ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಎಣ್ಮಕಜೆ ಗ್ರಾಮದ ಶಿರಂತಡ್ಕ ಎಂಬಲ್ಲಿ ಗಣಪತಿ ಪುಣಿಂಚತ್ತಾಯ ಮತ್ತು ಶ್ರೀಮತಿ ಗೀತಾ ದಂಪತಿಗಳಿಗೆ ಮಗನಾಗಿ 23-12-1971ರಂದು ಸತ್ಯನಾರಾಯಣ ಪುಣಿಂಚಿತ್ತಾಯರು ಜನಿಸಿದರು. ಇವರದು ಬಡ ಕೃಷಿ ಕುಟುಂಬ. ತಂದೆ ಗಣಪತಿ ಪುಣಿಂಚತ್ತಾಯರು ಉತ್ತಮ ಹವ್ಯಾಸಿ ಕಲಾವಿದ, ತಾಳಮದ್ದಳೆ ಅರ್ಥಧಾರಿ. ತಾಯಿ ಗೀತಾ ಅವರು ಪ್ರಸಂಗಕರ್ತ, ಹಿಮ್ಮೇಳ ಮುಮ್ಮೇಳ ಕಲಾವಿದರಾದ ಅಡೂರು ಸೂರ್ಯನಾರಾಯಣ ಕಲ್ಲೂರಾಯರ ಪುತ್ರಿ. ಹಾಗಾಗಿ ಯಕ್ಷಗಾನ ರಕ್ತಗತವಾಗಿಯೇ ಒಲಿದಿತ್ತು ಸತ್ಯನಾರಾಯಣ ಪುಣಿಂಚತ್ತಾಯರಿಗೆ.
ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ವರೇಗೆ ಓದು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಮತ್ತು ಇಲೆಕ್ಟ್ರಿಕಲ್ ವಿಚಾರಗಳು ಇವರ ಹವ್ಯಾಸವಾಗಿತ್ತು. ಬಜಕೂಡ್ಲು (ಪೆರ್ಲ ಸಮೀಪ) ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರರಾದ ಬಜಕೂಡ್ಲು ಶ್ರೀ ಕೃಷ್ಣ ಶ್ಯಾನುಬೋಗರಿಂದ (ಸುಬ್ರಾಯ ಶ್ಯಾನುಬೋಗರ ಮಗ) ಕಲಿತು ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲೇ ಪುಣಿಂಚಿತ್ತಾಯರು ತೀರ್ಥರೂಪರ ಜತೆ ಪೆರ್ಲ ಪರಿಸರದಲ್ಲಿ ರಾತ್ರಿ ನಡೆಯುತ್ತಿದ್ದ ಆಟಕೂಟಗಳಿಗೆ ಹೋಗುತ್ತಿದ್ದರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಮನೆಯಿಂದ ತೋಟಕ್ಕೆ ಹೋಗುವಾಗಲೂ ಯಕ್ಷಗಾನದ ಹಾಡುಗಳನ್ನು ಹೇಳುತ್ತಿದ್ದರು. ಮಗನ ಯಕ್ಷಗಾನಾಸಕ್ತಿಯನ್ನು ಗಣಪತಿ ಪುಣಿಂಚತ್ತಾಯರು ಪ್ರೋತ್ಸಾಹಿಸಿದರು. ಹಾಡುಗಾರಿಕೆ ಕಲಿಯಲು ವ್ಯವಸ್ಥೆಯನ್ನೂ ಮಾಡಿದರು. ಹವ್ಯಾಸೀ ಭಾಗವತರಾಗಿದ್ದ ಕೋಟೆ (ಬೊಳ್ಳುರೋಡಿ) ನಾರಾಯಣ ಭಟ್ಟರಿಂದ ಅಭ್ಯಾಸ. ಅಣ್ಣ ಸತೀಶ ಪುಣಿಂಚತ್ತಾಯರೊಡನೆ ಮನೆಯಲ್ಲಿಯೇ ಕೋಟೆ ನಾರಾಯಣ ಭಟ್ಟರಿಂದ ಭಾಗವತಿಕೆ ಅಭ್ಯಾಸ. ಸತ್ಯನಾರಾಯಣ ಪುಣಿಂಚತ್ತಾಯರ ಅಣ್ಣ ಸತೀಶ ಪುಣಿಂಚತ್ತಾಯರು ಪ್ರಸ್ತುತ ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಅಧ್ಯಾಪಕ ಮತ್ತು ಉತ್ತಮ ಹವ್ಯಾಸೀ ಭಾಗವತರು. ಹವ್ಯಾಸೀ ಆಟಕೂಟಗಳಲ್ಲಿ ಪದ್ಯ ಹೇಳಲು ಆರಂಭ. ಪೆರ್ಲ, ಸ್ವರ್ಗ, ಕಾಟುಕುಕ್ಕೆ ಮೊದಲಾದೆಡೆ ಸತ್ಯನಾರಾಯಣ ಪುಣಿಂಚತ್ತಾಯರ ಹಾಡನ್ನು ಕೇಳಿದ ಪ್ರೇಕ್ಷಕರು, ನಿನಗೆ ಒಳ್ಳೆಯ ಭವಿಷ್ಯವಿದೆ. ಮೇಳಕ್ಕೆ ಸೇರು ಎಂದು ಪ್ರೋತ್ಸಾಹಿಸಿದರಂತೆ. ಇವರಿಗೂ ತಿರುಗಾಟ ಮಾಡುವ ಆಸೆ ಇತ್ತು. ಆದರೆ ಅದಕ್ಕೆ ಅನಾನುಕೂಲವಿತ್ತು.

ಸತ್ಯನಾರಾಯಣ ಪುಣಿಂಚತ್ತಾಯರಿಗೆ ಬಡಗಿನ ಪ್ರದರ್ಶನಗಳನ್ನು ನೋಡುವ ಆಸಕ್ತಿ ಹೆಚ್ಚು. ಆಟ ನೋಡಲು ಭಟ್ಕಳದ ವರೇಗೂ ಹೋದದ್ದಿದೆ. ಬಚ್ಚಗಾರು ಮೇಳದ ‘ಚಿತ್ರಾಕ್ಷಿ ಕಲ್ಯಾಣ’ ಪ್ರಸಂಗ ನೋಡಿ ಊರಲ್ಲಿಯೂ ಮಾಡಬೇಕೆಂಬ ಆಸೆ ಚಿಗುರೊಡೆಯಿತು. ಪ್ರಸಿದ್ಧ ಕಲಾವಿದ ಕಾಟುಕುಕ್ಕೆ ಕುಂಞರಾಮ ಮಣಿಯಾಣಿಯವರ ನಿರ್ದೇಶನದಲ್ಲಿ ಅಭ್ಯಾಸ ಆರಂಭ. ಪ್ರದರ್ಶನದಲ್ಲಿ ಇಡೀ ರಾತ್ರಿ ಸತ್ಯನಾರಾಯಣ ಪುಣಿಂಚತ್ತಾಯರು ಹಾಡಿದ್ದರು. ಪ್ರದರ್ಶನವು ರಂಜಿಸಿದ ಕಾರಣ ಎಲ್ಲಾ ಕಡೆಗಳಿಂದಲೂ ಕರೆಬರಲಾರಂಭಿಸಿತು.
ಬಡಗಿನಲ್ಲಿ ಹಾಡುಗಾರಿಕೆಗಿರುವ ಅವಕಾಶ ಮತ್ತು ವೈವಿಧ್ಯತೆಗಳನ್ನು ಮೆಚ್ಚಿ ಸತ್ಯನಾರಾಯಣ ಪುಣಿಂಚತ್ತಾಯರು ಕಲಿಯುವ ಮನಮಾಡಿದರು. ಪತ್ರಿಕೆಯಲ್ಲಿ ಬಂದ ಜಾಹೀರಾತನ್ನು ನೋಡಿ ಖ್ಯಾತ ಸ್ತ್ರೀಪಾತ್ರಧಾರಿ ಆರಾಟೆ ಮಂಜುನಾಥರ ನಾಯಕತ್ವದ ಬಿದ್ಕಲ್ಕಟ್ಟೆ ಶ್ರೀ ಗಣೇಶ ಯಕ್ಷಕಲಾ ಸಂಘಕ್ಕೆ ಪ್ರವೇಶಕೋರಿ ಅಪೇಕ್ಷಾ ಪತ್ರ ಸಲ್ಲಿಸಿದರು. ಸಂದರ್ಶನಕ್ಕೆ ಕರೆಬಂತು. ಆ ಹಿಮ್ಮೇಳ ಕಲಿಕಾ ಕೇಂದ್ರಕ್ಕೆ ಹಳ್ಳಾಡಿ ಸುಬ್ರಾಯ ಮಲ್ಯರು ಮೃದಂಗ ಗುರುಗಳಾಗಿದ್ದರು. ಮನೆಯಲ್ಲಿ ಆರ್ಥಿಕ ಅಡಚಣೆ. ಕಷ್ಟಪಟ್ಟು ಹಣಹೊಂದಿಸಿ ಸಂದರ್ಶನಕ್ಕೆ ತೆರಳಿದರು. ಸಂದರ್ಶಕರಾಗಿ ವೈ. ಚಂದ್ರಶೇಖರ ಶೆಟ್ಟಿ, ಎಸ್.ವಿ. ಉದಯ ಕುಮಾರ ಶೆಟ್ಟಿ, ಸುಬ್ರಾಯ ಮಲ್ಯ, ಆರಾಟೆ ಮಂಜುನಾಥರು ಉಪಸ್ಥಿತರಿದ್ದರು. ಸತ್ಯನಾರಾಯಣ ಪುಣಿಂಚತ್ತಾಯರಲ್ಲಿ ಹಾಡಲು ಹೇಳಿದರಂತೆ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಮೊದಲು ಪಂಚವಟಿ ಪ್ರಸಂಗದ ನೋಡಿ ನಿರ್ಮಲ ಜಲ ಸಮೀಪದಿ ಎಂಬ ಪದ್ಯವನ್ನು ಹಾಡಿದಾಗಲೇ ಆಯ್ಕೆಯಾಗಿದ್ದರು! ನಂತರ ಬೇರೆ ಬೇರೆ ತಾಳಗಳಲ್ಲಿ ಹಲವು ಪದ್ಯಗಳನ್ನೂ ಹಾಡಿದರು. ಹಿಮ್ಮೇಳ ಕಲಿಕಾ ಕೇಂದ್ರದಲ್ಲಿ ಶ್ರೀ ಗೋಪಾಲ್ ವಿಠ್ಠಲ್ ಪಾಟೀಲ್ ಅವರಿಂದ ಒಂದು ವರ್ಷ ಬಡಗಿನ ಭಾಗವತಿಕೆಯ ಅಭ್ಯಾಸ. (ಜನ್ಸಾಲೆ ರಾಘವೇಂದ್ರ ಆಚಾರ್ಯ, ಹೆಬ್ರಿ ಗಣೇಶ್ ಕುಮಾರ್, ನಗರ ಸುಬ್ರಹ್ಮಣ್ಯ ಆಚಾರ್ ಕೂಡಾ ಗೋಪಾಲ್ ವಿಠ್ಠಲ್ ಪಾಟೀಲ್ ಅವರ ಶಿಷ್ಯರು). ಗೋಪಾಲ್ ವಿಠ್ಠಲ್ ಪಾಟೀಲ್ರು ಉಡುಪಿ ಕೇಂದ್ರದಲ್ಲೂ ಗುರುಗಳಾಗಿದ್ದರು. ಕೇಂದ್ರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮಂದಾರ್ತಿ 2ನೇ ಮೇಳ ಆರಂಭವಾಗಿತ್ತು.
ಮಂದಾರ್ತಿ ಮೇಳದಲ್ಲಿ ಅನೇಕ ವರ್ಷಗಳ ಕಲಾಸೇವೆಯನ್ನು ಮಾಡಿದ ಗುರು ಗೋಪಾಲ ವಿಠ್ಠಲ್ ಪಾಟೀಲ್ರ ಅಪೇಕ್ಷೆಯಂತೆ ಸಂಗೀತಗಾರನಾಗಿ ಮೇಳಕ್ಕೆ ಸೇರ್ಪಡೆ (ಅವರು ಅಪೇಕ್ಷಿಸಿದ್ದು ನನ್ನ ಭಾಗ್ಯವೂ ಹೌದು ಎಂದು ಪುಣಿಂಚತ್ತಾಯರು ಗುರುಗಳಿಗೆ ಗೌರವ ಸಲ್ಲಿಸುತ್ತಾರೆ). ಪ್ರಸಂಗದಲ್ಲೂ ಪದ್ಯ ಹೇಳಲು ಅವಕಾಶ ಸಿಗುತ್ತಿತ್ತು. ಮಂದಾರ್ತಿ ಮೇಳದಲ್ಲಿ ಆಗ ಸಾಮಾಜಿಕ ಪ್ರಸಂಗಗಳನ್ನೂ ಆಡುತ್ತಿದ್ದರು. (ಈಗ ಪುರಾಣ ಪ್ರಸಂಗಗಳು ಮಾತ್ರ). ಆಗ ಮುಖ್ಯ ಭಾಗವತರು ನೆಲ್ಲೂರು ಮರಿಯಪ್ಪ ಆಚಾರ್. ಪೆರ್ಡೂರು ಮೇಳದವರು ಆಡುತ್ತಿದ್ದ ಪ್ರಸಂಗಗಳನ್ನು ಮಂದಾರ್ತಿಯವರೂ ಆಡುತ್ತಿದ್ದರು. ಧಾರೇಶ್ವರರು, ಸುರೇಶ್ ಶೆಟ್ರು ಆಡಿಸುತ್ತಿದ್ದ ಆ ಪ್ರಸಂಗಗಳನ್ನು ನೋಡಿದ್ದ ಸತ್ಯನಾರಾಯಣ ಪುಣಿಂಚತ್ತಾಯರಿಗೆ ಇದರಿಂದ ಅನುಕೂಲವೇ ಆಯಿತು. ನೆಲ್ಲೂರು ಮರಿಯಪ್ಪ ಆಚಾರ್ ಅವರು ಉತ್ತಮ ಅವಕಾಶಗಳನ್ನೂ ಕೊಟ್ಟಿದ್ದರಂತೆ. ಮಂದಾರ್ತಿ ದೇವಸ್ಥಾನದ ಮೊಕ್ತೇಸರ ಶ್ರೀ ಧನಂಜಯ ಶೆಟ್ಟರೂ ಪ್ರೋತ್ಸಾಹಿಸಿದ್ದರಂತೆ.

ಸಂಘಟಕ ಶ್ರೀ ಸತ್ಯನಾರಾಯಣ ಭಟ್ ಗೋಳಿತ್ತಡ್ಕ ಅವರು ಪುಣಿಂಚತ್ತಾಯರಿಗೆ ಕಾಳಿಂಗ ನಾವಡರನ್ನೂ ಸುಬ್ರಹ್ಮಣ್ಯ ಧಾರೇಶ್ವರರನ್ನೂ ಮೊದಲೇ ಪರಿಚಯಿಸಿದ್ದರು. ಅವರಿಂದಲೂ ಮಾರ್ಗದರ್ಶನ ಪಡೆದ ಪುಣಿಂಚಿತ್ತಾಯರು 2 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸಿದರು. ವೈ. ಕರುಣಾಕರ ಶೆಟ್ರ ಸಂಚಾಲಕತ್ವ. ಧಾರೇಶ್ವರ, ಸುರೇಶ ಶೆಟ್ರ ಜತೆ ತಿರುಗಾಟ. ಮತ್ತೆ ಸಾಲಿಗ್ರಾಮ ಮೇಳಕ್ಕೆ ಸಹ ಭಾಗವತನಾಗಿ ಕರೆಬಂತು. ಕಿಶನ್ ಹೆಗ್ಡೆಯವರು ಸಂಚಾಲಕರು. ನಾರಾಯಣ ಶಬರಾಯ, ಕೊಳಗಿ ಕೇಶವ ಹೆಗಡೆ, ವಿದ್ವಾನ್ ಗಣಪತಿ ಭಟ್ಟರ ಜತೆ 4 ತಿರುಗಾಟ. ನಂತರ ಮನೆಯ ಸಮಸ್ಯೆಯಿಂದಾಗಿ ಯಕ್ಷಗಾನದಿಂದ ದೂರ ಉಳಿದ ಪುಣಿಂಚತ್ತಾಯರು ಪೆರ್ಲದಲ್ಲಿ ‘ಕೀರ್ತನ್ ಮ್ಯೂಸಿಕ್ಸ್’ ಎಂಬ ಸಂಸ್ಥೆಯನ್ನು ಆರಂಭಿಸಿದರು.
ಸುಮಾರು 60 ಭಕ್ತಿಗೀತೆಗಳ ಧ್ವನಿಸುರುಳಿಗಳಿಗೆ ನಿರ್ದೇಶನ, ಸಾಹಿತ್ಯ, ಸಂಗೀತ ಅಳವಡಿಸಿ ಹೊರತಂದ ಹಿರಿಮೆ ಶ್ರೀಯುತರದ್ದು. ಈಗಲೂ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ.ಶ್ರೀ ಸತ್ಯನಾರಾಯಣ ಪುಣಿಂಚತ್ತಾಯರಿಗೆ ಬರೆಯುವ ಕಲೆಯೂ ಸಿದ್ಧಿಸಿತ್ತು. 100 ಧ್ವನಿಸುರುಳಿಗಳಿಗೆ ಸಾಹಿತ್ಯ ರಚಿಸಿ ಬಿಡುಗಡೆಗೊಂಡದ್ದು ಮಾತ್ರವಲ್ಲ ಅವುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. (ಬೇರೆ ಬೇರೆ ಕಂಪೆನಿಗಳ) ಸಾಹಿತ್ಯ ಸೇವೆಯನ್ನು ಈಗಲೂ ಹವ್ಯಾಸವಾಗಿ ಮಾಡುತ್ತಿದ್ದಾರೆ. ಎಸ್.ಪಿ., ಅಜಯ್ ವಾರಿಯರ್, ರಮೇಶ್ಚಂದ್ರ, ಕೆ. ಎಸ್. ಸುರೇಖ, ಅನುರಾಧಾ ಭಟ್ ಮೊದಲಾದವರ ಕಂಠದಿಂದ ಧ್ವನಿಸುರುಳಿಗಳಲ್ಲಿ ಇವರ ಸಾಹಿತ್ಯವು ಹೊರಹೊಮ್ಮಿದೆ. ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರು ಇವರ ಗರಡಿಯಲ್ಲೇ ಪಳಗಿದವರು. CD ಗಳು ಬಂದ ಮೇಲೆ ಆಡಿಯೋಗಳಿಗೆ ಬೇಡಿಕೆ ಕುಸಿಯಿತು. ಆದರೂ ಸಾಹಿತ್ಯ ರಚನೆಗಳಿಗೆ ಬೇಡಿಕೆಯಿರುವ ಕಾರಣ ಪುಣಿಂಚತ್ತಾಯರು ಸದ್ರಿ ಹವ್ಯಾಸವನ್ನು ಈಗಲೂ ಮಾಡುತ್ತಿದ್ದಾರೆ. ಮತ್ತೆ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಪುಣಿಂಚತ್ತಾಯರು ಮಂಗಳಾದೇವಿ ಮೇಳದಲ್ಲಿ ತಿರುಗಾಟ ಮಾಡಿದರು (ಬಡಗಿನಿಂದ ತೆಂಕಿಗೆ) ಕಿಶನ್ ಹೆಗ್ಡೆಯವರ ಕರೆಯಂತೆ ಶಬರಾಯರ ಜತೆ ಕಲಾಸೇವೆ. ಬಾರ್ಕೂರ ಬಂಗಾರಿ ಪ್ರಸಂಗ ರಂಜಿಸಿತು. ಶಬರಾಯರ ಜತೆ ಪುಣಿಂಚತ್ತಾಯರೂ ಮಿಂಚಿದರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಎಡನೀರು ಮಠಾಧೀಶರ ಆಶೀರ್ವಾದದೊಂದಿಗೆ ಎಡನೀರು ಮೇಳದಲ್ಲಿ ಪುಣಿಂಚತ್ತಾಯರು ಕಲಾಸೇವೆಯನ್ನು ಮಾಡಿದರು. 2 ವರ್ಷಗಳ ಕಾಲ ಎಡನೀರು ಶ್ರೀಗಳಿಂದ ನಿರ್ದೇಶನ ಪಡೆದ ಇವರಿಗೆ ಶ್ರೀ ದಿನೇಶ್ ಅಮ್ಮಣ್ಣಾಯ, ಪ್ರಭಾಕರ ಗೋರೆ, ದೇಲಂತ ಮಜಲು ಇವರ ಒಡನಾಟವೂ ಸಿಕ್ಕಿತ್ತು. ಕುಂಟಾರು ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾಗ ‘ನಾಗತಂಬಿಲ’ ಪ್ರಸಂಗವು ರಂಜಿಸಿತು. ‘ತುಳುನಾಡ ಸಿರಿದೇವಿ ತೂಲಯಾ’ ಎಂಬ ಹಾಡನ್ನು ಎಲ್ಲರೂ ಮೆಚ್ಚಿಕೊಂಡರು. ಗಾನ ವೈಭವಕ್ಕೆ ಪುಣಿಂಚತ್ತಾಯರಿಂದ ಈ ಪದ್ಯವನ್ನು ಈಗಲೂ ಹಾಡಿಸುವುದನ್ನು ನಾವು ಗಮನಿಸಬಹುದು. ‘ಬ್ರಾಣ ಜಾತಿದ ಬಾಲೆ ಕೇನಿಯಾ’ ಮತ್ತು ‘ಲೋಕ ತೆರಿಯಂದಿ ಬೇನೆನ್’ ಎಂಬ ಹಾಡುಗಳೂ ಕಲಾಭಿಮಾನಿಗಳಿಗೆ ಮೆಚ್ಚುಗೆಯಾಯಿತು. ಪ್ರಸ್ತುತ ಆರು ವರ್ಷಗಳಿಂದ ರಾಜೇಶ್ ಗುಜರನ್ ಸಂಚಾಲಕತ್ವದ, ದಯಾನಂದ ಗುಜರನ್ ವ್ಯವಸ್ಥಾಪಕತ್ವದ ಶ್ರೀ ಸಸಿಹಿತ್ತಿಲು ಮೇಳದಲ್ಲಿ ಸತ್ಯನಾರಾಯಣ ಪುಣಿಂಚತ್ತಾಯರು ಪ್ರಧಾನ ಭಾಗವತರಾಗಿದ್ದಾರೆ.
ಈಗಲೂ ಅತಿಥಿ ಭಾಗವತರಾಗಿ ಬಡಗಿನ ಮೇಳಗಳಲ್ಲೂ ಗಣಾಧಿರಾಜ ತಂತ್ರಿಗಳ ಕೊಲ್ಲಂಗಾನ ಮೇಳದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪರಂಪರೆಗೆ ತೊಡಕಾಗದಂತೆ ಹೊಸತನ ಬೇಕು. ಇದು ಪರಿವರ್ತನಾಶೀಲ ಪ್ರಪಂಚ. ಬದಲಾವಣೆಗಳು ಅನಿವಾರ್ಯ. ಕವಿಯ ಮೂಲ ಆಶಯಕ್ಕೆ ತೊಡಕಾಗದಂತೆ, ಕೆಟ್ಟ ಸಂದೇಶಗಳು ಹೋಗದಂತೆ, ಉತ್ತಮ ಸಂದೇಶಗಳನ್ನು ರವಾನಿಸುವ ಬದಲಾವಣೆ ಯಕ್ಷಗಾನದ ಸೌಂದರ್ಯವನ್ನು ಹೆಚ್ಚಿಸಬಹುದು ಎನ್ನುವ ಪುಣಿಂಚತ್ತಾಯರು, ಅಭ್ಯಾಸಿಗಳಿಗೆ ನಿರಂತರ ಕಲಿಕೆ ಅಗತ್ಯ. ಹಿರಿಯರ ಮಾರ್ಗದರ್ಶನವೂ ಬೇಕು. ಯಕ್ಷಗಾನ ಕಲಿಕೆಯನ್ನು ತಪಸ್ಸಿನಂತೆ ಸ್ವೀಕರಿಸಿ ಅಭ್ಯಸಿಸಿದರೆ ಮಾತ್ರ ಕಲಾವಿದನಾಗಬಹುದೆಂಬ ಮಾತುಗಳನ್ನು ಹೇಳುತ್ತಾರೆ.

ಭಾಗವತ ಶ್ರೇಷ್ಠ ಶ್ರೀ ಬಲಿಪರು ಹುಟ್ಟಿ ಬೆಳೆದ ಊರಿನವನೆಂಬ ಹೆಮ್ಮೆಯಿದೆ ಎನ್ನುವ ಪುಣಿಂಚತ್ತಾಯರು 32 ವರುಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದು ಕೃಷಿ ಕಾರ್ಯಗಳಲ್ಲೂ ಆಸಕ್ತಿಯನ್ನು ಹೊಂದಿರುವರು. ತೆಂಕು ಮತ್ತು ಬಡಗಿನ ಎಲ್ಲಾ ಹಿರಿಯ, ಕಿರಿಯ ಹಿಮ್ಮೇಳ, ಮುಮ್ಮೇಳ ಕಲಾವಿದರು ನನ್ನ ಬೆಳವಣಿಗೆಗೆ, ಹೆಸರಿಗೆ ಕಾರಣರು. ಸಹಕಲಾವಿದರೇ ನಾನು ಕಾಣಿಸಿಕೊಳ್ಳುವುದಕ್ಕೆ ಕಾರಣರು ಎಂದು ಕೃತಜ್ಞರಾಗುವ ಇವರು ನಾಟ್ಯಗುರು ಸಬ್ಬಣಕೋಡಿ ರಾಮಭಟ್ಟರಿಂದ ತೆಂಕಿನ ಪೂರ್ವರಂಗ ಪಾಠವನ್ನು ಅಭ್ಯಸಿಸಿದ್ದಾರೆ.
ಮುಂಬಯಿ, ದೆಹಲಿ, ಬೆಂಗಳೂರು ಮೊದಲಾದ ಕಡೆ ಪ್ರದರ್ಶನಗಳಲ್ಲಿ ಭಾಗವಹಿಸಿದ ಸತ್ಯನಾರಾಯಣ ಪುಣಿಂಚತ್ತಾಯರನ್ನು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ವಿದೇಶ ಪ್ರಯಾಣ- ಮಸ್ಕತ್ ಮತ್ತು ಬಹರೈನ್ ಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ತೃಪ್ತರು. ತಾಯಿ ಹಾಗೂ ಮಡದಿ ಮಕ್ಕಳೊಂದಿಗೆ ಪೆರ್ಲ ಸಮೀಪ ಶಿರಂತಡ್ಕದಲ್ಲಿ ವಾಸ. 2007ರಲ್ಲಿ ಆಶಾರನ್ನು ವಿವಾಹವಾದರು. ಸತ್ಯನಾರಾಯಣ ಪುಣಿಂಚತ್ತಾಯ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯವ ಸೌರಭ್ ಎಸ್. ಪುಣಿಂಚಿತ್ತಾಯ, 3ನೇ ತರಗತಿ ವಿದ್ಯಾರ್ಥಿ. ಕಿರಿಯವ ಸುನಾಧ ಎಸ್. ಪುಣಿಂಚಿತ್ತಾಯನಿಗೆ 5 ವರ್ಷ ಪ್ರಾಯ.


ಶ್ರೀಯುತರಿಗೆ ಗೌರವ ಡಾಕ್ಟರೇಟ್ ಸಿಕ್ಕಿದ ವಿಚಾರ ಕೂಡ ಉಲ್ಲೇಖಿಸಿದ್ದರೆ ಲೇಖನ ಪೂರ್ಣವಾಗುತ್ತಿತ್ತು.