ್ರಶಸ್ತಿಗೆ ದಿ. ಕರ್ಕಿ ಪಾಂಡುರಂಗ ಭಂಡಾರಿ ಮನೆತನ ಮತ್ತು 2024ರ ಪ್ರಶಸ್ತಿಗೆ ಕೆ. ಗೋವಿಂದ ಭಟ್

ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಉತ್ತರ ಕನ್ನಡ ಸಭಾಹಿತ ಮಟ್ಟಿನ ಸಮರ್ಥ ಪ್ರತಿನಿಧಿ ದಿ. ಪಿ. ವಿ. ಹಾಸ್ಯಗಾರ, ಕರ್ಕಿ ಇವರ ನೆನಪಿನಲ್ಲಿ ಕೊಡಮಾಡುವ 2023ರ ಪ್ರಶಸ್ತಿಗೆ ದಿ. ಕರ್ಕಿ ಪಾಂಡುರಂಗ ಭಂಡಾರಿ ಮನೆತನವನ್ನು ಆಯ್ಕೆ ಮಾಡಲಾಗಿದೆ. 

2024ರ ಪ್ರಶಸ್ತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸೂರಿಕುಮೇರಿ ಕೆ. ಗೋವಿಂದ ಭಟ್ಟರು ಭಾಜನರಾಗಿದ್ದಾರೆ. ಪ್ರತಿ ಪ್ರಶಸ್ತಿಯು 50,001 ರೂಪಾಯಿ, ಸ್ಮರಣಿಕೆ ಮತ್ತು ಇತರ ಸುವಸ್ತುಗಳನ್ನು ಒಳಗೊಂಡಿದೆ.

ಇದೇ ಸೆಪ್ಟೆಂಬರ್ 1 ರವಿವಾರದಂದು ಅಪರಾಹ್ನ 4.00 ಗಂಟೆಗೆ ಕರ್ಕಿಯ (ಹೊನ್ನಾವರ) ಹವ್ಯಕ ಸಭಾಭವನದಲ್ಲಿ ನಡೆಯಲಿರುವ ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳು ನಡೆಯಲಿವೆ.

ಪ್ರತಿವರ್ಷದಂತೆ ಯಕ್ಷಗಾನ ಸಂಶೋಧನಾ ಕೇಂದ್ರ, ಕುಮಟಾ, ಕಡತೋಕ ಕೃಷ್ಣ ಭಾಗವತ, ಪಿ. ವಿ. ಹಾಸ್ಯಗಾರ ಸಂಸ್ಮರಣಾ ವೇದಿಕೆ, ಹೆಬ್ಳೇಕೆರಿ (ಕಡತೋಕ) , ಯಕ್ಷರಂಗ ಪತ್ರಿಕಾ ಬಳಗ, ಹಳದೀಪುರ, ಸಿರಿಕಲಾ ಮೇಳ, ಬೆಂಗಳೂರು, ಶ್ರೀ ಗಜಾನನ ಭಟ್ಟ, ಕಡತೋಕ (ಅಮೆರಿಕ) ಮತ್ತು ಕರ್ಕಿ ಹಾಸ್ಯಗಾರ ಕುಟುಂಬದವರ ಸಹಕಾರದೊಂದಿಗೆ ನಡೆಯಲಿರುವ ಸಮಾರಂಭವನ್ನು ಪಿ ವಿ. ಹಾಸ್ಯಗಾರರ ಯಕ್ಷಶಿಷ್ಯ ಬಳಗದವರು ಈ ವರ್ಷವೂ ಹಮ್ಮಿಕೊಂಡಿದ್ದಾರೆ. 

ನಿವೃತ್ತ ಪ್ರಾಚಾರ್ಯ ಮತ್ತು ಹಿರಿಯ ವಿದ್ವಾಂಸ ಪ್ರೊ. ಎಸ್. ಶಂಭು ಭಟ್ಟ, ಕಡತೋಕ ಅಧ್ಯಕ್ಷತೆ ವಹಿಸಿಲಿದ್ದಾರೆ. ನಾಡಿನ ಪ್ರಖ್ಯಾತ ವಿಜ್ಞಾನಿ ಮತ್ತು ಶಿಕ್ಷಣ ತಜ್ಞ ಡಾ. ಸುರೇಂದ್ರ ಕುಲಕರ್ಣಿ (ಬೆಂಗಳೂರು) ಸಮಾರಂಭದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಾ. ಜಿ. ಎಲ್. ಹೆಗಡೆ, ಕುಮಟಾ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.  ಶ್ರೀ ಕಡತೋಕ ಗೋಪಾಲಕೃಷ್ಣ ಭಾಗವತ (ಯಕ್ಷರಂಗ) ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಿದ್ದಾರೆ.

ಹಲವು ತಲೆಮಾರುಗಳ ಕರ್ಕಿ ಭಂಡಾರಿ ಕುಟುಂಬದ ಕಲಾವಿದರು ಕರ್ಕಿ ಮೇಳದಲ್ಲಿ ಕಲಾಸೇವೆ ಸಲ್ಲಿಸಿರುವುದು ಇಲ್ಲಿ ಸ್ಮರಣೀಯ. ಯಕ್ಷಗಾನ, ಚರ್ಮವಾದ್ಯ ತಯಾರಿಕೆ, ಮಣ್ಣಿನ ಮೂರ್ತಿಗಳ ತಯಾರಿಕೆ, ಪಂಚವಾದ್ಯ ವಾದನ ಹೀಗೆ ಬಹುಮುಖ ಕಲೆಗಳು ಭಂಡಾರಿ ಮನೆತನದಲ್ಲಿ ವಂಶಪಾರಂಪರ್ಯವಾಗಿ ಹರಿದುಬಂದಿವೆ. 

ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರು ಯಕ್ಷಗಾನದ ಇತಿಹಾಸದಲ್ಲಿ ಅತಿಹೆಚ್ಚು ವೃತ್ತಿಮೇಳಗಳ ಪ್ರದರ್ಶಗಳಲ್ಲಿ ಪಾಲ್ಗೊಂಡ ಕಲಾವಿದ ಎಂಬ ನೆಗಳ್ತೆಗೆ ಪಾತ್ರರಾಗಿದ್ದಾರೆ. ಏಳು ದಶಕಗಳ ಯಕ್ಷಗಾನದ ಅನುಭವ ಇರುವ ಭಟ್ಟರು ಅನೇಕ ಶಿಷ್ಯರಿಗೆ ಗುರುವಾಗಿ, ಪ್ರಸಂಗಕರ್ತರಾಗಿ “ದಶಾವತಾರಿ” ಎಂಬ ಗುರುತಿಸಲ್ಪಟ್ಟಿದ್ದಾರೆ.

ಸಭಾಕಾರ್ಯಕ್ರಮದ ನಂತರ ಖ್ಯಾತ ಯಕ್ಷಗಾನ ಕಲಾವಿದರಿಂದ ರುಕ್ಮಾಂಗದ ಚರಿತ್ರೆ ಆಖ್ಯಾನ ಪ್ರದರ್ಶನಗೊಳ್ಳಲಿದೆ ಎಂದು ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments