ಶೃತಿ ಲಯ ತಾಳಗಳಿಲ್ಲದೆ ಸಪ್ತ ಸ್ವರಗಳ ನಿನಾದವು ಕರ್ಣಾನಂದಕರವಾಗುವುದಿಲ್ಲ. ಚಂಡೆ ಮದ್ದಲೆಯು ಝೇಂಕರಿಸದೆ ಇದ್ದರೆ, ಸಂಗೀತದ ಆಲಾಪನೆ ಇಂಪಾಗುವುದಿಲ್ಲ. ಮದ್ದಲೆಯೊಂದಿಗೆ ಮಾತಾಡುವ ಶಕ್ತಿ ದಿವಂಗತ ತಿಮ್ಮಪ್ಪ ನಾಯ್ಕ ಬೇಳಂಜೆಯವರಿಗೆ ಇತ್ತಂತೆ. ಪ್ರಾಚಾರ್ಯ ನಾರಾಯಣ ಉಪ್ಪೂರರ ಒಡನಾಡಿಯಾಗಿ ಸುಮಾರು 13 ವರುಷಗಳ ಕಾಲ ತಿರುಗಾಟ ಮಾಡಿದ ಕೀರ್ತಿ ಶ್ರೀಯುತ ಬೇಳಂಜೆ ತಿಮ್ಮಪ್ಪ ನಾಯ್ಕರಿಗೆ ಇತ್ತು.
ಕಲೆಯ ನೆಲೆ ಬೀಡಾದ ಕರಾವಳಿ ಜಿಲ್ಲೆ ಉಡುಪಿಯ ಸಮೀಪದ ಆಗುಂಬೆಯ ತಗ್ಗು ಪ್ರದೇಶ ಹೆಬ್ರಿ ತಾಲೂಕಿನ ಬೇಳೆಂಜೆ ಎಂಬ ಪುಟ್ಟ ಊರಿನ ಕುರಿಯ ನಾಯ್ಕ ಹಾಗು ಕಾಶಿ ಬಾಯಿಯವರ ಗರ್ಭಸಂಜಾತರಾಗಿ 29-02-1928ರಂದು ಬೇಳಂಜೆ ತಿಮ್ಮಪ್ಪ ನಾಯ್ಕರು ಜನಿಸಿದರು. ಬಡತನದ ನೆರಳಲ್ಲಿ ಬೆಳೆದು ಪೆರ್ಡೂರಿನಲ್ಲಿ 5ನೇ ತರಗತಿಯ ವರೆಗೆ ಕಲಿತು ಆಮೇಲೆ ವಿಧ್ಯಾಭ್ಯಾಸಕ್ಕೆ ತೀಲಾಂಜಲಿ ಇತ್ತು ನಂತರ ಕನ್ನಾರು ಗುರು ರಾಮಚಂದ್ರ ಸಮಾಂತರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತು ತನ್ನ15ನೇ ವಯಸ್ಸಿನಲ್ಲಿ ಪೆರ್ಡೂರು ಮೇಳಕ್ಕೆ “ಹರೇ ರಮಣ ಗೋವಿಂದ…. ” ಬಾಲಗೋಪಾಲ ವೇಷಧಾರಿಯಾಗಿ ಸೇರ್ಪಡೆಗೊಂಡರು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ನಂತರ ಮಾರಣಕಟ್ಟೆ ಮೇಳಕ್ಕೆ ಒತ್ತು ಮದ್ದಲೆಗಾರರಾಗಿ ಸೇರ್ಪಡೆಗೊಂಡರು. ವೀರಭಧ್ರ ನಾಯ್ಕ, ಮರವಂತೆ ನರಸಿಂಹ ಭಾಗವತರ ಹಿರಿಯಡ್ಕ ಗೋಪಾಲರಾಯರು, ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ ಮೊದಲಾದವರ ಒಡನಾಟದಿಂದ ಎರಡು ವರುಷ ತಿರುಗಾಟ ಮಾಡಿದರು. ವೀರಭದ್ರ ನಾಯಕರ ಯಜಮಾನಿಕೆಯಲ್ಲಿ ಕೊಲ್ಲೂರು ಮೇಳಕ್ಕೆ ಸೇರ್ಪಡೆಗೊಂಡಾಗ ಕುಂಜಾಲು ರಾಮಕೃಷ್ಣ, ಹೇರಂಜಾಲು ವೆಂಕಟರಮಣ ಗಾಣಿಗ, ತಿಮ್ಮಪ್ಪ ನಾಯ್ಕರ ಶಿಷ್ಯರಾದರು. ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿದರು. ನಂತರ ತೆಂಕು-ಬಡಗು ತಿಟ್ಟಿನ ರಾಜರಾಜೇಶ್ವರೀ ಮೇಳದಲ್ಲಿ ಇದ್ದಾಗ ಮರವಂತೆ ನರಸಿಂಹ ಭಾಗವತರ ಒಡನಾಟದಿಂದ ಮೇಲೆ ಬಂದರು. ನಂತರ ಅಲ್ಲಿ ಆ ಸಮಯದಲ್ಲಿ ಪ್ರಾಚಾರ್ಯ ನಾರಾಯಣ ಉಪ್ಪೂರರೊಂದಿಗೆ ಬೆರೆತರು.
ಡಾ. ಶಿವರಾಮ ಕಾರಂತರ ಬ್ಯಾಲೆ 1959ರಲ್ಲಿ ಪುತ್ತೂರಿನಲ್ಲಿ ಪ್ರಾರಂಭವಾಯಿತು. ಅದರಲ್ಲಿ ಮದ್ದಲೆ ವಾದಕರಾಗಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಅವರ ಸಮ್ಮುಖದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಜವಾಹರ್ ನೆಹರು ಪ್ರಧಾನಿಯಾದ ಸಂದರ್ಭದಲ್ಲೂ ಸಹ ಎಚ್. ಅನಂತಕೃಷ್ಣ ಹಂದೆಯವರ ಮುಂದಾಳುತ್ವದಲ್ಲಿ ದೆಹಲಿಯಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.

ನಂತರ ಪಳ್ಳಿ ಶ್ರೀನಿವಾಸ ಹೆಗ್ಡೆಯವರ ಸಾರಥ್ಯದ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಮದ್ದಲೆಗಾರನಾಗಿ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ್, ಕೆಮ್ಮಣ್ಣು ಆನಂದರ ಸಾಥ್ ದೊರಕಿತು. ಮುಮ್ಮೇಳದಲ್ಲಿ ಕೆರೆಮನೆ ಶಂಭು ಹೆಗ್ಡೆ, ಕೆರೆಮನೆ ಮಹಾಬಲ ಹೆಗ್ಡೆ, ಗಜಾನನ ಹೆಗ್ಡೆ, ಹಾಗು ಶಿರಿಯಾರ ಮಂಜುನಾಯ್ಕರ ಒಡನಾಟದಲ್ಲಿ ಉತ್ತಮ ಮೇಳವಾಗಿ ಹೊರಹೊಮ್ಮಿತು. ಆಗ ಉಪ್ಪೂರರ ಒಡನಾಡಿಯಾಗಿ ಸುಮಾರು ವರುಷ ತಿರುಗಾಟ ಮಾಡಿದರು. ನಂತರ ಶ್ರೀಧರ ಹಂದೆಯವರ ಸಾರಥ್ಯದಲ್ಲಿ ಅಮೃತೇಶ್ವರಿ ಮೇಳ ಪ್ರಾರಂಭವಾಯಿತು. ಆಗ ನಾರಾಯಣ ಉಪ್ಪೂರ್, ಜೊತೆಯಾಗಿ, ಚಿಟ್ಟಾಣಿ, ಕೋಟ ವೈಕುಂಠ, ಎಂ.ಎ. ನಾಯಕ್, ಏಕ್ಟರ್ ಜೋಶಿ ಇಂತಹ ಘಟಾನುಘಟಿ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಶ್ರೀಯುತ ತಿಮ್ಮಪ್ಪ ನಾಯ್ಕರಿಗೆ ಸಲ್ಲುತ್ತದೆ.

ಅಮೃತ್ತೇಶ್ವರೀ ಮೇಳದಲ್ಲಿ ಪ್ರಾಚಾರ್ಯ ನಾರಾಯಣ ಉಪ್ಪೂರರೊಂದಿಗೆ ಸುಮಾರು ಹದಿಮೂರು ವರುಷಗಳ ಕಾಲ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದರು. ಮದ್ದಲೆಯೊಂದಿಗೆ ಮಾತನಾಡುವ ತಿಮ್ಮಪ್ಪ ನಾಯ್ಕರು ಒಂದೊಂದು ಪೆಟ್ಟು ಅಷ್ಟು ಸೂಕ್ಷ್ಮ. ಒಮ್ಮೊಮ್ಮೆ ತಿಮ್ಮಪ್ಪ ನಾಯ್ಕರು ಬಂದು ರಂಗದಲ್ಲಿ ಭಾಗವತರಾಗಿ ಕುಳಿತು ಕೊಳ್ಳುತ್ತಿದ್ದರಂತೆ ಹಾಗು ಉಪ್ಪೂರರು ಮದ್ದಲೆ ನುಡಿಸುತ್ತಿದ್ದರಂತೆ. ಹೀಗೆ ರಂಗದಲ್ಲಿ ಏಕಲವ್ಯನಂತೆ, ತಾಳಮದ್ದಲೆ ಕ್ಷೇತ್ರದಲ್ಲಿಯೂ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ. 1972ರಲ್ಲಿ ಐರೋಡಿ ಸದಾನಂದ ಹೆಬ್ಬಾರ್ ರ ನೇತೃತ್ವದಲ್ಲಿ ಹಂಗಾರಕಟ್ಟೆ ತರಬೇತಿ ಕೇಂದ್ರವನ್ನು ಸ್ಥಾಪಿಸಿದಾಗ ಕೀರ್ತಿಶೇಷ ಕಾಳಿಂಗ ನಾವುಡರು, ಶಂಕರ ಭಾಗವತ ಯಲ್ಲಾಪುರ, ಕರ್ಕಿ ಪರಮೇಶ್ವರ ಭಂಡಾರಿ, ರಾಮಕೃಷ್ಣ ಮಂದಾರ್ತಿ, ಹಳ್ಳಾಡಿ ಸುಬ್ರಯ್ಯ ಮಲ್ಯ, ಸುಬ್ರಮಣ್ಯ ಧಾರೇಶ್ವರ, ಮುಂತಾದ ಶಿಷ್ಯರನ್ನು ತಯಾರು ಮಾಡಿದ ಕೀರ್ತಿ ದಿವಂಗತ ತಿಮ್ಮಪ್ಪ ನಾಯ್ಕರಿಗೆ ಸಲ್ಲುತ್ತದೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಹಗಲಿರುಳೆನ್ನದೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿದ ಶ್ರೀಯುತರನ್ನು ಸರಕಾರವು ಗುರುತಿಸಲೇ ಇಲ್ಲ. ಯಾವ ಸನ್ಮಾನ, ಸವಲತ್ತುಗಳೂ, ಪ್ರಶಸ್ತಿಗಳೂ ಸಹ ಕೊಡಲ್ಪಡಲಿಲ್ಲ. “ಜಾತಸ್ಯ ಮರಣಂ ದ್ರುವಂ” ಎಂಬ ವೇದ ವಾಕ್ಯದಂತೆ ಕಾಲನ ಕರೆಗೆ ಹೋಗಲೇ ಬೇಕು. ಅಂತೆಯೇ 16-04-1976ರಲ್ಲಿ ಅಮೃತೇಶ್ವರೀ ಮೇಳದಲ್ಲಿ ಇರುವಾಗಲೇ ಭದ್ರಾವತಿಯಲ್ಲಿ ಹೃದಯಾಘಾತದಿಂದ ತನ್ನ 46ನೇ ವಯಸ್ಸಿನಲ್ಲಿ ವಿಷ್ಣುವಿನ ಪಾದ ಸೇರಿದರು.
ಕೀರ್ತಿಶೇಷರಾದ ಬೇಳಂಜೆ ತಿಮ್ಮಪ್ಪ ನಾಯ್ಕರ ಮಡದಿ ವೇದಾವತಿ. ಹಾಗು ಮಕ್ಕಳಾದ ಭಾಗವತರಾದ ಶ್ರೀನಿವಾಸ ನಾಯ್ಕ, ಮಹಾಬಲ ನಾಯ್ಕ ಪುಂಡುವೇಷದಾರಿಯಾಗಿ, ಜಯಂತ ನಾಯ್ಕರವರು ಎಲೆಮರೆಯ ಸ್ತ್ರೀವೇಷಧಾರಿಯಾಗಿ ಯಕ್ಪಗಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ. ಇಂತಹ ಮಹಾನ್ ಚೇತನನನ್ನು ಕಳೆದುಕೊಂಡು ಯಕ್ಷಗಾನ ರಂಗ ಬಡವಾಗಿದೆ. ಇವರಿಗೆ ಸಲ್ಲಬೇಕಾದ ಗೌರವ ಸನ್ಮಾನಗಳು ಬಗ್ಗೆ ಹಾಗೂ ಇವರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ, ಕರ್ನಾಟಕ ಜಾನಪದ ಪರಿಷತ್ತು, ಗುರುತಿಸಲಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. ಇಂತಹ ಈ ಮಹಾನ್ ಚೇತನನನ್ನು ಗುರುತಿಸಿ ಮರಣೋತ್ತರ ಪ್ರಶಸ್ತಿ ಸಿಗಲಿ ಎಂದು ಹಾರೈಸುತ್ತೇನೆ.
