ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ
ರಾವಣಾಸುರ ಮಥನ ಶ್ರವಣ ಸು
ಧಾವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ
ಕುಮಾರವ್ಯಾಸ ಭಾರತದ ಈ ಪದ್ಯವನ್ನು ಪ್ರಸಂಗದ ಆರಂಭದಲ್ಲಿ ಭಾಗವತರಲ್ಲಿ ಕೆಲವರು ಅಪರೂಪವಾಗಿ ಹಾಡಿರಬಹುದು. ಕವಿ ಕುಮಾರವ್ಯಾಸ ಬರೆದ ಕರ್ಣಾಟ ಭಾರತ ಕಥಾಮಂಜರಿ ಅಥವಾ ಕುಮಾರವ್ಯಾಸ ಭಾರತವು ಈ ಪದ್ಯದಿಂದಲೇ ಆರಂಭವಾಗುತ್ತದೆ. ಕುಮಾರವ್ಯಾಸನ ಭಾಮಿನಿಗಳಿಗೂ ಯಕ್ಷಗಾನ ಪ್ರಸಂಗಗಳ ಭಾಮಿನಿಗಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಯಕ್ಷಗಾನ ಕವಿಗಳು ಕುಮಾರವ್ಯಾಸನಿಂದ ಪ್ರೇರಣೆ ಹೊಂದಿದಂತೆ ತೋರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಯಕ್ಷಗಾನ ಪ್ರಸಂಗಗಳಲ್ಲಿ ಕುಮಾರವ್ಯಾಸ ಭಾರತದ ಭಾಮಿನಿ ಪದ್ಯಗಳನ್ನು ಬಹುತೇಕ ಮೂಲ ಸ್ವರೂಪದಲ್ಲಿಯೇ ಬಳಸಿಕೊಂಡಿರುವುದೂ ಉಂಟು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕಥೆಯ ದಾರಿ ಒಂದೇ ರೀತಿಯದಾದರೂ ನಿರ್ದಿಷ್ಟ ಕವಿಗಳ ಸಾಹಿತ್ಯವು ಕೃತಿ ರಚನೆಯ ಸಂದರ್ಭದಲ್ಲಿ ಪ್ರಭಾವ ಬೀರುವುದನ್ನು ಅಲ್ಲಗಳೆಯಲಾಗದು. ನವರಸಗಳ ಮತ್ತು ಅವುಗಳ ಅಂಗಗಳಾದ ಭಾವಗಳ ನಿರೂಪಣೆಯಲ್ಲಿ ಕುಮಾರವ್ಯಾಸನು ಅಸಾಧಾರಣ ಶಕ್ತಿಯನ್ನು ಹೊಂದಿದ್ದರೂ ಅವನ ಕಾವ್ಯವು ಅತಿ ಸುಂದರ, ಸರಳ ಹಾಗೂ ಸಾಮಾನ್ಯರಿಗೂ ಅರ್ಥ ಮಾಡಿಕೊಳ್ಳಲು ಕಷ್ಟವಲ್ಲದ ನಿರೂಪಣಾ ಶೈಲಿಯಾದದ್ದರಿಂದ ಅವನ ಕಾವ್ಯವು ಇತರ ಕವಿಗಳ ಸಾಹಿತ್ಯದ ಮೇಲೆ ಪ್ರಭಾವವನ್ನು ಬೀರಿದುವು ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಯಕ್ಷಗಾನ ಪ್ರಸಂಗ ಸಾಹಿತ್ಯದ ರಚನೆಯಲ್ಲಿಯೂ ಕೂಡಾ ಕುಮಾರವ್ಯಾಸ ಭಾರತ ಪ್ರಭಾವ ಬೀರಿರುವುದನ್ನು ಕಾಣಬಹುದು.
ಮಹಾಭಾರತ ಕಥೆಯ ಅನೇಕ ಯಕ್ಷಗಾನ ಪ್ರಸಂಗಗಳನ್ನು ಅದರಲ್ಲೂ ವಿಶೇಷವಾಗಿ ಭಾಮಿನೀ ಪದ್ಯಗಳನ್ನು ಅವಲೋಕಿಸಿದಾಗ ನಮಗೆ ಈ ಅಂಶ ಮನದಟ್ಟಾಗುತ್ತದೆ. ಉದಾಹರಣೆಗೆ ಕುಮಾರವ್ಯಾಸ ಭಾರತದ ಕರ್ಣ ಪರ್ವದಲ್ಲಿ ಬರುವ ಪದ್ಯವನ್ನು ಗಮನಿಸಿ.
ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯ ದೀಕ್ಷಾ ವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ
ಇದೇ ಸಂದರ್ಭ, ಯಕ್ಷಗಾನದಲ್ಲಿ ಕರ್ಣಾರ್ಜುನ ಪ್ರಸಂಗದಲ್ಲಿ ಕರ್ಣನು ಶಲ್ಯನಿಗೆ ಹೀಗೆ ಹೇಳುತ್ತಾನೆ.
ಏನು ಸಾರಥಿ ಸರಳು ಪಾಂಡವ | ಸೇನೆಯನು ಗೆಲಲಹುದೆ ಪಾರ್ಥನ | ಮಾನಿನಿಗೆ ವೈಧವ್ಯ ದೀಕ್ಷಾ ವಿಧಿಯ ಕೊಡಬಹುದೆ || ಆನಲಮ್ಮುವರುಂಟೆ ನಿನಗಿದು | ಸಾನುರಾಗವೆ ಪೇಳೆನಲು ರವಿ| ಸೂನುವಿನ ಮೊಗನೋಡಿ ಮಾದ್ರಾಧೀಶ ನಿಂತೆಂದ ||
ಇಲ್ಲಿ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಕೆಲವೇ ಶಬ್ದಗಳ ಅಂತರ ಅಷ್ಟೇ.
(ಮುಂದುವರಿಯುವುದು)
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

