ಮಾಡಾವು ಶ್ರೀ ಕೊರಗಪ್ಪ ರೈಗಳು ತೆಂಕುತಿಟ್ಟಿನ ಹಿರಿಯ ಅನುಭವಿ ಪುಂಡುವೇಷಧಾರಿಗಳಲ್ಲೊಬ್ಬರು. ವಿವಿಧ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಹೊಂದಿದವರು. ಈ ವಾಮನ ಮೂರ್ತಿ ಕಲಾಬದುಕಿನ 38 ವಸಂತಗಳನ್ನು ಕಂಡವರು. 2021-21ನೇ ಸಾಲಿನದು ಪ್ರಾಯಶಃ ಇವರ 39ನೇ ತಿರುಗಾಟ. ಯಕ್ಷಗಾನದ ಪುಂಡುವೇಷಧಾರಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ.
ಇವರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ಕೊರಗಪ್ಪ ರೈಯವರು ಪುತ್ತೂರು ತಾಲೂಕು ಕೈಯ್ಯೂರು ಗ್ರಾಮದ ಸನಂಗಳ ಎಂಬಲ್ಲಿ 1955ನೇ ಇಸವಿ ಡಿಸೆಂಬರ್ 26ರಂದು ಜನಿಸಿದರು. ತಂದೆ ಮಹಾಬಲ ರೈ. ತಾಯಿ ಶ್ರೀಮತಿ ಕಮಲಾ. ಇವರದು ಕೃಷಿಕ ಕುಟುಂಬ. ಕೈಯ್ಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ್ದರು ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಇವರ ಮನೆಯ ಹಿರಿಯರೆಲ್ಲಾ ಯಕ್ಷಗಾನಾಸಕ್ತರಾಗಿದ್ದರು. ಕೈಯ್ಯೂರು ಶಾಲಾ ಮೈದಾನದಲ್ಲಿ ಕರ್ನಾಟಕ ಮೇಳ ಮತ್ತು ಸುರತ್ಕಲ್ ಮೇಳದ ಆಟಗಳು ನಡೆಯುತ್ತಿತ್ತು. ಮನೆಯವರ ಜತೆ ಸಾಗಿ ಆಟ ನೋಡುತ್ತಿದ್ದರು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ವಾಹನದಲ್ಲಿ ಆಟದ ಪ್ರಚಾರವನ್ನು ಕೇಳುವುದು, ಅವರು ಕರಪತ್ರ ವಾಹನದಿಂದ ಹೊರಕ್ಕೆಸೆದಾಗ ಅದನ್ನು ಹೆಕ್ಕಿ ಸಂಗ್ರಹಿಸಿ ಇಟ್ಟುಕೊಳ್ಳುವುದು, ಆಟ ನೋಡಿ ಬಂದ ಮೇಲೆ ಮನೆಯಲ್ಲಿ ಕಲಾವಿದರ ಸಂಭಾಷಣೆಗಳನ್ನು ಹೇಳುವುದು, ಕುಣಿಯುವುದು ಹೀಗೆ ಸಾಗಿತ್ತು ಬಾಲ್ಯದ ಬದುಕು. ಅಡಿಕೆ ಮರದ ಹಾಳೆಯನ್ನು ಕತ್ತರಿಸಿ ಕಿರೀಟದಂತೆ ಮಾಡಿ ಅದನ್ನು ಧರಿಸಿ ಗೆಳೆಯರ ಜತೆ ಕುಣಿಯುತ್ತಿದ್ದರು. ಕಂಬ ಹಾಕಿ, ಹಗ್ಗ ಕಟ್ಟಿ, ಸೊಪ್ಪುಗಳಿಂದ ಅಲಂಕರಿಸಿ ಅಣಕು ಪ್ರದರ್ಶನಕ್ಕೆ ರಂಗಸ್ಥಳವನ್ನು ನಿರ್ಮಿಸುತ್ತಿದ್ದರು. ಇವರ ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು. ನಾಟ್ಯ ಕಲಿತು ಕಲಾವಿದನಾಗಬೇಕೆಂಬ ಬಯಕೆಯೂ ಮೂಡಿತ್ತು. ಧರ್ಮಸ್ಥಳದಲ್ಲಿ ಲಲಿತ ಕಲಾ ಕೇಂದ್ರ ಆರಂಭವಾಗಿದೆ ಎಂಬ ವಿಚಾರ ತಿಳಿದು ಕಲಿಯುವ ಆಸೆಯನ್ನು ಹೊತ್ತು ತೆರಳಿದ್ದರು.(1972ರಲ್ಲಿ)
ಪೂಜ್ಯ ಖಾವಂದರೂ ಸಂದರ್ಶನ ನಡೆಯುವ ಸ್ಥಳದಲ್ಲಿ ಉಪಸ್ಥಿತರಿದ್ದರು. ಮಾಂಬಾಡಿ ನಾರಾಯಣ ಭಾಗವತರು, ಪಡ್ರೆ ಚಂದು ಅವರು ಸಂದರ್ಶಕರಾಗಿದ್ದರು.(ಲಲಿತ ಕಲಾ ಕೇಂದ್ರದ ಗುರುಗಳು) ಯಕ್ಷಗಾನದಿಂದ ಆಗ ನಿವೃತ್ತರಾಗಿದ್ದ ಕುರಿಯ ವಿಠಲ ಶಾಸ್ತ್ರಿಗಳೂ ಅಂದಿನ ದಿನ ಅಲ್ಲಿ ಉಪಸ್ಥಿತರಿದ್ದರಂತೆ. ಮಾಡಾವು ಕೊರಗಪ್ಪ ರೈಗಳು ಸಂದರ್ಶನದಲ್ಲಿ ಉತ್ತೀರ್ಣರಾಗಿ ತರಬೇತಿಗೆ ಆಯ್ಕೆಯಾಗಿದ್ದರು. ಪದ್ಯಾಣ ಗಣಪತಿ ಭಟ್, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ನಿಡ್ಲೆ ಗೋವಿಂದ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ಮುಂಡಾಜೆ ಸದಾಶಿವ ಶೆಟ್ಟಿ, ಉದ್ಯಾವರ ಜಯಕುಮಾರ ಮೊದಲಾದವರು ಲಲಿತಕಲಾ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಗಳಾಗಿ ಮಾಡಾವು ಕೊರಗಪ್ಪ ರೈಗಳ ಸಹಪಾಠಿಗಳಾಗಿದ್ದರು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಮೊದಲ ತಿರುಗಾಟ 1972ರಿಂದ. ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. ಪೂರ್ವರಂಗದಲ್ಲಿ ಬಾಲಗೋಪಾಲ ಮತ್ತು ಪ್ರಸಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳು. ಬೆಳಗಿನ ವರೆಗೂ ವೇಷ ಮಾಡಬೇಕಾಗಿತ್ತು. ಮುಂಡಾಜೆ ಬಾಲಕೃಷ್ಣ ಶೆಟ್ಟರು ಬಾಲಗೋಪಾಲ ಮತ್ತು ಇನ್ನಿತರ ವೇಷಗಳಿಗೆ ಇವರಿಗೆ ಜತೆಯಾಗಿದ್ದರು. ಕರ್ನಾಟಕ ಮೇಳದಲ್ಲಿ ಐದು ವರ್ಷಗಳ ತಿರುಗಾಟ. ‘ಶೀಲಪಾರಮ್ಯ’ ಎಂಬ ಪ್ರಸಂಗದಲ್ಲಿ ವಾಮನ ಪಾತ್ರವು ಕೊರಗಪ್ಪ ರೈಗಳಿಗೆ ತನ್ನ ಪ್ರತಿಭೆಯನ್ನು ಪ್ರಕಟಿಸುವುದಕ್ಕೆ ಅವಕಾಶವಾಗಿ ಹೆಸರನ್ನು ತಂದುಕೊಟ್ಟಿತು. ಈ ಪ್ರಸಂಗದಲ್ಲಿ ಬೋಳಾರ ನಾರಾಯಣ ಶೆಟ್ಟರು ‘ಬಲಿ’ ಪಾತ್ರದಲ್ಲಿ ಪ್ರಸಿದ್ಧರಾಗಿದ್ದರು. ಮುಂಡಾಜೆ ಬಾಲಕೃಷ್ಣ ಶೆಟ್ಟರು ಲೋಹಿತಾಶ್ವನಾಗಿ ಅಭಿನಯಿಸಿದ್ದರು.
ಶಕುಂತಲಾ ಪರಿಣಯದ ‘ಬಾಲ ಸರ್ವದಮನ’, ಸತ್ಯ ಹರಿಶ್ಚಂದ್ರ ಪ್ರಸಂಗದ ಲೋಹಿತಾಶ್ವ, ಶ್ರೀರಾಮ ಲೀಲೆ ಪ್ರಸಂಗದ ಕುಶಲವರು ಮೊದಲಾದ ವೇಷಗಳನ್ನು ನಿರ್ವಹಿಸುವ ಅವಕಾಶಗಳು ಸಿಕ್ಕಿತ್ತು. ವೇಷಗಳಿಲ್ಲದ ಸಮಯದಲ್ಲಿ ನಿದ್ದೆಗೆ ಅವಕಾಶವಿರಲಿಲ್ಲ. ಆಟ ನೋಡಲೇ ಬೇಕಾಗಿತ್ತು. ‘ವಿದ್ಯಾತುರಾಣಾಮ್ ನ ಸುಖಂ ನ ನಿದ್ರಾ’ ಎಂಬಂತೆ ಕೊರಗಪ್ಪ ರೈಗಳಿಗೆ ಅದು ಅನುಕೂಲವೇ ಆಗಿತ್ತು. ನೋಡುತ್ತಾ, ಕೇಳುತ್ತಾ ಕಲಿಯುತ್ತಾ ಬೆಳೆದರು. ಕರ್ನಾಟಕ ಮೇಳದವರ ಮಳೆಗಾಲದ ಮುಂಬಯಿ ಪ್ರದರ್ಶನಗಳಲ್ಲೂ ಬಾಲ ಕಲಾವಿದನಾಗಿ ಭಾಗವಹಿಸಿದರು. 1978ನೇ ಇಸವಿ ಇರಬೇಕು. ಮಳೆಗಾಲದ ಪ್ರದರ್ಶನದ ಸಂದರ್ಭ, ಶೇಖರ್ ಶೆಟ್ಟಿ ಬೆಳ್ಮಣ್ ಅವರ ಪರಿಚಯವಾಗಿತ್ತು. ಮುಂಬಯಿಯಲ್ಲಿ ಸಿಎ ವಿದ್ಯಾರ್ಥಿಯಾಗಿದ್ದ ಅವರು ಸಾಕಿನಾಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿಯಾಗಿದ್ದರು. ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದುಕೊಂಡು ಮಂಡಳಿಯಲ್ಲಿ ವೇಷ ಮಾಡಬಹುದೆಂಬ ಸಲಹೆಯನ್ನು ನೀಡಿದ್ದರು.
ಕೊರಗಪ್ಪ ರೈಗಳು ಅವರ ಸಲಹೆಯನ್ನು ಸ್ವೀಕರಿಸಿದ್ದರು. ಯಜಮಾನ್ರಲ್ಲಿ ಹೇಳದೆ, ಊರಿಗೆ ಬಾರದೆ, ಮುಂಬಯಿಯಲ್ಲೇ ಉಳಿದರು. ಆಗ ಹುಡುಗಾಟಿಕೆಯೂ ಇತ್ತು ಅನ್ನೋಣ. ಮುಂಬಯಿಯಲ್ಲಿ ಪರಿಚಯಸ್ಥರು ವಿಜಯ ಬ್ಯಾಂಕಿನಲ್ಲಿ ಅಟೆಂಡರ್ ಕೆಲಸವನ್ನೂ ಕೊಡಿಸಿದ್ದರು. ಒಂದು ವರ್ಷ ಅಟೆಂಡರ್ ಆಗಿ ದುಡಿದಿದ್ದರು. ಆದರೆ ಸ್ಥಳೀಯರಿಗೆ ಆ ಕೆಲಸಗಳನ್ನು ಕೊಡಬೇಕೆಂಬ ಬೇಡಿಕೆಯು ಪ್ರಬಲವಾಗಿತ್ತು. ಇದ್ದ ಕೆಲಸವೂ ಹೋಗಿ ಸ್ಥಳೀಯರ ಪಾಲಾಗಿತ್ತು. ಬಳಿಕ ಅಂಗಡಿಗಳಲ್ಲಿ, ಹೋಟೆಲ್ಲುಗಳಲ್ಲಿ ದುಡಿಮೆ. ಅವಕಾಶ ಸಿಕ್ಕಾಗಲೆಲ್ಲಾ ವಿವಿದೆಡೆ ವೇಷ ಮಾಡುತ್ತಿದ್ದರು. ಮುಂಬಯಿಯಲ್ಲಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ರು, ಶೇಖರ ಶೆಟ್ರು ಬೆಳ್ಮಣ್, ರಘುನಾಥ ಶೆಟ್ರು, ಸದಾನಂದ ಶೆಟ್ರು, ಶ್ರೀನಿವಾಸ ಪೈಗಳು ಮೊದಲದವರೊಂದಿಗೆ ಕಲಾ ಸೇವೆಯನ್ನು ಮಾಡಿದರು.
ಮಾಡಾವು ಕೊರಗಪ್ಪ ರೈಗಳು 1984ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹೇಮಾವತಿ ಜತೆ ವಿವಾಹ. ವಿವಾಹದ ಬಳಿಕ ಮುಂಬಯಿಗೆ ಗುಡ್ ಬೈ ಹೇಳಿ ಊರಿಗೆ ಮರಳಿದ್ದರು. ಆ ಹೊತ್ತಿಗೆ ಶೇಖರ ಶೆಟ್ರು ಮುಂಬಯಿಯಿಂದ ಊರಿಗೆ ಮರಳಿದ್ದರು. ಅವರ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ 2 ವರ್ಷ ತಿರುಗಾಟ, ನಂತರ ಶೇಖರ ಶೆಟ್ರು ಬೆಳ್ಮಣ್ ಮೇಳ ಆರಂಭಿಸಿದ್ದರು. ತಿರುಗಾಟ ಚೆನ್ನಾಗಿಯೇ ನಡೆದಿತ್ತು. ಪತ್ತನಾಜೆಗೆ 9 ದಿನಗಳು ಮಾತ್ರ ಉಳಿದಿತ್ತು. ಮೇ 16ರಂದು ಅನಿರೀಕ್ಷಿತ, ನಡೆಯಬಾರದ ಘಟನೆಯೊಂದು ನಡೆದಿತ್ತು. ಬೆಳ್ಮಣ್ ಮೇಳದ ವಾಹನ (ಮೆಟಡೋರ್ ವ್ಯಾನ್) ಮಂಗಳೂರು ಆಕಾಶವಾಣಿಯ ಬಳಿ ಅಫಘಾತಕ್ಕೀಡಾಗಿತ್ತು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಶೇಖರ ಶೆಟ್ರು, ಭಾಗವತ ಶ್ರೀ ಮೋಹನ ಬೈಪಾಡಿತ್ತಾಯ ಇನ್ನೂ ಕೆಲವು ಕಲಾವಿದರಿಗೆ ತೀವ್ರ ಗಾಯಗಳಾಗಿತ್ತು. ತಾಳಮದ್ದಳೆಯ ಖ್ಯಾತ ಅರ್ಥಧಾರಿ ಶ್ರೀ ಶಂಭು ಶರ್ಮರೂ ಮಾಡಾವು ಕೊರಗಪ್ಪ ರೈಗಳೂ ಆ ವಾಹನದಲ್ಲಿದ್ದರು. ಈಗಲೂ ಆ ಘಟನೆಯನ್ನು ಎಣಿಸುವಾಗ ಭಯವಾಗುತ್ತದೆ ಎನ್ನುವ ಮೂಲಕ ಕೊರಗಪ್ಪ ರೈಗಳು ಅಂದಿನ ದಿನವನ್ನು ನೆನಪಿಸುತ್ತಾರೆ. 1987-88ರಲ್ಲಿ ಕದ್ರಿ ಮೇಳದಲ್ಲಿ ತಿರುಗಾಟ. ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವ, ಕದ್ರಿ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಒಂದು ವರ್ಷ ಪುತ್ತೂರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ ತಿರುಗಾಟ. ಬಳಿಕ ಮೇಳದ ತಿರುಗಾಟ ನಿಲ್ಲಿಸಿ ಒಂದು ವರ್ಷ ಮನೆಯಲ್ಲಿಯೇ ಇದ್ದರು. 1993ರಲ್ಲಿ ಭಾಗವತರಾದ ಕುಬಣೂರು ಶ್ರೀಧರ ರಾಯರ ಬೇಡಿಕೆಯಂತೆ ಕೊರಗಪ್ಪ ರೈಗಳು ಕಟೀಲು ಮೇಳಕ್ಕೆ ಸೇರಿದ್ದರು.
ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವ. ಒಂದನೇ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಪೌರಾಣಿಕ ಪ್ರಸಂಗದ ಅನುಭವ ಗಳಿಸಿ ಎಲ್ಲಾ ವೇಷಗಳಲ್ಲೂ ಕೊರಗಪ್ಪ ರೈಗಳು ಹೆಸರು ಗಳಿಸಿದರು. ಕಟೀಲು ನಾಲ್ಕನೇ ಮೇಳ ಆರಂಭವಾದಾಗ ಆ ಮೇಳಕ್ಕೆ. ನಿರಂತರ 27 ವರ್ಷಗಳಿಂದ ಅದೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಹಂತ ಹಂತವಾಗಿ ಮೇಲೇರಿಯೇ ಕಲಾವಿದನಾಗಿ ಗಟ್ಟಿಗರಾದವರು. ಪೂರ್ವರಂಗದಲ್ಲಿ ಬಾಲಗೋಪಾಲನಿಂದ ತೊಡಗಿ ನಿಧಾನವಾಗಿ, ದೃಢವಾಗಿ ಬೆಳೆದೇ ಈ ಎತ್ತರವನ್ನು ಏರಿದವರು. ಬಾಲಲೀಲೆಯ ಶ್ರೀಕೃಷ್ಣ, ಮಾರ್ಕಂಡೇಯ, ಸರ್ವದಮನ, ಧ್ರುವ,ಪ್ರಹ್ಲಾದ, ಲಕ್ಷ್ಮಣ, ಸಿತಕೇತ, ಸುದರ್ಶನ, ಬಬ್ರುವಾಹನ, ಪರಶುರಾಮ, ಅಭಿಮನ್ಯು ಹೀಗೆ ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ.
ಪ್ರಸ್ತುತ ಅನೇಕ ವರ್ಷಗಳ ಕಾಲ ದೇವಿ ಮಹಾತ್ಮೆಯ ಬ್ರಹ್ಮ, ಚಂಡ ಮುಂಡರಾಗಿ ಅಭಿನಯಿಸಿದ್ದರು. ಈಗ ಶ್ರೀಕೃಷ್ಣ, ವಿಷ್ಣು ಮೊದಲಾದ ಮಾತುಗಾರಿಕೆ ಪ್ರಧಾನವಾದ ವೇಷಗಳನ್ನು ಮಾಡುತ್ತಾರೆ. ಕೊರಗಪ್ಪ ರೈಗಳು ಹಾಸ್ಯರಸಕ್ಕೆ ಸಂಬಂಧಿಸಿ ಕೆಲವು ಪಾತ್ರಗಳನ್ನೂ ಚೆನ್ನಾಗಿ ಮಾಡುತ್ತಾರೆ. ಶಿವಪ್ರಭ ಪರಿಣಯದ ಚಂದ್ರದ್ಯುಮ್ನ, ಯಶೋಮತಿ ಏಕಾವಳೀ ಪ್ರಸಂಗದ ವೀರಕೀರ್ತಿ, ಚಂದ್ರಹಾಸ ಪ್ರಸಂಗದ ಮದನ ಮೊದಲಾದ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಕಲ್ಪನೆಯಿಂದ ಜೀವ ತುಂಬಿದ್ದಾರೆ. ಅಂಬರೀಷ ಪ್ರಸಂಗದ ದೂರ್ವಾಸ, ಹರಿಶ್ಚಂದ್ರ ಪ್ರಸಂಗದ ನಕ್ಷತ್ರಿಕ ಮೊದಲಾದ ಪಾತ್ರಗಳು ಕೊರಗಪ್ಪಣ್ಣ ಮೇಳಕ್ಕೆ ರಜೆಯಾದರೆ ಮಾತ್ರ ಬೇರೆ ಕಲಾವಿದರು ನಿರ್ವಹಿಸುತ್ತಾರೆ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಕರ್ನಾಟಕ, ಬಪ್ಪನಾಡು, ಬೆಳ್ಮಣ್, ಕಾಂತಾವರ, ಕದ್ರಿ, ಕಟೀಲು ಮೇಳಗಳಲ್ಲೆಲ್ಲಾ ಶ್ರೇಷ್ಠ ಕಲಾವಿದರ ಒಡನಾಟಕ್ಕೆ ಅವಕಾಶ ಸಿಕ್ಕಿತ್ತು. ಹಿರಿಯರಿಂದ ಕಲಿತಿದ್ದೇನೆ. ಕಿರಿಯರು ಪ್ರೀತಿಸಿದ್ದಾರೆ. ಸಹಕಲಾವಿದರ ಸಹಕಾರದಿಂದಲೇ ನಾನು ಕಲಾ ಸೇವೆ ಮಾಡಿದೆ. ವೃತ್ತಿಜೀವನದಲ್ಲಿ ಸಂತಸವನ್ನು ಅನುಭವಿಸಿದ್ದೇನೆ ಎನ್ನುವ ಮಾಡಾವು ಕೊರಗಪ್ಪ ರೈಗಳನ್ನು ಅನೇಕ ಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಒಟ್ಟು ಮೇಳದ ತಿರುಗಾಟ 38. ಆದರೂ ಯಕ್ಷಗಾನ ಕ್ಷೇತ್ರದಲ್ಲಿ 48 ವರ್ಷಗಳ ಅನುಭವಿ ಇವರು. ಅಳಿಕೆ ಪ್ರಶಸ್ತಿ, ಕದ್ರಿ ವಿಷ್ಣು ಪ್ರಶಸ್ತಿಯನ್ನು ಪಡೆದುದಲ್ಲದೆ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾಗಿದ್ದಾರೆ. ಕಳೆದ ವರ್ಷ ಮುಂಬಯಿಯಲ್ಲಿ ಸ್ವರ್ಗೀಯ ಶ್ರೀ ಶೇಖರ್ ಶೆಟ್ಟಿ ಬೆಳ್ಮಣ್ ಸಂಸ್ಮರಣಾ ಸಮಿತಿಯವರೂ ಸನ್ಮಾನಿಸಿರುತ್ತಾರೆ.
ಕೊರಗಪ್ಪ ರೈಗಳು ಸಾಂಸಾರಿಕವಾಗಿಯೂ ತೃಪ್ತರು. ಪತ್ನಿ ಹೇಮಾವತಿ, ಪುತ್ರ ಭಾನುಪ್ರಕಾಶ್, ಸೊಸೆ ಸುರೇಖಾ ಮತ್ತು ಮೊಮ್ಮಗ ಅಹನ್ ಇವರೊಂದಿಗೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಸನಂಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾಡಾವು ಶ್ರೀ ಕೊರಗಪ್ಪ ರೈಗಳಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶವಿರಲಿ. ಕಲಾಮಾತೆಯು ಸಕಲ ಸೌಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.