
ಕೆನರಾ ಬಸ್ ಮಾಲಕರ ಸಹಕಾರದಿಂದ ಯಕ್ಷಗಾನ ಕಲಾರಂಗ ಕಳೆದ ಹಲವು ವರ್ಷಗಳಿಂದ ವೃತ್ತಿ ಮೇಳದ ಕಲಾವಿದರಿಗೆ ಪ್ರತಿಶತ 50 ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಾ ಬಂದಿದ್ದು, ಈ ವರ್ಷದ ಆಗಸ್ಟ್ 31, 2023ರ ವರೆಗೆ ಅನ್ವಯವಾಗುವಂತೆ ಕೊಡಮಾಡಿದ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಇಂದು (18-12-2021) ಸಂಸ್ಥೆಯ ಕಚೇರಿಯಲ್ಲಿ ಜರಗಿತು.
ಕೆನರಾ ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಮೇಳದ ಪ್ರತಿನಿಧಿಗಳಿಗೆ ವಿತರಿಸಿ ಮಾತನಾಡಿ, ಕಲಾವಿದರಿಗೆ ಅನುಕೂಲವಾಗುವಂತೆ ಮುಂದೆ ಅಕ್ಟೋಬರ್ 31ರವರೆಗೆ ವಿಸ್ತರಿಸುವುದಾಗಿ ಭರವಸೆ ನೀಡಿದರು.
ಸೌಕೂರು ಮೇಳದ ಆನಂದ ರಾವ್, ಗೋಳಿಗರಡಿ ಮೇಳದ ಕೃಷ್ಣ ಸಂತೆಕಟ್ಟೆ ಮತ್ತು ಶನೀಶ್ವರ ಮೇಳದ ಪ್ರವೀಣ ಬಲ್ಯಾಯ ಸ್ವೀಕರಿಸಿದರು. 25 ವಿವಿಧ ಮೇಳಗಳ 400ಕ್ಕೂ ಮಿಕ್ಕಿದ ಕಲಾವಿದರು ಪಾಸ್ ಸೌಲಭ್ಯ ಪಡೆಯಲಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಪಿ. ಕಿಶನ್ ಹೆಗ್ಡೆ, ಪ್ರೊ. ನಾರಾಯಣ ಎಮ್. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ಕಿಶೋರ್ ಸಿ. ಉದ್ಯಾವರ, ವಿಶ್ವನಾಥ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ವೃತ್ತಿ ಕಲಾವಿದರಿಗೆ ಈ ಸೌಲಭ್ಯ ಕಲ್ಪಿಸಿದ ಕೆನರಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.