Saturday, May 18, 2024
Homeಪುಸ್ತಕ ಮಳಿಗೆ'ಯಕ್ಷಭೃಂಗ' - ಕುಬಣೂರು ಶ್ರೀಧರ ರಾವ್ ಅಭಿನಂದನಾ ಸಮಿತಿ

‘ಯಕ್ಷಭೃಂಗ’ – ಕುಬಣೂರು ಶ್ರೀಧರ ರಾವ್ ಅಭಿನಂದನಾ ಸಮಿತಿ

ಶ್ರೀ ಕುಬಣೂರು ಶ್ರೀಧರ ರಾಯರು ಕಟೀಲು ಮೇಳದ ಹಿರಿಯ ಭಾಗವತರಾಗಿದ್ದವರು. ಭಾಗವತರಾಗಿ ಮಾತ್ರವಲ್ಲ, ಪ್ರಸಂಗಕರ್ತರಾಗಿಯೂ ಪತ್ರಿಕೋದ್ಯಮಿಯಾಗಿಯೂ ಸರಳ ಸಜ್ಜನರಾಗಿಯೂ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಮನುವಂಶವಾಹಿನಿ, ದಾಶರಥಿದರ್ಶನ, ಸಾರ್ವಭೌಮ ಸಂಕರ್ಷಣ ಮೊದಲಾದ ಪ್ರಸಂಗಗಳನ್ನು ರಚಿಸಿ ಕಲಾಮಾತೆಯ ಸೇವೆಯನ್ನು ಮಾಡಿದ್ದರು. ಯಕ್ಷಪ್ರಭಾ ಎಂಬ ಯಕ್ಷಗಾನ ಪತ್ರಿಕೆಯನ್ನು ಅನೇಕ ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದ್ದರು. ಅವರೊಂದಿಗೆ ಹದಿನಾರು ವರ್ಷಗಳ ತಿರುಗಾಟವು ಮರೆಯಲಾಗದ ಅನುಭವ. ‘ಸಾಮೀಪ್ಯದ ಸವಿಯುಂಡ ಹದಿನಾರು ವರ್ಷಗಳು’ ಎಂಬ ಲೇಖನವನ್ನು ಬರೆದಿದ್ದೆ. ಶ್ರೀಯುತರು ಈ ಹಿಂದೆ ಕಟೀಲು ಮೇಳದ ಯಜಮಾನರಾಗಿದ್ದ ಕಟೀಲು ಶ್ರೀ ವಿಠಲ ಶೆಟ್ಟಿಯವರ ಬಗೆಗೂ ಪುಸ್ತಕವೊಂದನ್ನು ಬರೆದಿದ್ದರು. ಇವರನ್ನು ಗೌರವಿಸಿ ಅಭಿನಂದಿಸಬೇಕೆಂಬ ಉದ್ದೇಶದಿಂದ 2016ರಲ್ಲಿ ಶ್ರೀ ಕಟೀಲು ಕ್ಷೇತ್ರದಲ್ಲಿ ಕುಬಣೂರು ಅಭಿನಂದನಾ ಸಮಿತಿಯು ರೂಪೀಕರಣಗೊಂಡಿತ್ತು. ಅಲ್ಲದೆ ‘ಶ್ರೀಧರಾಯಣ’ ಎಂಬ ಕಾರ್ಯಕ್ರಮದಡಿಯಲ್ಲಿ ಕುಬಣೂರು ಭಾಗವತರನ್ನು ಅಭಿನಂದಿಸಿ ಗೌರವಿಸಲಾಗಿತ್ತು. ಯಕ್ಷಗಾನ ಭಾಗವತ ಕುಬಣೂರು ಶ್ರೀಧರ ರಾವ್ ಇವರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಯಕ್ಷಗಾನೋಚಿತ ಮೌಲಿಕ ವಿದ್ವಾಂಸರ ಲೇಖನಗಳನ್ನು ಒಳಗೊಂಡ ‘ಯಕ್ಷಭೃಂಗ’ ಎಂಬ ಪುಸ್ತಕವು ಪ್ರಕಟವಾದದ್ದು ಸಂತೋಷದ ವಿಚಾರ. ಇದು ನೂರಾ ಎಪ್ಪತ್ತಕ್ಕಿಂತ ಅಧಿಕ ಪುಟಗಳನ್ನೂ ಹೊಂದಿದೆ. ಇದರ ಪ್ರಕಾಶಕರು ‘ಕುಬಣೂರು ಅಭಿನಂದನ ಸಮಿತಿ’. ಪ್ರಕಟಣಾ ಪ್ರಾಯೋಜಕತ್ವವನ್ನು ವಹಿಸಿದವರು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ) ಸಂಪಾಜೆ.

ಈ ಪುಸ್ತಕದಲ್ಲಿ ಕುಬಣೂರು ಅಭಿನಂದನಾ ಸಮಿತಿಯ ಅಧ್ಯಕ್ಷರಾದ ವಿದ್ವಾನ್ ಶ್ರೀಹರಿನಾರಾಯಣದಾಸ ಅಸ್ರಣ್ಣರು ತಮ್ಮ ಪ್ರಾಸ್ತಾವಿಕ ಮಾತುಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ‘ಜೀವನ ಚರಿತ್ರೆ’ ಶೀರ್ಷಿಕೆಯಡಿಯಲ್ಲಿ ಕುಬಣೂರು ಶ್ರೀಧರ ರಾಯರು ತಮ್ಮ ಬದುಕಿನ ವಿವಿಧ ಹಂತಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಲೇಖನದ ಕೊನೆಯಲ್ಲಿ ಭಾಗವತರು ‘ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ’ ಎಂಬ ಸೊಲ್ಲನ್ನು ನಮೂದಿಸಿದ್ದರು. ಬಳಿಕ ಕುಬಣೂರು ಭಾಗವತರಿಗೆ ಸಂದ ಗೌರವ ಸನ್ಮಾನಗಳ ವಿವರಗಳನ್ನು ನೀಡಲಾಗಿದೆ. ಬಳಿಕ ಡಾ. ಎಂ. ಪ್ರಭಾಕರ ಜೋಶಿ, ಎಂ. ವಿ. ಹೆಗಡೆ ಶಿರಸಿ, ಕೆ. ಗೋವಿಂದ ಭಟ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ, ಪ್ರೊ| ಎಸ್. ವಿ. ಉದಯಕುಮಾರ್ ಶೆಟ್ಟಿ, ಮಧೂರು ವೆಂಕಟಕೃಷ್ಣ, ಡಾ. ಕೊಳ್ಯೂರು ರಾಮಚಂದ್ರ ರಾವ್, ಶ್ರೀಧರ ಡಿ. ಎಸ್., ಕಮಲಾದೇವಿ ಪ್ರಸಾದ ಅಸ್ರಣ್ಣ, ರವೀಂದ್ರ ಅತ್ತೂರು, ಕೃಷ್ಣಪ್ರಕಾಶ ಉಳಿತ್ತಾಯ, ಸುಣ್ಣಂಬಳ ವಿಶ್ವೇಶ್ವರ ಭಟ್,ಕಾಸರಗೋಡು ಸುಬ್ರಾಯ ಹೊಳ್ಳ, ತಾರಾನಾಥ ವರ್ಕಾಡಿ, ವಿಷ್ಣು ಶರ್ಮ ಪಣಕಜೆ, ರವಿಶಂಕರ ವಳಕ್ಕುಂಜ, ಅಂಡಾಲ ದೇವಿಪ್ರಸಾದ ಶೆಟ್ಟಿ, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಳೆ, ಡಾ. ಶ್ರುತಕೀರ್ತಿ ರಾಜ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಇವರುಗಳ ಲೇಖನಗಳಿವೆ. ಅಲ್ಲದೆ ಕುಬಣೂರು ಅಭಿನಂದನಾ ಸಮಿತಿಯ ಪದಾಧಿಕಾರಿಗಳನ್ನೂ ಪರಿಚಯಿಸಲಾಗಿದೆ. ಭಾಗವತ ಕುಬಣೂರು ಶ್ರೀಧರ ರಾಯರ ಕಾಯ ಅಳಿದರೂ ಕೀರ್ತಿಯು ಉಳಿದಿದೆ. ಅವರ ನೆನಪು ಮತ್ತು ಅವರು ನಮ್ಮ ಜತೆಯಾಗಿ ಇಲ್ಲ ಎಂಬ ನೋವು ಸದಾ ಇರುತ್ತದೆ. ಹಿರಿಯರಾದ ಶ್ರೀ ಕುಬಣೂರು ಶ್ರೀಧರ ರಾಯರಿಗೆ ನಮನಗಳು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments