Friday, September 20, 2024
Homeಯಕ್ಷಗಾನಶತಮಾನದ ಕಲಾಸೃಷ್ಟಿ - ಕೆರೆಮನೆ ಶಂಭು ಹೆಗಡೆ 

ಶತಮಾನದ ಕಲಾಸೃಷ್ಟಿ – ಕೆರೆಮನೆ ಶಂಭು ಹೆಗಡೆ 

ಅವರ ಬಗ್ಗೆ ಬರೆಯಬೇಕಾದರೆ ಒಂದೆರಡು ಪುಟಗಳಲ್ಲಿ ಮುಗಿಸುವುದು ಬಹಳ ಕಷ್ಟ. ಅವರ ಬಗ್ಗೆ ಹೆಚ್ಚಿನವರಿಗೂ ತಿಳಿದಿದೆಯಾದರೂ ಅಂತಹಾ ಮಹಾನ್ ಚೇತನದ ಬಗ್ಗೆ ಆಗಾಗ ಒಂದು ಸಣ್ಣ ಸಣ್ಣ ಮೆಲುಕು ಹಾಕುವುದು ಯಕ್ಷಗಾನ ರಂಗಕ್ಕೂ ಒಳ್ಳೆಯದು ಮತ್ತು ಅದು ನಾವು ಅವರಿಗೆ ಸಲ್ಲಿಸುವ ಒಂದು ಸಣ್ಣ ಗೌರವವೂ ಆದೀತು ಎಂದು ಭಾವಿಸುತ್ತೇನೆ.


ರಂಗದಲ್ಲಿ ತಾನು ಮಾಡುವ ಬಗೆ ಬಗೆಯ ಪಾತ್ರಗಳನ್ನು ಹೊರತುಪಡಿಸಿ ನಿಜಜೀವನದಲ್ಲಿಯೂ ತನ್ನ ಬಹುಮುಖೀ ಸಾಧನೆಗಳಿಂದ ಹೇಗೆ ವಿಭಿನ್ನ ರೀತಿಯಾಗಿ ಗೋಚರಿಸಬಹುದು ಎಂಬುದಕ್ಕೆ ದಿ| ಕೆರೆಮನೆ ಶಂಭು ಹೆಗಡೆಯವರು ಒಂದು ಜ್ವಲಂತ ಸಾಕ್ಷಿಯಾಗಿ ಉಳಿದುಬಿಡುತ್ತಾರೆ. ಕಲಾವಿದನೊಬ್ಬ ಗಂಡನಾಗಿ, ತಂದೆಯಾಗಿ, ಮಗನಾಗಿ ತನ್ನ ಸಾಂಸಾರಿಕ ಕರ್ತವ್ಯಗಳನ್ನು ನಿಭಾಯಿಸುವುದು ಬೇರೆ ರೀತಿ. ಹಾಗೆಂದು ಎಲ್ಲ ಕಲಾವಿದರೂ ಇಂತಹಾ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಲಾಗುವುದಿಲ್ಲ.

ಆದರೆ ಇವೆಲ್ಲವುಗಳ ಜೊತೆಗೆ ಕಲಾವಿದನೊಬ್ಬ ಸಂಘಟಕನಾಗಿ, ಮೇಳದ ಯಜಮಾನನಾಗಿ, ವ್ಯವಸ್ಥಾಪಕನಾಗಿ ಹಾಗೂ ಇವೆಲ್ಲವುಗಳ ಜೊತೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಎಲ್ಲವನ್ನೂ ಜೊತೆ ಜೊತೆಗೆ ಸುಲಲಿತವಾಗಿ ನಡೆಸಿಕೊಂಡು ಹೋದ ರೀತಿಯಿದೆಯಲ್ಲ. ಅದಕ್ಕೆ ಬೆರಗಾಗಲೇ ಬೇಕು.


ಖಂಡಿತ ಹುಟ್ಟಿನಿಂದಲೇ ಅವರೊಳಗೊಬ್ಬ MBA ಪದವೀಧರ ಅಡಗಿ ಕುಳಿತಿದ್ದಿರಬಹುದು. ನಿರ್ವಹಣೆ ಅಷ್ಟು ಸುಲಭವಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಕಲಿತವರೆಲ್ಲ ಜೀವನದಲ್ಲಿ ಯಶಸ್ವಿಯಾಗಬೇಕೆಂದೇನಿಲ್ಲ. ಆದರೆ ಶಂಭು ಹೆಗಡೆಯವರು ತನ್ನ ಸ್ವಸಾಮರ್ಥ್ಯದಿಂದ ಸಾಧಿಸಿದುದೇ ಅವರ ಜೀವನದ ಯಶೋಗಾಥೆಯಾಗಿ ಉಳಿದಿದೆ.
ಯಕ್ಷಗಾನ ಕಲಾವಿದನಾಗಿ ಹೇಗೆ ಔನ್ನತ್ಯವನ್ನು ಸಂಪಾದಿಸಬಹುದು ಎಂಬುದಕ್ಕೆ ಅವರೇ ಸಾಕ್ಷಿ. ವೈಯುಕ್ತಿಕ ನೆಲೆಯಲ್ಲಿ ಶಂಭು ಹೆಗಡೆಯವರ ಜೀವನ ಮತ್ತು ಇಡಗುಂಜಿ ಮೇಳದ ಬಗ್ಗೆ ಸಂಶೋಧನಾ ಗ್ರಂಥಗಳೆರಡನ್ನೂ ಬರೆದು ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಇದು ಶಂಭು ಹೆಗಡೆಯವರಿಗೂ ಪರೋಕ್ಷವಾಗಿ ಯಕ್ಷಗಾನ ರಂಗಕ್ಕೂ ಸಂದ ಅತಿ ದೊಡ್ಡ ಗೌರವ.


ಉತ್ತರ ಕನ್ನಡದ ಶ್ರೀಮಂತ ಬಡಾಬಡಗು ತಿಟ್ಟಿನ ಯಕ್ಷಗಾನದ ಕೊಡುಗೆಯಾಗಿ ಶಂಭು ಹೆಗಡೆಯವರು ಮೆರೆದದ್ದು ಈಗ ಇತಿಹಾಸ. ಸರ್ವ ಕಾಲಕ್ಕೂ ಸಲ್ಲುವ ಯಕ್ಷಗಾನದ ಪ್ರತಿನಿಧಿ ಎಂದೇ ಕರೆಯುವ ಕೆರೆಮನೆ    ಶಿವರಾಮ ಹೆಗಡೆಯವರು 1934ರಲ್ಲಿಯೇ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ್ದರು. ಪ್ರಥಮ ಬಾರಿಗೆ ಯಕ್ಷಗಾನ ಕಲಾವಿದನೊಬ್ಬ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕೆರೆಮನೆ ಶಂಭು ಹೆಗಡೆ


ತಂದೆಯಿಂದ ಪಾರಂಪರಿಕವಾಗಿ ಯಕ್ಷಗಾನವನ್ನು ಬಳುವಳಿಯಾಗಿ ಪಡೆದರೂ ತನ್ನ ಸ್ವಸಾಮರ್ಥ್ಯದಿಂದ ಬೆಳೆದು ಯಕ್ಷಗಾನಕ್ಕೊಂದು ಹೊಸ ಹೊಳಪನ್ನು ಕೊಟ್ಟು ಹೊಸ ರೀತಿಯ ಪ್ರಯೋಗಗಳನ್ನು ಯಕ್ಷಗಾನದ ಚೌಕಟ್ಟಿನಲ್ಲಿಯೇ ಬೆಳಕಿಗೆ ತಂದು ತನ್ನದೇ ಛಾಪನ್ನು ಮೂಡಿಸಿದರು.
ಯಕ್ಷಗಾನದ ಆಡುಂಬೊಲವಾಗಿದ್ದ ಕುಟುಂಬದಲ್ಲಿ ಶಂಭು ಹೆಗಡೆಯವರು ಜನಿಸಿದ್ದು 1938ರಲ್ಲಿ. 
ಮಗ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸದಂತೆ ತಂದೆ ಶಿವರಾಮ ಹೆಗಡೆಯವರ ನಿರ್ಬಂಧವಿತ್ತು. ಆದುದರಿಂದ ಮನೆಯಲ್ಲಿ ಯಕ್ಷಗಾನದ ಯಾವುದೇ ಪರಿಕರ, ಸಾಮಗ್ರಿಗಳಿರಲಿಲ್ಲ. ಯಕ್ಷಗಾನದಿಂದ ಮಕ್ಕಳನ್ನು ದೂರವಿಡಬೇಕೆಂಬ ತಂದೆಯ ಬಯಕೆಯಿಂದ ಶಂಭು ಹೆಗಡೆಯವರು ಆಸಕ್ತಿಯಿದ್ದರೂ ಗೆಜ್ಜೆ ಕಟ್ಟುವ ಸಂದರ್ಭ ಎದುರಾಗಲಿಲ್ಲ. ಅವಕಾಶ ಸಿಗಲಿಲ್ಲ.


ತೀರ್ಥರೂಪರಾದ ಶಿವರಾಮ ಹೆಗಡೆಯವರು ಕರ್ಣನಾಗಿ ಪಾತ್ರವಹಿಸಿದ್ದ ‘ಕರ್ಣಪರ್ವ’ ಪ್ರಸಂಗದ ಪ್ರದರ್ಶನದಲ್ಲಿ 1960 ರಲ್ಲಿ ಕೃಷ್ಣನಾಗಿ ಶಂಭು ಹೆಗಡೆಯವರು ರಂಗಸ್ಥಳ ಪ್ರವೇಶಿಸಿದ್ದೇ ಒಂದು ಪವಾಡ ಎಂದು ಹೇಳಬಹುದು. ಶಿವರಾಮ ಹೆಗಡೆಯವರಿಗೆ ಮನಸಿಲ್ಲದಿದ್ದರೂ ಹಿತಚಿಂತಕರ ಒತ್ತಾಯದಿಂದ ಅವರು ಶಿವರಾಮ ಹೆಗಡೆಯವರ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಯಕ್ಷಗಾನ ಶಿಕ್ಷಣ, ತರಗತಿಗಳಿಲ್ಲದಿದ್ದ ಆ ಕಾಲದಲ್ಲಿ ಶಂಭು ಹೆಗಡೆಯವರು ಸಿಕ್ಕಿದ ಸಣ್ಣಪುಟ್ಟ ಪಾತ್ರಗಳನ್ನು  ಮಾಡುತ್ತಾ ನೋಡಿ, ಕೇಳಿ ಯಕ್ಷಗಾನವನ್ನು ಕಲಿತವರು. ತಂದೆಯವರಾದ ಶಿವರಾಮ ಹೆಗಡೆ ಮತ್ತು ಅಣ್ಣ ಕೆರೆಮನೆ ಮಹಾಬಲ ಹೆಗಡೆಯವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಇವರ ಯಕ್ಷಗಾನ ಜೀವನ ಆರಂಭವಾಯಿತು. ವೇಷ ಮಾಡುತ್ತಾ ಕಲಿತರು.

ಒಂದೆರಡು ವರ್ಷಗಳ ನಂತರ ಕರ್ನಾಟಕ ರಾಜ್ಯದ ಸಂಗೀತ ಮತ್ತು ನಾಟಕ ಅಕಾಡೆಮಿಯ ಶಿಷ್ಯವೇತನದಿಂದ ದೆಹಲಿ ಯಲ್ಲಿರುವ ಕೊರಿಯೋಗ್ರಫಿ ನಾಟ್ಯ ಸಂಸ್ಥೆಯ ಮೂರು ವರ್ಷ ಅವಧಿಯ ನಾಟ್ಯ ತರಬೇತಿಯ ಕೊರಿಯೋಗ್ರಫಿ ಡಿಪ್ಲೋಮಾ ಪದವಿಯನ್ನು ಪಡೆದರು. ಕಥಕ್ ಅಭಿನೇತ್ರಿ ಮಾಯಾರಾವ್ ಅವರು ಈ ಸಂಸ್ಥೆಯಲ್ಲಿ ಶಂಭು ಹೆಗಡೆಯವರಿಗೆ ನೃತ್ಯ ಹೇಳಿಕೊಟ್ಟವರು. ಈ ತರಬೇತಿಯ ನಂತರ ಶಂಭು ಹೆಗಡೆಯವರು ಸಾಲಿಗ್ರಾಮ ಮೇಳದಲ್ಲಿ ಕಲಾವಿದನಾಗಿ ತಿರುಗಾಟ ಆರಂಭಿಸಿದರು. ತನ್ನ ಸೃಜನಶೀಲತೆಯಿಂದ ಮದನ, ಸಾಲ್ವ ಮೊದಲಾದ ಪಾತ್ರಗಳಿಗೆ ಹೊಸ ದೃಷ್ಟಿಕೋನ, ರೂಪಗಳಿಂದ ಜೀವ ತುಂಬಿದರು. ಸಾಂಪ್ರದಾಯಿಕ, ಪರಂಪರೆಯ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕೆರೆಮನೆ ಶಂಭು ಹೆಗಡೆಯವರು ಅನಿವಾರ್ಯವಾಗಿ ಸಾಲಿಗ್ರಾಮ ಮೇಳವನ್ನು ಬಿಡಬೇಕಾಯಿತು.


ಕೆಲವೊಂದು ಪಾತ್ರಗಳು ಹೆಸರು ತಂದು ಕೊಟ್ಟಿದ್ದರ ಹೊರತಾಗಿಯೂ ಕಾಲ್ಪನಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಲು ಇಷ್ಟಪಡದ ಹೆಗಡೆಯವರು ಸಾಲಿಗ್ರಾಮ ಮೇಳಕ್ಕೆ ವಿದಾಯ ಹೇಳಿದರು. ತನ್ನ ತಂದೆಯವರು ಸ್ಥಾಪಿಸಿದ್ದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು 1973ರಲ್ಲಿ ಪುನಃ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಡೇರೆಮೇಳವಾಗಿ ತಿರುಗಾಟಕ್ಕೆ ಹೊರಟ ಈ ಮೇಳ ಇಡಗುಂಜಿ ಮೇಳ ಎಂದು ಮನೆಮಾತಾಯಿತು. ಒಂದು ಡೇರೆ ಮೇಳ ಸಂಘಟನೆ ಎಂದರೆ ಅದೊಂದು ಸಾಹಸವೇ. ಡೇರೆ, ವೇಷಭೂಷಣಗಳು, ಕುರ್ಚಿಗಳು, ಜನರೇಟರ್, ಮೈಕ್‍ಸೆಟ್, ವಿದ್ಯುತ್ ದೀಪಗಳು, ರಂಗಸ್ಥಳ, ಲಾರಿ, ಕಲಾವಿದರ ವಾಹನ ಮೊದಲಾದ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ಅಧಿಕ ಬಂಡವಾಳವೇ ಬೇಕು.

ಶಂಭು ಹೆಗಡೆಯವರಿಗೆ ಸಂಘಟಕನಾಗಿ ತಂದೆಯವರ ಕಾಲದಿಂದಲೇ ಅನುಭವವಿದ್ದ ಕಾರಣ ಅವರು ಇದಕ್ಕೆಲ್ಲಾ ಎದೆಗುಂದಲಿಲ್ಲ. ಕಲಾವಿದ, ಸಂಘಟಕ, ವ್ಯವಸ್ಥಾಪಕ- ಹೀಗೆ ಎಲ್ಲಾ ಪಾತ್ರಗಳನ್ನು ತಾವೇ ನಿರ್ವಹಿಸಿ ಇಡಗುಂಜಿ ಮೇಳವನ್ನು ಮನೆ ಮಾತಾಗಿಸಿದರು. ವ್ಯವಸ್ಥೆ, ಪರಂಪರೆ, ಸಂಪ್ರದಾಯಗಳೊಂದಿಗೆ ರಾಜಿಯಾಗದೆ ಪ್ರದರ್ಶನಗಳನ್ನು ನೀಡಿದ ಕೀರ್ತಿ ಇಡಗುಂಜಿ ಮೇಳಕ್ಕೆ ಸಲ್ಲುತ್ತದೆ. ಕೆ. ಶಂಭು ಹೆಗಡೆಯವರು ಕೊನೆಯವರೆಗೂ ಯಕ್ಷಗಾನದ ಮೌಲ್ಯಗಳನ್ನು ಎತ್ತಿಹಿಡಿದು ಕಲೆಯ ಜೊತೆಗೆ ತಾನೂ ಔನ್ನತ್ಯವನ್ನು ಕಂಡವರು.
ವಿಶೇಷ ಆಕರ್ಷಣೆಯೋ ಅಥವಾ ಅತಿಥಿ ಕಲಾವಿದರ ಆಕರ್ಷಣೆಯೋ ಇವೆರಡನ್ನೂ ಶಂಭು ಹೆಗಡೆಯವರು ಕೊನೆಯವರೆಗೆ ವಿರೋಧಿಸಿದ್ದರು. ಇಂತಹಾ ವಿಷಯಗಳಿಗೆ ಅವರು ತಮ್ಮ ಇಡಗುಂಜಿ ಮೇಳದಲ್ಲಿ ಆಸ್ಪದ ಕೊಡುತ್ತಿರಲಿಲ್ಲ.


ಕೆರೆಮನೆ ಶಂಭು ಹೆಗಡೆ

80ರ ದಶಕದ ಸುಮಾರಿಗೆ ಅಂದರೆ 1980ರ ನಂತರ ಶಂಭು ಹೆಗಡೆಯವರ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದುವು. ಗೋವಾ, ಹೈದರಾಬಾದ್, ಯು.ಎ.ಇ., ಬೆಹ್ರೈನ್, ಫ್ರಾನ್ಸ್, ನೇಪಾಳ, ಬಾಂಗ್ಲಾ, ಸ್ಪೇನ್, ಇಂಗ್ಲೆಂಡ್, ಚೀನಾ, ಮಲೇಷಿಯಾ, ಬರ್ಮಾ, ಲಾವೋಸ್, ಪಿಲಿಪೈನ್ಸ್, ಅಮೇರಿಕಾ ಮೊದಲಾದ ದೇಶಗಳಲ್ಲಿ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ನೀಡಿದ ಕೀರ್ತಿ ಶಂಭು ಹೆಗಡೆಯವರಿಗೆ ಸಲ್ಲುತ್ತದೆ.
ಸರಕಾರದ ನೆರವಿನಿಂದ 1986ರಲ್ಲಿ ಯಕ್ಷಗಾನ ರಂಗಶಿಕ್ಷಣ ಕೇಂದ್ರವನ್ನು ಗುಣವಂತೆಯಲ್ಲಿ ಆರಂಭಿಸಿದರು. ಹಿಮ್ಮೇಳ, ಮುಮ್ಮೇಳ ಎರಡನ್ನೂ ಇಲ್ಲಿ ಕಲಿಸುವ ವ್ಯವಸ್ಥೆ ಆರಂಭವಾಗಿತ್ತು. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಅನೇಕ ಮೇಳಗಳಲ್ಲಿ ವೇಷಧಾರಿಗಳಾಗಿ ರಂಜಿಸುತ್ತಿದ್ದಾರೆ.


ಅಕಾಲ ಮೃತ್ಯುವಿಗೀಡಾದ ಕಿರಿಯ ಸಹೋದರ ಪ್ರಸಿದ್ಧ ಕಲಾವಿದ ದಿ| ಗಜಾನನ ಹೆಗಡೆಯವರ ಬಗ್ಗೆ ನೆನಪಿನ ಸಂಚಿಕೆಯನ್ನು ಪ್ರಕಟಿಸಿದ್ದಾರೆ. ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಗುಣವಂತೆಯಲ್ಲಿ ರಂಗಮಂದಿರವನ್ನು ಸ್ಥಾಪಿಸಲಾಗಿದೆ. ತಂದೆಯವರ ಹೆಸರಿನಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನೂ ನೀಡುತ್ತಿದ್ದರು. ಇಡಗುಂಜಿ ಮೇಳದ ಸಂಚಾಲಕರಾಗಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರಾಗಿ, ಯಕ್ಷಗಾನ ರಂಗಶಿಕ್ಷಣ ಕೇಂದ್ರದ ಸ್ಥಾಪಕರಾಗಿ, ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ, ಬೆಂಗಳೂರಿನ ಕೊರಿಯೋಗ್ರಫಿ ಸಂಸ್ಥೆಯ ಸದಸ್ಯರಾಗಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮ ಸಮಿತಿಯ ಸದಸ್ಯರಾಗಿ, ಸ್ಟಿಕ್ ಮೆಕೆಯ ಗುರುವಾಗಿ ಬಹುಮುಖೀ ವ್ಯಕ್ತಿತ್ವದ ಶಂಭು ಹೆಗಡೆಯವರ ಸಾಧನೆಗಳನ್ನು ಬರೆಯುತ್ತಾ ಹೋದರೆ ಪುಟಗಳು ಸಾಲದು.


ಇನ್ನು ಸನ್ಮಾನ ಪ್ರಶಸ್ತಿಗಳ ಬಗ್ಗೆ ಹೇಳುವುದೇ ಬೇಡ. ಸನ್ಮಾನಗಳು ಲೆಕ್ಕವಿಲ್ಲದಷ್ಟು ಬಂದಿವೆ. 1993ರಲ್ಲಿ ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಒಲಿಯಿತು. ಕೆರೆಮನೆ ಕುಟುಂಬವೊಂದರಲ್ಲಿಯೇ ಮೂರು ರಾಷ್ಟ್ರಪ್ರಶಸ್ತಿ ವಿಜೇತರು! ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸನ್ಮಾನ ಪ್ರಶಸ್ತಿಗಳು ಬಂದಿವೆ. ‘ಪರ್ವ’ ಚಲನಚಿತ್ರದ ಅಭಿನಯಕ್ಕೆ ಅತ್ಯುತ್ತಮ ‘ಪೋಷಕ ನಟ’ ಪ್ರಶಸ್ತಿಯ ಗರಿಯೂ ಮುಕುಟಕ್ಕೇರಿತ್ತು.
2009 ಫೆಬ್ರವರಿ 3, ಇಡಗುಂಜಿ ಶ್ರೀ ಕ್ಷೇತ್ರದಲ್ಲಿ ಜಾತ್ರೆ. ಆ ದಿನ ಪ್ರತಿವರ್ಷದಂತೆ ಇಡಗುಂಜಿ ಮೇಳದ ಸೇವೆಯಾಟ. ಸೀತಾವಿಯೋಗ ಪ್ರಸಂಗದ ರಾಮನಾಗಿ ಅಭಿನಯಿಸುತ್ತಿದ್ದ ಶಂಭು ಹೆಗಡೆಯವರು ರಂಗದಲ್ಲಿ ಅಭಿನಯಿಸುತ್ತಿದ್ದಂತೆ ಆಯಾಸಗೊಂಡು ಭಾಗವತರಿಗೆ ಸೂಚನೆ ನೀಡಿ ನೇಪಥ್ಯಕ್ಕೆ ಬರುತ್ತಾ ಕುಸಿದು ಬಿದ್ದರು. ಧಾವಿಸಿ ಆದರಿಸಿದ ಪುತ್ರ ಶಿವಾನಂದ ಹೆಗಡೆ ಮತ್ತಿತರರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಪ್ರಯೋಜನವಾಗಿರಲಿಲ್ಲ. ಆ ದಿನ ಬೆಳಗಿನಜಾವ ಸುಮಾರು ಐದು ಘಂಟೆಯ ಹೊತ್ತಿಗೆ ಯಕ್ಷರಂಗದ ಅನಘ್ರ್ಯರತ್ನ, ಅದಮ್ಯ ಚೇತನವೊಂದು ಕಣ್ಮರೆಯಾಗಿತ್ತು.
ಶಂಭು ಹೆಗಡೆಯವರ ಪತ್ನಿ ಶ್ರೀಮತಿ ಗೌರಿ, ಪುತ್ರ ಖ್ಯಾತ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಪುತ್ರಿ ಶಾರದಾ ಹೀಗೆ ನೆಮ್ಮದಿಯ ಸಂಸಾರವಾಗಿತ್ತು.


ನಾಟಕದ ಅನುಭವಗಳು ಅವರನ್ನು ನಟರನ್ನಾಗಿ ರೂಪಿಸುವಲ್ಲಿ ಸ್ವಲ್ಪಮಟ್ಟಿಗೆ ಸಹಾಯಕವಾದರೂ ಶಂಭು ಹೆಗಡೆಯವರು ಹುಟ್ಟು ಕಲಾವಿದರು ಮಾತ್ರವಲ್ಲ ಅನೇಕ ಪ್ರಯೋಗಶೀಲ ಮನೋಭಾವನೆಯನ್ನು ಹೊಂದಿದ ಕಲಾವಿದ. ಪಾತ್ರದ ಅಭಿನಯಗಳಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ ಕಲಾವಿದ. ಕೊರಿಯೋಗ್ರಫಿ ನೃತ್ಯದ ಡಿಪ್ಲೋಮಾ ಅವರಿಗೆ ಯಕ್ಷಗಾನದಲ್ಲಿ ಆವಿಷ್ಕಾರಗಳನ್ನು ಮಾಡುವುದಕ್ಕೆ ಸಹಾಯಕವಾಯಿತು.
ಹೀಗೆ ಯಕ್ಷಗಾನದ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಮುಂದಿನ ಪೀಳಿಗೆಗೆ ಅಗ್ರಪಂಕ್ತಿಯಲ್ಲಿ ಕಾಣಿಸುವ ಹೆಸರುಗಳಲ್ಲೊಂದು ‘ಕೆರೆಮನೆ ಶಂಭು ಹೆಗಡೆ’ಯ ಹೆಸರು. ಆ ಹೆಸರು ಸೂರ್ಯಚಂದ್ರರಿರುವ ವರೆಗೆ ಅಜರಾಮರವಾಗಿ ಉಳಿಯುತ್ತದೆ ಎಂಬುದು ಯಕ್ಷಪ್ರೇಮಿಗಳೆಲ್ಲರೂ ನಿರ್ವಂಚನೆಯಿಂದ ಒಪ್ಪಿಕೊಳ್ಳುವ ಸತ್ಯ.

ಶಿವರಾಮ ಹೆಗಡೆ, ಶಂಭು ಹೆಗಡೆ, ಶಿವಾನಂದ ಹೆಗಡೆ, ಶ್ರೀಧರ ಹೆಗಡೆ ಹೀಗೆ  ಕೆರೆಮನೆ ವಂಶದ  ಕುಡಿಗಳು ಬೆಳೆಯುತ್ತಾ ಹೋಗಲಿ. ಶಿವಾನಂದ ಹೆಗಡೆಯವರೂ ತಂದೆ ತೋರಿಕೊಟ್ಟ ದಾರಿಯಲ್ಲಿ ಸಾಗುತ್ತಾ ಪ್ರಸಿದ್ಧಿಯ ಪಥದಲ್ಲಿದ್ದಾರೆ. ಇವರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. 

– ಮನಮೋಹನ್ ವಿ. ಎಸ್.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments