ಸಮಾಜದಲ್ಲಿ ಸೂಕ್ತ ವ್ಯಕ್ತಿಗಳನ್ನು ನಾವು ಕೆಲವೊಮ್ಮೆ ಗುರುತಿಸಬೇಕಾದ ಸಮಯದಲ್ಲಿ ಗುರುತಿಸದೆ ಇರುತ್ತೇವೆ. ಆದರೆ ಅವರು ನಮ್ಮನ್ನು ಅಗಲಿದಾಗ ಅವರ ಇರುವಿಕೆಯ ನಿಜವಾದ ಬೆಲೆ ನಮಗೆ ಅರಿವಾಗುತ್ತದೆ. ಇದು ನಮ್ಮ ಸಮಾಜದ ಮತ್ತು ಬದುಕಿನ ವಿಚಿತ್ರ ಸತ್ಯ. ಇತ್ತೀಚೆಗೆ ನಮ್ಮನ್ನು ಅಗಲಿದ ಬದುಕಿನ ನಿಜವಾದ ಶ್ರಮಜೀವಿ ಸರಸ್ವತಿ ಭಟ್ ಅವರ ನೆನಪಾದಾಗಲೆಲ್ಲಾ ಈ ವಿಚಾರ ಖಂಡಿತವಾಗಿ ಮನಸ್ಸನ್ನು ಕಾಡದೆ ಇರಲಾರದು. ಅವರ ಸಾವು ಆಕಸ್ಮಿಕ ಘಟನೆ. ಆದರೆ ಸಾಯಬೇಕಾದ ವಯಸ್ಸು ಖಂಡಿತಾ ಅಲ್ಲ.
ನೀವು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಎಲ್ಲಾ ಸಾಂಸ್ಕೃತಿಕ ಮತ್ತು ಕಲಾ ಪ್ರದರ್ಶನಗಳ ಸಮಾರಂಭಗಳಿಗೆ ಭೇಟಿ ನೀಡುವ ಅಭ್ಯಾಸವನ್ನು ಇಟ್ಟಿಕೊಂಡಿರುವವರಾಗಿದ್ದರೆ ಸರಸ್ವತಿ ಭಟ್ ಅವರ ಮುಖ ಪರಿಚಯ ನಿಮಗೆ ಇರಲೇಬೇಕು. ಪ್ರವೇಶ ದ್ವಾರದಲ್ಲಿ ಅಥವಾ ಅನತಿ ದೂರದಲ್ಲಿಯೋ ನಿಮಗೆ ಸರಸ್ವತಿಯವರ ಪುಸ್ತಕ ಮತ್ತು ವಿವಿಧ ಯಕ್ಷಗಾನವೇ ಮೊದಲಾದ ಕಾರ್ಯಕ್ರಮಗಳ ಧ್ವನಿಮುದ್ರಿಕೆಗಳ (ಸಿ.ಡಿ) ಸ್ಟಾಲ್ ಒಂದು ಕಾಣಸಿಗುತ್ತದೆ. ಆ ಸ್ಟಾಲ್ ಒಡತಿಯೇ ಸರಸ್ವತಿ ಭಟ್. ನಾವು ಅಂತಹ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲಾ ನಮ್ಮನ್ನು ಸ್ವಾಗತಿಸುವುದು ಆಯೋಜಕರಲ್ಲ. ಬದಲಾಗಿ ತನ್ನ ಪುಸ್ತಕ ಮಳಿಗೆಯಲ್ಲಿ ಕುಳಿತ ಸರಸ್ವತಿ ಭಟ್ ಅವರ ಮುಗುಳುನಗು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಇವರ ಪತಿ ಕೃಷ್ಣ ಭಟ್ಟರು ‘ಪಂಕಜ್ ಮ್ಯೂಸಿಕ್ಸ್’ ಎಂಬ ಹೆಸರಿನಲ್ಲಿ ಮೊದಲು ಕ್ಯಾಸೆಟ್ ನಿರ್ಮಾಣ ಮತ್ತು ಮಾರಾಟ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸತಿಪತಿಯರಿಬ್ಬರೂ ಇದರ ಸಮಗ್ರ ನಿರ್ವಹಣೆಯನ್ನು ಹೊತ್ತಿದ್ದರು. ಆಮೇಲೆ ಸಿ.ಡಿ. ಯುಗ ಬಂದಾಗ ಹಲವಾರು ಪ್ರಸಿದ್ಧ ಯಕ್ಷಗಾನ ಕಲಾವಿದರನ್ನುಒಟ್ಟುಗೂಡಿಸಿ ಸಿ.ಡಿ. ನಿರ್ಮಾಣದ ಸಾಹಸಕ್ಕೂ ಕೈ ಹಾಕಿದ್ದರು. ನೀವು ಅವರ ಮಳಿಗೆಯಿಂದ ಸಿ.ಡಿ ಅಥವಾ ಪುಸ್ತಕಗಳನ್ನು ಕೊಂಡುಕೊಳ್ಳುತ್ತೀರೋ ಅಥವಾ ಇಲ್ಲವೋ ಎನ್ನುವುದು ಆಮೇಲಿನ ವಿಚಾರ. ಆದರೆ ತನ್ನ ಮುಖದತ್ತ ದೃಷ್ಟಿ ಹಾಯಿಸಿದವರ ಮೇಲೆ ಒಂದು ಪರಿಚಯದ, ಸ್ನೇಹದ ಮುಗುಳ್ನಗೆ ಬೀರುವುದರಲ್ಲಿ ಸರಸ್ವತಿಯವರು ಎಂದೂ ಜಿಪುಣತನವನ್ನು ತೋರಿಸಿದವರಲ್ಲ. ಅವರದು ಬಹಳ ಕಷ್ಟಕರವಾದ ಕಾಯಕ ಎಂದು ನನಗೆ ಅವರನ್ನು ನೋಡಿದಾಗಲೆಲ್ಲಾ ಅನಿಸುತ್ತಿತ್ತು. ಪುಸ್ತಕ, ಸಿ.ಡಿ. ಗಳ ಕಟ್ಟುಗಳನ್ನು ಸ್ವತಃ ತಾವೇ ಸಾಗಿಸುತ್ತಿದ್ದ ಶ್ರಮಜೀವಿ ಅವರು. ಯಕ್ಷಗಾನ ಸಹಿತ ಕಲಾಸೇವೆ ಮಾಡಿದವರನ್ನು ಗುರುತಿಸುವಾಗ ನಾವು ಕಲಾವಿದರು, ನೇಪಥ್ಯ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳು, ಆಯೋಜಕರು, ಸಂಘಟಕರು ಎಂದೆಲ್ಲಾ ಹೆಸರಿಸುತ್ತೇವೆ. ಆದರೆ ಸದ್ದಿಲ್ಲದೇ ಕಲಾಸೇವೆ ಮಾಡುವ ಸರಸ್ವತಿಯಂತಹವರು ಯಾಕೋ ಹಿಂದೆಯೇ ಉಳಿದುಬಿಡುತ್ತಾರೆ.
ಅವರದೂ ಒಂದು ರೀತಿಯ ಕಲಾಸೇವೆಯೇ. ಆದರೆ ಗುರುತಿಸುವ ಕಣ್ಣುಗಳಿಲ್ಲ. ಮುನ್ನೆಲೆಗೆ ಬಾರದೆ ಕತ್ತಲೆಯಲ್ಲಿಯೇ ಉಳಿದುಬಿಡುತ್ತಾರೆ. ಒಂದೆರಡು ಬಾರಿ ಅವರಿಂದ ಸಿ.ಡಿ ಖರೀದಿಸಿದ್ದೆ. ಆಮೇಲೆ ಖರೀದಿಸದೆ ಇದ್ದರೂ ನಗು, ಮಾತುಗಳ ವಿನಿಮಯಕ್ಕೇನೂ ಕೊರತೆಯಿರಲಿಲ್ಲ. ಕೆಲವೊಂದು ಖಾಲಿಯಾದ ಸ್ಥಾನಗಳು ಶೂನ್ಯವಾಗಿಯೇ ಉಳಿದುಬಿಡುತ್ತದೆ. ಸರಸ್ವತಿ ಭಟ್ ಅಕಾಲಿಕ ಅಗಲುವಿಕೆಯು ನೋವನ್ನು ತರುವ ವಿಚಾರ. ಪ್ರತಿಯೊಂದು ಪ್ರದರ್ಶನಗಳಿಗೆ ಹೋದಾಗಲೆಲ್ಲಾ ಅವರ ಮಳಿಗೆಯಿರುವ ಸ್ಥಾನಕ್ಕೊಮ್ಮೆ ಕಣ್ಣು ಹಾಯಿಸದೇ ಇರಲಾರೆವು. ನಿನ್ನೆ ನಡೆದ ಯಕ್ಷಗಾನದ ಪ್ರದರ್ಶನವೊಂದಕ್ಕೆ ಹೋಗಿದ್ದೆ. ಯಥಾಪ್ರಕಾರ ಕಣ್ಣುಗಳು ಸರಸ್ವತಿ ಭಟ್ ಅವರ ಪುಸ್ತಕದ ಸ್ಟಾಲ್ ಹುಡುಕಿತು. ಆದರೆ ಅದು ಮತ್ತೆ ಕಾಣಸಿಗಲಿಲ್ಲ. ಮಾತ್ರವಲ್ಲ ಇನ್ನೆಂದೂ ಕಾಣಲಾರೆವು ಎಂಬ ಕಟುಸತ್ಯ ಅರಿವಿಗೆ ಬಂದು ಮನಸ್ಸು ವಿಷಾದದಿಂದ ಮುದುಡಿತು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ