Friday, September 20, 2024
Homeಭರತನಾಟ್ಯಕಲಾವಿದರು ಈಗೇನು ಮಾಡುತ್ತಿದ್ದಾರೆ?

ಕಲಾವಿದರು ಈಗೇನು ಮಾಡುತ್ತಿದ್ದಾರೆ?

ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದೆ ಮತ್ತು ಅದರ ಪರಿಣಾಮವಾಗಿ ಎಲ್ಲೆಲ್ಲೂ ಸಾಮಾಜಿಕ ಅಂತರ ಮತ್ತು ಮುಕ್ತ ಸಂಚಾರಕ್ಕೆ ನಿರ್ಬಂಧಗಳಿರುವುದು ಎಲ್ಲಿರಿಗೂ ತಿಳಿಯದ ವಿಚಾರವೇನಲ್ಲ. ಮದುವೆ, ಮುಂಜಿ , ಜಾತ್ರೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ. 50 ಜನರಿಗಿಂತ ಹೆಚ್ಚಾಗಿ ಗುಂಪಾಗಿ ಒಟ್ಟು ಸೇರುವುದನ್ನು ನಿಷೇಧಿಸಲಾಗಿದೆ. ಆದುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿಲ್ಲ.  

ಅದರಂತೆ ನಮ್ಮ ದೇಶದ ಶ್ರೀಮಂತ ಕಲಾ ವಿಭಾಗವೂ ಬಡವಾಗಿದೆ. ಯಾವುದೇ ಕಲಾ ಸಂಬಂಧಿತ ಪ್ರದರ್ಶನಗಳು ನಡೆಯುತ್ತಿಲ್ಲ. ನರ್ತಿಸುವ ಕಾಲುಗಳು ಸ್ತಬ್ಧವಾಗಿವೆ. ವಾದನದ ಕರಗಳು ಯಾಕೋ ಚುರುಕಾಗಿ ಚಲಿಸುತ್ತಿಲ್ಲ. ಹಾಡುವ ಬಾಯಿಗಳಿಂದ ಸ್ವರಗಳು ಕೇಳಿಸುತ್ತಿಲ್ಲ. ಅಭಿನಯದ ಅಂಗಾಂಗಗಳು ಭಾವನೆಗಳನ್ನು ಸ್ಪುರಿಸುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕಲಾವಿದರು ಪ್ರದರ್ಶನಗಳಿಲ್ಲದೆ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದಾರೆ.  

ಮಧುರವಾಗಿ ಉಲಿಯುವ ಕೋಗಿಲೆಗೆ ಹಾಡಬೇಡವೆಂದರೆ ಹೇಗೆ? ನರ್ತಿಸುವ ನವಿಲಿಗೆ ನಾಟ್ಯವಾಡಬೇಡವೆಂದರೆ ಅದು ಕೇಳೀತೆ? ಹಾಗೆಯೇ ಆಗಿದೆ ಕಲಾವಿದರ ಬದುಕು. ನಿಂತ ನೀರಿನಂತೆ ಮನಸು ಕಾದ ಕಾವಲಿಯಂತೆ ಚುರುಗುಟ್ಟುತ್ತಾ ಇದೆ.      

ಅದು ಯಕ್ಷಗಾನವಿರಲಿ, ಸಂಗೀತವಿರಲಿ, ಭಾರತನಾಟ್ಯವಿರಲಿ, ನಾಟಕಗಳಿರಲಿ  ಕಲಾವಿದರಲ್ಲಿ ಕೆಲವರು  ನೇರ ಪ್ರಸಾರದ ಅಂದರೆ online ಪ್ರದರ್ಶನಗಳನ್ನು ನೆಚ್ಚಿಕೊಂಡಿದ್ದಾರೆ. ಹಾಗಾದರೂ ತಮ್ಮ ಸಮಯವನ್ನು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಈ ಭಾಗ್ಯ ಹೆಚ್ಚಿನ ಕಲಾವಿದರಿಗೆ ದೊರಕುವುದಿಲ್ಲ ಎಂಬುದು ಖೇದಕರ ವಿಚಾರ.      

ಅದಿರಲಿ. ಈಗ ಈ ಸಂಕಷ್ಟದಲ್ಲಿ ಕಲಾವಿದರು ಏನು ಮಾಡುತ್ತಿರಬಹುದು ಎಂಬ ಯೋಚನೆ ಕಲಾಪ್ರೇಮಿಗಳಿಗೆ ಬರುವುದು ಸಹಜವೇ. ಕೆಲವು ಕಲಾವಿದರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸಿರಬಹುದು. ಇನ್ನು ಕೆಲವರು ಕೂಲಿ ಕೆಲಸ ಅಥವಾ ಮೇಸ್ತ್ರಿ ಕೆಲಸಗಳಿಗೆ ಹೋಗುವವರೂ ಇದ್ದಾರೆ. ಇನ್ನು ಕೆಲವರು online ಮುಖಾಂತರ ತರಗತಿಗಳನ್ನೂ ನಡೆಸುತ್ತಿದ್ದಾರೆ.    

ಹಾಗಾದರೆ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎಂಬುದನ್ನು ಮುಂದಿನ ಸುದ್ದಿಗಳಲ್ಲಿ ತಿಳಿಸಲು ಪ್ರಯತ್ನಿಸುತ್ತೇವೆ. ಅಲ್ಲಿಯ ವರೆಗೂ ಒಂದು ಸಣ್ಣ ವಿರಾಮ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments