Friday, September 20, 2024
Homeಪುಸ್ತಕ ಮಳಿಗೆಕೋಲ್ಮಿಂಚು - ಕಣ್ಣಿಮನೆ ಗಣಪತಿ ಭಟ್ ಮಾಸದ ನೆನಪು 

ಕೋಲ್ಮಿಂಚು – ಕಣ್ಣಿಮನೆ ಗಣಪತಿ ಭಟ್ ಮಾಸದ ನೆನಪು 

‘ಕೋಲ್ಮಿಂಚು’ ಎಂಬ ಈ ಹೊತ್ತಗೆಯು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ದಿ। ಕಣ್ಣಿಮನೆ ಗಣಪತಿ ಭಟ್ಟರಿಗೆ ಅವರ ಮಿತ್ರರೂ ಕಲಾಭಿಮಾನಿಗಳೂ ಅರ್ಪಿಸಿದ ಅಕ್ಷರ ರೂಪದ ನುಡಿನಮನಗಳೆಂದು ನನ್ನ ಅನಿಸಿಕೆ. ಕಣ್ಣಿಮನೆಯವರ ಕುಣಿತ ಮತ್ತು ಅಭಿನಯ ಚಾತುರ್ಯಗಳು ಯುವ ಪೀಳಿಗೆಯನ್ನು ಬಹು ಬೇಗನೆ ಯಕ್ಷಗಾನ ಪ್ರದರ್ಶನಗಳತ್ತ ಸೆಳೆಯಲು ಕಾರಣವಾದದ್ದಂತೂ ಸತ್ಯ. ಚಿಟ್ಟಾಣಿಯವರಂತೆ ಇವರೂ ತನ್ನ ಕಲಾಪ್ರೌಢಿಮೆಯ ಮೋಡಿಯನ್ನು ಬೀರಿ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಈ ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಇವರು ನಿಜವಾಗಿಯೂ ರಂಗಸ್ಥಳದ ಕೋಲ್ಮಿಂಚೇ ಆಗಿದ್ದರು. ಪಾದರಸದಂತಹ ಚುರುಕುತನ, ಅದ್ಭುತವಾದ ಗ್ರಹಣಶಕ್ತಿಗಳೆಂಬ ಗುಣಗಳಿಂದ ಇವರು ಕ್ಷಿಪ್ರಾತಿಕ್ಷಿಪ್ರ ಕಲಾವಿದನಾಗಿ ಬೆಳೆದು ಖ್ಯಾತರಾಗಿದ್ದರು. 1969 ಜುಲೈ 1ರಂದು ಶ್ರೀ ಮಂಜುನಾಥ ಭಟ್ಟ  ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಮಗನಾಗಿ ಹೊನ್ನಾವರ ತಾಲೂಕು ಮುಗ್ವಾ ಗ್ರಾಮದ ಕಣ್ಣಿಮನೆ ಎಂಬಲ್ಲಿ ಇವರ ಜನನ. ಓದಿದ್ದು ಹತ್ತನೇ ತರಗತಿ ವರೆಗೆ. ಮನೆಯವರಾರೂ ಕಲಾವಿದರಲ್ಲದಿದ್ದರೂ ಬಾಲ್ಯದಲ್ಲಿ ಪ್ರದರ್ಶನಗಳನ್ನು ನೋಡಿಯೇ ಯಕ್ಷಗಾನಾಸಕ್ತರಾಗಿದ್ದರು. ಕಲಾಕ್ಷೇತ್ರದಲ್ಲಿ ಇವರದು ಕ್ಷಿಪ್ರ ಬೆಳವಣಿಗೆ. ಆಸಕ್ತಿ, ಅಧ್ಯಯನ, ಸಾಧನೆಗಳೇ ಇದಕ್ಕೆ ಕಾರಣ. ತಮ್ಮ ವಿಶಿಷ್ಟವಾದ ಕುಣಿತ ಮತ್ತು ಅಭಿನಯಗಳಿಂದ ‘ಕಣ್ಣಿ ಶೈಲಿ’ಗೆ ಕಾರಣರಾದರು. ಕಿರಿಯ ವಯಸ್ಸಿನ ಅತ್ಯಲ್ಪ ಅವಧಿಯಲ್ಲಿ ಅಪಾರ ಅಭಿಮಾನಿಗಳನ್ನೂ ಜನಪ್ರಿಯತೆಯನ್ನೂ ಗಳಿಸಿದ ಕಲಾವಿದರುಗಳಲ್ಲಿ ಕಣ್ಣಿಮನೆ ಗಣಪತಿ ಭಟ್ಟರೂ ಒಬ್ಬರು. ನಾಟ್ಯ ಮತ್ತು ಅಭಿನಯ ಸಾಮರ್ಥ್ಯಗಳಿಂದ ಕಲಾಭಿಮಾನಿಗಳ ಮನಸೂರೆಗೊಂಡು ಮೆರೆದ ಶ್ರೀಯುತರು 2016 ಫೆಬ್ರವರಿ 18ರಂದು ತನ್ನ ನಲುವತ್ತೇಳನೆಯ ವಯಸ್ಸಿನಲ್ಲಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು. ಕಲಾಭಿಮಾನಿಗಳು ಕಣ್ಣಿಮನೆಯವರು ಇನ್ನಿಲ್ಲ ಎಂದು ತಿಳಿದು ಕಣ್ಣೀರು ಸುರಿಸಿದ್ದರು. ನೆರೆಯವರಿಂದ, ಮಿತ್ರರಿಂದ ಗಪ್ಪಣ್ಣ, ಗುಂಡಣ್ಣ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಶ್ರೀ ಕಣ್ಣಿಮನೆಯವರ ಕಾಯವು ಅಳಿದರೂ ಗಳಿಸಿದ ಕೀರ್ತಿಯು ಉಳಿದಿದೆ. ಕಲಾಭಿಮಾನಿಗಳಿಗೆ ಅವರ ನೆನಪು ಯಾವತ್ತೂ ಮಾಸದು.

‘ಕೋಲ್ಮಿಂಚು’ ಎಂಬ ಈ ಪುಸ್ತಕವು ಪ್ರಕಟವಾದದ್ದು 2017ರಲ್ಲಿ. ಪ್ರಕಾಶಕರು ಸುಬ್ರಾಯ ಗಣೇಶ ಹೆಗಡೆ ಮತ್ತಿಗಾರ. ಯಮುನಾ ಪ್ರಕಾಶನ, ಸಂಪಗೋಡ, ಉತ್ತರ ಕನ್ನಡ ಜಿಲ್ಲೆ. ಸಂಪಾದಕರು ಶ್ರೀ ನಾಗರಾಜ ಮತ್ತಿಗಾರ. ‘ಸ್ಮರಣೆಯ ಧಾಖಲಾತಿ’ ಎಂಬ ಶೀರ್ಷಿಕೆಯಡಿ ಇವರ ಲೇಖನವಿದೆ. ‘ಯಕ್ಷಗಾನದ ಏಕಲವ್ಯ’ ಎಂಬ ಶೀರ್ಷಿಕೆಯಡಿ ಹಿರಿಯ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಮುನ್ನುಡಿಯನ್ನು ಬರೆದಿದ್ದಾರೆ. ಕಷ್ಟ ಮುಚ್ಚಿಟ್ಟು ನಗು ಹಂಚಿದವರು ಎಂಬ ತಲೆಬರಹದಡಿ ಕಣ್ಣಿಮನೆಯವರ ಪತ್ನಿ ಶ್ರೀಮತಿ ಲಲಿತಾ ಗಣಪತಿ ಭಟ್ ಅವರ ಲೇಖನವಿದೆ. ಪ್ರಕಾಶಕರಾದ ಶ್ರೀ ಸುಬ್ರಾಯ ಗಣೇಶ ಹೆಗಡೆ ಅವರು ತಮ್ಮ ಅನಿಸಿಕೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಬಳಿಕ ‘ಪುಟ ತೆರೆದಂತೆ’ , ‘ಚೌಕಿಮನೆ’, ‘ರಂಗಸ್ಥಳ’, ‘ಪ್ರೇಕ್ಷಕ’ ಎಂಬ ವಿಭಾಗಗಳಲ್ಲಿ ಮೂವತ್ತೈದು ಮಂದಿ ಮಹನೀಯರುಗಳ ಲೇಖನವಿದ್ದು ಕಣ್ಣಿಮನೆಯವರ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಲೇಖನಗಳನ್ನು ಬರೆದವರು ನಾಗರಾಜ ಮತ್ತಿಗಾರ, ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಡಾ. ಶ್ರೀಪಾದ ಶೆಟ್ಟಿ ಹೊನ್ನಾವರ, ಶ್ರೀಪಾದ ಹೆಗಡೆ ಹಡಿನಬಾಳ, ನಾರಾಯಣ ಯಾಜಿ ಸಾಲೇಬೈಲು, ರಮೇಶ ಭಂಡಾರಿ, ವಿ. ಉಮಾಕಾಂತ ಭಟ್ಟ, ಗಣಪತಿ ಹೆಗಡೆ ತೋಟಿಮನೆ, ಗೋಪಾಲ ಗ. ಹೆಗಡೆ, ಮಂಜುನಾಥ ಭಾಗವತ ಹೊಸ್ತೋಟ, ಗೋಡೆ ನಾರಾಯಣ ಹೆಗಡೆ, ಕೃಷ್ಣಯಾಜಿ ಬಳ್ಕೂರು, ಭಾಸ್ಕರ ಜೋಶಿ ಶಿರಳಗಿ, ಸುಬ್ರಹ್ಮಣ್ಯ ಧಾರೇಶ್ವರ, ಕೊಂಡದಕುಳಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಯಲಗುಪ್ಪ, ಎಂ. ಎ. ನಾಯ್ಕ ಮಂದರ್ತಿ, ವಿದ್ವಾನ್ ಗಣಪತಿ ಭಟ್ಟ, ಎಂ. ಕೆ. ರಮೇಶ ಆಚಾರ್ಯ, ನೀಲ್ಕೋಡು ಶಂಕರ ಹೆಗಡೆ, ಸುರೇಶ್ ಶೆಟ್ಟಿ, ರಾಘವೇಂದ್ರ ಮಯ್ಯ, ಜಲವಳ್ಳಿ ವಿದ್ಯಾಧರ ರಾವ್, ರಾಜಶೇಖರ ಹೆಬ್ಬಾರ್, ಮನೋಜ್ ಕುಮಾರ ಭಟ್, ಸೂರ್ಯ ಭಟ್ ಸಣ್ಣ ಗದ್ದೆ, ಗಣಪತಿ ಹೆಗಡೆ ಕಪ್ಪೆಕೆರೆ, ಬಿ. ಲಕ್ಷ್ಮೀನಾರಾಯಣ, ವಿ. ಮಂಜುನಾಥ ತೋಳ್ಗರಗದ್ದೆ, ಶಶಿಧರ ಹೆಗಡೆ ನಂದಿಕಲ್, ಕುಮಾರ ಭಟ್ ಸಾಗರ, ಪವನಕುಮಾರ ಉಪಾಧ್ಯ, ಗಜಾನನ ಈಶ್ವರ ಹೆಗಡೆ, ಜಿ. ಯೋಗೀಶ ಸಾಗರ, ಸುಧಾಕಿರಣ್ ಅಧಿಕಶ್ರೇಣಿ ಇವರುಗಳು. ಕೊನೆಯಲ್ಲಿ ‘ಭಾವಪಟ’ ವಿಭಾಗದಲ್ಲಿ ಬಣ್ಣದ ಛಾಯಾಚಿತ್ರಗಳ ಸಂಗ್ರಹವನ್ನೂ ನೀಡಲಾಗಿದೆ. ಲೇಖನಗಳ ಜೊತೆಗೆ ಕಣ್ಣಿಮನೆಯವರ ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನೂ ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಖ್ಯಾತ ಹಿರಿಯ ಕಲಾವಿದರಾದ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರು ಕಣ್ಣಿಮನೆಯವರ ಬಗೆಗೆ ಬರೆದ ‘ಮಿಂಚಿನ ಪ್ರವೇಶದ ಸರದಾರ’ ಎಂಬ ಲೇಖನವಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments