Friday, September 20, 2024
Homeಲೇಖನಕೆರೆಗಳೂ ಕಥೆ ಹೇಳುತ್ತವೆ (ಸಣ್ಣಕಥೆ)

ಕೆರೆಗಳೂ ಕಥೆ ಹೇಳುತ್ತವೆ (ಸಣ್ಣಕಥೆ)


ಮಿತ ನಿಲುಗಡೆಯ ವೇಗದೂತ ಬಸ್ ವೇಗವಾಗಿ ಧಾವಿಸುತ್ತಿತ್ತು. ನಾನು ಕಿಟಿಕಿಯ ಪಕ್ಕ ಕುಳಿತಿದ್ದೆ. ಯಾವಾಗಲೂ ಪ್ರಯಾಣದ ಜೊತೆ ಪ್ರಕೃತಿಯ ಆಸ್ವಾದನೆಯೂ ನನಗಿಷ್ಟವಾದುದರಿಂದ ಕಿಟಿಕಿಯ ಪಕ್ಕದ ಆಸನವೇ ನನ್ನ ಮೊದಲ ಆಯ್ಕೆಯಾಗಿರುತ್ತಿತ್ತು. ಬಸ್ ಹೋಗುತ್ತಿದ್ದಂತೆ ರಸ್ತೆಯ ಬದಿಯಲ್ಲಿ ಕಾಣಸಿಗುತ್ತಿದ್ದ ಗುಡ್ಡ ಬೆಟ್ಟಗಳು , ಫಲವತ್ತಾದ ಕೃಷಿ ಭೂಮಿ, ತೋಟಗಳು ಅಪರೂಪಕ್ಕೆ ಮಿಂಚಿ ಮರೆಯಾಗುತ್ತಿದ್ದ ಕಾಡು ಪ್ರದೇಶ ಇವುಗಳನ್ನು ನೋಡುತ್ತಿರುವಾಗ ಒಂದು ಬಗೆಯ ಆತ್ಮತೃಪ್ತಿ ಮತ್ತು ಆನಂದ ಸಿಗುತ್ತಿತ್ತು. ಅದರಲ್ಲೂ ಹಚ್ಚ ಹಸುರಿನ ಕೃಷಿ ಭೂಮಿಯನ್ನು ನೋಡುವುದೇ ಮಹದಾನಂದ.

ಕೃಷಿ ಕ್ಷೇತ್ರದಲ್ಲಿ ಪರಿಣಿತನಾದುದರಿಂದ ಮತ್ತು ಓರ್ವ ಪ್ರಗತಿಪರ ಕೃಷಿಕನಾದುದರಿಂದ ತೋಟ, ಹೊಲಗದ್ದೆಗಳನ್ನು ಅವಲೋಕಿಸುವುದು ನನಗೆ ರೂಢಿಯಾಗಿತ್ತು. ಆ ದಿನ ಕೂಡ ಬಸ್ಸು ಸಾಗುತ್ತಿದ್ದಂತೆ ರಸ್ತೆ ಬದಿಯ ದೃಶ್ಯಗಳನ್ನೇ ಗಮನಿಸುತ್ತಿದ್ದೆ. ಆ ವರೆಗೆ ನಿರಾತಂಕವಾಗಿ ಪ್ರಯಾಣಿಸುತ್ತಿದ್ದ ನನಗೆ ಒಮ್ಮೆಲೇ ಕಿರಿಕಿರಿಯಾದ ಅನುಭವವಾಯಿತು. ನನ್ನ ಆಸನದ ಪಕ್ಕದಲ್ಲಿ ಕುಳಿತಿದ್ದವನ ತಲೆ ನನ್ನ ಭುಜದ ಮೇಲೆ ಕುಳಿತಿತ್ತು. ಬಹುಶ ಆ ಮಹಾನುಭಾವ ಮನೆಯಲ್ಲಿ ನಿದ್ದೆ ಮಾಡಿಲ್ಲವೇನೋ ಎಂದು ತೋರುತ್ತದೆ. ಇವರೂ ಒಂದು ತರಹದ ಭಯೋತ್ಪಾದಕರೇ. ಇನ್ನೊಬ್ಬರನ್ನು ನೆಮ್ಮದಿಯಾಗಿ ಪ್ರಯಾಣಿಸಲೂ ಬಿಡಲಾರರು. ಇವರಿಗೆ ಮಾತ್ರ ಗಾಢ ನಿದ್ದೆ. ಬೆಳದಂತೆ ಆಸರೆಯಾಗಲು ಇಂತಹವರಿಗೆ ಇನ್ನೊಬ್ಬರು ಬೇಕು. ಅವನನ್ನು ನಿರ್ದಯೆಯಿಂದ ಎಬ್ಬಿಸಿದೆ.


ನಾನು ಮತ್ತೆ ಕಿಟಿಕಿಯ ಹೊರಗೆ ದೃಷ್ಟಿ ಹಾಯಿಸಿದೆ. ಬಸ್ ಸ್ವಲ್ಪ ದೀರ್ಘವೇ ಅನ್ನಿಸಬಹುದಾದ ತಿರುವಿನಲ್ಲಿ ಸಂಚರಿಸುವಾಗ ಒಂದು ಅಡಿಕೆಯ ತೋಟ ನನ್ನನ್ನು ಬಹುವಾಗಿ ಆಕರ್ಷಿಸಿತು. ಬಹಳ ಸಮೃದ್ಧವಾದ ತೋಟ ಅದು. ನನ್ನ ತೋಟವೂ ಕೂಡಾ ಹೀಗೆಯೇ ಇದೆ ಎಂದು ಯೋಚಿಸಿದೆ. ತೋಟದ ಬದಿಯಲ್ಲಿ ರಸ್ತೆಗೆ ತಾಗಿಕೊಂಡಂತೆ ದೊಡ್ಡದಾದ ಕೆರೆಯೊಂದಿತ್ತು. ಈ ಕೆರೆಯನ್ನು ಮತ್ತು ತೋಟವನ್ನು ನಾನು ಆಗಾಗ ಗಮನಿಸುತ್ತಿದರೂ ಯಾಕೋ ಏನೋ ಇಂದು ಆ ಕೆರೆ ಮತ್ತು ತೋಟವನ್ನು ನೋಡುವುದರಲ್ಲಿ ಹೆಚ್ಚಿನ ಕುತೂಹಲವಿತ್ತು. ಇತ್ತೀಚಿಗೆ ದ್ವಿಚಕ್ರ ವಾಹನ ಸವಾರರಿಬ್ಬರೂ ವಾಹನ ಸಮೇತರಾಗಿ ಆ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಆದ್ದರಿಂದ ಬಸ್ಸಿನಲ್ಲಿದ್ದ ಎಲ್ಲರೂ ಆ ತಿರುವಿನಲ್ಲಿ ಎದ್ದು ನಿಂತು ಆ ಕೆರೆಯನ್ನು ಬಗ್ಗಿ ಬಗ್ಗಿ ನೋಡತೊಡಗಿದರು. ಬಹುಶಃ ಬಸ್ಸಿನ ಚಾಲಕ ಕೂಡ ವೇಗವನ್ನು ತಗ್ಗಿಸಿ ಅತ್ತ ದೃಷ್ಟಿ ಹಾಯಿಸಿದ. ಆ ಕೆರೆಯನ್ನು ನೋಡುತ್ತಿದ್ದಂತೆ ನನಗೆ ಯಾಕೋ ಮನಸ್ಸಿನಲ್ಲಿ ವಿಷಾದದ ಅಲೆಯೊಂದು ತೇಲಿ ಹೋದಂತಾಯಿತು. ಈ ಕೆರೆಯಲ್ಲಿ ಆಗಾಗ ಅವಘಡಗಳಾಗುತ್ತಿದ್ದರೂ ಕೆರೆಯನ್ನು ಇನ್ನೂ ಮುಚ್ಚಿರಲಿಲ್ಲ. ಬದಲಾಗಿ ಇತ್ತೀಚಿಗೆ ತಡೆಗೋಡೆಯನ್ನು ನಿರ್ಮಿಸಿದ್ದರು.


ಇಂತಹಾ ಬಾಯಿ ತೆರೆದ ಪ್ರತಿಯೊಂದು ಕೆರೆಗಳಿಗೂ ಒಂದೊಂದು ಕತೆಯಿರಬಹುದೇನೋ ಎಂದು ಅನಿಸಿತು. ನಮ್ಮ ತೋಟದ ಮಧ್ಯೆ ಇರುವ ನೀರು ತುಂಬಿ ತುಳುಕುತ್ತಿರುವ ‘ದೊಡ್ಡ ಕೆರೆ’ಯ ನೆನಪಾಯಿತು. ಕೂಡಲೇ ಘಟಿಸಬಾರದ ಘಟನೆಯೊಂದರ ಚಿತ್ರಣ ಮನದಲ್ಲಿ ಮೂಡಿ ಮನಸ್ಸು ಮುದುಡಿತು. ‘ಹಾಗಾಗಬಾರದಿತ್ತು ಎಂದು ನಾವು ಅಂದುಕೊಂಡರೂ ನಮ್ಮ ಮನುಷ್ಯ ಬಲವೊಂದನ್ನು ಮೀರಿದ ಶಕ್ತಿಯೊಂದರ ಸೆಳೆತಕ್ಕೆ ನಾವು ಒಳಗಾಗಲೇ ಬೇಕಲ್ಲ’ ಎಂದು ಸಮಾಧಾನಪಟ್ಟುಕೊಂಡೆ . ಕೆಲವೊಮ್ಮೆ ಅಗೋಚರ ಶಕ್ತಿಯೊಂದು ನಮ್ಮನ್ನು ಕಾಯುತ್ತದೆ ಎಂಬ ವಿಚಾರ ನಿಜವಿರಬಹುದೇನೋ ಎಂದು ಚಿಂತಿಸುತ್ತೇನೆ. ಇಲ್ಲದಿದ್ದರೆ ನಾವು ಬಾಲ್ಯದಲ್ಲಿ ಬಗ್ಗಿ ನೋಡಿದ ಬಾಯ್ದೆರೆದ, ಕಟ್ಟೆಗಳಿಲ್ಲದ ಬಾವಿಗಳೆಷ್ಟು ಇದ್ದುವು. ಆಗೆಲ್ಲಾ ಗುಡ್ಡಗಳಲ್ಲಿಯೂ ಬಾವಿಗಳಿತ್ತು. ಕೆಲವೊಂದು ಪಾಳು ಬಾವಿಗಳಾಗಿದ್ದರೂ ಅದಕ್ಕೆ ಯಾವುದೇ ತಡೆಗೋಡೆಗಳಿರಲಿಲ್ಲ.

ಪ್ರತಿಯೊಂದು ತೋಟಗಳಲ್ಲಿಯೂ ನೀರು ತುಂಬಿದ ಕೆರೆಗಳು ಈಗಲೂ ಇವೆ. ಚಿಕ್ಕಂದಿನಲ್ಲಿ ಹುಡುಗಾಟಿಕೆಯಿಂದ ಎಲ್ಲಾ ಕೆರೆ ಬಾವಿಗಳಿಗೂ ಬಗ್ಗಿ ನೋಡುವುದು ಅಭ್ಯಾಸವಾಗಿತ್ತು. ‘ಎಲ್ಲಿಯಾದರೂ ಕಾಲು ಜಾರಿ ಬಿದ್ದಿದ್ದರೆ’ ಎಂದು ಆಲೋಚಿಸಿದಾಗ ಈಗ ಮೈ ಜುಂ ಎನ್ನುತ್ತದೆ. ಆದರೆ ಆಗ ಏನೂ ಆಗಿರಲಿಲ್ಲ. ಈಗ ಮಾತ್ರ ನಮ್ಮ ಮಕ್ಕಳನ್ನು ಕೆರೆ ಬಾವಿಗಳ ಸಮೀಪಕ್ಕೆ ಹೋಗಲೂ ಬಿಡುವುದಿಲ್ಲ. ಆಗ ನಮಗಿಲ್ಲದ ಭಯ ಈಗ ಆವರಿಸುತ್ತದೆ. ನನಗೆ ಪ್ರಯಾಣದುದ್ದಕ್ಕೂ ಕೆರೆಗಳದ್ದೇ ನೆನಪು. ಮನೆಗೆ ತಲುಪಲು ಇನ್ನೂ ಒಂದು ಘಂಟೆಯ ಪ್ರಯಾಣವಿತ್ತು. ಯೋಚನೆಗಳ ಭಾರದಿಂದ ಮನಸ್ಸು ಬಾಗಿತ್ತು.


ಆ ಗ್ರಾಮದಲ್ಲಿ ಆಗ ದೊಡ್ಡ ತೋಟ ಎಂದರೆ ನಮ್ಮದೇ. ತೋಟದ ಮಧ್ಯೆ ದೊಡ್ಡದಾದ ಒಂದು ಕೆರೆಯಿತ್ತು. ದೊಡ್ಡದು ಎಂದರೆ ಅದು ಈಜುಕೊಳಕ್ಕಿಂತಲೂ ವಿಸ್ತಾರವಾದ ಕೆರೆಯಾಗಿತ್ತು. ತುಂಬು ನೀರಿನ
ಒರತೆಯಿರುವ ಕಾರಣದಿಂದ ನಮ್ಮ ಇಡಿಯ ತೋಟಕ್ಕಾಗುವಷ್ಟು ನೀರಿನ ಆಶ್ರಯ ಅದರಲ್ಲಿರುವ ವಿಶೇಷತೆ. ಮಳೆಗಾಲದಲ್ಲಿ ಕೆರೆಯಿಂದ ನೀರು ಉಕ್ಕಿ ಹೊರಹೋಗುತ್ತಿತ್ತು. ನಾನು ಮತ್ತು ಸುತ್ತುಮುತ್ತಲಿನ ಒಂದೆರಡು ಮನೆಯವರು ಬಿಡುವಿನ ಸಮಯದಲ್ಲಿ ಆ ಕೆರೆಯಲ್ಲಿ ಈಜಾಡುತ್ತಿದ್ದೆವು. ಹಳ್ಳಿಯವರೆಂದರೆ ಹಾಗೆಯೇ. ಈಜು ಮತ್ತು ಮರ ಹತ್ತುವ ಕಲೆ ರಕ್ತಗತವಾಗಿ ಬಂದಿರುತ್ತದೆ. ನಾನು ಮತ್ತು ನಮ್ಮ ನೆರೆಮನೆಯವನಾದ ರಮಣ ಇಬ್ಬರೂ ಈಜುವುದರಲ್ಲಿ ಎತ್ತಿದ ಕೈ. ಕೆರೆಯ ಈ ಬದಿಯಲ್ಲಿ ಮುಳುಗಿ ಆ ಬದಿಯಲ್ಲಿ ನೀರಿನಿಂದ ಏಳುತ್ತಿದ್ದೆವು. ಸಬ್ ಮೆರೀನ್ ಗಳಂತೆ ನೀರಿನ ಅಡಿಯಲ್ಲಿ ಸಂಚರಿಸುತ್ತಿದೆವು. ಆ ಕಾಲದಲ್ಲಿ ಎಷ್ಟೋ ಮುಳುಗುತ್ತಿದ್ದ ಜೀವಗಳನ್ನು ರಕ್ಷಿಸಿದ ಕೀರ್ತಿ ನಮ್ಮಿಬ್ಬರಿಗಿತ್ತು. ಊರಿಗೆ ಆಪತ್ಕಾಲಕ್ಕೆ ಒದಗಿದವರಾಗಿದ್ದರೂ ಕೊನೆಗೆ ಮಾತ್ರ ಒಂದು ವಿಷಾದ, ಒಂದು ಖೇದ ಶೇಷವಾಗಿಯೇ ಉಳಿಯಿತು.

ರಮಣ ಸಣ್ಣ ಮಟ್ಟಿನ ಕೃಷಿಕನಾದರೂ ಶ್ರೀಮಂತ, ಬಡವ ಎಂಬ ಭಿನ್ನತೆಯ ಅಂತರ ನಮ್ಮ ನಡುವೆ ಇರಲಿಲ್ಲ. ಒಂದೇ ರೀತಿಯ ವಿಚಾರಶೀಲತೆ, ಯೋಚನೆಗಳು ನಮ್ಮ ನಡುವೆ ಗಾಢವಾದ ಸ್ನೇಹವನ್ನು ಬೆಸೆದಿದ್ದುವು. ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದ ರಮಣನಿಗೆ ಚೆಲುವೆಯಾದ ಹುಡುಗಿಯೊಬ್ಬಳೊಂದಿಗೆ ಮದುವೆಯಾಗಿತ್ತು. ರಮಣ ಮತ್ತು ಅವನ ಹೆಂಡತಿಗೆ ನಾನು ಮತ್ತು ನನ್ನ ಹೆಂಡತಿ ಅಣ್ಣ ಮತ್ತು ಅಕ್ಕನಾಗಿದ್ದೆವು. ಎರಡು ಮನೆಯವರೂ ಎಷ್ಟು ಆತ್ಮೀಯರಾಗಿದ್ದೆವು ಎಂದರೆ ನಾವಿಬ್ಬರೂ ಅಂದರೆ ನಾನು ಮತ್ತು ರಮಣ ಈಜಾಡುತ್ತಿದ್ದಾಗ ಅಕ್ಕ ತಂಗಿಯರಂತಿದ್ದ ಅವರಿಬ್ಬರೂ ಅದೇ ಕೆರೆಯ ಬದಿಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಆರ್ಥಿಕವಾಗಿ ಅನುಕೂಲತೆಯಿದ್ದರೂ ನಾವಾಗ ಬಟ್ಟೆ ತೊಳೆಯಲು ಕೆರೆಯ ಬದಿಯನ್ನೇ ಆಶ್ರಯಿಸುತ್ತಿದ್ದೆವು.

ನನ್ನ ಹೆಂಡತಿಗೆ ಈಜು ಬರುತ್ತಿತ್ತು. ಮದುವೆಯಾದ ಹೊಸತರಲ್ಲಿ ನನ್ನ ಒತ್ತಾಯಕ್ಕೆ ಕಲಿತಿದ್ದಳು. ಆದರೆ ರಮಣನ ಹೆಂಡತಿಗೆ ಈಜು ಬರುತ್ತಿರಲಿಲ್ಲ. ರಮಣ ಎಷ್ಟೋ ಬಾರಿ ಅವಳನ್ನು ನೀರಿಗೆಳೆದು ಈಜು ಕಲಿಸಲು ಪ್ರಯತ್ನಪಟ್ಟಿದ್ದ. ಆದರೆ ಹರೆಯದ ತರುಣಿಯಾಗಿದ್ದ ಅವಳು ತೆರೆದ ಪ್ರದೇಶದಲ್ಲಿ ನೀರಿಗಿಳಿಯಲು ನಾಚಿಕೊಳ್ಳುತ್ತಿದ್ದಳು. ‘ನೀವಿಬ್ಬರೇ ಇರುವಾಗ ಕಲಿಸಿಕೊಡು’ ಎಂದು ನಾನೇ ರಮಣನಿಗೆ ಸಲಹೆ ನೀಡಿದ್ದೆ.
ಆ ದಿನ ಶನಿವಾರವಾಗಿತ್ತು. ನನ್ನ ಹೆಂಡತಿ ತವರು ಮನೆಗೆ ಹೋಗಿದ್ದಳು. ಮನೆಯಲ್ಲಿ ನಾನೊಬ್ಬನೇ ಇದ್ದೆ. ಎಂದಿನಂತೆ ಅಂದು ಕೂಡ ರಮಣನ ಪತ್ನಿ ಬಟ್ಟೆ ತೊಳೆಯಲು ಬಂದಿದ್ದಳು. ರಮಣನೂ ಈಜಾಡುತ್ತಿರುವ ಶಬ್ದ ಕೇಳಿಸುತ್ತಿತ್ತು. ನಾನು ಅಂದು ತೋಟಕ್ಕೆ ಇಳಿದಿರಲಿಲ್ಲ. ಮನೆಯ ಅಂಗಳದಲ್ಲಿಯೇ ಏನೋ ಕೆಲಸವಿದ್ದರಿಂದ ಮತ್ತು ಅವರಿಬ್ಬರ ಸರಸ ಸಲ್ಲಾಪಕ್ಕೆ, ನೀರಾಟಕ್ಕೆ ಭಂಗ ತರಬಾರದೆಂಬ ಉದ್ದೇಶದಿಂದ ನಾನು ಮನೆಯಲ್ಲಿಯೇ ಉಳಿದುಕೊಂಡಿದ್ದೆ.

ಸ್ವಲ್ಪ ಹೊತ್ತಿನಲ್ಲಿ ಕೆರೆಯ ಭಾಗದಿಂದ ಏನೋ ಗಡಿಬಿಡಿ, ಸದ್ದು ಕೇಳಿಸಿತು. ಏನೆಂದು ನೋಡುತ್ತಾ ಇರುವಾಗ ತೋಟದಲ್ಲಿದ್ದ ಕೆಲಸದ ವ್ಯಕ್ತಿ ಬೊಬ್ಬೆ ಹೊಡೆಯುತ್ತಾ ನನ್ನನ್ನು ಕರೆದ. ‘ಬೇಗ ಬನ್ನಿ, ಅಕ್ಕ ನೀರಿಗೆ ಬಿದ್ದಿದ್ದಾರೆ’ ಎಂದು ಹೇಳಿದವನ ಮಾತಿಗೆ ಬೆಚ್ಚಿ ಬಿದ್ದು ಒಮ್ಮೆಲೇ ಕೆರೆಯತ್ತ ಧಾವಿಸಿದೆ. ಆಗಲೇ ಅಲ್ಲಿ ನಮ್ಮ ಎರಡು ಕೆಲಸದವರೂ ತಲುಪಿ ನೀರಿಗೆ ಹಾರಿದ್ದರು. ರಮಣನೂ ನೀರಿಗೆ ಹಾರಿದ್ದ. ಅತೀವ ಭಯಗೊಂಡಿದ್ದ ಆತನನ್ನು ನಾನು ಮೇಲಕ್ಕೆಳೆದು ಕುಳಿತುಕೊಳ್ಳಲು ಹೇಳಿ ನಾನು ನೀರಿಗೆ ಹಾರಿ ಮುಳುಗಿ ಹುಡುಕಾಡಿದೆ. ಅದರ ಮೊದಲು ಇನ್ನೊಬ್ಬ ಕೆಲಸದವನಲ್ಲಿ ಪಕ್ಕದ ಮನೆಯವರನ್ನೆಲ್ಲ ಕೂಗಲು ಹೇಳಿದೆ. ಇಷ್ಟೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಅವನು ಬೊಬ್ಬೆ ಹೊಡೆಯುತ್ತಾ ಆ ಕಡೆಗೆ ಹೋದ. ರಮಣನೂ ನನ್ನೊಡನೆ ಮತ್ತೊಮ್ಮೆ ನೀರಿಗೆ ಜಿಗಿದ. ಅಷ್ಟರಲ್ಲಿ ಅಕ್ಕ ಪಕ್ಕದವರು ಹತ್ತಾರು ಜನರು ಅಲ್ಲಿ ಸೇರಿದ್ದರು. ನುರಿತ ಈಜುಗಾರರೆಲ್ಲರೂ ಸೇರಿ ಹುಡುಕಾಡಿದೆವು.

ಸುಸ್ತಾಗಿ ಭಯಬೀತನಾಗಿದ್ದ ರಮಣನನ್ನು ಇಬ್ಬರು ಹಿಡಿದುಕೊಂಡು ಕುಳ್ಳಿರಿಸಿದರು. ಅರ್ಧ ಘಂಟೆ ಕಳೆದರೂ ರಮಣನ ಪತ್ನಿಯನ್ನೂ ನೀರಿನೊಳಗಿನಿಂದ ಹೊರ ತೆಗೆಯಲಾಗಲಿಲ್ಲ. ಎಲ್ಲರೂ ಸುಸ್ತಾಗಿದ್ದರು. ನಾನು ಕೊನೆಯ ಪ್ರಯತ್ನವೆಂಬಂತೆ ಸರ್ವ ಶಕ್ತಿಯನ್ನೂ ಉಪಯೋಗಿಸಿ ನೀರಿನ ಆಳಕ್ಕೆ ಹೋದೆ. ಅಲ್ಲಿ ಕೆಸರಿನಲ್ಲಿ ಹುದುಗಿದ್ದ ಅವಳ ದೇಹ ಕೈಗೆ ತಾಗಿತು. ಕೂಡಲೇ ಎಳೆದು ಮೇಲೆ ತಂದೆ. ಅಷ್ಟರಲ್ಲಿ ಮತ್ತಿಬ್ಬರು ಸಹಾಯ ಮಾಡಿದರು. ಎಲ್ಲರೂ ಸೇರಿ ದೇಹವನ್ನು ಮೇಲೆ ತಂದು ಮಲಗಿಸಿದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅವಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅರ್ಧ ಘಂಟೆಗೂ ಹೆಚ್ಚು ನೀರಿನೊಳಗೆ ಮುಳುಗಿದ್ದವಳು ಬದುಕಿರುವುದಕ್ಕೆ ಹೇಗೆ ಸಾಧ್ಯ? ಅವಳ ಮೃತ ದೇಹವನ್ನು ಕಂಡೊಡನೆ ರಮಣನ ರೋದನ, ಪ್ರತಿಕ್ರಿಯೆಗಳನ್ನು ನೋಡುವುದಕ್ಕೆ ಅಸಾಧ್ಯವಾಗಿತ್ತು.

ನಾನು ಕೂಡ ದಿಗ್ಭ್ರಾಂತನಾಗಿ ಒಂದರೆಕ್ಷಣ ಕೆರೆಯ ಬದಿಯಲ್ಲೇ ಬಿದ್ದಿದ್ದೆನಾದರೂ ನನ್ನನ್ನು ಕರ್ತವ್ಯ ಕೈ ಬೀಸಿ ಕರೆಯುತ್ತಿತ್ತು. ಧೃತಿಗುಂದಿ ಸೋತು ರೋದಿಸುತ್ತಿದ್ದ ಸ್ನೇಹಿತನನ್ನು ಸಂತೈಸಿ ಸಮಾಧಾನಪಡಿಸಬೇಕಾಗಿತ್ತು. ಎಲ್ಲವನ್ನೂ ಅಣ್ಣನ ಸ್ಥಾನದಲ್ಲಿ ನಿಂತು ಮಾಡಿದೆ. ನನ್ನ ಶಕ್ತಿಮೀರಿ ಎಲ್ಲವನ್ನೂ ಮಾಡಿದೆನಾದರೂ ಸಾಂಸಾರಿಕ ಜೀವನದಲ್ಲಿ ನೋವನ್ನುಂಡು ಜುಗುಪ್ಸೆಗೊಂಡಿದ್ದ ರಮಣನ ಮನೋಸ್ಥಿತಿಯನ್ನು ತಿಳಿಯಾಗಿಸಲು ನಾನು ಶಕ್ತನಾಗಲಿಲ್ಲ. ನಾವಿಬ್ಬರೂ ಈಜಿನಲ್ಲಿ ನಿಸ್ಸೀಮರಾಗಿದ್ದರೂ ನಮ್ಮದೇ ಮನೆಯವರನ್ನೇ ಕಾಪಾಡಿ ಗೆಲುವು ಸಾಧಿಸಲಾಗಲಿಲ್ಲ.


ರಮಣ ಮಂಕಾಗಿದ್ದ. ಏನೋ ಆಲೋಚನೆ, ಎತ್ತಲೋ ನೋಟ, ಅನಿಯಮಿತ ಆಹಾರ ಸೇವನೆ ಹೀಗೆ ಅವನ ಜೀವನ ಅತಂತ್ರತೆಯತ್ತ ಸಾಗುವ ಲಕ್ಷಣಗಳು ಕಂಡುಬಂದುವು. ನಾನು ಬಲವಂತದಿಂದ ಅವನನ್ನು ನಮ್ಮ ಮನೆಗೆ ಊಟ, ತಿಂಡಿಗೆ ಕರೆದುಕೊಂಡು ಬರುತ್ತಿದ್ದೆ. ಯಾವಾಗಲೂ ಸಮಾಧಾನದ, ಬುದ್ಧಿಯ ಮಾತುಗಳನ್ನು ಹೇಳುತ್ತಿದ್ದೆ. ಆದರೆ ರಮಣ ಅವನ ಮನದನ್ನೆಯ ನೆನಪಲ್ಲಿ ಕೊರಗಿ ಕೃಶವಾಗತೊಡಗಿದ್ದ. ಅವಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಕೆಲವೊಮ್ಮೆ ಮುಖ ಮುಚ್ಚಿಕೊಂಡು ಹತಾಶೆಯಿಂದ ರೋಧಿಸುತ್ತಿದ್ದ.


ಇದಾದ ಕೆಲವು ದಿನಗಳ ನಂತರ ರಮಣ ತಾನಿದ್ದ ಮನೆ ತೋಟವನ್ನು ಸ್ವಲ್ಪ ಸಮಯ ನನ್ನಲ್ಲಿ ನೋಡಿಕೊಳ್ಳಲು ಹೇಳಿ ಮನಶಾಂತಿಗಾಗಿ ತಾನು ಮೊದಲು ವಾಸಿಸುತ್ತಿದ್ದ ಊರಿಗೆ ಹೋಗುತ್ತೇನೆಂದು ಹೇಳಿ ಹೋದವನು ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ. ಎಲ್ಲಿ ಹೋಗಿರಬಹುದು ಎಂದು ಚಿಂತಿಸಿದೆ. ಕೊನೆಗೆ ಆತನ ಹುಟ್ಟೂರಿನಲ್ಲೇ ವಿಚಾರಿಸುವುದು ಸೂಕ್ತ ಎಂದು ಆ ದಿಸೆಯಲ್ಲಿ ಪ್ರಯತ್ನಿಸಿದೆ. ಆಮೇಲೆ ಆ ಊರಿನಲ್ಲಿ ವಿಚಾರಿಸಿದಾಗ ಅವನು ಅಲ್ಲಿಗೆ ಹೋಗದೆ ಬೇರೆಲ್ಲೋ ತೆರಳಿದ್ದಾನೆ ಎಂದು ತಿಳಿಯಿತು. ಆದರೆ ಎಲ್ಲಿದ್ದಾನೆ ಎಂದು ಗೊತ್ತಾಗಲಿಲ್ಲ. ಅವನ ಇರವನ್ನು ತಿಳಿಯಲು ಬಹಳಷ್ಟು ಪ್ರಯತ್ನಿಸಿದ್ದೆ. ಪ್ರಯೋಜನವಾಗಲಿಲ್ಲ.

ಹೀಗೆ ಹಲವಾರು ಯೋಚನೆಗಳ ಗುಂಗಿನಲ್ಲಿದ್ದ ನನಗೆ ಇಳಿಯುವ ನಿಲ್ದಾಣ ಬಂದದ್ದು ಅರಿವಾಗಲಿಲ್ಲ. ಬಸ್ ನಿರ್ವಾಹಕ ಕೂಗಿದಾಗ ಬೇಗನೆ ಎದ್ದು ಇಳಿದೆ. ಇಳಿದು ತೋಟ ದಾಟಿ ಮನೆಯತ್ತ ಬರುತ್ತಿರುವಾಗ ಅಚ್ಚರಿಯೊಂದು ಕಾದಿತ್ತು. ದೊಡ್ಡ ಕೆರೆಯ ಸಮೀಪ ಯಾರೋ ಕಾವಿ ವಸ್ತ್ರಧಾರಿಯೊಬ್ಬರು ಕುಳಿತಂತೆ ಅನಿಸಿತು. ಯಾರೆಂದು ತಿಳಿಯಲು ಹತ್ತಿರಕ್ಕೆ ಹೋದೆ. ಗಡ್ಡ ಬಿಟ್ಟ ಸನ್ಯಾಸಿ ಯಾರೆಂದು ತಿಳಿಯಿತು. ಆಶ್ಚರ್ಯ ದಿಗ್ಭ್ರಮೆಗಳಾದರೂ ತೋರಿಸಿಕೊಳ್ಳಲಿಲ್ಲ . ರಮಣ ವಿರಾಗಿಯಾಗಿದ್ದ. ಅವನನ್ನು ಅಪ್ಪಿಕೊಂಡು ಕಣ್ಣೀರಿಟ್ಟು ಮನೆಗೆ ಕರೆದುಕೊಂಡು ಬಂದೆ. ಇಬ್ಬರೂ ಸಂತೋಷದಿಂದ ಮಾತನಾಡುತ್ತ ಹೊಟ್ಟೆ ತುಂಬಾ ಉಂಡೆವು. ಅವನ ಮನೆಯ ಬೀಗದ ಕೈಯನ್ನು ಮರಳಿ ಅವನಿಗಿತ್ತೆ.

ಮರುದಿನ ನಾನು ನನ್ನ ಎಂದಿನ ಕಾಯಕದಂತೆ ಬೆಳಿಗ್ಗೆ ಅಡಿಕೆ ಹೆಕ್ಕಲು ತೋಟಕ್ಕೆ ಹೋದೆ. ಅಡಿಕೆಯನ್ನು ಬುಟ್ಟಿಗಳಲ್ಲಿ ತುಂಬಿಸುತ್ತಾ ಆ ದೊಡ್ಡ ಕೆರೆಯ ಬಳಿ ಬಂದವನೇ ಬೆಚ್ಚಿಬಿದ್ದೆ. ಆ ಕೆರೆಯ ಮೆಟ್ಟಿಲುಗಳಲ್ಲಿ ರಮಣ ಕುಳಿತಿದ್ದ. ಕಾಲನ್ನು ನೀರಿನಲ್ಲಿ ಇಳಿಬಿಟ್ಟು ಕಣ್ಣುಮುಚ್ಚಿ ಏನನ್ನೋ ಧ್ಯಾನಿಸುತ್ತಿರುವಂತೆ ಕಾಣಿಸಿದ. ನಾನು ಆವಾಕ್ಕಾಗಿ ನಿಂತೆ. ನನ್ನ ಬರವು ಹಾಗೂ ಇರುವಿಕೆಯ ಸುಳಿವು ಒಂದಿನಿತೂ ಅವನಿಗೆ ಸಿಕ್ಕಿದ ಹಾಗೆ ತೋರಲಿಲ್ಲ. ನಾನು ಅವನ ತೀರಾ ಸಮೀಪಕ್ಕೆ ಬಂದು ಅವನ ಹೆಗಲ ಮೇಲೆ ಕೈ ಇಟ್ಟೆ. ಅಸ್ಪಷ್ಟವಾಗಿ ಅವನ ಹೆಂಡತಿಯ ಹೆಸರನ್ನು ಹೇಳುತ್ತಿದ್ದವನು ನನ್ನ ಸ್ಪರ್ಷದಿಂದ ಬೆಚ್ಚಿಬೀಳಲಿಲ್ಲ. ನಿಧಾನವಾಗಿ ತಿರುಗಿ ನನ್ನ ಮುಖವನ್ನು ದಿಟ್ಟಿಸಿದ. ಆ ನೋಟದಲ್ಲಿ ಒಂದು ರೀತಿಯ ನಿರ್ಲಿಪ್ತತೆಯಿತ್ತು.

ಅವನ ಸಮಾಧಿ ಸ್ಥಿತಿಗೆ ನಾನು ಭಂಗ ತಂದೆನೋ ಎಂಬ ಆತಂಕ ನನಗಾಯಿತು. ಆದರೆ ರಮಣ ಮಾತ್ರ ನನ್ನ ಮುಖವನ್ನೇ ನೋಡುತ್ತಿದ್ದ. ರಮಣ ಭಾವನೆಗಳ, ರಾಗ ದ್ವೇಷಗಳಿಂದ ದೂರ ಸರಿದು ವೈರಾಗ್ಯ ಸ್ಥಿತಿಯನ್ನು ತಲುಪಿದ್ದರೂ ಈಗ ಮಾತ್ರ ಯಾಕೋ ಏನೋ ಅವನ ಕಣ್ಣುಗಳಲ್ಲಿ ಕರುಣೆ ತುಂಬಿ ತುಳುಕಿದಂತೆ ಕಂಡಿತು. ಮೆಲ್ಲನೆ ಅವನನ್ನು ಎಬ್ಬಿಸಿದೆ. ರಮಣ ತನ್ನ ಪತ್ನಿ ಬಿದ್ದ ಜಾಗವನ್ನು ತೋರಿಸುತ್ತಾ ‘ಅವಳು ಈಗಲೂ ಅಲ್ಲಿಯೇ ಇದ್ದಾಳೆಯೇನೋ ಎಂದು ಅನಿಸುತ್ತದೆ. ಈ ನೀರನ್ನು ಮುಟ್ಟುವಾಗ ಅವಳು ಪಿಸುಗುಟ್ಟಿದಂತೆ ಭಾಸವಾಗುತ್ತದೆ.’ ಎಂದು ಹುಚ್ಚುಹುಚ್ಚಾಗಿ ಬಡಬಡಿಸತೊಡಗಿದ. ನಾನು ಅವನನ್ನು ಸಮಾಧಾನಪಡಿಸುತ್ತಾ ಬಲವಂತದಿಂದ ಅವನನ್ನು ಮನೆಗೆ ಕರೆದುಕೊಂಡು ಬಂದೆ.

ಅವನಿದ್ದಷ್ಟು ದಿನಗಳೂ ಯಾವಾಗಲೂ ಕೆರೆಯ ಬಳಿಯೇ ಕುಳಿತಿರುತ್ತಿದ್ದ. ಕೆರೆಯ ನೀರಲ್ಲಿ ಕಾಲಾಡಿಸುತ್ತ ಆನಂದವನ್ನು ಅನುಭವಿಸುವಂತೆ ಕಾಣುತ್ತಿದ್ದ. ಹುಚ್ಚು ಹುಚ್ಚಾಗಿ ಮಾತನಾಡುತಿದ್ದ. ಕೆರೆಯ ನೀರನ್ನು ಮುಟ್ಟಿದಾಗ ಅವಳೇ ಬಂದು ಪ್ರೀತಿಯಿಂದ ಮಾತನಾಡಿಸಿದಂತೆ ಆಗುತ್ತದೆ ಎಂದು ಕನವರಿಸುತ್ತಿದ್ದ. ಅವನ ಈ ರೀತಿಯ ಚರ್ಯೆಯನ್ನು ಕಂಡು ನನಗೆ ಭಯವಾಯಿತು. ರಮಣನ ಈ ರೀತಿಯ ವರ್ತನೆಗಳನ್ನೆಲ್ಲಾ ಕಂಡು ನನ್ನ ಮನಸ್ಸು ಬಹಳಷ್ಟು ದಿಗಿಲುಗೊಂಡಿತು. ಇವನು ಆಗಾಗ ಬಂದು ಈ ಕೆರೆಯ ಬದಿಯಲ್ಲಿ ಕುಳಿತು ಯೊಚಿಸುತ್ತಾ ತನ್ನನ್ನೇ ಮರೆತು ಅಪಾಯವನ್ನು ಆಹ್ವಾನಿಸಿಕೊಂಡರೆ? ಅಥವಾ ಪತ್ನಿಯ ಬಗ್ಗೆಯೇ ಯೋಚಿಸುತ್ತಾ ಇನ್ನೊಂದು ಆಕಸ್ಮಿಕ ಘಟನೆಗೆ ತನ್ನನ್ನು ಒಡ್ಡಿಕೊಂಡರೆ ಎಂಬ ಯೋಚನೆ ಬಂತು. ಈ ಒಂದು ಯೋಚನೆಯೇ ನನ್ನಲ್ಲಿ ನಡುಕವನ್ನು ಹುಟ್ಟಿಸಿತು.

ಪತ್ನಿಯ ಜೊತೆ ಇದನ್ನೇ ಹೇಳಿದಾಗ ಅವಳು ಈ ಕೆರೆಯನ್ನು ಮುಚ್ಚಿಸಿ ಬೇರೆ ಕೊಳವೆ ಬಾವಿಯನ್ನು ನಿರ್ಮಿಸೋಣ ಎಂದಳು. ಅವಳು ಕೊಟ್ಟ ಸಲಹೆಯಂತೆ ಈ ದೊಡ್ಡ ಕೆರೆಯನ್ನು ಮುಚ್ಚಿಸುವ ನಿರ್ಧಾರಕ್ಕೆ ಬಂದೆ. ಆದರೆ ಸ್ವಲ್ಪ ಹೊತ್ತು ಆಲೋಚಿಸಿದಾಗ ಈ ನಿರ್ಧಾರ ಎಷ್ಟು ಮೂರ್ಖತನದ್ದು ಎಂದು ಆಮೇಲೆ ಅರಿವಾಯಿತು. ನೀರಿನ ನಿಧಿಯಾಗಿದ್ದ ಈ ಕೆರೆ ನಮ್ಮ ತೋಟಕ್ಕೆ ಜೀವಾಳವಾಗಿತ್ತು. ಅದನ್ನು ಮುಚ್ಚಿಸಿದರೆ ನಮ್ಮ ಒಟ್ಟಾರೆ ಕೃಷಿಭೂಮಿಯ ಬೆಲೆ ಹಾಗೂ ಬೆಳೆ ಕುಸಿತವನ್ನು ಕಾಣಬಹುದು.

ಆಮೇಲೆ ನಾವಿಬ್ಬರೂ ನಮ್ಮ ನಿರ್ಧಾರವನ್ನು ಬದಲಾಯಿಸಿ ‘ಸಾಕಪ್ಪಾ ಈ ಕೆರೆಗಳ ಸಹವಾಸ’ ಎಂದು ತೀರ್ಮಾನವೊಂದಕ್ಕೆ ಬಂದೆವು. ನಮ್ಮ ಈ ನಿರ್ಧಾರಕ್ಕೆ ಪೂರಕವಾಗಿಯೋ ಎಂಬಂತೆ ಅದಕ್ಕೂ ಮೊದಲೇ ಒಂದೆರಡು ತಿಂಗಳಿನಲ್ಲಿಯೇ ರಮಣ ತನ್ನ ತೋಟ ಮತ್ತು ಮನೆಯನ್ನು ಮಾರಿ ‘ಆಗಾಗ ಬರುತ್ತೇನೆ’ ಎಂದು ನನ್ನಲ್ಲಿ ಹೇಳಿ ದೇಶ ಸಂಚಾರಕ್ಕೆ ಹೊರಟ. ಈಗಂತೂ ನನ್ನ ನಿರ್ಧಾರ ಗಟ್ಟಿಯಾಯಿತು. ಒಂದೆರಡು ದಿನಗಳಲ್ಲಿಯೇ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದ ನನ್ನ ತೋಟದ ರಸ್ತೆ ಬದಿಯಲ್ಲಿ “ಜಾಗ ಮಾರಾಟಕ್ಕಿದೆ’‘ ಎಂಬ ನಾನು ಹಾಕಿದ ಫಲಕ ತೂಗಾಡತೊಡಗಿತು.

ಕಥೆ: ಮನಮೋಹನ್ ವಿ.ಎಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments