Friday, September 20, 2024
Homeಪುಸ್ತಕ ಮಳಿಗೆಚೆಂಡೆಯ ಮೆಲುನುಡಿ - ಶ್ರೀ ನೆಡ್ಲೆ ನರಸಿಂಹ ಭಟ್ಟರ ಆತ್ಮ ಕಥನ

ಚೆಂಡೆಯ ಮೆಲುನುಡಿ – ಶ್ರೀ ನೆಡ್ಲೆ ನರಸಿಂಹ ಭಟ್ಟರ ಆತ್ಮ ಕಥನ

ಚೆಂಡೆಯ ಮೆಲುನುಡಿ – ಇದು ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರರೂ ಹಿಮ್ಮೇಳ ಗುರುಗಳೂ ಆಗಿದ್ದ ನೆಡ್ಲೆ ಶ್ರೀ ನರಸಿಂಹ ಭಟ್ಟರ ಆತ್ಮಕಥನವು. ಪ್ರಾಧ್ಯಾಪಕ ಲೇಖಕ, ಕಲಾವಿದ, ತಾಳಮದ್ದಳೆ ಅರ್ಥಧಾರಿ  ಶ್ರೀ ಸರ್ಪಂಗಳ ಈಶ್ವರ ಭಟ್ಟರ ನಿರೂಪಣೆಯಲ್ಲಿ ಈ ಕೃತಿಯು ಸಿದ್ಧವಾಗಿತ್ತು. ಪ್ರಕಾಶಕರು – ನೆಡ್ಲೆ ನರಸಿಂಹ ಭಟ್ಟ  ಯಕ್ಷಗಾನ ಪ್ರ್ರತಿಷ್ಠಾನ – ಯೆಯ್ಯಾಡಿ ಮಂಗಳೂರು.

ಈ ಆತ್ಮಕಥನವು 2003ರಲ್ಲಿ ಪ್ರಕಟವಾಗಿತ್ತು. ಮುನ್ನುಡಿಯನ್ನು ಬರೆದವರು ವಿದ್ವಾಂಸ, ವಿಮರ್ಶಕ, ಖ್ಯಾತ ಅರ್ಥಧಾರಿಗಳೂ ಆದ ಡಾ. ಎಂ. ಪ್ರಭಾಕರ ಜೋಶಿ ಅವರು. ನಿರೂಪಕ ಶ್ರೀ ಸರ್ಪಂಗಳ ಈಶ್ವರ ಭಟ್ಟರು ‘ಬರೆದವನ ಬಿನ್ನಹ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ವಿಚಾರಗಳನ್ನು ಸಂಗ್ರಹಿಸಿ, ಮತ್ತೆ ನಿರೂಪಿಸಿ, ಪುಸ್ತಕದ ರೂಪಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಅದೊಂದು ಸಾಧನೆಯೇ ಹೌದು. ನಿರೂಪಕರಾದ ಸರ್ಪಂಗಳ ಈಶ್ವರ ಭಟ್ಟರು ಅಭಿನಂದನೀಯರು. ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ ಶ್ರೀ ನೆಡ್ಲೆ ರಾಮ ಭಟ್ಟರು ‘ಪ್ರಕಾಶನದ ಕುರಿತು’ ಎಂಬ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಆತ್ಮಕಥನವನ್ನು ಹಗಲು ನಿದ್ದೆ, ನೆಡ್ಲೆಯ ನೆಲೆ, ಟಮ್ಕಿಯಿಂದ ಮದ್ದಳೆಗೆ, ಮಕ್ಕಳ ರಾಜ್ಯ, ಮನೆಯಲ್ಲೇ ಸಂಪಾದನೆ, ಶಾಲೆಯ ಆಸೆ ಕಮರಿತು, ಸಂಗೀತ ಕಲಿತದ್ದು, ಭಾಗವತನಾಗುವ ಬಯಕೆ, ಮದ್ದಳೆಗಾರನಾದದ್ದು, ದೂರವಾದ ಸೈಕಲು, ಮೊದಲ ತಿರುಗಾಟ, ಕಲಿಕೆಯೇ ಆಟವಾಯಿತು, ನಿರ್ಣಯದ ನಡೆ, ಮೇಳದ ಕಸುಬೇ ಕಾಯಮ್ಮಾಯಿತು, ನೇವಸ ಅಟ್ಟಿದ ಆಡಿನ ಹಾಲು, ನೆಡ್ಲೆಯಿಂದ ನೆಕ್ಕರೆಕಾಡಿಗೆ, ಎರಡು ಹೊರೆ, ಜೋಡು ಸಾಟಿ ಯಾರಿಗೆ?, ಮತ್ತೆ ನೆಕ್ಕರೆಕಾಡಿಗೆ, ನಿಯಮ ನಿಷ್ಠೆಗೆ ಚ್ಯುತಿ ಇಲ್ಲ, ಹುಲಿಯ ಹೆದರಿಕೆ, ಮದುವೆಯ ಅನುಬಂಧ, ಎಲ್ಲ್ಲಿ ಋಣವಿತ್ತೋ ಬಲ್ಲವರಾರು!, ಆಪದ್ಬಂಧುವಾದ ಚೆಂಡೆ, ಮೇಳ: ಹೊಸ ಬದುಕು!, ಬಸ್ಸಿನ ಸುಖ, ಇತಿ-ಮಿತಿ, ಕಲೆಯೆಂದರೆ ನಿರಂತರ ಕಲಿಕೆ, ಬಲಿಪರ ಬಲಿಪತನ, ಚೆಂಡೆಯೇ ಇಲ್ಲದ ಜೋಡಾಟ, ತಾಸುದ್ದದ ಪೀಠಿಕೆ, ಚೆಂಡೆ ಮದ್ದಳೆಯ ಕೆಲಸ, ಅಬ್ರಾಂಗಾಯಿ ಕೋಲು, ಆಟದ ಟೂರುಗಳು, ನನ್ನ ಶಿಷ್ಯರು, ಹಳತು-ಹೊಸತು, ಖಚಿತತೆ ಬೇಕು, ಸೋಲಿಸಿ ಏನಾಗಬೇಕು?, ನಾನೇ ಮಾಡಿದ ಭಾಗವತ, ವೇಷವೂ ಮಾಡಿದ್ದೇನೆ, ಗಣಪತಿಗೆ ಪಾಯಸ, ಹುಲಿ ಹಿಡಿದ ದನ, ವಿಠಲ ಶಾಸ್ತ್ರಿಗಳ ತಾಂಡವ, ಭಾವ-ಭಾವ, ದುರ್ಗೆಯ ದಯೆ, ನಾನು ಕಟೀಲಿನವನು, ಭ್ರಾಮರೀ ಯಕ್ಷಗಾನ ಮಂಡಳಿ, ನನ್ನ ಯಜಮಾನರು, ಬಹುಜನ ಭಾಗವತರು, ಉಪಕಾರ ಸ್ಮರಣೆ ಎಂಬ ವಿಚಾರಗಳಡಿಯಲ್ಲಿ ಶ್ರೀ ಸರ್ಪಂಗಳ ಈಶ್ವರ ಭಟ್ಟರು ಸುಂದರವಾಗಿ, ಸರಳವಾಗಿ ನಿರೂಪಿಸಿ ಓದುಗರಿಗೆ ನೀಡಿರುತ್ತಾರೆ. ಕೊನೆಯಲ್ಲಿ ಅನುಬಂಧಗಳು ಎಂಬ ಭಾಗವಿದ್ದು ಇಲ್ಲಿ – ಚೆಂಡೆಯ ಗುರಿಕಾರ ನೆಡ್ಲೆ ನರಸಿಂಹ ಭಟ್ಟರು ಎಂಬ ಲೇಖನವನ್ನೂ, ನೆಡ್ಲೆಯವರು ಬರೆದ ಮೂರು ಲೇಖನಗಳನ್ನೂ ನೀಡಲಾಗಿದೆ. ಅಲ್ಲದೆ ಶ್ರೀಯುತರಿಗೆ ಸಂದ ಪ್ರಶಸ್ತಿಗಳು – ಸನ್ಮಾನಗಳ ವಿವರಗಳಿವೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments