Saturday, October 5, 2024
Homeಯಕ್ಷಗಾನಅಂದದ ನಾಟ್ಯ, ಸೊಗಸಾದ ದಿಗಿಣಗಳ ಪುಂಡುವೇಷಧಾರಿ ವಿನೋದ್ ರೈ ಸೊರಕೆ 

ಅಂದದ ನಾಟ್ಯ, ಸೊಗಸಾದ ದಿಗಿಣಗಳ ಪುಂಡುವೇಷಧಾರಿ ವಿನೋದ್ ರೈ ಸೊರಕೆ 

ಪುತ್ತೂರು ತಾಲೂಕು ಬನ್ನೂರು ಆನೆಮಜಲು ಶ್ರೀ ವಿನೋದ್ ರೈಗಳ ಹುಟ್ಟೂರು. ಶ್ರೀ ನಾರಾಯಣ ರೈ, ಶ್ರೀಮತಿ ಸರಸ್ವತಿ ನಾರಾಯಣ ರೈ ದಂಪತಿಗಳಿಗೆ ಮಗನಾಗಿ 1968 ಮಾರ್ಚ್ 15ರಂದು ಜನಿಸಿದರು. ಹಾರಾಡಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ವನ್ನು ಪೂರೈಸಿದರು. ಎಳವೆಯಲ್ಲೇ ಯಕ್ಷಗಾನದಲ್ಲಿ ಇವರಿಗೆ ಅಪಾರ ಆಸಕ್ತಿ.

ಶಾಲಾ ವಿದ್ಯಾರ್ಥಿಯಾಗಿದ್ದಾಗ ರಜಾದಿನಗಳಲ್ಲಿ ಆಸುಪಾಸಿನಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ಅದು ನನಗೆ ಕಲಾವಿದನಾಗಿ ರೂಪುಗೊಳ್ಳುವುದಕ್ಕೆ ಅನುಕೂಲವಾಯಿತು. ನೋಡಿ ಕಲಿಯುವುದು ಬಹಳಷ್ಟಿದೆ. ನೋಡುವ, ಕೇಳುವ, ಓದುವ, ಪ್ರಶ್ನಿಸುವ ಗುಣಗಳು ಕಲಾವಿದನಲ್ಲಿರಬೇಕು. ಸಹನೆ ಬೇಕು. ವಿನಯವೂ ಬೇಕು. ಯಾವಾತನು ಸದಾ ನೋಡುತ್ತಾ, ಕೇಳುತ್ತಾ ಪ್ರಶ್ನಿಸುತ್ತಾನೋ ಅವನ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟ ಕಮಲಪುಷ್ಪದಂತೆ ಅರಳುತ್ತದೆ ಎಂಬುದು ಶ್ರೀ ವಿನೋದ್ ರೈ ಅಭಿಪ್ರಾಯ.

ಶ್ರೀ ವಿನೋದ್ ರೈ ಸೊರಕೆ ಉತ್ತಮ ಪುಂಡುವೇಷಧಾರಿಗಳಲ್ಲಿ ಒಬ್ಬರು. ರಂಗದಲ್ಲಿ ಅಂದದ ನಾಟ್ಯ, ಹಿತಮಿತವಾದ ಮಾತುಗಳಿಂದ, ಸೊಗಸಾದ ದಿಗಿಣ. ತೆಂಕುತಿಟ್ಟಿನ ಹೆಸರಾಂತ ಹಾಸ್ಯಗಾರರಾದ ಶ್ರೀ ಪುತ್ರಕಳ ತಿಮ್ಮಪ್ಪ ಶೆಟ್ಟರಿಂದ ಶ್ರೀ ವಿನೋದ್ ರೈಗಳು ಮೊದಲು ನಾಟ್ಯವನ್ನು ಕಲಿತುದು. ಪುತ್ರಕಳ ತಿಮ್ಮಪ್ಪ ಹಾಸ್ಯಗಾರರು ಆಗ ಕುಂಬ್ರದಲ್ಲಿ (ಶ್ರೀರಾಮ ಯಕ್ಷಗಾನ ಮಂಡಳಿ) ನಾಟ್ಯ ತರಗತಿ ನಡೆಸುತ್ತಿದ್ದರು. ಶ್ರೀ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೂರನೇ ಮೇಳ ಆರಂಭವಾದಾಗ ವಿನೋದ್ ರೈಗಳು ಮೇಳಕ್ಕೆ ಸೇರಿದರು. ಆಗ ಮೇಳದ ಭಾಗವತರಾಗಿದ್ದವರು ಶ್ರೀ ಸರಪಾಡಿ ಶಂಕರನಾರಾಯಣ ಕಾರಂತರು. ಮೊದಲು ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದ ಕಾರಂತರು ಅಲ್ಲಿ ಆಡುತ್ತಿದ್ದ ಪ್ರಸಂಗಗಳನ್ನು ಕಟೀಲು ಮೇಳದಲ್ಲೂ ಆಡುವ ಮನ ಮಾಡಿದರು. ಪ್ರಸಂಗಗಳ ಮಾಹಿತಿ ಸಿಗಲು ಇದು ನನಗೆ ಪ್ರಯೋಜನವಾಯಿತು ಎಂದು ವಿನೋದ್ ರೈಗಳು ಅಂದಿನ ದಿನಗಳನ್ನು ನೆನಪಿಸುತ್ತಾರೆ.
             

ತದನಂತರ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ನಾಟ್ಯ ಕಲಿತು ಗುರುದ್ವಯರ ಮೆಚ್ಚುಗೆಗೆ ಪಾತ್ರರಾದರು. ಕಟೀಲು ಮೇಳದಲ್ಲಿ ನಿರಂತರ ಆರು ವರ್ಷ ತಿರುಗಾಟ ನಡೆಸಿ, ಶ್ರೀ ಕುರಿಯ ಗಣಪತಿ ಶಾಸ್ತ್ರಿ, ಶ್ರೀ ನಿಡ್ಲೆ ನರಸಿಂಹ ಭಟ್, ಶ್ರೀ ದಿವಾಣ ಭೀಮ ಭಟ್ಟ, ಕೇದಗಡಿ ಗುಡ್ಡಪ್ಪ ಗೌಡ ಮೊದಲಾದವರ ನಿರ್ದೇಶನದಲ್ಲಿ ಪಕ್ವರಾದರು. ಸಹಕಲಾವಿದರಾಗಿ ಶ್ರೀ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಶ್ರೀ ಉಮೇಶ್ ಹೆಬ್ಬಾರ್ ಮೊದಲಾದವರ ಒಡನಾಟವೂ ವಿನೋದರಿಗೆ ಸಿಕ್ಕಿತ್ತು.

ಬಾಲಗೋಪಾಲ, ಪೀಠಿಕಾ ಸ್ತ್ರೀವೇಷಗಳನ್ನು ಪೂರ್ವರಂಗದಲ್ಲಿ ನಿರ್ವಹಿಸುತ್ತಾ, 3ನೇ ತಿರುಗಾಟದಲ್ಲಿ ಅಭಿಮನ್ಯು, ಚಂಡಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳನ್ನು ಮಾಡುವ ಭಾಗ್ಯ ಇವರಿಗೆ ಒದಗಿತು. 4ನೇ ವರುಷ ಪುಂಡುವೇಷದ ಸ್ಥಾನವೂ ಒಲಿಯಿತು. ಆದರೆ ಅನಿವಾರ್ಯ ಕಾರಣಗಳಿಂದ ಕೆಲಸಮಯ ವೃತ್ತಿಜೀವನದಿಂದ ಶ್ರೀ ವಿನೋದರು ದೂರ ಉಳಿಯಬೇಕಾಗಿ ಬಂತು. ಮತ್ತೆ ಪುತ್ತೂರು ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಕಾಂತಾವರ ಮೇಳದಲ್ಲಿ 2 ವರುಷ ತಿರುಗಾಟ ಮಾಡಿ ಪ್ರಸಿದ್ಧ ಕಲಾವಿದ ಶ್ರೀ ಡಿ. ಮನೋಹರ ಕುಮಾರ್ ಸಂಚಾಲಕರಾಗಿದ್ದ ಕದ್ರಿ ಮೇಳದಲ್ಲಿ 12 ವರ್ಷ ಕಲಾಸೇವೆಯನ್ನು ಮಾಡಿ ಅವರ ಪ್ರೀತಿಗೂ ಪಾತ್ರರಾದರು.

ಶ್ರೀ ಕಿಶನ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ 1 ವರ್ಷ, ಪುತ್ತೂರು ಮೇಳ 1 ವರ್ಷ, ತಿರುಗಾಟ ನಡೆಸಿದ ಶ್ರೀ ವಿನೋದ್ ರೈಗಳು ಪ್ರಸ್ತುತ 13 ವರ್ಷಗಳಿಂದ ಬೆಂಕಿನಾಥೇಶ್ವರ, ಬಾಚಕೆರೆ, ಕೊಲ್ಲಂಗಾನ, ದೇಂತಡ್ಕ  ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ. ಸುದರ್ಶನ, ಅಭಿಮನ್ಯು, ಬಭ್ರುವಾಹನ, ಪರಶುರಾಮ, ಚಂಡಮುಂಡರು, ಲಕ್ಷ್ಮಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಅನೇಕ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ಕೊಟ್ಟವು. ಶ್ರೀ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ಜತೆಗಾರನಾಗಿ ಪಾತ್ರ ನಿರ್ವಹಿಸುತ್ತಿದ್ದುದು ವಿಶೇಷ ಅನುಭವ ಎಂದು ವಿನೋದ್ ರೈಗಳು ಹೇಳುತ್ತಾರೆ.

ಬನ್ನೂರು ಆನೆಮಜಲು ಎಂಬಲ್ಲಿ ಜನಿಸಿದರೂ ಪ್ರಸ್ತುತ ಪುತ್ತೂರು ತಾಲೂಕು ಸರ್ವೆ ಗ್ರಾಮದ ಸೊರಕೆ ಎಂಬಲ್ಲಿ ವಾಸವಾಗಿರುವ ಕಾರಣ ಇವರು ವಿನೋದ್ ರೈ ಸೊರಕೆ ಎಂದೇ ಕರೆಸಿ ಕೊಳ್ಳುತ್ತಿದ್ದಾರೆ. ಪತ್ನಿ ಸುಜಾತ, ಮನೀಶ್ ರೈ, ಧನೀಶ್ ರೈ (10ನೇ ತರಗತಿ, 6ನೇ ತರಗತಿ) ಎಂಬ ಇಬ್ಬರು ಪುತ್ರರು.

ಲೇಖನ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments