Monday, October 7, 2024
Homeಯಕ್ಷಗಾನಯಕ್ಷಗಾನದಲ್ಲಿ ಕರುಣಾರಸದ ಭಾವ ಪ್ರಕಟಣೆ - ಮಾನಸಿಕ ಒತ್ತಡಕ್ಕೆ ಹಾಸ್ಯ ಮಾತ್ರ ಔಷಧಿಯಲ್ಲ. ಮನಸಿನ ಕೊಳೆ...

ಯಕ್ಷಗಾನದಲ್ಲಿ ಕರುಣಾರಸದ ಭಾವ ಪ್ರಕಟಣೆ – ಮಾನಸಿಕ ಒತ್ತಡಕ್ಕೆ ಹಾಸ್ಯ ಮಾತ್ರ ಔಷಧಿಯಲ್ಲ. ಮನಸಿನ ಕೊಳೆ ತೊಳೆದು ಹೋಗಲು ದುಃಖ ಸನ್ನಿವೇಶಗಳೂ ಪರಿಣಾಮಕಾರಿ 

ಹರಿಶ್ಚಂದ್ರನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ (ಫೋಟೋ: ನವೀನ ಕೃಷ್ಣ ಭಟ್ )

ಈಗಿನ ಸ್ಪರ್ಧಾತ್ಮಕ, ಒತ್ತಡದ ಜಗತ್ತಿನಿಂದ ಹೊರಬಂದು ಸ್ವಲ್ಪ ಮಟ್ಟಿಗಾದರೂ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಜನರು ಹಾಸ್ಯಭರಿತ ಕಲಾ ಪ್ರಾಕಾರಗಳ ಪ್ರದರ್ಶನಗಳನ್ನು ವೀಕ್ಷಿಸಿ ಆನಂದ, ನೆಮ್ಮದಿಯನ್ನು ಕಂಡುಕೊಳ್ಳಲು ಯತ್ನಿಸುವುದು ಕಂಡುಬರುತ್ತದೆ. ಆದರೆ ಜನರ ಈ ಮನೋಭಾವನೆಯನ್ನು ಹಲವಾರು ಕಲಾ ಪ್ರಕಾರಗಳು ನಗದೀಕರಿಸುತ್ತಿರುವುದು ಕಂಡುಬರುತ್ತದೆ. ಯಕ್ಷಗಾನವೂ ಇದಕ್ಕೆ ಹೊರತಾಗಿಲ್ಲ. ಕೀಳು ಮಟ್ಟದ ಹಾಸ್ಯದ ದೃಶ್ಯಗಳನ್ನು ಅಳವಡಿಸಿ ಜನರನ್ನು ನಗಿಸುವುದೇ ಇವರ ಉದ್ದೇಶವಾಗಿರುವಂತೆ ಕಂಡುಬರುತ್ತದೆ. ಆದರೆ ಮನಸ್ಸಿನ ಕೊಳೆ ತೊಳೆದುಹೋಗಲು ಕೇವಲ ಹಾಸ್ಯ ರಸದ ಆಸ್ವಾದನೆಯೊಂದೇ ಇರುವುದಲ್ಲ. ಕರುಣ ರಸವು ಮಾನವನ ಮನಸ್ಸಿನಲ್ಲಿ ಪರಿಣಾಮಕಾರಿ ಬದಲಾವಣೆಯನ್ನುಂಟುಮಾಡಬಹುದು. 

ವಿದ್ಯಾರ್ಥಿಯಾಗಿರುವಾಗ ಹೆಚ್ಚಿನವರೂ ಕೇಳಿರುವ, ಓದಿರುವ ಪದ್ಯ ‘ಗೋವಿನ ಹಾಡು’. ಈ ಹಾಡಿನಲ್ಲೇ ತಲ್ಲೀನತೆಯನ್ನು ಹೊಂದಿ ಅದೆಷ್ಟೋ ಜನರು ಎಷ್ಟೋ ಬಾರಿ ಕಣ್ಣೀರು ಹರಿಸಿರಬಹುದು ಎನ್ನುವುದನ್ನು ಊಹಿಸಲಸಾಧ್ಯ. ಹಾಡಿನಲ್ಲಿ ಅತ್ಯುತ್ತಮ ಸಂದೇಶವಿದೆ. ಶೋಕವೇ ಸ್ಥಾಯಿಭಾವವಾದ ಕರುಣೆಯ ಹೊನಲೇ ಇದೆ. ಎಲ್ಲರೂ ತಿಳಿಯಲೇಬೇಕಾದ ಜೀವನ ಸಂದೇಶಗಳಿವೆ.

ಅದಕ್ಕೇ ಈ ಹಾಡಿನ ಜನಪ್ರಿಯತೆ ಈಗಲೂ ಹೆಚ್ಚಾಗುತ್ತಲೇ ಇರುವುದು. ಈ ಹಾಡನ್ನು ಬಳಸಿಕೊಂಡವರೆಷ್ಟೋ ಮಂದಿ. ನಾಟಕಗಳಲ್ಲಿ, ನೃತ್ಯರೂಪಕಗಳಲ್ಲಿ, ಶಾಲಾ ಕಾಲೇಜುಗಳ ಮಕ್ಕಳ ನೃತ್ಯ ಕಾರ್ಯಕ್ರಮಗಳೇ ಮುಂತಾದ ಅಸಂಖ್ಯ ಕನ್ನಡಾಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ಹಾಡಿನಿಂದ ಪ್ರೇರಿತರಾದವರೇ.
ಯಕ್ಷಗಾನವೂ ಇದಕ್ಕೆ ಹೊರತಲ್ಲ. ಈ ಹಾಡಿನ ಕಥೆಯನ್ನು ಯಕ್ಷಗಾನದಲ್ಲೂ ಪ್ರಯೋಗ ಮಾಡಿದವರಿದ್ದಾರೆ. ಈ ಕಥೆಯ ಒಂದು ಯಕ್ಷಗಾನ ಧ್ವನಿಸುರುಳಿಯನ್ನೂ ಹೊರತರಲಾಗಿದೆ.


                       ಕೊನೆಗೆ ಸತ್ಯವೇ ಗೆಲ್ಲುವುದು ಎಂಬ ಸಂದೇಶದೊಂದಿಗೆ ಮುಕ್ತಾಯವಾಗುವ ಈ ಕಥೆಯಲ್ಲಿ ತಾಯಿ ಮಗುವಿನ ಮುಗ್ಧ ಪ್ರೇಮವಿದೆ. ತಬ್ಬಲಿಯನ್ನು ಓರಗೆಯವರು ಹೇಗೆ ನೋಡಿಕೊಳ್ಳಬೇಕೆಂಬ ಪಾಠವಿದೆ. ಅದೂ ಅಲ್ಲದೆ ನಮ್ಮ ಸಂಸ್ಕೃತಿಯ ಹಾಗೂ ಜೀವನದ ಅವಿಭಾಜ್ಯ ಅಂಗವಾದ ಗೋವಿನ ಪ್ರಾಮುಖ್ಯತೆಯನ್ನು ನಮಗೆ ತಿಳಿಹೇಳುವಂತಹ ಕಥೆ.

ಭೀಮ ದ್ರೌಪದಿಯರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಶಶಿಕಾಂತ ಶೆಟ್ಟಿ ಕಾರ್ಕಳ (ಫೋಟೋ: ಮಂಜುನಾಥ್ ಬಾಯಿರಿ)


                       ನಮ್ಮ ಮನಸ್ಸನ್ನು ಇನ್ನಿಲ್ಲದಂತೆ ಕಾಡುವ ‘ಕರುಣ ರಸ’ದ ಬಗ್ಗೆ ಬರೆಯುವಾಗ ಈ ಕಥೆಯನ್ನು ಉಲ್ಲೇಖಿಸದೆ ಇರಲು ಸಾಧ್ಯವಿಲ್ಲವೆಂದೆನಿಸುತ್ತದೆ. ಅಳು ಅಥವಾ ಕಣ್ಣೀರು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಾನವನಿಗೆ ‘ನಗು’ ಹೇಗೆ ಶಕ್ತಿವರ್ಧಕ ಔಷಧಿಯೋ ಹಾಗೆಯೇ ಅಳು ಕೂಡಾ. ‘‘ಕಣ್ಣೀರು ಎಂಬುದು ಮನಸ್ಸಿನ ಕೊಳೆ, ಧೂಳು ತೆಗೆಯುವ ಸಾಧನ’’ ಎಂಬುದಾಗಿ ಜ್ಞಾನಿಗಳ ಮಾತು ಸತ್ಯವಾದದ್ದು.   ಈ ಎಲ್ಲಾ ಮಾತುಗಳ ಹಿನ್ನೆಲೆಯಲ್ಲಿ ಯಾವುದೇ ರಂಗಪ್ರದರ್ಶನಗಳಲ್ಲಿ ಕರುಣರಸವೆಂಬುದು ಅತೀವವಾದ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ನಾವೆಷ್ಟೋ ಬಾರಿ ಶ್ರೇಷ್ಠ ನಟರ ಕರುಣರಸದ ಅಭಿನಯಕ್ಕೆ ಕಣ್ಣೀರು ಸುರಿಸಿರಬಹುದು. (ಟಿ. ವಿ.ಯ ಎದುರು ಧಾರಾವಾಹಿ ನೋಡುತ್ತಾ ಕಣ್ಣೊರೆಸುವವರ ಸಹಿತ) ಸಿನಿಮಾ, ನಾಟಕಗಳನ್ನೊಳಗೊಂಡಂತೆ ರಂಗಕಲೆಗಳ ಅಭಿಮಾನಿಗಳಿಗೆ ಇವೆಲ್ಲವೂ ಅನುಭವ.

ಸಣ್ಣವನಿದ್ದಾಗ ಯಕ್ಷಗಾನ ನೋಡುತ್ತಾ ‘ನಳದಮಯಂತಿ’ ಪ್ರಸಂಗದಲ್ಲಿ ನಯನ ಕುಮಾರ್ ಅವರ ಬಾಹುಕ ಮತ್ತು ಕುಂಬಳೆ ಶ್ರೀಧರ ರಾವ್ ಅವರ ದಮಯಂತಿಯ ಸಂಭಾಷಣೆಯ ದೃಶ್ಯವನ್ನು ನೋಡುತ್ತಾ ಕಣ್ಣೀರು ಒರೆಸಿಕೊಳ್ಳುತ್ತಿದ್ದುದು ಈಗಲೂ ಹಚ್ಚಹಸಿರಾಗಿಯೇ ಇದೆ. ಪ್ರೇಕ್ಷಕರ ದೃಷ್ಟಿಕೋನದಿಂದ ಈ ರೀತಿಯಾದರೆ ನಟರ ಅಥವಾ ಕಲಾವಿದರ ನೆಲೆಯಲ್ಲಿ ನಿಂತು ನೋಡಿದರೆ, ಈ ಕರುಣರಸದ ಅಭಿನಯ ಹೇಗೆ? ಅನುಭವೀ ನಟರೊಬ್ಬರ ಪ್ರಕಾರ ಉಳಿದೆಲ್ಲಾ ರಸಗಳಿಂದ ಕರುಣರಸದ ಅಭಿನಯ ಕಷ್ಟವಂತೆ.
ಕಣ್ಣೀರಿನ ಅಭಿನಯ ಅಥವಾ ಅಳುವ ನಟನೆಯನ್ನು ಮಾಡಲು ಹಲವು ವಿಧಾನಗಳಿವೆಯಂತೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಕಣ್ಣೀರು ಸುರಿಸುವುದು ಹೇಗೆ ಎಂಬುದಕ್ಕೆ ಅನುಭವಿಗಳು ಕೆಲವು ವಿಧಾನಗಳನ್ನು ಉದಾಹರಣೆಯಾಗಿ ಕೊಡುತ್ತಾರೆ.


ಮೊದಲನೆಯದು ಆ ಪಾತ್ರದಲ್ಲಿ, ಸನ್ನಿವೇಶದಲ್ಲಿ ಸಂಪೂರ್ಣ ತನ್ಮಯತೆಯನ್ನು ಹೊಂದುವುದು. ಆ ಪಾತ್ರವೇ ತಾನಾಗುತ್ತೇನೋ ಎಂಬಂತೆ ಭಾವಿಸುವುದು. ಇದರಿಂದ ಮನಸ್ಸಿನಲ್ಲಿ ದುಃಖ, ನೋವುಗಳು ಮನೆಮಾಡಿ ಆ ಪಾತ್ರದಲ್ಲಿ ತಾನೇ ಒಳಗೊಳ್ಳುವ ಸಾಧ್ಯತೆಯಾದರೂ ಪ್ರತಿಬಾರಿ ಇದು ಕಷ್ಟಸಾಧ್ಯ.
                        ಎರಡನೆಯದು ನಟಿಸುವ ಸಂದರ್ಭದಲ್ಲಿ ನಿಮ್ಮ ಜೀವನದ ದುರ್ಘಟನೆಗಳ ಅಥವಾ ಅತಿ ನೋವಿನ ಸನ್ನಿವೇಶವನ್ನು ನೆನಪಿಸಿಕೊಳ್ಳುವುದು. ಅಥವಾ ನೀವು ನೋಡಿದ ನಿಮ್ಮ ಸಮೀಪದ ಬಂಧುಗಳ, ಸ್ನೇಹಿತರ ಜೀವನದಲ್ಲಿ ನಡೆದ ನೋವು, ದುರ್ಘಟನೆಗಳನ್ನು ಮೆಲುಕು ಹಾಕುವುದು.

ರಾಮ ಭಾರತರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಸುಬ್ರಾಯ ಹೊಳ್ಳ ಕಾಸರಗೋಡು (ಫೋಟೋ: ಮಧುಸೂದನ ಅಲೆವೂರಾಯ) 


                    ಕರುಣಾಜನಕ, ಕಣ್ಣೀರನ್ನೂ ತರಿಸುವ ಕಥೆಗಳನ್ನು ನೆನಪಿಸಿಕೊಳ್ಳುವುದು, ದುಃಖದ ಹಾಡುಗಳನ್ನು ಕೇಳುವುದು ಇತ್ಯಾದಿಗಳು. ಇವುಗಳಲ್ಲದೆ ‘ನಗುವಂತೆ ನಟಿಸಿ ಕೃತಕ ವಸ್ತುಗಳ ಸಹಾಯದಿಂದ ಕಣ್ಣೀರು ಸುರಿಸಿದರೂ ‘ಅದು ಪ್ರೇಕ್ಷಕರಿಗೆ ಅಳುವಂತೆ ಭಾಸವಾಗುತ್ತದೆ. ಕಣ್ಣೀರು ತರಿಸುವ ಕೆಲವು ಸ್ಪ್ರೇಗಳ ಸಹಾಯ, ನೀರುಳ್ಳಿ ಮುಂತಾದುವುಗಳನ್ನು ಉಪಯೋಗಿಸಿಯೂ ಅಳುವ ದೃಶ್ಯಗಳಲ್ಲಿ ನಟಿಸಲಾಗುತ್ತದೆ. ಕೆಲವು ನಟರು ಈ ಸಂದರ್ಭದಲ್ಲಿ ಎಡೆಬಿಡದೆ ಆಕಳಿಸುವ ವಿಧಾನವನ್ನು ಅನುಸರಿಸುತ್ತಾರಂತೆ. ಈ ರೀತಿ ಮಾಡಿದಾಗ ಅವರ ಮುಖದಲ್ಲಿ ವ್ಯಥೆಯ ಭಾವ ಮೂಡುತ್ತದೆ ಎಂದು ಹೇಳುತ್ತಾರೆ.


                           ಈ ಮೇಲಿನ ಯಾವುದೇ ವಿಧಾನಗಳಿದ್ದರೂ ಯಕ್ಷಗಾನ ರಂಗದ ಕಲಾವಿದರಲ್ಲಿ ಇದಕ್ಕಿಂತ ಭಿನ್ನವಾದ ರೀತಿಯನ್ನು ಗಮನಿಸಬಹುದು. ತಾನೇ ಪಾತ್ರದಲ್ಲಿ ಲೀನವಾಗುವುದು ಅಥವಾ ಪಾತ್ರದಲ್ಲೇ ತಲ್ಲೀನತೆಯನ್ನು ಹೊಂದುವುದು ಮಾತ್ರವಲ್ಲದೆ ತನ್ನ ಸ್ವರಗಳ ಏರಿಳಿತ, ದುಃಖದ ಭಾವನೆಗಳ ಸಮ್ಮಿಶ್ರಣದ ಜೊತೆಗೆ ಮಾತುಗಳಿಂದಲೂ ಆರ್ದ್ರತೆ, ಆಂಗಿಕ ಅಭಿನಯಗಳಿಂದಲೂ ಕರುಣರಸವನ್ನು ಶ್ರೇಷ್ಠ ಮಟ್ಟದಲ್ಲಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಹಲವಾರು ಯಕ್ಷಗಾನ ಕಲಾವಿದರಿಗಿದೆ. ಅಭಿಮನ್ಯು ಕಾಳಗದ ಸುಭದ್ರೆ, ಸತ್ಯಹರಿಶ್ಚಂದ್ರದ ಚಂದ್ರಮತಿ, ಲೋಹಿತಾಶ್ವ, ನಳದಮಯಂತಿಯ ಬಾಹುಕ, ದಮಯಂತಿ ಪಾತ್ರಗಳು, ಗುರುದಕ್ಷಿಣೆಯ ‘ಸಾಂದೀಪನಿ ಮಹರ್ಷಿ’, ಇಂತಹ ಕೆಲವು ಪಾತ್ರಗಳಲ್ಲಿ ಕರುಣರಸದ ಉತ್ತಮ ಅಭಿನಯ ಸಾಧ್ಯ. ಇವುಗಳೆಲ್ಲಾ ಕಣ್ಣೀರು ತರಿಸುವ ಪಾತ್ರಗಳು.


              ಇವುಗಳಲ್ಲದೆ ಕೃಷ್ಣಸಂಧಾನದ ಕರ್ಣನ ಮಾತುಗಳು, ಪಟ್ಟಾಭಿಷೇಕದ ದಶರಥನ ಪಾತ್ರ, ಸೀತಾಪರಿತ್ಯಾಗದ ದೃಶ್ಯಗಳು, ಇಂತಹ ಹಲವಾರು ಪಾತ್ರಗಳು ಕಲಾವಿದರ ಉತ್ತಮ ಅಭಿನಯದೊಂದಿಗೆ ಸಮ್ಮಿಳಿತವಾದರೆ ಪ್ರೇಕ್ಷಕರ ಹೃದಯದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆಯುತ್ತದೆ.
                    ನಟನೆಯಲ್ಲಿ ಕಣ್ಣೀರು ಹರಿಸಲು ಎಷ್ಟೋ ವಿಧಾನಗಳಿರಬಹುದು. ಮಾನಸಿಕ ನೋವು, ದೈಹಿಕ ನೋವುಗಳನ್ನು ಅನುಭವಿಸುತ್ತಾ ಕಲಾವಿದರು ಕಣ್ಣೀರು ಹರಿಸಿರುವರೋ ಅಥವಾ ಇಲ್ಲವೇ ಎನ್ನುವುದು ಮುಖ್ಯವಲ್ಲ, ಬದಲಾಗಿ ಪ್ರೇಕ್ಷಕರನ್ನು ಕಣ್ಣೀರಿನ ಕಡಲಿನಲ್ಲಿ ತೇಲಾಡಿಸಿ ಅಳುವಂತೆ ಮಾಡುವುದೇ ಮುಖ್ಯವಾಗುತ್ತದೆ.

ಲೇಖನ: ಮನಮೋಹನ್ ವಿ.ಎಸ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments