Saturday, May 18, 2024
Homeಪುಸ್ತಕ ಮಳಿಗೆಕೊರ್ಗಿ ಸ್ಮೃತಿ ಪ್ರಸಂಗ ಸಂಪುಟ - ಹತ್ತು  ಯಕ್ಷಗಾನ ಪ್ರಸಂಗಗಳ ಗುಚ್ಛ  

ಕೊರ್ಗಿ ಸ್ಮೃತಿ ಪ್ರಸಂಗ ಸಂಪುಟ – ಹತ್ತು  ಯಕ್ಷಗಾನ ಪ್ರಸಂಗಗಳ ಗುಚ್ಛ  

‘ಕೊರ್ಗಿ ಸ್ಮೃತಿ ಪ್ರಸಂಗ ಸಂಪುಟ – ಹತ್ತು  ಯಕ್ಷಗಾನ ಪ್ರಸಂಗಗಳ ಗುಚ್ಛ ‘ ಎಂಬ ಹೊತ್ತಗೆಯು ವಿದ್ವಾಂಸರೂ ಪ್ರಸಂಗಕರ್ತರೂ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ  ಆಗಿದ್ದ ಕೊರ್ಗಿ ಶ್ರೀ ವೆಂಕಟೇಶ್ವರ ಉಪಾಧ್ಯಾಯರ ನೆನಪಿನ ಕಾಣಿಕೆಯಾಗಿ ಓದುಗರ ಕೈ ಸೇರಿತ್ತು. ಈ ಪುಸ್ತಕದ ಪ್ರಕಾಶಕರು ಕಟೀಲು ಶ್ರೀ ಸದಾನಂದ ಅಸ್ರಣ್ಣ ಪ್ರಕಾಶನ. ಮುನ್ನುಡಿಯನ್ನು ಬರೆದವರು ಕಟೀಲು ದೇವಳದ ಅರ್ಚಕರಾದ ವಿದ್ವಾನ್ ಕಮಲಾದೇವಿ ಪ್ರಸಾದ ಅಸ್ರಣ್ಣರು. ‘ಕೊರ್ಗಿ ಸಂಸ್ಮರಣೆ’  ಎಂಬ ಶೀರ್ಷಿಕೆಯಡಿ, ದ್ವಿವೇದೀ ವಿದ್ವಾನ್ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯರನ್ನು ನೆನಪಿಸಿ ಶ್ರೀ ಹರಿನಾರಾಯಣದಾಸ ಅಸ್ರಣ್ಣರು  ಬರೆದಿರುತ್ತಾರೆ. ಈ ಪುಸ್ತಕವನ್ನು ಕೀರ್ತಿಶೇಷ ದಿ। ಸದಾನಂದ ಅಸ್ರಣ್ಣರು, ಕಟೀಲು ಇವರಿಗೆ ಅರ್ಪಿಸಲಾಗಿದ್ದು ಶ್ರೀಯುತರ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ತ್ರಯಂಬಕರುದ್ರ ಮಾಹಾತ್ಮ್ಯಮ್, ಅಷ್ಟಾಕ್ಷರೀ ಮಾಹಾತ್ಮ್ಯಮ್, ಭೀಷ್ಮವಸಾನ, ಚಂದ್ರಕಾಂತಿ, ನಿಮಿಯಜ್ಞ, ಗಯಯಜ್ಞ, ಪೃಥುಯಜ್ಞ, ನೈಮಿಷಾರಣ್ಯ, ಮರುತ್ ಜನ್ಮ, ಗೋವರ್ಧನೋದ್ಧರಣ ಎಂಬ ಹತ್ತು ಪ್ರಸಂಗಗಳು ಇದರೊಳಗಿವೆ. ಕಥಾ ಸಾರಾಂಶವನ್ನು ಮತ್ತು ಪ್ರಸಂಗದಲ್ಲಿ ಬರುವ ಪಾತ್ರಗಳನ್ನು ನಮೂದಿಸಿದ್ದು ಅನುಕೂಲವೇ ಆಗಿದೆ.  ಶ್ರೀ ಗಣೇಶ ಕೊಲೆಕಾಡಿಯವರು ತ್ರಯಂಬಕರುದ್ರ ಮಾಹಾತ್ಮ್ಯಮ್, ಅಷ್ಟಾಕ್ಷರೀ ಮಾಹಾತ್ಮ್ಯಮ್, ಭೀಷ್ಮವಸಾನ ಎಂಬ ಪ್ರಸಂಗಗಳನ್ನು ರಚಿಸಿದವರು. ಚಂದ್ರಕಾಂತಿ ಎಂಬ ಪ್ರಸಂಗವನ್ನು ಬರೆದವರು ಶ್ರೀ ಮಧೂರು ವೆಂಕಟಕೃಷ್ಣ. ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ನಿಮಿಯಜ್ಞ ಪ್ರಸಂಗಕರ್ತರು. ಪ್ರೊ| ಎಂ. ಎ. ಹೆಗಡೆ ಅವರು ಗಯಯಜ್ಞ ಮತ್ತು ಮರುತ್ ಜನ್ಮ ಎಂಬ ಪ್ರಸಂಗಗಳನ್ನು ರಚಿಸಿದ್ದರು. ಪೃಥುಯಜ್ಞ ಮತ್ತು ನೈಮಿಷಾರಣ್ಯ ಪ್ರಸಂಗಗಳನ್ನು ರಚಿಸಿದವರು ಶ್ರೀಧರ ಡಿ. ಎಸ್. ಕಿನ್ನಿಗೋಳಿ.  ಗೋವರ್ಧನೋದ್ಧರಣ ಪ್ರಸಂಗವನ್ನು ರಚಿಸಿದವರು ವಿದ್ವಾನ್ ಕೆ. ಕೃಷ್ಣಕುಮಾರ್ ಮೈಸೂರು. ಬಳಿಕ ಹದಿಮೂರು ವರ್ಷಗಳಲ್ಲಿ ನಡೆದ (2004 – 2017) ತಾಳಮದ್ದಳೆ ಸಪ್ತಾಹದ ಶೀರ್ಷಿಕೆಗಳನ್ನೂ ಆಮಂತ್ರಣ ಪತ್ರಿಕೆಯನ್ನೂ ನೀಡಿರುತ್ತಾರೆ. ಯಕ್ಷಗಾನ ಮತ್ತು ಶ್ರೀ ಕ್ಷೇತ್ರ ಕಟೀಲಿನ ಸಂಬಂಧವಿರಿಸಿಕೊಂಡೇ ಬದುಕಿದ್ದ ಶ್ರೀ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯರ ನೆನಪಿನ ಹೊತ್ತಗೆಯಾಗಿ ಪ್ರಸಂಗ ಸಂಪುಟವು ಪ್ರಕಟವಾದುದು ಅರ್ಥಪೂರ್ಣವೂ ಸಂತಸವನ್ನು ತರುವ ವಿಚಾರವೂ ಆಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments