ಯಕ್ಷಗಾನ ತಾಳಮದ್ದಳೆ ಪ್ರಿಯರಿಗೆ ಶ್ರೀ ರಾಮ ಜೋಯಿಸ ಎಂಬ ಹೆಸರು ಚಿರ ಪರಿಚಿತ. ಸ್ವತಃ ಕಲಾವಿದನಾಗಿರುವುದರ ಜೊತೆಗೆ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳನ್ನು ಸಂಘಟಿಸುವುದರಲ್ಲಿ ನಿಪುಣ. ಆಟವಾಗಲೀ ಕೂಟವಾಗಲೀ ಪ್ರಸ್ತುತ ಸನ್ನಿವೇಶದಲ್ಲಿ ಸಂಘಟನೆ ಎನ್ನುವುದು ಬಹಳ ದೊಡ್ಡ ಸವಾಲು.
ಪ್ರಮುಖ ಕಲಾವಿದರ ಪಟ್ಟಿಯನ್ನು ನೋಡಿ ಅವರ ಅರ್ಥಗಾರಿಕೆಯನ್ನೋ ಅಥವಾ ವೇಷವನ್ನೋ ನೋಡಲು ಬರುವ ಜನರಿರುವಾಗ ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿಯೋ ಅಥವಾ ಇನ್ನಿತರ ಕಾರಣಗಳಿಗಾಗಿಯೋ ಪ್ರಸಿದ್ಧ ಕಲಾವಿದರು ಪ್ರದರ್ಶನಗಳಿಗೆ ಕೊನೆಯ ಕ್ಷಣದಲ್ಲಿ ಅಲಭ್ಯರಾದಾಗ ಪ್ರೇಕ್ಷಕರ ಅಸಹನೆ, ಕೋಪ, ತಾಪಗಳಿಗೆ ಮೊದಲು ಬಲಿಯಾಗುವುದು ಸಂಘಟಕನೇ ಆಗಿರುತ್ತಾನೆ. ಆದುದರಿಂದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡರೆ ಸಾಲದು. ಅದನ್ನು ಸಮರ್ಥವಾಗಿ ನಿಭಾಯಿಸುವುದು ಹೇಗೆಂದು ತಿಳಿದಿರಬೇಕು. ಇಂತಹಾ ಸಂದರ್ಭಗಳಲ್ಲಿ ನಾಜೂಕಾಗಿ ಬೆಣ್ಣೆಯಿಂದ ಕೂದಲು ತೆಗೆದಂತೆ ಪರಿಸ್ಥಿತಿಯನ್ನು ನಿರ್ವಹಿಸುವ ಹೊಣೆಗಾರಿಕೆ ಸಂಘಟನೆಯನ್ನು ಹೊತ್ತವನ ಜವಾಬ್ದಾರಿ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಈ ರೀತಿಯ ಸಮಸ್ಯೆಗಳು ಹಾಗೂ ಸನ್ನಿವೇಶಗಳು ಉಂಟಾಗದಂತೆ ಎಚ್ಚರ ವಹಿಸುವ ಮತ್ತು ಸುಲಲಿತವಾಗಿ ನಿರ್ವಹಿಸುವ ಜಾಣ್ಮೆ ರಾಮ ಜೋಯಿಸರಲ್ಲಿದೆ. ಆದುದರಿಂದಲೇ ಅವರಿಂದು ತಾಳಮದ್ದಳೆಯ ಪ್ರಮುಖ ಸಂಘಟರಾಗಿ ಗುರುತಿಸಲ್ಪಟ್ಟಿದ್ದಾರೆ. ರಾಮ ಜೋಯಿಸರ ತಂದೆಯ ಹೆಸರು ವೆಂಕಟ್ರಮಣ ಜೋಯಿಸ್ ತಾಯಿ ಲಕ್ಷ್ಮಿ. ನೆಟ್ಟಾರು ಸರಕಾರೀ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಕಾಲೇಜು ವಿದ್ಯಾಭ್ಯಾಸ ಎಸ್. ಡಿ. ಎಂ ಉಜಿರೆ. ಕಾಲೇಜು ವಿದ್ಯಾಭ್ಯಾಸದ ನಂತರ ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದರು. ಅವರು ಈಗ ಕ್ಲಾಸ್ 1 ವಿದ್ಯುತ್ ಗುತ್ತಿಗೆದಾರ , ಎಚ್ ಟಿ ಲೈನ್, ಟ್ರಾನ್ಸ್ ಫಾರ್ಮರ್, ಹೌಸ್ ವೈರಿಂಗ್ , ಕೃಷಿಗೆ ಸಂಬಂಧಿಸಿದ ವಿದ್ಯುತ್ ಸಂಪರ್ಕವೇ ಮೊದಲಾದ ಎಲೆಕ್ಟ್ರಿಕ್ ವಿಭಾಗದಲ್ಲಿ A to Z ಕೆಲಸಗಳನ್ನು ಮಾಡಿಸುವ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್. ಹುಟ್ಟಿದ್ದು ತಮ್ಮ ಬೆಳ್ಳಾರೆಯ ಮನೆಯಲ್ಲಿ.

“ಹವ್ಯಾಸೀ ತಾಳಮದ್ದಳೆಯಲ್ಲಿ ಹವ್ಯಾಸೀ ಅರ್ಥಧಾರಿ ನಾನು” ಬೆಳ್ಳಾರೆ ರಾಮ ಜೋಯಿಸರು ಯಕ್ಷಗಾನ ರಂಗದಲ್ಲಿ ತಮ್ಮ ಸ್ಥಾನದ ಬಗ್ಗೆ ಹೀಗೆ ವ್ಯಾಖ್ಯಾನಿಸುತ್ತಾರೆ. ಮೊದಲು ಆಟಗಳಲ್ಲಿ ವೇಷ ಮಾಡುತಿದ್ದರು. ಆಟದಲ್ಲಿ ಅವರ ಚಂದ್ರಹಾಸ ಪ್ರಸಂಗದ ಮದನನ ಪಾತ್ರವನ್ನು ಸುಣ್ಣಂಬಳ ವಿಶ್ವೇಶ್ವರ ಭಟ್ಟರೇ ಮೆಚ್ಚಿಕೊಂಡಿದ್ದರು. ಆದರೆ ಅವರ ಆಸಕ್ತಿಯ ಕ್ಷೇತ್ರ ಯಕ್ಷಗಾನ ತಾಳಮದ್ದಳೆ. ತಾಳಮದ್ದಳೆಯಲ್ಲಿ ಸತತವಾಗಿ ಭಾಗವಹಿಸುತ್ತಿದ್ದರು. ಅದರಲ್ಲೂ ತಾಳಮದ್ದಲೆಯನ್ನು ಸಂಘಟಿಸುವುದು ಇವರ ಮೆಚ್ಚಿನ ಹವ್ಯಾಸ. ಕ್ರಮೇಣ ವೇಷ ಕಳಚಿದ ಮೇಲೆ ಮುಖದ ಮೇಲೆ ಹಚ್ಚಿದ ಬಣ್ಣವು ಅಲರ್ಜಿಯಾಗುತ್ತಿದ್ದರಿಂದ ಹಾಗೂ ಬಣ್ಣವನ್ನು ತೆಗೆಯುವಲ್ಲಿ ಕಷ್ಟವಾಗುತ್ತಿದ್ದುದರಿಂದ ವೇಷ ಮಾಡುವುದನ್ನು ಬಿಟ್ಟರು.
ತಾಳಮದ್ದಳೆ ಸಂಘಟಿಸುವುದು ಇವರಿಗೆ ಅತ್ಯಂತ ಇಷ್ಟದ ವಿಷಯ. ಹೆಚ್ಚು ಹೆಚ್ಚು ತಾಳಮದ್ದಳೆ ನಡೆಯಬೇಕು. ಒಳ್ಳೆಯ ಕಲಾವಿದರು ಭಾಗವಹಿಸಿ ಒಟ್ಟಿನಲ್ಲಿ ತಾಳಮದ್ದಳೆ ಕಾರ್ಯಕ್ರಮ ಒಳ್ಳೆಯದಾಗಬೇಕು ಎಂದೇ ರಾಮ ಜೋಯಿಸರ ಅಭಿಪ್ರಾಯ ಹಾಗೂ ನಿಲುವು. ಹಾಗೂ ಈ ನಿಲುವಿಗೆ ಬದ್ಧವಾಗಿಯೇ ಅವರು ತಾಳಮದ್ದಳೆ ಕಾರ್ಯಕ್ರಮ ಸಂಘಟಿಸುತ್ತಾರೆ. ಸಂಘಟಕರಿಗೆ ಹಲವಾರು ವಿಚಾರಗಳು ತಿಳಿದಿರಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

“ಯಾವ ಯಾವ ಕಲಾವಿದರಿಗೆ ಯಾವ ಪಾತ್ರವನ್ನು ನೀಡಿದರೆ ತಾಳಮದ್ದಳೆ ಯಶಸ್ವಿಯಾಗಬಹುದು ಎಂಬ ಜ್ಞಾನ ಸಂಘಟಕರಿಗೆ ಗೊತ್ತಿರಬೇಕಾಗುತ್ತದೆ. ಒಟ್ಟು ಪ್ರಸಂಗ ನಿರ್ಧರಿಸಿ ಕಲಾವಿದರನ್ನು ಆಯ್ಕೆ ಮಾಡುವುದಲ್ಲ. ಉದಾಹರಣೆಗೆ ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮ ಪಾತ್ರಧಾರಿಯನ್ನು ಆಯ್ಕೆ ಮಾಡಿದ ಮೇಲೆ, ಭೀಷ್ಮನಿಗೆ ಪ್ರತಿಯಾಗಿ ಇನ್ನೊಬ್ಬರನ್ನು ಅಂಬೆ, ಸಾಳ್ವ, ಪರಶುರಾಮ, ಏಕಲವ್ಯ, ವೃದ್ಧ ಬ್ರಾಹ್ಮಣ ಪಾತ್ರಧಾರಿಗಳಾಗಿ ಆಯ್ಕೆ ಮಾಡುವಾಗ ಹಲವಾರು ಬಾರಿ ಯೋಚಿಸಬೇಕಾಗುತ್ತದೆ. ಈ ತಾಳಮದ್ದಳೆ ಯಶಸ್ವಿಯಾಗಬೇಕಾದರೆ ಭೀಷ್ಮ ಪಾತ್ರಧಾರಿಯ ಮನೋಧರ್ಮಕ್ಕೆ ಅನುಗುಣವಾಗಿ ಅರ್ಥ ಹೇಳುವ ಅಂಬೆ ಪಾತ್ರಧಾರಿ ಯಾರು ಎಂಬುದನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ತಾಳಮದ್ದಳೆ ಸುಸೂತ್ರವಾಗಿ ರಂಜನೆಯನ್ನು ಕೊಡಬೇಕಾದರೆ ಭೀಷ್ಮ ಪಾತ್ರಧಾರಿಯ ಎದುರು ಅಂಬೆ ಯಾರು? ವೃದ್ಧ ಬ್ರಾಹ್ಮಣ ಯಾರು? ಸಾಳ್ವ ಯಾರು? ಪರಶುರಾಮ ಯಾರು? ಏಕಲವ್ಯ ಯಾರು ಎಂಬುದೂ ಮುಖ್ಯವಾಗುತ್ತದೆ. ಆದುದರಿಂದ ಕಲಾವಿದರ ಆಯ್ಕೆಯೂ ತಾಳಮದ್ದಳೆ ಸಂಘಟಕರ ದೊಡ್ಡ ಜವಾಬ್ದಾರಿ” ಎಂದು ರಾಮ ಜೋಯಿಸರು ಹೇಳುತ್ತಾರೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಈ ಎಲ್ಲಾ ವಿಚಾರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದುದರಿಂದಲೇ ತಾಳಮದ್ದಳೆ ಕ್ಷೇತ್ರದಲ್ಲಿ ಸಂಘಟಕರಾಗಿಯೂ ಅರ್ಥಧಾರಿಯಾಗಿಯೂ ಶ್ರೀ ರಾಮ ಜೋಯಿಸರ ಹೆಸರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಮುಖ್ಯ ಪಾತ್ರ ಮಾತ್ರವಲ್ಲದೆ ಅದರ ಎದುರು ಪಾತ್ರಗಳ ಆಯ್ಕೆ ಕೂಡ ಒಂದು ತಾಳಮದ್ದಳೆಯ ಯಶಸ್ಸಿನಲ್ಲಿ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಎಷ್ಟೋ ತಾಳಮದ್ದಲೆಗಳನ್ನು ಸಂಘಟಿಸಿದ ಕೀರ್ತಿ ರಾಮಾ ಜೋಯಿಸರಿಗೆ ಸಲ್ಲುತ್ತದೆ. ಯಕ್ಷಗಾನದ ದಂತಕತೆ ಶೇಣಿ ಗೋಪಾಲಕೃಷ್ಣ ಭಟ್ಟರು ಭಾಗವಹಿಸಿದ ತಾಳಮದ್ದಲೆಗಳನ್ನೂ ಸಂಘಟಿಸಿದ್ದರು. ಇವರ ಅರ್ಥಧಾರಿಗಳ ಆಯ್ಕೆಗೆ ಮತ್ತು ಸಂಘಟನಾ ಚತುರತೆಗೆ ಶೇಣಿಯವರೂ ಒಮ್ಮೆ ಮೆಚ್ಚಿಕೊಂಡು ತಲೆದೂಗಿದ್ದರು.

ತಾಳಮದ್ದಳೆ ಕ್ಷೇತ್ರದಲ್ಲಿಯೂ ಅಥವಾ ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಸಂಘಟನೆ ಎಂಬುದು ಒಂದು ದೊಡ್ಡ ಜವಾಬ್ದಾರಿಯ ಕೆಲಸ. ಸಮಯಕ್ಕೆ ಸರಿಯಾಗಿ ಅನಿವಾರ್ಯ ಕಾರಣದಿಂದಲೋ ಅಥವಾ ಇನ್ನಿತರ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾರಣಗಳಿಂದಲೋ ಕಾರ್ಯಕ್ರಮಕ್ಕೆ ಕಲಾವಿದರು ಅಲಭ್ಯರಾದಾಗ ಸಂಘಟಕರಾದವರು ಇದರ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
“ಆದರೆ ನಾನು ಸಂಘಟಿಸಿದ ಯಾವುದೇ ತಾಳಮದ್ದಳೆಗಳಲ್ಲಿ ಇಂತಹಾ ಯಾವುದೇ ಪ್ರಸಂಗಗಳು ನಡೆದಿಲ್ಲ. ಎಲ್ಲಾ ಕಲಾವಿದರೂ ಸಕಾರಾತ್ಮಕ ಧೋರಣೆಯಿಂದ ಸ್ಪಂದಿಸಿ ಭಾಗವಹಿಸುವುದರ ಮೂಲಕ ಸಹಕರಿಸಿದ್ದಾರೆ. ಇದು ನನ್ನ ಪೂರ್ವಜನ್ಮದ ಪುಣ್ಯವೆಂದೇ ಹೇಳಬೇಕು”. ಎಂದು ಜೋಯಿಸರು ಪ್ರತಿಕ್ರಯಿಸುತ್ತಾರೆ. ಆದರೆ ರಾಮ ಜೋಯಿಸರು ಹೇಳುವಂತೆ ಬರಿಯ ಪೂರ್ವಜನ್ಮದ ಪುಣ್ಯ ಮಾತ್ರದಿಂದಲೇ ಇದು ಸಾಧ್ಯವಾದುದಲ್ಲ. ಪುಣ್ಯದ ಜೊತೆಗೆ ಅವರ ಸಂಘಟನಾ ಕೌಶಲವೂ ಇಲ್ಲಿ ಕೆಲಸ ಮಾಡಿದೆ ಎಂದು ಅನಿಸುತ್ತದೆ. ಕೆಲವೊಮ್ಮೆ ಒಂದರ್ಧ ಘಂಟೆ ತಡವಾಗಿ ಆಗಮಿಸಬೇಕಾದ ಅನಿವಾರ್ಯತೆಯನ್ನು ಕಲಾವಿದರು ಕರೆ ಮಾಡಿ ತಿಳಿಸಿದಾಗ ಮೊದಲಿನ ಅರ್ಥಧಾರಿಯಲ್ಲಿ ಸ್ವಲ್ಪ ಧೀರ್ಘ ಮಾತಾಡುವಂತೆ ಕೇಳಿಕೊಂಡು ಹೊಂದಾಣಿಕೆಯಲ್ಲಿ ತಾಳಮದ್ದಲೆಯನ್ನು ನಡೆಸಿದ್ದೂ ಇದೆ. ಅದರ ಹೊರತಾಗಿ ಯಾವುದೇ ಕಲಾವಿದರು ಗೈರುಹಾಜರಾಗುವ ಪರಿಸ್ಥಿತಿ ಬಂದಿಲ್ಲ ಎಂದು ಅವರು ಹೇಳುತ್ತಾರೆ.
ರಾಮಾ ಜೋಯಿಸರು ಅರ್ಥಧಾರಿಯಾಗಿಯೂ ಈ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. ತಮ್ಮ ವಿಶಿಷ್ಟ ಶೈಲಿಯ ಅರ್ಥಧಾರಿಕೆಯಿಂದ ಪ್ರೇಕ್ಷಕರ ಮನಸ್ಸನ್ನು ಬಹು ಬೇಗನೆ ತಮ್ಮತ್ತ ಸೆಳೆಯಬಲ್ಲವರು. ಮುಖ್ಯ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳು, ಹಾಸ್ಯ ಪಾತ್ರಗಳೇ ಮೊದಲಾದ ಎಲ್ಲ ಪಾತ್ರಗಳ ಅರ್ಥವನ್ನು ಹೇಳಬಲ್ಲಂತಹ ಸಾಮರ್ಥ್ಯ ಅವರಿಗೆ ಇದೆ. ಮುಖ್ಯ ಪಾತ್ರಗಳ ಅರ್ಥವನ್ನು ಹೇಳಬಲ್ಲ ಪ್ರಸಿದ್ಧ ಅರ್ಥಧಾರಿಯೊಬ್ಬ ಒಂದೇ ಪದ್ಯವಿರುವ ಪಾತ್ರದ ಅರ್ಥವನ್ನು ಹೇಳುವುದನ್ನು ಕಾಣುವುದು ಇಂದಿನ ಕಾಲದಲ್ಲಿ ದುರ್ಲಭ. ಆದರೆ ಜೋಯಿಸರು ಯಾವುದೇ ಅರ್ಥವನ್ನು ಹೇಳಬಲ್ಲವರು. ಜಾಂಬವತಿ ಕಲ್ಯಾಣದಲ್ಲಿ ಜಾಂಬವ ಪಾತ್ರದ ಅರ್ಥವನ್ನೂ ಹೇಳುತ್ತಾರೆ. ಇನ್ನೊಮ್ಮೆ ಜಾಂಬವತಿ ಪಾತ್ರದ ಅರ್ಥವನ್ನೂ ಹೇಳುತ್ತಾರೆ. ಸಂಘಟಕನ ನೆಲೆಯಲ್ಲಿ ಅವರ ಈ ನಡೆ ಅವಶ್ಯಕ ಎಂದು ಕಂಡರೂ ತಾನು ಸಂಘಟಕನಾಗಿರದ ಎಷ್ಟೋ ತಾಳಮದ್ದಳೆಗಳಲ್ಲಿ ಮುಖ್ಯ ಪಾತ್ರವನ್ನು ಅವರು ಇತರ ಕಲಾವಿದರಿಗೆ ವಹಿಸುವಂತೆ ಸೂಚಿಸಿದ್ದೂ ಉಂಟು.

ಆದರೂ ಮುಖ್ಯ ಪಾತ್ರಗಳ ಅರ್ಥ ಹೇಳುವಷ್ಟು ತಾಳಮದ್ದಳೆ ಕ್ಷೇತ್ರದಲ್ಲಿ ತಾನಿನ್ನೂ ಬೆಳೆದಿಲ್ಲ ಎಂಬ ವಿನೀತ ಭಾವವನ್ನು ತೋರುವ ರಾಮ ಜೋಯಿಸರು “ಅರ್ಥಗಾರಿಕೆಯ ಅನುಭವದಿಂದಲೇ ಮುಖ್ಯ ಪಾತ್ರಗಳ ನಿರ್ವಹಣೆಯ ಮಟ್ಟಕ್ಕೆ ಕಲಾವಿದನೊಬ್ಬ ಏರಬೇಕು” ಎಂದು ಅಭಿಪ್ರಾಯ ಪಡುತ್ತಾರೆ. ಪೋಷಕ ಪಾತ್ರಗಳ ನಿರ್ವಹಣೆಗಾಗಿ ಎಲ್ಲಾ ಮುಖ್ಯ ಪಾತ್ರಧಾರಿಗಳಿಂದ ಪ್ರಶಂಸೆಯನ್ನು ಪಡೆದವರು. ಪ್ರೇಕ್ಷಕರಿಂದಲೂ ಮೆಚ್ಚುಗೆಯನ್ನು ಗಿಟ್ಟಿಸಿದವರು. ಆದರೂ ಅವರು ಪೋಷಕ ಪಾತ್ರಗಳು ಮಾತ್ರವಲ್ಲದೆ ಮುಖ್ಯ ಪಾತ್ರಗಳ ಅರ್ಥವನ್ನೂ ಹಲವಾರು ಕಡೆಗಳಲ್ಲಿ ಹೇಳಿದ್ದಾರೆ. ಹಾಗೂ ಅದರಲ್ಲಿ ಪರಿಣತಿಯನ್ನೂ ಪಡೆದಿದ್ದಾರೆ. ಸ್ವಭಾವತಃ ಹಾಸ್ಯ ಪ್ರವೃತ್ತಿಯವರಾದ ಇವರು ಹಾಸ್ಯ ಪಾತ್ರಗಳನ್ನು ಸುಲಲಿತವಾಗಿ ನಿರ್ವಹಿಸುತ್ತಾರೆ. ಹಾಸ್ಯ ಪಾತ್ರವನ್ನು ಎಷ್ಟು ವಿನೋದವಾಗಿ ಕಟ್ಟುತ್ತಾರೋ ಮುಖ್ಯಪಾತ್ರದಲ್ಲಿ ತದ್ವಿರುದ್ಧವಾಗಿ ಅಷ್ಟೇ ಗಂಭೀರತೆಯಿಂದ ಪಾತ್ರದರಮನೆಯನ್ನು ಕಟ್ಟಿಕೊಡುತ್ತಾರೆ.
ತಾಳಮದ್ದಳೆಯ ಸಂಘಟನೆಯಲ್ಲಿ ಏನಾದರೂ ಸವಾಲುಗಳಿವೆಯೇ ಎಂಬ ಪ್ರಶ್ನೆಗೆ “ತಾಳಮದ್ದಳೆ ಆಕಾಂಕ್ಷಿಗಳು ತಾಳಮದ್ದಳೆ ಆಗಬೇಕು ಎಂದು ನಮ್ಮನ್ನು ಸಂಪರ್ಕಿಸಿದಲ್ಲಿಂದ, ತೊಡಗಿದಲ್ಲಿಂದ ನಂತರ ಆ ತಾಳಮದ್ದಳೆ ಮುಗಿಯುವ ವರೆಗೂ ಸಂಘಟಕನಿಗೆ ಇದು ಒಂದು ಸವಾಲೇ ಆಗಿರುತ್ತದೆ” ಎಂದು ಅವರು ಉತ್ತರಿಸುತ್ತಾರೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
“ತಾಳಮದ್ದಲೆಯಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಮೊದಲಿನ ತಾಳಮದ್ದಳೆ ಕೂಟಗಳಿಗೂ ಈಗಿನ ತಾಳಮದ್ದಳೆ ಕೂಟಗಳಿಗೂ ತುಂಬಾ ವ್ಯತ್ಯಾಸವಾಗಿದೆ ಎಂಬುದು ನಿಜ. ಯಕ್ಷಗಾನ ಕಾಲಮಿತಿಯ ಪ್ರದರ್ಶನದಂತೆ ತಾಳಮದ್ದಲೆಯಲ್ಲೂ ಸಮಯ ಹೃಸ್ವವಾಗಿದೆ. ಪರಸ್ಪರ ಪೂರಕ ಸಂಭಾಷಣೆಗಳು ಕಡಿಮೆಯಾಗಿವೆ. ವಾದ, ವಿವಾದ, ವಿರೋಧ, ಕುಟುಕುವುದು, ಎದುರು ಪಾತ್ರಧಾರಿಯಿಂದ ತಾನೇ ಮೇಲು ಎಂಬ ಭಾವ ಪ್ರೇಕ್ಷಕರಲ್ಲಿ ಉಂಟುಮಾಡುವುದಕ್ಕೆ ಪ್ರಯತ್ನಿಸುವುದು ಮೊದಲಾದುವುಗಳು ಈಗ ಹೆಚ್ಚಾಗಿವೆ. ಆದರೆ ಇದು ತಪ್ಪು ಎಂದೇನಲ್ಲ. ಇದರ ಜೊತೆಗೆ ಪೂರಕವಾದ ಚುಟುಕು ಸಂಭಾಷಣೆಗಳು ಇದ್ದರೆ ಚಂದ. ಟೇಬಲ್ ಟೆನಿಸ್ ಆಟದಂತೆ ವೇಗದ ಚುಟುಕು ಸಂಭಾಷಣೆಗಳು ಈಗ ಕಾಣಸಿಗುವುದು ಬಹಳ ಅಪರೂಪ. ತಾಳಮದ್ದಳೆ ಎಂದರೆ ಬರಿಯ ಚರ್ಚೆಯಲ್ಲ. ಪೂರ್ವ ಸಿದ್ಧತೆಯಿಲ್ಲದೆ ರಂಗದಲ್ಲಿ ಪ್ರತ್ಯಕ್ಷವಾಗುವ ಉತ್ತರ ಪ್ರತ್ಯುತ್ತರಗಳ ಚುಟುಕು ಸಂಭಾಷಣೆಗಳು ಈಗ ಈ ಕ್ಷೇತ್ರದಿಂದ ನಿಧಾನವಾಗಿ ಮಾಯವಾಗುತ್ತಾ ಇದೆ” ಎಂದು ಜೋಯಿಸರು ಬೇಸರ ವ್ಯಕ್ತಪಡಿಸುತ್ತಾರೆ.
ಹೆಚ್ಚಿನ ಪ್ರೇಕ್ಷಕರು ಸ್ಟಾರ್ ವ್ಯಾಲ್ಯೂ ಇರವ ಕಲಾವಿದರನ್ನೇ ಕೂಟಕ್ಕೆ ಅಪೇಕ್ಷೆಪಡುತ್ತಿರುವುದರಿಂದ ಕೆಲವು ಪ್ರತಿಭಾವಂತ ಅರ್ಥಧಾರಿಗಳು ಮುನ್ನೆಲೆಗೆ ಬಾರದೆ ಹಿನ್ನೆಲೆಯಲ್ಲಿಯೇ ಉಳಿದು ಕೊಂಡಿದ್ದಾರೆ ಎಂಬುದು ನೋವಿನ ವಿಚಾರ ಎನ್ನುವುದು ಅವರ ಅಭಿಪ್ರಾಯ. ಪ್ರಸ್ತುತ ತನ್ನ ಒಡನಾಡಿಗಳಲ್ಲಿ ಎಲ್ಲ ಪಾತ್ರಗಳಲ್ಲೂ ಸಮರ್ಥವಾಗಿ ಅರ್ಥ ಹೇಳುವವರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ವಾಸುದೇವ ರಂಗಾ ಭಟ್ ಅವರನ್ನು ಹೆಚ್ಚಾಗಿ ಮೆಚ್ಚಿಕೊಳ್ಳುವ ರಾಮ ಜೋಯಿಸರು ಇತರ ಪಾತ್ರಧಾರಿಗಳನ್ನು ಅತ್ಯಂತ ಸಮರ್ಥವಾಗಿ ಮಾತನಾಡಿಸುವ ಅರ್ಥಧಾರಿಯೆಂದು ಸರ್ಪಂಗಳ ಈಶ್ವರ ಭಟ್ಟರನ್ನು ಗುರುತಿಸುತ್ತಾರೆ.

ಆದರೆ ಅವರು ಹಿರಿಯರನ್ನು ಗುರುತಿಸುವುದನ್ನು ಮರೆಯುದಿಲ್ಲ. ಹಿರಿಯ ಕಲಾವಿದರಾದ ಶೇಣಿ, ಸಾಮಗ, ಪೆರ್ಲ, ತೆಕ್ಕಟ್ಟೆ, ಜೋಶಿ, ಮೂಡಂಬೈಲು, ಉಡುವೆಕೋಡಿ, ಕುಂಬಳೆ ಮೊದಲಾದವರನ್ನು ಇಷ್ಟಪಡುತ್ತಾರೆ.ರಾಮ ಜೋಯಿಸರು ಹೆಚ್ಚಿನೆಲ್ಲಾ ಕಲಾವಿದರೊಂದಿಗೆ ಅರ್ಥ ಹೇಳಿದ್ದಾರೆ. ಅದರಲ್ಲೂ ಶೇಣಿ, ಪೆರ್ಲ, ತೆಕ್ಕಟ್ಟೆ, ಕುಂಬಳೆ, ಜೋಶಿ, ಮೂಡಂಬೈಲು, ಉಡುವೆಕೋಡಿ, ಮೂಡಂಬೈಲು, ಬರೆ ಕೇಶವ ಭಟ್, ಶಂಭು ಶರ್ಮ, ಜಬ್ಬಾರ್ ಸಮೊ, ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು ಮೊದಲಾದವರೊಂದಿಗೆ ಕೂಟದ ವೇದಿಕೆ ಹಂಚಿಕೊಂಡ ಜೋಯಿಸರು ರಾಮದಾಸ ಸಾಮಗರ ಜೊತೆಗೆ ಹಲವಾರು ಕೂಟಗಳಲ್ಲಿ ಅರ್ಥ ಹೇಳಿದವರು. ರಾಮ ಜೋಯಿಸರ ಅರ್ಥಗಾರಿಕೆಯನ್ನು ರಾಮದಾಸ ಸಾಮಗರು ಮೆಚ್ಚಿ ಪ್ರಶಂಸಿಸಿದ್ದರು.
“ಹಿಂದಿನ ಹಾಸ್ಯಗಾರರಲ್ಲಿ ಜೋಶಿ, ವೇಣೂರು, ನಯನಕುಮಾರ್ ಅವರನ್ನು ಅತಿಯಾಗಿ ಇಷ್ಟಪಡುತ್ತೇನೆ. ಈಗ ಆಟ ಕೂಟಗಳೆರಡರಲ್ಲೂ ಪ್ರಸ್ತುತ ರಂಗದಲ್ಲಿ ನಾನು ಮೆಚ್ಚುವ ಇಬ್ಬರು ಹಾಸ್ಯಗಾರರು ಬಂಟ್ವಾಳ ಜಯರಾಮ ಆಚಾರ್ಯ ಮತ್ತು ರವಿಶಂಕರ ವಳಕ್ಕುಂಜ. ಬಂಟ್ವಾಳ ಜಯರಾಮ ಆಚಾರ್ಯರು ರಂಗದಲ್ಲಿ ಬಂದು ನಿಲ್ಲುವ ಶೈಲಿ, ಹಾಸ್ಯವನ್ನು ಉತ್ಪಾದಿಸುವ ಅವರ ಮುಖ, ಅವರ ಪ್ರತ್ಯುತ್ಪನ್ನಮತಿ ಸಾಮರ್ಥ್ಯಕ್ಕಾಗಿ ಅವರನ್ನು ಮೆಚ್ಚುತ್ತೇನೆ. ಪ್ರದರ್ಶನ ಕೆಡದಂತೆ ಕಾಪಾಡುವುದರಲ್ಲಿ ಹಾಸ್ಯಗಾರನಿಗೆ ವಿಶೇಷ ಜವಾಬ್ದಾರಿಯಿದೆ, ಯಕ್ಷಗಾನದ ಎಲ್ಲಾ ವಿಷಯಗಳೂ ತಿಳಿದಿರಬೇಕು. ಯಾರಾದರೂ ಮುಖ್ಯ ವೇಷಧಾರಿಯ ಅನುಪಸ್ಥಿತಿಯಲ್ಲಿ ಪ್ರದರ್ಶನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಅಥವಾ ಕೆಡದಂತೆ ನಿರ್ದೇಶಿಸುವ ಸಾಮರ್ಥ್ಯ ಇರುವವರಲ್ಲಿ ರವಿಶಂಕರ್ ವಳಕ್ಕುಂಜ ಒಬ್ಬರು. ಕೇವಲ ಹಾಸ್ಯ ಮಾತ್ರವಲ್ಲದೆ ಪುರಾಣಜ್ಞಾನ, ಪ್ರಸಂಗ ನಡೆ ಮುಂತಾದ ಎಲ್ಲಾ ವಿಷಯಗಳನ್ನು ಕರತಲಾಮಲಕ ಮಾಡಿಕೊಂಡ ರವಿಶಂಕರ ವಳಕ್ಕುಂಜರನ್ನು ಮೆಚ್ಚುತ್ತೇನೆ”. ಇದು ಜೋಯಿಸರ ಮಾತುಗಳು.
ತಮ್ಮನ್ನು ತಾವು ಪೋಷಕ ಪಾತ್ರಧಾರಿ ಎಂದು ಹೇಳಿಕೊಂಡರೂ ರಾಮ ಜೋಯಿಸರು ಹೆಚ್ಚಿನ ಮುಖ್ಯ ಪಾತ್ರಗಳಲ್ಲಿಯೂ ಅರ್ಥ ಹೇಳಿದ್ದಾರೆ. ಹಲವಾರು ತಾಳಮದ್ದಳೆಗಳಲ್ಲಿ ಮುಖ್ಯಪಾತ್ರಗಳನ್ನು ನಿರ್ವಹಿಸಿ ಕೂಟ ಸುಸೂತ್ರವಾಗಿ ನಡೆಯುವಂತೆ ಮಾಡಿದ್ದಾರೆ. ಕರ್ಣ ಪರ್ವದ ಕರ್ಣ, ಕೃಷ್ಣಾರ್ಜುನದ ಅರ್ಜುನ, ದಾರುಕ, ಸುಭದ್ರೆ, ಬಲರಾಮ, ಈಶ್ವರ, ವಿದುರ, ಭೀಷ್ಮ, ಜಾಂಬವತಿ ಕಲ್ಯಾಣದ ಜಾಂಬವ ಹಾಗೂ ಹೆಚ್ಚಿನ ಎಲ್ಲಾ ಪೋಷಕ ಹಾಗೂ ಹಾಸ್ಯ ಪಾತ್ರಗಳ ಅರ್ಥವನ್ನು ಹೇಳಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ರಾಮ ಜೋಯಿಸರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದ್ದಾರೆ.
ತಾಳಮದ್ದಳೆಯಲ್ಲಿ ಜೋಯಿಸರಿಗೆ ಯಾರೂ ಗುರುಗಳು ಇಲ್ಲದಿದ್ದರೂ ತಾಳಮದ್ದಳೆಯ ದೊಡ್ಡ ಕೂಟಗಳಿಗೆ ತನ್ನನ್ನು ಪರಿಚಯಿಸಿದ್ದು ಭಾಗವತರಾದ ಪದ್ಯಾಣ ಗಣಪತಿ ಭಟ್ಟರೆಂದು ನೆನಪಿಸಿಕೊಳ್ಳುತ್ತಾರೆ. ತನಗೆ ಅಧ್ಯಯನಾಸಕ್ತಿ ಕಡಿಮೆ ಎಂದು ಅವರು ಹೇಳುಕೊಳ್ಳುತ್ತಾರೆ. ಅನುಭವದಿಂದಲೇ ಕಲಿತ ಅರ್ಥಧಾರಿ ಅವರು. ಗ್ರಂಥಗಳನ್ನು ಓದುವುದು ಕಡಿಮೆ. ಆದರೆ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು ನೋಡಿ, ಕೇಳಿ ಅರ್ಥಗಾರಿಕೆಯ ತಾಂತ್ರಿಕ ಕೌಶಲಗಳನ್ನು ಕಲಿತರು. ಅವರ ಮೇಲೆ ಶೇಣಿಯವರು ಅಷ್ಟೊಂದು ಪ್ರಭಾವ ಬೀರಿದ್ದರು. ಶೇಣಿಯವರ ಎಲ್ಲಾ ಅರ್ಥಗಾರಿಕೆಯ ತುಣುಕುಗಳು ರಾಮ ಜೋಯಿಸರಿಗೆ ಚಿಕ್ಕಂದಿನಲ್ಲಿ ಬಾಯಿಪಾಠ ಬರುತ್ತಿತ್ತಂತೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ರಾಮ ಜೋಯಿಸರ ಅತ್ಯಂತ ಇಷ್ಟದ ಭಾಗವತ ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಖ್ಯಾತ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್. ಇತರ ಭಾಗವತರಾದ ಜಯರಾಮ ಕುದ್ರೆತ್ತಾಯ, ದಾಸರಬೈಲು ಚನಿಯ ನಾಯ್ಕ,ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ರಮೇಶ ಭಟ್ ಪುತ್ತೂರು ಅವರನ್ನು ಮೆಚ್ಚುತ್ತಾರೆ. ಅರ್ಥಧಾರಿಗಳಲ್ಲಿ ಶೇಣಿ, ದೇರಾಜೆಯವರನ್ನು ಇಷ್ಟಪಡುತ್ತಾರೆ.
ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರಿಂದ “ರಾಮ ಜೋಯಿಸರು ಒಬ್ಬ ಕೌಶಲದ ಅರ್ಥಧಾರಿ” ಎಂದು ಪ್ರಶಂಸೆಯನ್ನು ಪಡೆದ ಶ್ರೀ ರಾಮ ಜೋಯಿಸ ಬೆಳ್ಳಾರೆ ಇವರು ಯಕ್ಷಗಾನ ಕ್ಷೇತ್ರ ಕಂಡ ಒಬ್ಬ ಅಪರೂಪದ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ.