ಸಮಾಜದಲ್ಲಿ ಸೂಕ್ತ ವ್ಯಕ್ತಿಗಳನ್ನು ನಾವು ಕೆಲವೊಮ್ಮೆ ಗುರುತಿಸಬೇಕಾದ ಸಮಯದಲ್ಲಿ ಗುರುತಿಸದೆ ಇರುತ್ತೇವೆ. ಆದರೆ ಅವರು ನಮ್ಮನ್ನು ಅಗಲಿದಾಗ ಅವರ ಇರುವಿಕೆಯ ನಿಜವಾದ ಬೆಲೆ ನಮಗೆ ಅರಿವಾಗುತ್ತದೆ. ಇದು ನಮ್ಮ ಸಮಾಜದ ಮತ್ತು ಬದುಕಿನ ವಿಚಿತ್ರ ಸತ್ಯ. ಇತ್ತೀಚೆಗೆ ನಮ್ಮನ್ನು ಅಗಲಿದ ಬದುಕಿನ ನಿಜವಾದ ಶ್ರಮಜೀವಿ ಸರಸ್ವತಿ ಭಟ್ ಅವರ ನೆನಪಾದಾಗಲೆಲ್ಲಾ ಈ ವಿಚಾರ ಖಂಡಿತವಾಗಿ ಮನಸ್ಸನ್ನು ಕಾಡದೆ ಇರಲಾರದು. ಅವರ ಸಾವು ಆಕಸ್ಮಿಕ ಘಟನೆ. ಆದರೆ ಸಾಯಬೇಕಾದ ವಯಸ್ಸು ಖಂಡಿತಾ ಅಲ್ಲ.
ನೀವು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಎಲ್ಲಾ ಸಾಂಸ್ಕೃತಿಕ ಮತ್ತು ಕಲಾ ಪ್ರದರ್ಶನಗಳ ಸಮಾರಂಭಗಳಿಗೆ ಭೇಟಿ ನೀಡುವ ಅಭ್ಯಾಸವನ್ನು ಇಟ್ಟಿಕೊಂಡಿರುವವರಾಗಿದ್ದರೆ ಸರಸ್ವತಿ ಭಟ್ ಅವರ ಮುಖ ಪರಿಚಯ ನಿಮಗೆ ಇರಲೇಬೇಕು. ಪ್ರವೇಶ ದ್ವಾರದಲ್ಲಿ ಅಥವಾ ಅನತಿ ದೂರದಲ್ಲಿಯೋ ನಿಮಗೆ ಸರಸ್ವತಿಯವರ ಪುಸ್ತಕ ಮತ್ತು ವಿವಿಧ ಯಕ್ಷಗಾನವೇ ಮೊದಲಾದ ಕಾರ್ಯಕ್ರಮಗಳ ಧ್ವನಿಮುದ್ರಿಕೆಗಳ (ಸಿ.ಡಿ) ಸ್ಟಾಲ್ ಒಂದು ಕಾಣಸಿಗುತ್ತದೆ. ಆ ಸ್ಟಾಲ್ ಒಡತಿಯೇ ಸರಸ್ವತಿ ಭಟ್. ನಾವು ಅಂತಹ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲಾ ನಮ್ಮನ್ನು ಸ್ವಾಗತಿಸುವುದು ಆಯೋಜಕರಲ್ಲ. ಬದಲಾಗಿ ತನ್ನ ಪುಸ್ತಕ ಮಳಿಗೆಯಲ್ಲಿ ಕುಳಿತ ಸರಸ್ವತಿ ಭಟ್ ಅವರ ಮುಗುಳುನಗು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಇವರ ಪತಿ ಕೃಷ್ಣ ಭಟ್ಟರು ‘ಪಂಕಜ್ ಮ್ಯೂಸಿಕ್ಸ್’ ಎಂಬ ಹೆಸರಿನಲ್ಲಿ ಮೊದಲು ಕ್ಯಾಸೆಟ್ ನಿರ್ಮಾಣ ಮತ್ತು ಮಾರಾಟ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸತಿಪತಿಯರಿಬ್ಬರೂ ಇದರ ಸಮಗ್ರ ನಿರ್ವಹಣೆಯನ್ನು ಹೊತ್ತಿದ್ದರು. ಆಮೇಲೆ ಸಿ.ಡಿ. ಯುಗ ಬಂದಾಗ ಹಲವಾರು ಪ್ರಸಿದ್ಧ ಯಕ್ಷಗಾನ ಕಲಾವಿದರನ್ನುಒಟ್ಟುಗೂಡಿಸಿ ಸಿ.ಡಿ. ನಿರ್ಮಾಣದ ಸಾಹಸಕ್ಕೂ ಕೈ ಹಾಕಿದ್ದರು. ನೀವು ಅವರ ಮಳಿಗೆಯಿಂದ ಸಿ.ಡಿ ಅಥವಾ ಪುಸ್ತಕಗಳನ್ನು ಕೊಂಡುಕೊಳ್ಳುತ್ತೀರೋ ಅಥವಾ ಇಲ್ಲವೋ ಎನ್ನುವುದು ಆಮೇಲಿನ ವಿಚಾರ. ಆದರೆ ತನ್ನ ಮುಖದತ್ತ ದೃಷ್ಟಿ ಹಾಯಿಸಿದವರ ಮೇಲೆ ಒಂದು ಪರಿಚಯದ, ಸ್ನೇಹದ ಮುಗುಳ್ನಗೆ ಬೀರುವುದರಲ್ಲಿ ಸರಸ್ವತಿಯವರು ಎಂದೂ ಜಿಪುಣತನವನ್ನು ತೋರಿಸಿದವರಲ್ಲ. ಅವರದು ಬಹಳ ಕಷ್ಟಕರವಾದ ಕಾಯಕ ಎಂದು ನನಗೆ ಅವರನ್ನು ನೋಡಿದಾಗಲೆಲ್ಲಾ ಅನಿಸುತ್ತಿತ್ತು. ಪುಸ್ತಕ, ಸಿ.ಡಿ. ಗಳ ಕಟ್ಟುಗಳನ್ನು ಸ್ವತಃ ತಾವೇ ಸಾಗಿಸುತ್ತಿದ್ದ ಶ್ರಮಜೀವಿ ಅವರು. ಯಕ್ಷಗಾನ ಸಹಿತ ಕಲಾಸೇವೆ ಮಾಡಿದವರನ್ನು ಗುರುತಿಸುವಾಗ ನಾವು ಕಲಾವಿದರು, ನೇಪಥ್ಯ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳು, ಆಯೋಜಕರು, ಸಂಘಟಕರು ಎಂದೆಲ್ಲಾ ಹೆಸರಿಸುತ್ತೇವೆ. ಆದರೆ ಸದ್ದಿಲ್ಲದೇ ಕಲಾಸೇವೆ ಮಾಡುವ ಸರಸ್ವತಿಯಂತಹವರು ಯಾಕೋ ಹಿಂದೆಯೇ ಉಳಿದುಬಿಡುತ್ತಾರೆ.
ಅವರದೂ ಒಂದು ರೀತಿಯ ಕಲಾಸೇವೆಯೇ. ಆದರೆ ಗುರುತಿಸುವ ಕಣ್ಣುಗಳಿಲ್ಲ. ಮುನ್ನೆಲೆಗೆ ಬಾರದೆ ಕತ್ತಲೆಯಲ್ಲಿಯೇ ಉಳಿದುಬಿಡುತ್ತಾರೆ. ಒಂದೆರಡು ಬಾರಿ ಅವರಿಂದ ಸಿ.ಡಿ ಖರೀದಿಸಿದ್ದೆ. ಆಮೇಲೆ ಖರೀದಿಸದೆ ಇದ್ದರೂ ನಗು, ಮಾತುಗಳ ವಿನಿಮಯಕ್ಕೇನೂ ಕೊರತೆಯಿರಲಿಲ್ಲ. ಕೆಲವೊಂದು ಖಾಲಿಯಾದ ಸ್ಥಾನಗಳು ಶೂನ್ಯವಾಗಿಯೇ ಉಳಿದುಬಿಡುತ್ತದೆ. ಸರಸ್ವತಿ ಭಟ್ ಅಕಾಲಿಕ ಅಗಲುವಿಕೆಯು ನೋವನ್ನು ತರುವ ವಿಚಾರ. ಪ್ರತಿಯೊಂದು ಪ್ರದರ್ಶನಗಳಿಗೆ ಹೋದಾಗಲೆಲ್ಲಾ ಅವರ ಮಳಿಗೆಯಿರುವ ಸ್ಥಾನಕ್ಕೊಮ್ಮೆ ಕಣ್ಣು ಹಾಯಿಸದೇ ಇರಲಾರೆವು. ನಿನ್ನೆ ನಡೆದ ಯಕ್ಷಗಾನದ ಪ್ರದರ್ಶನವೊಂದಕ್ಕೆ ಹೋಗಿದ್ದೆ. ಯಥಾಪ್ರಕಾರ ಕಣ್ಣುಗಳು ಸರಸ್ವತಿ ಭಟ್ ಅವರ ಪುಸ್ತಕದ ಸ್ಟಾಲ್ ಹುಡುಕಿತು. ಆದರೆ ಅದು ಮತ್ತೆ ಕಾಣಸಿಗಲಿಲ್ಲ. ಮಾತ್ರವಲ್ಲ ಇನ್ನೆಂದೂ ಕಾಣಲಾರೆವು ಎಂಬ ಕಟುಸತ್ಯ ಅರಿವಿಗೆ ಬಂದು ಮನಸ್ಸು ವಿಷಾದದಿಂದ ಮುದುಡಿತು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
