Saturday, May 18, 2024
Homeಪುಸ್ತಕ ಮಳಿಗೆರಸಲೋಕ ದ್ರಷ್ಟಾರ ದೇರಾಜೆ ಸೀತಾರಾಮಯ್ಯ 

ರಸಲೋಕ ದ್ರಷ್ಟಾರ ದೇರಾಜೆ ಸೀತಾರಾಮಯ್ಯ 

‘ರಸಲೋಕ ದ್ರಷ್ಟಾರ’ ಯಕ್ಷಗಾನ ಪ್ರಪಂಚದ ‘ರಸಋಷಿ’ ಎಂದೇ ಖ್ಯಾತರಾದ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಕುರಿತಾದ ಹೊತ್ತಗೆಯಿದು. ಈ ಪುಸ್ತಕವು ಹಿರಿಯರಾದ ದೇರಾಜೆಯವರ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಹೊಂದಿ ಅತ್ಯುತ್ತಮವಾಗಿ ಮೂಡಿಬಂದಿದೆ. ಯಕ್ಷಗಾನ ಕಲೆಗೆ, ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಶ್ರೀಯುತರ ಕೊಡುಗೆಗಳು ಅನುಪಮವಾದುದು. ಇವರಿಂದ ರಚಿಸಲ್ಪಟ್ಟ ಶ್ರೀರಾಮಚರಿತಾಮೃತಂ ಮತ್ತು ಶ್ರೀಮನ್ಮಹಾಭಾರತ ಕಥಾಮೃತಂ ಎಂಬ ಎರಡು ಕೃತಿಗಳಂತೂ ಮಹಾನ್ ಕೊಡುಗೆಗಳಾಗಿ ಖ್ಯಾತವಾಗಿವೆ. ಕಲಾವಿದರು, ಅಧ್ಯಯನಶೀಲರು, ಸಾಹಿತ್ಯಾಸಕ್ತರು ಮಾಹಿತಿಗಾಗಿ ಈ ಕೃತಿಗಳನ್ನು ಅವಲಂಬಿಸುವುದು ತಿಳಿದಿರುವ ವಿಚಾರ. ಉಪಯೋಗದ ನೆಲೆಯಿಂದಲೇ ಕೃತಿಯ ಮೌಲ್ಯವನ್ನು ತಿಳಿಯಬಹುದು. ಅಲ್ಲದೆ ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯದ ರೂವಾರಿ, ರಾಮರಾಜ್ಯ ಪೂರ್ವರಂಗ, ಯಕ್ಷಗಾನ ವಿವೇಚನ, ಪ್ರಿಯದರ್ಶನಂ, ಧರ್ಮದಾಸಿ, ವಿಚಾರವಲ್ಲರಿ, ಧರ್ಮದರ್ಶನ, ಶೂರ್ಪನಖಿಯ ಸ್ವರಾಜ್ಯ ಮೊದಲಾದ ಕೃತಿಗಳನ್ನು ಶ್ರೀ ದೇರಾಜೆಯವರು ರಚಿಸಿರುತ್ತಾರೆ. ಶ್ರೀಯುತರ ಬಗೆಗೆ ಈ ಹಿಂದೆ ಲೇಖನವೊಂದನ್ನು ಬರೆದಿದ್ದೆ ಎಂಬ ಸಂತೋಷವಿದೆ. ಅವರ ಕುರಿತಾದ ಈ ಹೊತ್ತಗೆಯನ್ನು ಪರಿಚಯಿಸುವುದು ಭಾಗ್ಯವೆಂದು ಭಾವಿಸುತ್ತೇನೆ. 

‘ರಸಲೋಕ ದ್ರಷ್ಟಾರ’ ಎಂಬ ಈ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು. ಇದರ ಪ್ರಧಾನ ಸಂಪಾದಕರು ಶ್ರೀ ಜಿ. ಎಸ್. ಭಟ್ಟ. ಲೇಖಕರು ಶ್ರೀ ಕೆ. ಶ್ರೀಕರ ಭಟ್ ಮುಂಡಾಜೆ. ನೂರಾ ಇಪ್ಪತ್ತನಾಲ್ಕು ಪುಟಗಳಿಂದ ಕೂಡಿದ ಉತ್ತಮವಾದ ಪುಸ್ತಕ. ಪ್ರಕಾಶಕರು ಚೇತನ್ ಬುಕ್ ಹೌಸ್, ಮೈಸೂರು. ಚೇತನ ಸಾಹಿತ್ಯ ಕಲಾಸಾಧಕರು ಮಾಲಿಕೆಯಡಿ ಈ ಹೊತ್ತಗೆಯು ಮುದ್ರಿಸಲ್ಪಟ್ಟಿದೆ. ಈ ಪುಸ್ತಕದಲ್ಲಿ ದೇರಾಜೆಯವರ ವ್ಯಕ್ತಿತ್ವ, ಸಾಧನೆಗಳನ್ನು ತಿಳಿಸುವ ದೇರಾಜೆ ಸೀತಾರಾಮಯ್ಯ ಸೂಕ್ಷ್ಮ ಪರಿಚಯ, ದೇರಾಜೆ ಎನ್ನುವ ವಿದ್ಯಮಾನ, ಶಿವರಾಮ ಕಾರಂತರ ಮೆಚ್ಚಿನ ‘ಯಕ್ಷಗಾನ ರಾಕ್ಷಸ’, ಮಾತು ಕಾವ್ಯವಾಗುವ ಬಗೆ, ಲಕ್ಷ್ಮೀಶ ತೋಳ್ಪಾಡಿ ಕಂಡಂತೆ ದೇರಾಜೆ, ದೇರಾಜೆಯವರ ಪೂರ್ವರಂಗ, ದೇರಾಜೆಯವರನ್ನು ಮೆಚ್ಚಿಕೊಂಡ ಮಹನೀಯರು, ಅಪ್ಪಯ್ಯನೆಂಬ ಬೆರಗು- ದೇರಾಜೆಯವರ ಮಕ್ಕಳು, ದೇರಾಜೆ ಕೃತಿಗಳ ಕುರಿತು, ನಿತ್ಯ ಜೀವನದಲ್ಲೂ ದೇರಾಜೆ ಮಾತಿನ ಸಿಹಿ, ದೇರಾಜೆ ಸಂದರ್ಶನ, ದೇರಾಜೆ ಬಗ್ಗೆ ಮತ್ತಷ್ಟು ಎಂಬ ಲೇಖನಗಳಿವೆ. ಬಳಿಕ ದೇರಾಜೆ ಕೃತಿಗಳ ಸೂಚಿ, ದೇರಾಜೆ ಲೇಖನಗಳ ಸೂಚಿ, ದೇರಾಜೆಯವರ ಕುರಿತು ಕೃತಿಗಳ ಸೂಚಿ, ದೇರಾಜೆ ಜೀವನದ ಪ್ರಮುಖ ಘಟನೆಗಳ ಸೂಚಿ, ದೇರಾಜೆ ಸ್ಮೃತಿಗೌರವ ಪುರಸ್ಕೃತರ ಸೂಚಿ ಎಂಬ ಶೀರ್ಷಿಕೆಯಡಿ ಮಾಹಿತಿಗಳನ್ನು ನೀಡಲಾಗಿದೆ. ಬಳಿಕ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಮತ್ತು ಲೇಖಕ ಕೆ. ಶ್ರೀಕರ ಭಟ್ಟರ ವ್ಯಕ್ತಿ ಪರಿಚಯವನ್ನು ನೀಡಲಾಗಿದ್ದು ಹೊತ್ತಗೆಯ ಹೊರ ಆವರಣದಲ್ಲಿ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಶುಭ ಹಾರೈಕೆಯ ನುಡಿಗಳನ್ನು ನೀಡಲಾಗಿದೆ. ಹಿರಿಯ ಚೇತನ ದಿ| ದೇರಾಜೆ ಸೀತಾರಾಮಯ್ಯನವರಿಗೆ ಗೌರವಪೂರ್ವಕ ಪ್ರಣಾಮಗಳು. ಈ ಹೊತ್ತಗೆಗೆ ಕಾರಣರಾದ ಎಲ್ಲಾ ಬಂಧುಗಳಿಗೂ ಅಭಿನಂದನೆಗಳು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments