Saturday, May 18, 2024
Homeಯಕ್ಷಗಾನರವಿಚಂದ್ರ ಕನ್ನಡಿಕಟ್ಟೆ - ವೇಷಧಾರಿ ಭಾಗವತನಾದ ವಿಸ್ಮಯ

ರವಿಚಂದ್ರ ಕನ್ನಡಿಕಟ್ಟೆ – ವೇಷಧಾರಿ ಭಾಗವತನಾದ ವಿಸ್ಮಯ

 ತೆಂಕುತಿಟ್ಟಿನ ಯುವ ಭಾಗವತ, ಹನುಮಗಿರಿ ಮೇಳದ ಕಲಾವಿದ- ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರು  ವೇಷಧಾರಿಯಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದರೂ ಖ್ಯಾತ ಭಾಗವತನಾದುದು ಒಂದು ಅಚ್ಚರಿ! ಎರಡು ಘಟನೆಗಳೇ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿ ವೇಷಧಾರಿಯಾಗಿದ್ದ ರವಿಚಂದ್ರರು ಭಾಗವತರಾದರು.  

ಶ್ರೀ ರವಿಚಂದ್ರ ಕನ್ನಡಿಕಟ್ಟೆ ಇವರು 1980ನೇ ಇಸವಿ ಒಕ್ಟೋಬರ್ 4ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಕನ್ನಡಿಕಟ್ಟೆ ಸಮೀಪದ ಪಜೆಮಾರು ಎಂಬಲ್ಲಿ ಧರ್ಮಣ ಪೂಜಾರಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಕೃಷಿ ಕುಟುಂಬ. ಪಡಂಗಡಿ ಸರಕಾರಿ ಶಾಲೆಯಲ್ಲಿ ಓದು. ಎಸ್.ಎಸ್.ಎಲ್.ಸಿ.ವರೇಗೆ. ಇವರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು.

ಕನ್ನಡಿಕಟ್ಟೆ ಆಸುಪಾಸಿನಲ್ಲಿ ಸುರತ್ಕಲ್ಲು ಮತ್ತು ಕರ್ನಾಟಕ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಯಾವ ಪ್ರದರ್ಶನಗಳನ್ನೂ ಬಿಟ್ಟವರಲ್ಲ. ಬೆಳಗಿನವರೇಗೂ ನೋಡುತ್ತಿದ್ದರು. ಖ್ಯಾತ ಭಾಗವತ ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಾರಿಕೆಗೆ ರವಿಚಂದ್ರರು ಮನಸೋತಿದ್ದರು. ಅವರ ಹಾಡಿನ ಮೋಡಿಗೆ ಒಳಗಾಗಿದ್ದರು. ಆಗ ಆಡಿಯೋ ಕ್ಯಾಸೆಟ್‍ಗಳ ಯುಗ. ಅಮ್ಮಣ್ಣಾಯರ ಹಾಡುಗಳಿದ್ದ ಕ್ಯಾಸೆಟ್‍ಗಳನ್ನು ಕೇಳುವುದು. ಮನೆಯ ಉಳಿದ ಕ್ಯಾಸೆಟ್‍ಗಳ ಹಾಡುಗಳನ್ನು ಡಿಲೀಟ್ ಮಾಡಿಸಿ ಅಮ್ಮಣ್ಣಾಯರ ಹಾಡುಗಳನ್ನು ತುಂಬಿಸಿ ತಂದು ಕೇಳುವುದು, ಬಿಡುವಿನಲ್ಲಿ ರವಿಚಂದ್ರರು ಮಾಡುತ್ತಿದ್ದ ಕೆಲಸ ಇದು. ಹೀಗೆ ಶ್ರೀ ದಿನೇಶ ಅಮ್ಮಣ್ಣಾಯರು ತನ್ನ ಗಾನಾಮೃತ ಸಿಂಚನದಿಂದ ರವಿಚಂದ್ರ ಎಂಬ ಬಾಲಕನ ಮನಸೂರೆಗೊಂಡಿದ್ದರು.

ಹಿಮ್ಮೇಳವಾಗಲೀ, ಮುಮ್ಮೇಳವಾಗಲೀ ಕಲಾವಿದರು ಅರ್ಪಣಾ ಭಾವದಿಂದ ತೊಡಗಿಸಿಕೊಂಡಾಗ, ಎಳೆಯರಿಗೆ ನಾನೂ ಅವರಂತಾಗಬೇಕೆಂಬ ಆಸೆ ಹುಟ್ಟುವುದು ಸಹಜ. 6ನೆಯ ತರಗತಿಯಲ್ಲಿರುವಾಗ ಗೆಜ್ಜೆಪೂಜೆ ಮತ್ತು ಸಿರಿಕೃಷ್ಣಚಂದಪಾಲಿ ತುಳು ಪ್ರಸಂಗಗಳ ಹಾಡುಗಳುಳ್ಳ ಧ್ವನಿಸುರುಳಿಯನ್ನು ತಂದಿದ್ದರು. ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಳಿಗೆ ಮನಸೋತು ಅವರ ಅಭಿಮಾನಿಯೂ ಆದರು. ಹೀಗೆ ಅಮ್ಮಣ್ಣಾಯರ ಮತ್ತು ಹೊಳ್ಳರ ಅಭಿಮಾನಿಯಾಗಿ ಅವರಿಬ್ಬರ ಹಾಡುಗಳನ್ನು ದಿನಾ ಕೇಳುತ್ತಿದ್ದರು. ಕೇಳಿ ಕೇಳಿ ಪದ್ಯಗಳೆಲ್ಲಾ ಬಾಯಿಪಾಠ!

ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಆಯಿತು. 6ನೇ ತರಗತಿಯಲ್ಲಿರುವಾಗ ಶಾಲಾ ಅಧ್ಯಾಪಕರಾದ ಶ್ರೀ ಅನಂತ ಪದ್ಮನಾಭ ಹೊಳ್ಳರಿಂದ ನಾಟ್ಯ ಕಲಿಕೆ. ಅವರು ಹವ್ಯಾಸೀ ಅತ್ಯುತ್ತಮ ವೇಷಧಾರಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಅವರು ಕಟ್ಟಿ ಬೆಳೆಸಿದ ಪಡಂಗಡಿ ಶಾಲಾ ತಂಡವು ಅತ್ಯುತ್ತಮ ತಂಡವಾಗಿತ್ತು. ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಎಲ್ಲಾ ಶಾಲೆಗಳವರೂ ಈ ತಂಡವನ್ನು ಕರೆಸಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಶ್ರೀ ರವಿಚಂದ್ರರು ಮೊದಲು ಗೆಜ್ಜೆ ಕಟ್ಟಿದ್ದು ಪಡಂಗಡಿ ಶಾಲೆಯಲ್ಲಿ. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ. ಕೃಷ್ಣಾರ್ಜುನ ಕಾಳಗ ಪ್ರಸಂಗದ ‘ಗಯ’ನ ಪಾತ್ರದಲ್ಲಿ. ಪ್ರವೇಶ ಮಾಡುವಾಗಲೇ ಕಟ್ಟಿದ ತುರಾಯಿ ಕೆಳಗೆ ಜಾರಿತ್ತು. ಹೇಗೋ ಸರಿಪಡಿಸಿಕೊಂಡು ಪಾತ್ರವನ್ನು ನಿರ್ವಹಿಸಿದ್ದರು.

ಸುರತ್ಕಲ್ಲು ಮೇಳದಲ್ಲಿ ಆಗ ಕಲಾವಿದನಾಗಿದ್ದ ಖ್ಯಾತ ಪುಂಡುವೇಷಧಾರ ಶ್ರೀ ವೇಣೂರು ಸದಾಶಿವ ಕುಲಾಲರು ನಾಟ್ಯ ಕಲಿಸಲು ಪಡಂಗಡಿ ಶಾಲೆಗೆ ಬರುತ್ತಿದ್ದರು. ಅವರಿಂದಲೂ ರವಿಚಂದ್ರ ಅವರು ನಾಟ್ಯ ಕಲಿತರು. ಅಧ್ಯಾಪಕ ಶ್ರೀ ಅನಂತಪದ್ಮನಾಭ ಹೊಳ್ಳರ ಸಲಹೆಯಂತೆ ಸುರತ್ಕಲ್ ಮೇಳದ ಪ್ರದರ್ಶನಗಳಿಗೂ ಹೋಗುತ್ತಿದ್ದರು. ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ ಶಾಲೆಯಲ್ಲಿ ರವಿಚಂದ್ರರಿಗಿಂತ ಒಂದು ವರ್ಷ ಸೀನಿಯರ್ ವಿದ್ಯಾರ್ಥಿ. ಅವರು ಎಸ್.ಎಸ್.ಎಲ್.ಸಿ. ಆಗಿ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರಕ್ಕೆ ಸೇರಿದ್ದರು. ರವಿಚಂದ್ರರನ್ನು ಎಸ್.ಎಸ್.ಎಲ್.ಸಿ. ಆದ ನಂತರ ಅವರೇ ಲಲಿತ ಕಲಾಕೇಂದ್ರಕ್ಕೆ ಕರೆದೊಯ್ದಿದ್ದರು. ಮೊದಲೇ ರವಿಚಂದ್ರರು ನಾಟ್ಯ ಕಲಿತ ಕಾರಣ ಉಳಿದವರಿಗೆ ಹೇಳಿಕೊಡುವ ಹೊಣೆಯೂ ಸಿಕ್ಕಿತ್ತು.

ಕೇಂದ್ರದಲ್ಲಿ ಇವರ ಸಹಪಾಠಿಗಳಾಗಿದ್ದವರು ಈಗ ವೃತ್ತಿ ಕಲಾವಿದರಾಗಿರುವ ಕೊಂಕಣಾಜೆ ಚಂದ್ರಶೇಖರ ಭಟ್ (ಮದ್ದಳೆಗಾರರು) ಬಾಲಕೃಷ್ಣ ಮಿಜಾರು, ಶ್ರೀನಿವಾಸ ಕುರಿಯಾಳ, ಬೆಳಾಲು ರಮೇಶ ಗೌಡ, ದಿನೇಶ್ ಕೋಡಪದವು ಮೊದಲಾದವರು. ಲಲಿತ ಕಲಾಕೇಂದ್ರದ ಪ್ರದರ್ಶನಗಳಲ್ಲಿ ಪಂಚವಟಿಯ ಶ್ರೀರಾಮ, ಗಿರಿಜಾ ಕಲ್ಯಾಣದ ಮನ್ಮಥ, ವೀರಮಣಿ ಕಾಳಗದ ಹನೂಮಂತ, ಭಾರ್ಗವ ವಿಜಯದ ಭಾರ್ಗವ ಮೊದಲಾದ ವೇಷಗಳನ್ನು ಮಾಡಿದ್ದರು. 

ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿರುವಾಗ ನಡೆದ ಒಂದು ಘಟನೆ- ತರಬೇತಿ ಆರಂಭವಾಗಿ 15 ದಿನಗಳಾಗಿತ್ತು. ರಾತ್ರೆ ಕೊಂಕಣಾಜೆ ಚಂದ್ರಶೇಖರ ಭಟ್ಟರು ಚೆಂಡೆಮದ್ದಳೆ ಅಭ್ಯಾಸ ಮಾಡುತ್ತಿದ್ದರು. ಅವರ ಚೆಂಡೆಗೆ ರವಿಚಂದ್ರರ ಹಾಡು. ‘ಗೆಜ್ಜೆಯ ಪೂಜೆ’ ಮೊದಲಾದ ಪ್ರಸಂಗಗಳ ಹಾಡುಗಳು. ಹೊಳ್ಳರು, ಅಮ್ಮಣ್ಣಾಯರು ಹಾಡಿದ ಪದ್ಯಗಳನ್ನು ಕೇಳಿ ಕಂಠಪಾಠವಾಗಿತ್ತು. ಗುರುಗಳಿಲ್ಲದ ವೇಳೆ ಇದು ನಿರಂತರವಾಗಿ ನಡೆಯುತ್ತಿತ್ತು. ಇದನ್ನು ಮರೆಯಲ್ಲಿ ಬೈಪಾಡಿತ್ತಾಯ ದಂಪತಿಗಳು ಗಮನಿಸಿದ್ದರು. (ಕೇಂದ್ರದ ಹಿಮ್ಮೇಳ ಗುರುಗಳು). ಮರುದಿನ ನಾಟ್ಯ ಬೇಡ. ನೀನು ಪದ್ಯ ಕಲಿ ಎಂದರಂತೆ. ಅಲ್ಲದೆ ರವಿಚಂದ್ರರಲ್ಲಿ ಪದ್ಯಗಳನ್ನೂ ಹೇಳಿಸಿದರಂತೆ.’’ ಕಟ್ಟಿದ ಗೆಜ್ಜೆಯ ನಾದಕೆ ಮರುಗುತ ಇಟ್ಟಳು ಹೆಜ್ಜೆಯ ಬಾರದಲಿ… ಎಂಬ ಹಾಡನ್ನು ಹೇಳಿದರು. ಅಲ್ಲದೆ ಇನ್ನೂ ಕೆಲವು ಪದ್ಯಗಳನ್ನು ಬೈಪಾಡಿತ್ತಾಯ ದಂಪತಿಗಳು ರವಿಚಂದ್ರರಿಂದ ಹೇಳಿಸಿದರು. ಕೊಂಕಣಾಜೆಯವರು ಇವರಿಗೆ ಸಾಥ್ ನೀಡಿದ್ದರು.

ಬೈಪಾಡಿತ್ತಾಯ ದಂಪತಿಗಳಿಂದ ಹಾಡುಗಾರಿಕೆ ಕಲಿಯೆಂಬ ಸೂಚನೆ ಸಿಕ್ಕಿತ್ತು. ಮರುದಿನ ಸಬ್ಬಣಕೋಡಿ ಕೃಷ್ಣ ಭಟ್ಟರು ಬಂದಿದ್ದರು. ವಿಮರ್ಶೆ ನಡೆದು ರವಿಚಂದ್ರರು ಮತ್ತೆ ನಾಟ್ಯ ಕಲಿಯುವ ಮನಮಾಡಿದರು. ‘‘ಅವನು ನಾಟ್ಯ ಕಲಿಯಲಿ. ಆದರೆ ರವಿಚಂದ್ರನು ಮುಂದಕ್ಕೆ ಭಾಗವತನೇ ಆಗುತ್ತಾನೆ’’ ಎಂದಿದ್ದರಂತೆ ಬೈಪಾಡಿತ್ತಾಯ ದಂಪತಿಗಳು. ಅವರು ಪ್ರತಿಭೆಯನ್ನು ಗುರುತಿಸಿದ್ದರು. ಅವರ ಭವಿಷ್ಯವಾಣಿಯು ಇಂದಿಗೆ ನಿಜವಾಗಿದೆ. ರವಿಚಂದ್ರರು ಕೇಂದ್ರದ ವಿದ್ಯಾರ್ಥಿಗಳಲ್ಲಿ ಮೊದಲಿಗನೆಂಬ ಖಾವಂದರ ಪ್ರಶಂಸೆಗೂ ಪಾತ್ರರಾದರು. ಧರ್ಮಸ್ಥಳದ ಲಲಿತ ಕಲಾಕೇಂದ್ರದಲ್ಲಿ ತರಬೇತಿ ಪಡೆದು ಬಂದ ಬಳಿಕ ವೇಣೂರು ಸದಾಶಿವ ಕುಲಾಲರ ಜತೆ ಸುರತ್ಕಲ್ಲು ಮೇಳಕ್ಕೆ ಸೇರಿದ್ದರು. ಮೊದಲು ಬಾಲಗೋಪಾಲರ ವೇಷ. ಎರಡನೆಯ ವರ್ಷ ಮುಖ್ಯ ಸ್ತ್ರೀವೇಷ, ಇನ್ನುಳಿದ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಿರು.

ಹಗಲು ಬಿಡಾರದಲ್ಲಿ ಸಂಗೀತಗಾರ ರಾಧಾಕೃಷ್ಣ ಕಲ್ಲುಗುಂಡಿ ಅವರಿಗೆ ಪಾಠ ಮಾಡುತ್ತಿದ್ದರು. ಆಗ ಮಲಗಿರುತ್ತಿದ್ದ ರವಿಚಂದ್ರರು ಎದೆಗೆ ಕೈಯಿಂದ ಬಡಿಯುತ್ತಾ ತಾಳ ಹಾಕುತ್ತಿದ್ದರಂತೆ. ಇದನ್ನು ಗಮನಿಸಿದ ಪದ್ಯಾಣ ಗಣಪತಿ ಭಟ್ಟರು ಪದ್ಯ ಕಲಿಯುತ್ತಿಯಾ? ಎಂದು ಕೇಳಿದರಂತೆ. ರವಿಚಂದ್ರರಿಗೆ ಸಂತೋಷವಾಗಿತ್ತು. ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲ ಅಂದೇ ಪಾಠ ಆರಂಭವಾಗಿತ್ತು. ಪದ್ಯಾಣರು ಇವರನ್ನು ಶಿಷ್ಯನಾಗಿ ಸ್ವೀಕರಿಸಿದ್ದರು. ಸಂಗೀತಗಾರನು ರಜೆಯಲ್ಲಿರುವಾಗ ಆ ಕರ್ತವ್ಯವನ್ನು ಮಾಡಿ, ಬೆಳಗಿನವರೆಗೂ ಚಕ್ರತಾಳ ಬಾರಿಸುತ್ತಿದ್ದರು. ಸಂಗೀತ ಮಾಡಿದ ದಿನ ವೇಷ ಇರುತ್ತಿರಲಿಲ್ಲ.

1999-2000ನೇ ಸಾಲಿನ ತಿರುಗಾಟ ಮಂಗಳಾದೇವಿ ಮೇಳದಲ್ಲಿ. ಸಂಗೀತಗಾರನಾಗಿ ಸೇರ್ಪಡೆ. ಮುಂದಿನ ವರ್ಷ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ. ಮರುವರ್ಷ ಮತ್ತೆ ಮಂಗಳಾದೇವಿ ಮೇಳಕ್ಕೆ. ಪದ್ಯಾಣ ಗಣಪತಿ ಭಟ್ಟರ ಜತೆ ಭಾಗವತಿಕೆ. 3ನೇ ವರ್ಷದಲ್ಲೇ ರವಿಚಂದ್ರರು 2ನೇ ಭಾಗವತರಾಗಿ ಬೆಳೆದಿದ್ದರು. ಪದ್ಯಾಣರು ಜತೆಯಲ್ಲಿದ್ದು ಹೇಳಿಕೊಡುತ್ತಿದ್ದರು. ಒಂಬತ್ತು ವರ್ಷಗಳ ಕಾಲ ಮಂಗಳಾದೇವಿ ಮೇಳದಲ್ಲಿ 2ನೇ ಭಾಗವತನಾಗಿ ತಿರುಗಾಟ. ಪದ್ಯಾಣರ ಜತೆಗೆ ಬೆಳಗಿನ ವರೆಗೂ ಪ್ರಸಂಗವನ್ನು ಮುನ್ನಡೆಸುವ ಅವಕಾಶಗಳೂ ಸಿಕ್ಕಿತ್ತು.

ಸುರತ್ಕಲ್ ಮೇಳ ನಿಂತ ಬಳಿಕ ಪದ್ಯಾಣರ ಪುತ್ತೂರಿನ ಮನೆಗೆ ಮಳೆಗಾಲ ತೆರಳಿ ಅವರಿಂದ ಕಲಿತಿದ್ದರು. ಸಂಗೀತ ಮತ್ತು ಭಾಗವತಿಕೆಯನ್ನು ತಿಳಿದಿದ್ದ ಪದ್ಯಾಣರ ಪತ್ನಿ ಶ್ರೀಮತಿ ಶೀಲಾ ಗಣಪತಿ ಭಟ್ ಪದ್ಯಾಣ ಅವರೂ ಹೇಳಿಕೊಟ್ಟಿದ್ದರು. ‘‘ನಾನು ಅಲ್ಲಿ ಮನೆಯ ಸದಸ್ಯನಂತೆಯೇ ಇದ್ದೆ. ಅವರು ಊಟ ಮಾಡುವ ಮೊದಲೇ ಶೀಲಕ್ಕ ನನಗೆ ಬಡಿಸುತ್ತಿದ್ದರು. ನನ್ನನ್ನು ಮಗನಂತೆಯೇ ನೋಡಿಕೊಂಡರು’’. ಇದು ರವಿಚಂದ್ರ ಅವರು ಗುರುಪತ್ನಿಯ ಬಗೆಗೆ ಆಡುವ ಗೌರವದ ನುಡಿಗಳು. ಹತ್ತು ತಿರುಗಾಟಗಳಾದ ಮೇಲೆ ಪದ್ಯಾಣ ಗಣಪತಿ ಭಟ್ಟರು ಮಂಗಳಾದೇವಿ ಮೇಳದಿಂದ ಎಡನೀರು ಮೇಳಕ್ಕೆ ಸೇರಿದ್ದರು. ಮತ್ತೆ  5 ವರ್ಷಗಳ ಕಾಲ ಪ್ರಧಾನ ಭಾಗವತನಾಗಿ ಮಂಗಳಾದೇವಿಯಲ್ಲಿ ತಿರುಗಾಟ. ಸಂಗೀತದಿಂದ ತೊಡಗಿ ಬೆಳಗಿನ ವರೇಗೂ ಹಾಡಿದ ದಿನಗಳಿವೆ!

ಈ ಸಂದರ್ಭದಲ್ಲಿಯೂ ಗುರು ಪದ್ಯಾಣರ ಕಲ್ಮಡ್ಕದಲ್ಲಿರುವ ಮನೆಗೆ ಹೋಗಿ ಕಲಿಯುತ್ತಿದ್ದರು. ಸಲಹೆಗಳನ್ನು ಪಡೆಯುತ್ತಿದ್ದರು. ಮಂಗಳಾದೇವಿ ಮೇಳದಲ್ಲಿ ತುಳು ಮತ್ತು ಪುರಾಣ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಕನ್ನಡಿಕಟ್ಟೆ ಅವರು ಅನುಭವವನ್ನು ಗಳಿಸಿದ್ದರು. ಬಳಿಕ ಶ್ಯಾಂ ಭಟ್ಟರ ಕೇಳಿಕೆಯಂತೆ ಹೊಸನಗರ ಮೇಳಕ್ಕೆ.‘‘ಹೊಸನಗರ ಮೇಳ ಮತ್ತು ಪ್ರಸ್ತುತ ಹನುಮಗಿರಿ ಮೇಳದಲ್ಲಿ ಕಳೆದ ಹತ್ತು ವರುಷಗಳಿಂದಲೂ ಗುರುಗಳಾದ ಪದ್ಯಾಣ ಶ್ರೀ ಗಣಪತಿ ಭಟ್ಟರ ಜತೆ ವ್ಯವಸಾಯ (ತನ್ಮಧ್ಯೆ ಒಂದು ವರ್ಷ ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಹೆಸರಿನಿಂದಲೂ ಕಾರ್ಯಾಚರಿಸಿತ್ತು). 

2009ರಲ್ಲಿ ವಿವಾಹ. ಪತ್ನಿ ಶುಭ (ಸೋದರಮಾವ ಶ್ರೀ ಅಮ್ಮು ಪೂಜಾರಿ ಮತ್ತು ಶ್ರೀಮತಿ ರಜನಿ ದಂಪತಿಗಳ ಪುತ್ರಿ). ಶ್ರೀ ರವಿಚಂದ್ರ ಶ್ರೀಮತಿ ಶುಭ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಭವಿಷ್ 4ನೇ ತರಗತಿ ವಿದ್ಯಾರ್ಥಿ. ಪುತ್ರಿ ಕು| ಖುಷಿ 1ನೇ ತರಗತಿ ವಿದ್ಯಾರ್ಥಿನಿ. ಪ್ರಸ್ತುತ ಬೆಳ್ತಂಗಡಿಯಲ್ಲಿ ವಾಸವಾಗಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments