Friday, September 20, 2024
Homeಯಕ್ಷಗಾನರಂಗನಿಷ್ಠೆ, ಅರ್ಪಣಾಭಾವದ ಕಲಾವಿದ ದಿ| ಅಳಿಕೆ ಲಕ್ಷ್ಮಣ ಶೆಟ್ಟಿ 

ರಂಗನಿಷ್ಠೆ, ಅರ್ಪಣಾಭಾವದ ಕಲಾವಿದ ದಿ| ಅಳಿಕೆ ಲಕ್ಷ್ಮಣ ಶೆಟ್ಟಿ 

‘ಅಳಿಕೆ’ ಎಂಬ ಶಬ್ದವು ಕೇಳಿದ ತಕ್ಷಣ ನೆನಪಾಗುವುದು ಅಲ್ಲಿನ ಶ್ರೀ ಸತ್ಯಸಾಯಿ ಲೋಕ ಸೇವಾ ಆಯೋಗದ ಶಿಕ್ಷಣ ಸಂಸ್ಥೆಗಳು. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿ ಭವ್ಯ ಭಾರತದ ಭಾವೀ ಪ್ರಜೆಗಳನ್ನಾಗಿ ರೂಪಿಸುತ್ತಿರುವ ಸಂಸ್ಥೆಯಿದು. ನೆನಪಾಗುವುದು ಸಹಜ.

ಕಲಾಭಿಮಾನಿಗಳೆಂದಾದರೆ ಅಳಿಕೆ ಎಂದು ಹೇಳಿದಾಕ್ಷಣ ಅಳಿಕೆ ಶ್ರೀ ರಾಮಯ್ಯ ರೈಗಳನ್ನೂ ಅಳಿಕೆ ಲಕ್ಶ್ಮಣ ಶೆಟ್ಟರನ್ನೂ ನೆನಪಾಗದೆ ಇರದು. ಈರ್ವರೂ ಖ್ಯಾತ ಕಲಾವಿದರಾಗಿ ತಾವು ಜನಿಸಿದ ಮಣ್ಣಿಗೆ ಕೀರ್ತಿಯನ್ನು ತಂದು ಕೊಟ್ಟವರು. ಉಭಯರೂ ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಶ್ರೇಷ್ಠ ಕಲಾವಿದರಾಗಿ ರಂಗಸ್ಥಳದಲ್ಲಿ ಮಿಂಚಿದವರು. ಸಾಧಕರಾಗಿದ್ದ ಇವರುಗಳು ಜನಮಾನಸದಲ್ಲಿ ಶಾಶ್ವತರಾಗಿ ಸದಾ ಉಳಿಯುತ್ತಾರೆ.

ಇವರು ಗುರು ಶಿಷ್ಯರೂ ಹೌದು. ಅಳಿಕೆ ಲಕ್ಷ್ಮಣ ಶೆಟ್ಟರು ತಮ್ಮ ನಿರ್ವಹಣೆಯಿಂದ ಗುರುಗಳಾದ ಅಳಿಕೆ ಶ್ರೀ ರಾಮಯ್ಯ ರೈಗಳ ಮೆಚ್ಚುಗೆಗೂ ಪಾತ್ರರಾಗಿದ್ದರು. ಅಲ್ಲದೆ ತಮ್ಮ ವೃತ್ತಿ ಜೀವನದುದ್ದಕ್ಕೂ ಅಸಂಖ್ಯ ಅಭಿಮಾನಿಗಳ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗಿದ್ದರು. ಅಳಿಕೆ ಲಕ್ಷ್ಮಣ ಶೆಟ್ಟರದ್ದು ಕೊರತೆಗಳಿಲ್ಲದ ಪರಿಪೂರ್ಣ ವೇಷಗಾರಿಕೆ ಎಂದು ಹೇಳಿದರೆ ತಪ್ಪಾಗಲಾರದು. ಪ್ರಸಿದ್ಧಿಗಾಗಿ ಹಂಬಲಿಸದೆ ಸಿಕ್ಕ ಪಾತ್ರಗಳಿಗೆ ತನ್ನ ಪ್ರತಿಭಾ ವ್ಯಾಪಾರದಿಂದ ರೂಪ ಕೊಟ್ಟು ಅಭಿನಯಿಸಿ ಪ್ರಸಿದ್ಧಿಯನ್ನು ಪಡೆದುಕೊಂಡವರು.

ಶ್ರೀಯುತರ ಜೀವಿತಾವಧಿ 1947 – 2008. ಅಳಿಕೆ ಗ್ರಾಮದ ಪುಳಿಂಚಾರು ಎಂಬಲ್ಲಿ ಶ್ರೀ ದೂಮಣ್ಣ ಶೆಟ್ಟಿ ಮತ್ತು ಶ್ರೀಮತಿ ಪೂವಕ್ಕ ದಂಪತಿಗಳ ಮಗನಾಗಿ ಜನನ. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿ ವರೆಗೆ ಓದಿದ್ದರು. ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ಶ್ರೀ ಅಳಿಕೆ ರಾಮಯ್ಯ ರೈಗಳವರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕುಂಡಾವು ಮೇಳಕ್ಕೆ ಸೇರಿದ್ದರು. ಬಾಲಗೋಪಾಲರಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರಿವರು.

ದಿ| ಕಲ್ಲಾಡಿ ಕೊರಗ ಶೆಟ್ಟಿ, ದಿ| ಕಲ್ಲಾಡಿ ವಿಠಲ ಶೆಟ್ಟಿ, ಮತ್ತು ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಹೀಗೆ ಕಲ್ಲಾಡಿ ಮನೆತನದ ಮೂವರು ಯಜಮಾನರುಗಳ ನೇತೃತ್ವದ ಕರ್ನಾಟಕ ಯಕ್ಷಗಾನ ನಾಟಕ ಸಭಾ, ಇರಾ ಮೇಳದಲ್ಲಿ ಒಟ್ಟು ನಲುವತ್ತು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು ಅಳಿಕೆ ಲಕ್ಷ್ಮಣ ಶೆಟ್ಟರು. ಖ್ಯಾತ ಕಲಾವಿದರಾದ ದಾಮೋದರ ಮಂಡೆಚ್ಚ, ದಿನೇಶ ಅಮ್ಮಣ್ಣಾಯರ ಮಾರ್ಗದರ್ಶನವೂ ದೊರಕಿತ್ತು. ಶ್ರೇಷ್ಠ ಕಲಾವಿದರಾದ ಶ್ರೀ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ಬೋಳಾರ ನಾರಾಯಣ ಶೆಟ್ಟಿ, ಪುಳಿಂಚ ರಾಮಯ್ಯ ರೈ, ಕೊಳ್ಯೂರು ರಾಮಚಂದ್ರ ರಾವ್, ಅರುವ ಕೊರಗಪ್ಪ ಶೆಟ್ಟಿ ಮೊದಲಾದವರ ಜೊತೆ ಕಲಾಸೇವೆಯನ್ನು ಮಾಡುವ ಭಾಗ್ಯವು ಒದಗಿ ಬಂದಿತ್ತು.

ಅಲ್ಲದೆ ಬೆಳ್ಳಾರೆ ವಿಶ್ವನಾಥ ರೈ, ಸಂಜಯ್ ಕುಮಾರ್, ತೊಡಿಕಾನ ವಿಶ್ವನಾಥ ಗೌಡ, ಮಾಡಾವು ಕೊರಗಪ್ಪ ರೈ, ಮುಂಡಾಜೆ ಬಾಲಕೃಷ್ಣ ಶೆಟ್ಟಿ ಮೊದಲಾದವರ ಒಡನಾಟವೂ ದೊರಕಿತ್ತು. ಪುರಾಣ, ಐತಿಹಾಸಿಕ, ಕನ್ನಡ ಹಾಗೂ ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಹೆಸರು ಪಡೆದಿರುತ್ತಾರೆ. ಶ್ರೀರಾಮ, ಶ್ರೀಕೃಷ್ಣ, ಭೀಷ್ಮ, ದಶರಥ, ನಳ, ಧರ್ಮರಾಯ ಮೊದಲಾದ ಸಾತ್ವಿಕ ಪಾತ್ರಗಳಲ್ಲಿ ಅಳಿಕೆ ಲಕ್ಷ್ಮಣ ಶೆಟ್ಟರದು ಅಮೋಘ ನಿರ್ವಹಣೆ.

ಜಾಹೀರಾತು

ತುಳು ಪ್ರಸಂಗಗಳಲ್ಲಿ ಕಾಡಮಲ್ಲಿಗೆಯ ಶಾಂತಕುಮಾರ, ಕೋಟಿ ಚೆನ್ನಯ ಪ್ರಸಂಗದ ಪೆರುಮಳ ಬಲ್ಲಾಳ, ಪಟ್ಟದ ಪದ್ಮಲೆ ಪ್ರಸಂಗದ ಮಂತ್ರಿ ಪದ್ಮಣ್ಣ ಮೊದಲಾದ ಪಾತ್ರಗಳಲ್ಲೂ ಹೆಸರು ಗಳಿಸಿರುತ್ತಾರೆ. ಅನಾರೋಗ್ಯದಿಂದ ಮೇಳದ ತಿರುಗಾಟಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ ಶ್ರೀ ಅಳಿಕೆ ಲಕ್ಷ್ಮಣ ಶೆಟ್ಟರು 2008 ಜುಲೈ 27ರಂದು ಅವ್ಯಕ್ತ ಲೋಕವನ್ನು ಸೇರಿಕೊಂಡಿದ್ದರು.

“ಅಳಿಕೆ ಲಕ್ಷ್ಮಣ ಶೆಟ್ಟರು ಸದಾ ಅಧ್ಯಯನ ಶೀಲರು. ಪೂರ್ವಸಿದ್ಧತೆ ಮಾಡಿಯೇ ರಂಗವೇರುತ್ತಿದ್ದರು. ಅತ್ಯುತ್ತಮವಾಗಿ ಪಾತ್ರಗಳನ್ನು ಚಿತ್ರಿಸುತ್ತಿದ್ದರು”. ಇದು ಅವರ ಒಡನಾಡಿಗಳೂ ಕಲಾಭಿಮಾನಿಗಳೂ ಹೇಳುವ ಮಾತುಗಳು. ಇವರ ಕಲಾಸೇವೆಯನ್ನು ಗುರುತಿಸಿ ಬಂಟರ ಸಂಘ ಮುಂಬಯಿ, ದಿ| ಕಲ್ಲಾಡಿ ಕೊರಗ ಶೆಟ್ಟಿ ಮತ್ತು ದಿ| ಕಲ್ಲಾಡಿ ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನ ಇರಾ, ಪಡ್ರೆ ಚಂದು ಸ್ಮಾರಕ ಸಮಿತಿ ಪೆರ್ಲ, ಕರ್ನಾಟಕ ಮೇಳದ ಅಭಿಮಾನೀ ಬಳಗ ಮುಂಬೈ, ಲಿಯೋ ಕ್ಲಬ್ ಪುತ್ತೂರು, ರಾಗಸುಧಾ ಸಂಸ್ಥೆ ಪುತ್ತೂರು, ಅಳಿಕೆ ಯುವಕ ಮಂಡಲ, ಗೆಳೆಯರ ಬಳಗ ಬೈರಿಕಟ್ಟೆ ಮೊದಲಾದ ಸಂಸ್ಥೆಗಳು ಗೌರವಿಸಿವೆ.

ವೃತ್ತಿ ಜೀವನದಲ್ಲೂ, ಸಂಸಾರಿಕವಾಗಿಯೂ ಅಳಿಕೆ ಶ್ರೀ ಲಕ್ಷ್ಮಣ ಶೆಟ್ಟರು ತೃಪ್ತರಿದ್ದರು. ಪತ್ನಿ ಶ್ರೀಮತಿ ಲಕ್ಷ್ಮಿ. ಅಳಿಕೆ ಲಕ್ಷ್ಮಣ ಶೆಟ್ಟಿ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಶ್ರೀಧರ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದರು. ಪುತ್ರಿ ಜಯಂತಿ ವಿವಾಹಿತೆ, ಗೃಹಣಿ. ಕಿರಿಯ ಪುತ್ರ ಶ್ರೀ ಹರೀಶ್ ಶೆಟ್ಟಿ ಅವರು ಕಳೆದ ಇಪ್ಪತ್ತೇಳು ವರ್ಷಗಳಿಂದ ಇತಿಹಾಸ ಪ್ರಸಿದ್ಧ ಸೀಮೆ ದೇವಸ್ಥಾನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಕಚೇರಿಯಲ್ಲಿ ಉದ್ಯೋಗಿ. ಪ್ರಸ್ತುತ ಆಳಿಕೆಯಲ್ಲಿ ವಾಸವಾಗಿರುತ್ತಾರೆ.

ಸ್ವಾಭಿಮಾನೀ ಶಿಸ್ತಿನ ಕಲಾವಿದರಾಗಿದ್ದ ಶ್ರೀ ಅಳಿಕೆ ಲಕ್ಷ್ಮಣ ಶೆಟ್ಟರಿಗೆ ನುಡಿ ನಮನಗಳು. ಅವರ ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments