(ಬಡಗುತಿಟ್ಟಿನ ಕಂಚಿನ ಕಂಠದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟಿ (95 ವರ್ಷ) ನಿನ್ನೆ (10-07-2021) ಕುಂದಾಪುರದ ಮತ್ಯಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರ ಕುರಿತು ಪ್ರೊ| ಎಸ್.ವಿ.ಉದಯಕುಮಾರ ಶೆಟ್ಟಿ, ಮಣಿಪಾಲ ಅವರು 2018ರಲ್ಲಿ ಯಕ್ಷದೀಪ ಪತ್ರಿಕೆಯಲ್ಲಿ ಬರೆದ ಲೇಖನ)
ಶ್ರೀ ಮಂದಾರ್ತಿದಶಾವತಾರಯಕ್ಷಗಾನ ಮೇಳದಲ್ಲಿ ಸುಮಾರು 50 ವರ್ಷ ಕಲಾಸೇವೆ ಮಾಡಿದ 92ರ ಇಳಿವಯಸ್ಸಿನ ಹಿರಿಯ ಬಾಗವತರು ಬಡಗುತಿಟ್ಟಿನ ರಂಗಸ್ಥಳವನ್ನು ತಮ್ಮಕಂಚಿನ ಕಂಠದಿಂದ ಆಡಿಸಿದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟರು
ಇದು ಸುಮಾರು ಆರು ದಶಕಗಳ ಹಿಂದಿನ ಮಾತು. ಹಂಗಾರಕಟ್ಟೆಯಲ್ಲಿ ಮಂದರ್ತಿ ಮತ್ತು ಅಮ್ರತೇಶ್ವರೀ ಮೇಳಗಳ ಜೋಡಾಟ ತೀವ್ರ ಪೈಪೋಟಿಯಿಂದ ನೆಡೆದಿತ್ತು. ಸೈಂದವ ವದೆ ಪ್ರಸಂಗದಲ್ಲಿ ಸಮಸಪ್ತಕರನ್ನು ಸದೆ ಬಡಿದ ಅರ್ಜುನನಾಗಿ ಬಡಗುತಿಟ್ತಿನ ದಂತಕಥೆ ಹಾರಾಡಿ ದಿ.ಕುಷ್ಟ ಗಾಣಿಗರು ತನ್ನ ಪಾಳಯಕ್ಕಾಗಿ ಹಿಂದಿರುಗುವಾಗ ಮಂಗಳಾಂಗಿನಿಯರು ಆರತಿಯೆತ್ತಿ ಸ್ವಾಗತಿಸುತ್ತಾರೆ. ಬಾಗವತರು ‘ರತುನದಾರತಿಯೆತ್ತಿ…………”ಪದವನ್ನು ಏರುದ್ವನಿಯಲ್ಲಿ ಹಾಡುತಿದ್ದಂತೆ. ಅಪಶಕುನದ ಛಾಯೆ ಗುರುತಿಸಿದ ಅರ್ಜುನ ಆರತಿ ತಟ್ಟೆಯನ್ನು ಬಲಗೈಯಿಂದ ಎತ್ತಿ ಹಾರಿಸಿದಾಗ ಬಾಗವತರ ಸನಿಹದಲ್ಲೇ ತಟ್ಟೆ ಬಿತ್ತಾದರೂ ಅದೇ ತಾದಾತ್ಮ್ಯ ಹೊಂದಿ ಬಾಗವತರು ಹಾಡುತಿದ್ದರು. ಇಂದೆಲ್ಲಾ ಇದು ಗತ ವೈಭವವಾಗಿ ಕಂಡರೂ ಅಂದಿನ ಇಂತಹ ರಸ ರೋಮಾಂಚನಗೊಳಿಸುವ ಘಟನೆಗಳ ಸರಮಾಲೆಯನ್ನೇ ನಮ್ಮೆದುರು ತೆರೆದಿಡುವ ಹಿರಿಯ ಸಂಪ್ರದಾಯದ ಶೈಲಿಯ ಬಾಗವತರು ನಮ್ಮ ನಡುವೆ ಇದ್ದ ಬಡಗಿನ ಅತ್ಯಂತ ಹಿರಿಯ ವಯಸ್ಸಿನ ಮತ್ಯಾಡಿ ನರಸಿಂಹ ಶೆಟ್ಟರು.
ಕುಂದಾಪುರ ತಾಲೂಕಿನ ಯಕ್ಷಗಾನದ ಆಡೊಂಬಲವಾದ ಹಳ್ಳಾಡಿ ಸಮೀಪ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ 1927ರಲ್ಲಿ ರಾಮಣ್ಣ ಶೆಟ್ಟಿ ಮುತ್ತಕ್ಕ ಶೆಡ್ತಿ ದಂಪತಿಗಳ ಪುತ್ರನಾಗಿ ಮದ್ಯಮ ವರ್ಗದ ಬಂಟ ಕುಟುಂಬದಲ್ಲಿ ಜನಿಸಿದ ಇವರ ಒಲವು ಯಕ್ಷಗಾನದತ್ತ ತಿರುಗಿದ್ದು ಅನೀರೀಕ್ಷಿತ. ಯಕ್ಷಗಾನ ರಂಗದ ಮಹಾನ್ ಕಲಾವಿದರ ಹಾಗೆ ಇವರ ವಿದ್ಯಾಬ್ಯಾಸ ಅರ್ಧಕ್ಕೆ ನಿಂತರೂ ಬಡಗುತಿಟ್ಟಿನ ಯಕ್ಷ ಸಾಮ್ರಾಜ್ಯಕ್ಕೆ ಇವರು ಸೂತ್ರದಾರಿಯಾದರು. ಗುರು ನಾರ್ಣಪ್ಪ ಉಪ್ಪೂರರಲ್ಲಿ ಶುದ್ದ ಸಾಂಪ್ರದಾಯದ ರಾಗ-ತಾಳ. ಮಟ್ಟು-ದಸ್ತುಗಳ ಪರಿಚಯ ಮಾಡಿಕೊಂಡ ಇವರು ಪ್ರಥಮವಾಗಿ ಮಲ್ಪೆ ಸಮೀಪದ ಕೊಡವೂರು ಮೇಳದಲ್ಲಿ ತಾಳ ಹಿಡಿದರು.
ಮುಂದೆ ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳ ಸೇರಿದ ಇವರು ಅಲ್ಲಿ ಬಾಗವತರಾಗಿದ್ದ ಗುಂಡ್ಮಿ ರಾಮಚಂದ್ರ ನಾವಡರಿಂದ ಕುಂಜಾಲು ಶೈಲಿಯ ಬಾಗವತಿಕೆ ಅಬ್ಯಾಸ ಮಾಡಿದರು. ಅವರಿಂದ ರಂಗತಂತ್ರ, ಆಟವಾಡಿಸುವ ಕಲೆ ಕರಗತ ಮಾಡಿಕೊಂಡ ಇವರು ಪುನಹ ತನ್ನ ಗುರುಗಳಿದ್ದ ಅಮೃತೇಶ್ವರೀ ಮೇಳಕ್ಕೆ ಸೇರಿದರು.ಇಲ್ಲಿ ಅವರ ಬಾಗವತಿಕೆಯ ಮಟ್ಟುಗಳು ಗಟ್ಟಿಗೊಂಡವು. ಬಳಿಕ ನೇರವಾಗಿ ಪ್ರಸಿದ್ದ ಬಯಲಾಟ ಮೇಳವಾದ ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದ ಶೆಟ್ಟರು ಅಲ್ಲಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ.
ಬಡಗುತಿಟ್ಟಿನ ಅವಿಸ್ಮರಣೀಯ ಕಲಾವಿದರಾದ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ ಕೊಕ್ಕರ್ಣೆ ನರಸಿಂಹ ಕಾಮತ್, ಕೊರ್ಗು ಹಾಸ್ಯಗಾರ ಉಡುಪಿ ಬಸವ ವೀರಭದ್ರ ನಾಯಕ್ ಹೀಗೆ ನಾವು ಕಾಣದ ಕೇಳದ ಮಹಾನ್ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಇವರಿಗಿದೆ. ಮೂರು ತಲೆಮಾರಿನ ಕಲಾವಿದರನ್ನು ರಂಗದಲ್ಲಿ ದೀಗಣ ಹಾಕಿಸಿದ ಇವರು ಅಂದಿನ ಹಾರಾಡಿ ತಿಟ್ಟಿನ ಜಾಪು-ಛಾಪು, ಮಟ್ಪಾಡಿ ತಿಟ್ಟಿನ ನರ್ತನ ಆಂಗಿಕ ಚಲನೆ ಈಗಿನವರಲ್ಲಿಲ್ಲ ಎಂದು ವ್ಯಥೆ ಪಡುತ್ತಾರೆ. ಇದು ಇಂದು ಆದುನೀಕರಣಗೊಂಡ ಯಕ್ಷಗಾನದ ಬಗ್ಗೆ ಬೇಸರದ ಬಾವವನ್ನು ಸೂಚಿಸುತ್ತದೆ.
ಹಲವಾರು ತಿರುಗಾಟವನ್ನು ರಾಮ ಗಾಣಿಗರ ಯಜಮಾನಿಕೆಯಲ್ಲಿ ನೆಡೆಸಿದ ಶೆಟ್ಟರು ತಮ್ಮ ಬಹುತೇಕ ತಿರುಗಾಟವನ್ನು ವಿದ್ಯುದ್ದೀಪವಿಲ್ಲದೆ ದೊಂದಿ ಬೆಳಕಿನಲ್ಲಿ, ದ್ವನಿವರ್ದಕವಿಲ್ಲದೆ ಕಳೆದವರು. ಇದೊಂದು ಕೊರತೆಯೋ ಲೋಪವೋ ಎಂದು ಆಗ ಅವರಿಗೆ ಅನಿಸಿದ್ದಿಲ್ಲ. ಸುಮಾರು 50 ಪೌರಾಣಿಕ ಪ್ರಸಂಗಗಳು ಕಂಠ ಪಾಠವಿರುವ ಇವರಿಗೆ ಸುದನ್ವಾರ್ಜುನ, ಮೈರಾವಣ ಕಾಳಗ, ಅತಿಕಾಯ, ಕರ್ಣಾರ್ಜುನ ಪ್ರಸಂಗವೆಂದರೆ ಅಚ್ಚುಮೆಚ್ಚು. ವೀರಭದ್ರ ನಾಯಕರ ಅತಿಕಾಯ, ಶಿರಿಯಾರ ಮಂಜು ನಾಯ್ಕರ ದೇವವ್ರತ, ಕೊರ್ಗು ಹಾಸ್ಯಗಾರರ ಬಾಹುಕ, ಹಳ್ಳಾಡಿ ಮಂಜಯ್ಯ ಶೆಟ್ಟರ ಋತುಪರ್ಣ, ಉಡುಪಿ ಬಸವನವರ ಚಿತ್ರಸೇನ, ಕೊಕ್ಕರ್ಣೆ ನರಸಿಂಹನವರ ಶಶಿಪ್ರಭೆ, ಹಾರಾಡಿ ರಾಮನವರ ಹಿರಣ್ಯಕಶ್ಯಪು, ಕರ್ಣ, ಜಾಂಬವ, ಕುಷ್ಟ ಗಾಣಿಗರ ಪುಷ್ಕಳ ಅರ್ಜುನ ನಾರಾಯಣ ಗಾಣಿಗರ ಕಯಾದು, ಕೃಷ್ಣ ಮುಂತಾದ ಪಾತ್ರಗಳನ್ನು ರಂಗದಲ್ಲಿ ಕುಣಿಸಿದ ತೃಪ್ತಿ ಇವರಿಗಿದೆ.
ಜೋಡಾಟದಲ್ಲಿಯೂ ನಿಷ್ಣಾತರಾದ ಇವರು ವಿಪರ್ಯಾಸವೆಂಬಂತೆ ತಮ್ಮಗುರು ಉಪ್ಪೂರರ ಎದುರಿಗೆ ಪದ್ಯ ಹೇಳಬೇಕಾಗಿ ಬಂದಿದ್ದು ವಿಶೇಷ ಅಲ್ಲಿಯೂ ಸಹ ಗುರುವಿನಿಂದ ಸೈ ಎಣಿಸಿಕೊಂಡ ಇವರು ಇಂದಿಗೂ ಸಹ ಎಲೆಮರೆಯ ಕಾಯಿಯಂತೆ ತಮ್ಮ ಕಂಠಸಿರಿಯನ್ನು ವಿಕೃತಗೊಳಿಸದೆ ಲಯಬದ್ದವಾಗಿ ಹಾಡಬಲ್ಲರು. ಸರಿ ಸುಮಾರು ಅರ್ದ ಶತಮಾನಗಳ ಕಾಲ ಬಯಲುಗದ್ದೆಯ ನಾಲ್ಕು ಕಂಬದ ನಡುವೆ ಬಡಗುತಿಟ್ಟನ್ನು ಶ್ರೀಮಂತಗೊಳಿಸಿದ ಶೆಟ್ಟರ ಖಾಸಗಿ ಬದುಕು ಮಾತ್ರ ಶ್ರಿಮಂತವಾಗಲಿಲ್ಲ ಎನ್ನುವುದೆ ದೌರ್ಬಾಗ್ಯ.
ನರಸಿಂಹ ಶೆಟ್ಟರನ್ನು ಹುಡುಕಿಕೊಂಡು ಬಂದ ಸನ್ಮಾನ ಪ್ರಶಸ್ತಿಗಳು ಹಲವಾರು.ಉಡುಪಿ ಯಕ್ಷಗಾನಕಲಾರಂಗದಲ್ಲಿ ದಿ.ಉಪ್ಪೂರರ ಬಂದುಗಳು ಸ್ಥಾಪಿಸಿದ ಪ್ರಥಮ ವರ್ಷದ ಪ್ರಶಸ್ತಿ ಇವರಿಗೆ ಸಂದಿದೆ. ಸೀತಾನದಿ ಪ್ರಶಸ್ತಿ. ಕುಂದಾಪುರದ ಎಂ.ಎಂ.ಹೆಗ್ಡೆ ಪ್ರಶಸ್ತಿ. ಬಣ್ಣದ ಸಕ್ಕಟ್ಟು ಪ್ರತಿಷ್ಟಾನದ ಪ್ರಶಸ್ತಿ ಅಲ್ಲದೆ ಕಳೆದ ಸಾಲಿನ ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ದಯಾನಂದ ಪೈ ಸತೀಶ ಪೈ ಅದ್ಯಯನ ಪೀಠದ ವತಿಯಿಂದ ನೀಡಲ್ಪಡುವ ಪ್ರತಿಷ್ಟಿತ ಯಕ್ಷ ಮಂಗಳ ಪ್ರಶಸ್ತಿ ಇವರಿಗೆ ಸಂದಿದೆ.

ಮಣಿಪಾಲ, ಪೋನ್ 9449367729
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
