ಕುಮಾರವ್ಯಾಸ ಭಾರತ ಮತ್ತು ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’ದ ಇನ್ನೆರಡು ಪದ್ಯಗಳನ್ನು ಗಮನಿಸಿ.
ಕುಮಾರವ್ಯಾಸ ಭಾರತ:
ಕೊಂದು ದನುಜನ ಪೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನ ಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆ ಯೆಂದುದು ನೆರೆದ ಪೌರಜನ
ಯಕ್ಷಗಾನ ಪ್ರಸಂಗ ‘ದ್ರೌಪದೀ ಸ್ವಯಂವರ’:
ಮಡುಹಿ ದೈತ್ಯನ ಹೆಣನ ಬಂಡಿಯ |
ಕಡೆಗೆ ಬಂಧಿಸಿ ತಂದು ಬಿಸುಟಿದ |
ನೊಡನೆ ಪುರಬಾಹೆಯಲಿ ಜನತತಿಯ್ಯದೆ ಬೆರಗಾಗಿ ||
ಎಡೆಬಿಡದೆ ನಡೆತಂದು ಕಾಣುತ |
ಪೊಡವಿಯಮರರು ಧನ್ಯ ನಿನ್ನನು |
ಪಡೆದ ತಾಯಿ ಕೃತಾರ್ಥೆಯೆಂದರು ಭೀಮಸೇನನೊಳು||
ಈ ಎರಡು ಪದ್ಯಗಳ ಪೂರ್ವಾರ್ಧಗಳಲ್ಲಿ ಸಾಹಿತ್ಯದ ಆಂಶಿಕ ಹೋಲಿಕೆಯಿರುವುದನ್ನು ಗಮನಿಸಬಹುದು. ಇದು ಮೇಲೆ ಹೇಳಿದಂತೆ ಸಹಜವಾಗಿ ಬಂದಿರುವ ಹೋಲಿಕೆಯಾಗಿರಬಹುದು ಎಂದೆನಿಸುತ್ತದೆ.
ಕುಮಾರವ್ಯಾಸ ಭಾರತದ ಕಾವ್ಯ ಸೌಂದರ್ಯದಲ್ಲಿ ಶೃಂಗಾರ ರಸದ ಮುಖ್ಯ ವರ್ಣನೆಯ ಭಾಗ ಇರುವುದು ಆದಿಪರ್ವದ ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ. ದ್ರೌಪದಿಯ ಸೌಂದರ್ಯ ಹಾಗೂ ಅವಳು ಶೃಂಗರಿಸಿಕೊಳ್ಳುವ ರೀತಿಯ ಅತಿ ಸುಂದರವಾದ ವರ್ಣನೆ ಈ ಭಾಗದಲ್ಲಿದೆ.
ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ ರಾಜಾಧಿರಾಜರುಗಳಿಗೆ ಪಣವಾಗಿದ್ದ ಮತ್ಸ್ಯಯಂತ್ರವನ್ನು ಭೇದಿಸುವಲ್ಲಿ ಮಾಗಧ, ಶಿಶುಪಾಲ, ಮಾದ್ರೇಶ, ಕರ್ಣಾದಿಗಳು ಸೋತ ನಂತರ ಬಲರಾಮನು ಧನುವನ್ನು ಮುರಿದು ಮತ್ಸ್ಯಯಂತ್ರವನ್ನು ಭೇದಿಸುವನೆಂದು ಅತ್ಯುತ್ಸಾಹದಿಂದ ಮುಂದೆ ಬರುವ ಸಂದರ್ಭ ಕುಮಾರವ್ಯಾಸ ಭಾರತದಲ್ಲಿ ಹೀಗೆ ವರ್ಣಿಸಲಾಗಿದೆ.
ಕೃತಕ ಧನುವನು ಮುರಿದು ದ್ರುಪದನ |
ಸುತೆಯ ಮುಂದಲೆವಿಡಿದು ತಹೆನು |
ದ್ಭುತನಲಾ ಪಾಂಚಾಲನೆನು ತಿಳಿದನು ವರಾಸನವ ||
ಅದೇ ಸಂದರ್ಭ, ಯಕ್ಷಗಾನ ಪ್ರಸಂಗದ ಪ್ರತಿಯಲ್ಲಿ ಏಕತಾಳದಲ್ಲಿ ಹೀಗೆ ಪ್ರಸ್ತುತಿಪಡಿಸಲಾಗಿದೆ.
ಕೃತಕದ ಚಾಪವ ಮುರಿದು | ನೃಪ | ಸುತೆಯನು ಮುಂದಲೆವಿಡಿದು ಖತಿಯಿಂದೆಳೆತಹೆನೀಗ | ಲೆ | ನ್ನುತ ನೀಲಾಂಬರನಾಗ ||
ಮುಂದೆ ಇದೇ ಸಂದರ್ಭದ ಮುಂದುವರಿದ ಭಾಗದಲ್ಲಿ ಭೂಪಾಲರೆಲ್ಲರು ಧನುವ ಹೆದೆಯೇರಿಸಿ ಮತ್ಸ್ಯಯಂತ್ರವನ್ನು ಭೇದಿಸಲಾಗದೆ ಹಿಮ್ಮೆಟ್ಟುತ್ತಾರೆ. ಆಗ ಭೋಜನ, ದಕ್ಷಿಣಾದಿಗಳಿಗಾಗಿ ಬಂದ ವಿಪ್ರಸಂಕುಲವನ್ನು ಉದ್ದೇಶಿಸಿ ಧೃಷ್ಟದ್ಯುಮ್ನ ಸ್ವಯಂವರದ ಪಣವನ್ನು ಗೆಲ್ಲುವಲ್ಲಿ ಬ್ರಾಹ್ಮಣರೂ ಪ್ರಯತ್ನಿಸಬಹುದು ಎಂದು ಡಂಗುರ ಸಾರಿಸುತ್ತಾನೆ. ಆಗ ಬ್ರಾಹ್ಮಣರ ವೇಷದಲ್ಲಿ ಸಭೆಯಲ್ಲಿದ್ದ ಪಾಂಡವರಲ್ಲಿ ಮಧ್ಯಮನಾದ ಅರ್ಜುನನು ಧರ್ಮಜನ ಸೂಚನೆಯಂತೆ ಮೇಲೇಳುತ್ತಾನೆ. ಆಗ ವಿಪ್ರಸಂಕುಲವು ಆತನನ್ನು ವಿಧವಿಧವಾಗಿ ಕುಚೋದ್ಯದಿಂದ ಮಾತನಾಡಿಸುತ್ತಾರೆ.
ಕುಮಾರವ್ಯಾಸ ಭಾರತದಲ್ಲಿ,
ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲವೇ ತಾ |
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ ||
ವೈನತೇಯನ ವಿಂಗಡಿಸಿದ ವಷ |
ವೇನು ಸದರವೊ ಹಾವಡಿಗರಿಗಿ |
ದೇನು ನಿಮ್ಮುತ್ಸಾಹವೆಂದುದು ಧೂರ್ತ ವಟುನಿಕರ ||
ಎಂದು ವರ್ಣಿಸಲ್ಪಟ್ಟಿರುವ ಸಂದರ್ಭವು ಯಕ್ಷಗಾನ ಪ್ರಸಂಗದಲ್ಲಿ ಭಾಮಿನಿಯ ಬದಲು ಅಷ್ಟತಾಳದಲ್ಲಿ ಹೇಳಲ್ಪಟ್ಟಿದೆ. ಅದು ಹೀಗೆ:
ಏನು ಸಿದ್ಧಿವುಪಾಧ್ಯರೆದ್ದಿರಿ ಮಝು |
ಹೀನ ಧನುವಿಂಗಲ್ಲದೇ ತಾ |
ನೇನು ಮನದಂಗವಣಿಯೊ |
ಮಾನಿನೀಮಣಿಯನು ಬಯಸಿದಿರೆ ಮ |
ಹಾನುಭಾವರು ತಾವಸಾಧ್ಯವ | ದೇನು ತಮಗೀ ಜಗದೊಳು ||
ಮೇಲಿನ ಎರಡೂ ಪದ್ಯಗಳನ್ನು ಗಮನಿಸಿದಾಗ ಕುಮಾರವ್ಯಾಸ ಹಾಗೂ ಯಕ್ಷಗಾನ ಪ್ರಸಂಗಕರ್ತರ ರಚನೆಗಳು ಅತೀವ ಸಾಮ್ಯತೆಯಿಂದ ಕೂಡಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಮಾತ್ರವಲ್ಲದೆ ಯಕ್ಷಗಾನ ಸಾಹಿತ್ಯಕ್ಕೂ ಕುಮಾರವ್ಯಾಸನ ಕೊಡುಗೆ ಅನನ್ಯವಾದದ್ದು. ಅಂತಹ ಸುಂದರ ಸುಲಲಿತವಾದ ಕೃತಿ ಅನ್ಯಾದೃಶ.
ಮುಂದಿನ ಪದ್ಯ ಕುಮಾರವ್ಯಾಸ ಭಾರತದಲ್ಲಿ
ಮದುವೆ ಬೇಕೇ ಶ್ರೋತ್ರೀಯ ಸ್ತೋ |
ವಂದಲಿ ಕನ್ಯಾರ್ಥಿಗಳು ನಾವೆಂ |
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ |
ಮದುವೆಯಹುದಿದು ಸೌಖ್ಯ ಪುಣ್ಯ |
ಪ್ರದವು ಭೂದೇವರಿಗೆ ನೀ ನೆನೆ |
ದುದು ಭಗೀರಥ ಯತ್ನವೆಂಬುದು ಭೂಸುರವ್ರಾತ ||
ಎಂದು ಇದೆ. ಇದೇ ಪದ್ಯ ಯಕ್ಷಗಾನ ಪ್ರಸಂಗದಲ್ಲಿ ಮೊದಲಿನಂತೆಯೇ ಅಷ್ಟತಾಳದಲ್ಲಿ,
ಮದುವೆ ಬೇಕನೆ ಶ್ರೋತ್ರಿಯ ವಿಪ್ರವ |
ರ್ಗದಲಿ ಕನ್ಯಾರ್ಥಿಗಳು ನಾವೆಂ |
ದೊದಗಿರುವ ಕುಲವಿದ್ಯದಿ |
ಹೆದರದೀವುದು ನೀವು ಪರೀಕ್ಷೆಯ | ನಿದು
ಸುಖವು ನಿಮಗಲ್ಲದಿನ್ನಿರಿ |
ತಿದು ಭಗೀರಥ ಯತ್ನವು ||
ಎಂದು ರಚಿಸಲ್ಪಟ್ಟಿದೆ. ಇಲ್ಲಿ ಕೂಡಾ ಹೋಲಿಕೆಗಳನ್ನು ಗಮನಿಸಬಹುದು.
ಈ ಪಣ ಬ್ರಾಹ್ಮಣರಿಗೆ ಉಚಿತವಾದದ್ದಲ್ಲ ಎಂದು ಬ್ರಹ್ಮಸಭೆಯಲ್ಲಿ ತಾವು ತಾವೇ ಮಾತನಾಡುವ ಸನ್ನಿವೇಶಗಳನ್ನು ಕುಮಾರವ್ಯಾಸ ಕುತೂಹಲಕಾರಿಯಾಗಿ ತನ್ನ ಮುಂದಿನ ಪದ್ಯದಲ್ಲಿ ಚಿತ್ರಿಸುತ್ತಾನೆ.
ಕೆಲರು ಹೋಗದಿರೆಂದು ಜರೆದರು |
ಕೆಲರು ತಾನೇ ಬಲ್ಲೆನೆಂದರು |
ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು ||
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಾಕಾರನೀತಂ
ಗಳಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ ||
ದ್ರೌಪದೀ ಸ್ವಯಂವರ ಪ್ರಸಂಗ ಪುಸ್ತಕವೊಂದರಲ್ಲಿ ಇದೇ ಪದ್ಯವು ವಾರ್ಧಕ ಷಟ್ಪದಿಯಲ್ಲಿದೆ.
ಕೆಲರೆಂದರೆಲವೊ ಹೋಗದಿರೆನುತ ಮೇಣು ಕೆಲ |
ರೊಲಿದು ತಾನೇ ಬಲ್ಲೆನೆಂದರದರೊಳ್ ಕೆಲರು |
ಸಲೆ ವಿಪ್ರಕುಲಕಾದುದವಮಾನವೆಂದರ್ ಕೆಲರ್ ತಪ್ಪೇನೆಂದರು ||
ಕೆಲರು ಭದ್ರಾಂಗನುರು ಭಾಗ್ಯಮುಖನೀತ ನಿಂ |
ಗಳುಕುವುದು ಧನುವೆಂದು ಪೇಳುತಿಹ ಬ್ರಹ್ಮಸಭೆ |
ಯೊಳು ಮೆಲ್ಲ ಮೆಲ್ಲನೈತರುತಿರ್ದನೇನೆಂಬೆನಾ ಸವ್ಯಸಾಚಿಯಂದು ||
ಮೇಲಿನ ಎರಡೂ ಪದ್ಯಗಳೂ ಷಟ್ಪದಿಗಳಲ್ಲಿವೆ. ಕುಮಾರವ್ಯಾಸನದು ಭಾಮಿನಿಯೆಂದು ಎಲ್ಲರಿಗೂ ತಿಳಿದಿರುವ ವಿಚಾರವಾದರೆ ಯಕ್ಷಗಾನದ ಪದ್ಯ ವಾರ್ಧಕ ಷಟ್ಪದಿಯಲ್ಲಿದೆ.
(ಮುಂದುವರಿಯುವುದು)
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

