ಪ್ರಸ್ತುತ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡುತ್ತಿರುವ ಹಿರಿಯ ಬಣ್ಣದ ವೇಷಧಾರಿಗಳಲ್ಲಿ ನಗ್ರಿ ಮಹಾಬಲ ರೈಗಳೂ ಒಬ್ಬರು. ಈಗ ತಿರುಗಾಟ ನಡೆಸುತ್ತಿರುವ ಬಣ್ಣದ ಕಲಾವಿದರುಗಳ ಪೈಕಿ ಇವರೇ ಅತ್ಯಂತ ಹಿರಿಯರು ಎಂದು ಹೇಳಿದರೆ ತಪ್ಪಾಗಲಾರದು. ಬಣ್ಣದ ವೇಷಕ್ಕೆ ಬೇಕಾದ ಅಗತ್ಯ ಆಳಂಗ, ಸ್ವರವನ್ನು ಹೊಂದಿದ ಕಾರಣ ಇವರು ಧರಿಸಿದ ಪಾತ್ರಗಳು ರಂಗದಲ್ಲಿ ಮೊದಲ ನೋಟಕ್ಕೇ ಪ್ರೇಕ್ಷಕರನ್ನು ರಂಜಿಸುತ್ತವೆ. ಮುಖವರ್ಣಿಕೆ, ಬಣ್ಣದ ನಡೆ, ನಿತವಾದ ಮಾತುಗಳಿಂದ ಇವರು ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಾರೆ.
ಪ್ರಸ್ತುತ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸುತ್ತಿದ್ದಾರೆ. ಮಹಿಷಾಸುರ ಪಾತ್ರ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ನಗ್ರಿ ಮಹಾಬಲ ರೈಗಳು ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ನಗ್ರಿ ಎಂಬಲ್ಲಿ ನಗ್ರಿ ನಾರಾಯಣ ರೈ ಮತ್ತು ಶ್ರೀಮತಿ ರಾಜೀವಿ ರೈ ದಂಪತಿಗಳ ಮಗನಾಗಿ 1959 ಡಿಸೆಂಬರ್ 10ರಂದು ಜನಿಸಿದರು. ನಗ್ರಿ ಶಾಲೆಯಲ್ಲಿ 5ನೆಯ ತರಗತಿ ವರೆಗೆ ಓದಿದ್ದರು.

ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಆಟ ನೋಡುವ ಗೀಳು ಇತ್ತು. ಪರಿಸರದಲ್ಲಿ ಕರ್ನಾಟಕ, ಸುರತ್ಕಲ್, ಧರ್ಮಸ್ಥಳ, ಸುಬ್ರಹ್ಮಣ್ಯ ಮೇಳಗಳ ಆಟಗಳು ನಡೆಯುತ್ತಿತ್ತು. ಗೆಳೆಯರ ಜತೆ ಆಟ ವೀಕ್ಷಣೆ. ಹಗಲು ನಿದ್ದೆ ಮಾಡುವ ಮುನ್ನ ಗೆಳೆಯರ ಜತೆ ಮನೆಯ ಬಳಿ ಅಭಿನಯ. ಹೀಗೆ ಯಕ್ಷಗಾನಾಸಕ್ತಿ ಬೆಳೆದಿತ್ತು. ತಾನೂ ಕಲಾವಿದನಾಗಬೇಕೆಂಬ ಆಸೆಯು ಮನದೊಳಗೆ ಹುಟ್ಟಿಕೊಂಡಿತ್ತು. ಮನೆಯಲ್ಲಿ ಬಡತನವಿತ್ತು. ತಂದೆ ತಾಯಿಯರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ನಗ್ರಿ ಮಹಾಬಲ ರೈಗಳು ಮಿತ್ರರ ಜತೆ ಮಾಯಾನಗರಿ ಮುಂಬೈಗೆ ತೆರಳಿ ಹೋಟೆಲ್ ಕೆಲಸಕ್ಕೆ ಸೇರಿದ್ದರು. 6 ವರ್ಷಗಳ ಕಾಲ ಮುಂಬೈಯಲ್ಲಿದ್ದು ಬಳಿಕ ಮಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಆಟ ನೋಡುತ್ತಿದ್ದರು. ಇವರ ಯಕ್ಷಗಾನಾಸಕ್ತಿಯನ್ನು ಗಮನಿಸಿದ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳು ತಮ್ಮ ಸುಬ್ರಹ್ಮಣ್ಯ ಮೇಳಕ್ಕೆ ಸೇರಿಸಿದರು. ಶೀನಪ್ಪ ಭಂಡಾರಿಗಳ ಸಂಚಾಲಕತ್ವದಲ್ಲಿ ಸುಬ್ರಹ್ಮಣ್ಯ ಮೇಳವು ಆಗ ತಿರುಗಾಟ ನಡೆಸುತ್ತಿತ್ತು. ಅವರು ನಗ್ರಿ ಮಹಾಬಲ ರೈಗಳ ಬಂಧುಗಳೂ ಆಗಿದ್ದರು. 5 ತಿರುಗಾಟ ಸುಬ್ರಹ್ಮಣ್ಯ ಮೇಳದಲ್ಲಿ. ಬಾಲಗೋಪಾಲ, ಸಣ್ಣಪುಟ್ಟ ವೇಷಗಳನ್ನು ಮಾಡಿ ನೇಪಥ್ಯ ಸಹಾಯಕನಾಗಿಯೂ ದುಡಿದಿದ್ದರು. ಹಗಲು ಯಕ್ಷಗಾನಾಭ್ಯಾಸವೂ ನಡೆದಿತ್ತು.

ಸುಬ್ರಹ್ಮಣ್ಯ ಮೇಳದಲ್ಲಿ 5 ತಿರುಗಾಟ ನಡೆಸಿದ ನಂತರ ಸುಗುಣ ಅವರ ಜತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮತ್ತೆ 5 ವರ್ಷಗಳ ತಿರುಗಾಟ. ಹೀಗೆ 10 ವರ್ಷಗಳ ವ್ಯವಸಾಯ ಸುಬ್ರಹ್ಮಣ್ಯ ಮೇಳದಲ್ಲಿ. ಬಳಿಕ 1 ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ. ಬಳಿಕ ಗುಬ್ಯ ಶ್ರೀ ರಾಮಯ್ಯ ರೈಗಳು ನಗ್ರಿ ಮಹಾಬಲ ರೈಗಳನ್ನು ಕಟೀಲು ಮೇಳಕ್ಕೆ ಸೇರಿಸಿದ್ದರು. 3ನೇ ಮೇಳದಲ್ಲಿ ತಿರುಗಾಟ ಹಲವು ವರ್ಷಗಳ ಕಾಲ. ಕುರಿಯದವರ ಮಾರ್ಗದರ್ಶನ. ಗಂಗಯ್ಯ ಶೆಟ್ರ ಒಡನಾಟ. ಬಣ್ಣದ ವೇಷಧಾರಿಯಾಗಿ ಬೆಳೆಯುವುದಕ್ಕೆ ಅನುಕೂಲವಾಗಿತ್ತು. ಗಂಗಯ್ಯ ಶೆಟ್ರ ವೇಷಗಳನ್ನು ನೋಡಿಯೇ ಅಭ್ಯಾಸ ಮಾಡುತ್ತಿದ್ದರು. ಕುರಿಯ ಗಣಪತಿ ಶಾಸ್ತ್ರಿಗಳು, ಪದ್ಯಾಣ ಶಂಕರನಾರಾಯಣ ಭಟ್, ಗಂಗಯ್ಯ ಶೆಟ್ರು ಮೊದಲಾದವರು ನನಗೆ ಮಾರ್ಗದರ್ಶನ ಮಾಡಿದ್ದರು ಎಂದು ನಗ್ರಿ ಮಹಾಬಲ ರೈಗಳು ನೆನಪಿಸುತ್ತಾರೆ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಬಳಿಕ 6 ವರ್ಷ 1ನೇ ಮೇಳದಲ್ಲಿ ತಿರುಗಾಟ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಭಾಗವತಿಕೆ. ಕೊಳ್ಯೂರು ರಾಮಚಂದ್ರ ರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್, ಸುಬ್ರಾಯ ಹೊಳ್ಳ, ಮುಂಡ್ಕೂರು ಜಯರಾಮ ಶೆಟ್ಟಿ(ಹಾಸ್ಯಗಾರ) ಮೊದಲಾದವರ ಒಡನಾಟವೂ ಸಿಕ್ಕಿತ್ತು. ಬಳಿಕ ಮೂರನೇ ಮೇಳಕ್ಕೆ ಮರು ಸೇರ್ಪಡೆ. ಕುರಿಯ ಗಣಪತಿ ಶಾಸ್ತ್ರಿಗಳ ಹಾಡುಗಾರಿಕೆಯಲ್ಲಿ ನಗ್ರಿ ಮಹಾಬಲರ ಮಹಿಷಾಸುರ ಪಾತ್ರವು ರಂಜಿಸಿತ್ತು. ಕುರಿಯ ಭಾಗವತರೇ ಮಹಿಷಾಸುರ ಪಾತ್ರಕ್ಕೆ ಇವರನ್ನು ನಿರ್ದೇಶಿಸಿ ಸಿದ್ಧಗೊಳಿಸಿದ್ದರು. 5ನೇ ಮೇಳ ಆರಂಭವಾದ ಮೇಲೆ ಪಟ್ಲ ಸತೀಶ ಶೆಟ್ಟಿಯವರ ಭಾಗವತಿಕೆಯಲ್ಲಿ 7 ವರ್ಷ ತಿರುಗಾಟ. ಬಳಿಕ ಪ್ರಸಾದ ಬಲಿಪರ ಭಾಗವತಿಕೆಯಲ್ಲಿ 3ನೇ ಮೇಳದಲ್ಲಿ 1 ವರ್ಷ ಕಲಾಸೇವೆ.

ಪ್ರಸ್ತುತ ಬಳ್ಳಮಂಜ ಶ್ರೀನಿವಾಸರ ಭಾಗವತಿಕೆಯಲ್ಲಿ 4ನೆಯ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮಹಿಷಾಸುರ, ಶುಂಭ, ನಿಶುಂಭ, ರಾವಣ, ಕಾಲಜಂಘ, ಕಾಲನೇಮಿ, ಶೂರಪದ್ಮ, ಶತ್ರುಪ್ರಸೂಧನ, ಮತ್ಸ್ಯ, ವರಾಹ, ಸಿಂಹ, ಭೀಮ, ದುಶ್ಶಾಸನ, ತಾಟಕಿ, ಪೂತನಿ, ಲಂಕಿಣಿ, ಶೂರ್ಪನಖಿ, ಮೇಘಸ್ತನಿ, ಕರಾಳನೇತ್ರೆ, ಭಂಡಾಸುರ, ಗೋತ್ರಸ್ತನೆ, ತಾರಕಾಸುರ, ವೀರಭದ್ರ ಮೊದಲಾದ ಪಾತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ವಯಸ್ಸು 60 ದಾಟಿದರೂ ಯುವಕರಂತೆ ರಂಗದಲ್ಲಿ ಅಭಿನಯಿಸುತ್ತಾರೆ. ರಂಗದಲ್ಲಿ ಔದಾಸೀನ್ಯ ಇಲ್ಲದ ಕಲಾವಿದ ನಗ್ರಿ ಮಹಾಬಲ ರೈ. ಒಳ್ಳೆಯ ಕಸುಬುದಾರಿ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಕಷ್ಟಕಾಲದಲ್ಲಿ, ಮಗಳ ವಿವಾಹದ ಸಂದರ್ಭದಲ್ಲಿ ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರೂ, ಪಟ್ಲ ಸತೀಶ ಶೆಟ್ಟರೂ, ಕಲಾಭಿಮಾನಿಗಳೂ ಸಹಕರಿಸಿದ್ದನ್ನು ನೆನಪಿಸಿಕೊಂಡು ಕೃತಜ್ಞರಾಗುತ್ತಾರೆ. ಸಂಸಾರಿಕವಾಗಿಯೂ ತೃಪ್ತರು. ಪತ್ನಿ ಸುಗುಣ. ನಗ್ರಿ ಮಹಾಬಲ ರೈ, ಸುಗುಣ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ನಗ್ರಿ ಶ್ರೀಕಾಂತ್ ರೈ ಮುಂಬೈಯಲ್ಲಿ ಹೋಟೆಲ್ ಮ್ಯಾನೇಜರ್. ಪುತ್ರಿ ಯಶೋದಾ ರೈ ವಿವಾಹಿತೆ. ಅಳಿಯ ನವೀನ ರೈ ಬೊಂಡಾಲ, ಹೊಸಮನೆ. ಮೊಮ್ಮಗಳು ಕು| ಈಶಿತಾ. ಕಿರಿಯ ಪುತ್ರ ಕಿರಣ್ ರೈ ಪದವೀಧರ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಹಿರಿಯ ಬಣ್ಣದ ವೇಷಧಾರಿ ಮಹಿಷಾಸುರ ಖ್ಯಾತಿಯ ನಗ್ರಿ ಮಹಾಬಲ ರೈಗಳಿಂದ ಇನ್ನಷ್ಟು ಕಲಾಸೇವೆ ನಡೆಯಲಿ. ಆರೋಗ್ಯಾದಿ ಭಾಗ್ಯಗಳು ಸಿದ್ಧಿಸಲಿ. ದೇವರು ಅವರ ಮನದ ಆಸೆಗಳನ್ನೆಲ್ಲಾ ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ
