ನನ್ನ ಬಾಲ್ಯದ ದಿನಗಳ ನೆನಪು ಇದು. ಊರಿಂದ ಊರಿಗೆ ಕಾಲ್ನಡಿಗೆಯಲ್ಲಿ ಮೇಳದ ಪೆಟ್ಟಿಗೆಯನ್ನು ಹೊತ್ತ ಹೊರೆಯಾಳುಗಳ ಶ್ರಮ, ಕಲಾವಿದನೂ ನಿರ್ದೇಶಕನೂ, ವ್ಯವಸ್ಥಾಪಕನೂ ಒಬ್ಬನೇ ಆಗಿರುವ ಮೇಳದ ಯಜಮಾನನ ತಾಳ್ಮೆ! ಇಂದು ಸ್ಮೃತಿಪಟಲದಲ್ಲಿ ಮರುಕಳಿಸಿದೆ.
ಶ್ರೀ ಮಂದಾರ್ತಿ ಮೇಳ ಒಂದೇ ಆಗಿದ್ದು, ಕೋಟ ಹದಿನಾಲ್ಕು ಗ್ರಾಮಗಳ ಸಂಚಾರವೂ ವಿರಳ. ಹರಕೆ, ಕಟ್ಟುಕಟ್ಟಳೆ, ಹತ್ತು ಸಮಸ್ತರ ಸ್ಥಳವಂದಿಗರ ಬಯಲಾಟದ ಕಾಲವದು. ಶ್ರೀ ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮ, ಕುಷ್ಟ, ನಾರಾಯಣರ ತ್ರಿಮೂರ್ತಿಗಳ ಜೋಡಣೆಯ ಅಚ್ಚುಕಟ್ಟು, ಹೊಂದಾಣಿಕೆ ಮರೆಯಬಾರದ ಘಟನಾವಳಿಗಳ ಗತವೈಭವವೇ.
ಸಾಲಿಗ್ರಾಮ-ಕಾರ್ಕಡ ಗ್ರಾಮದ ಮಣೆಗಾರರ ಮನೆ ಗಣಪಯ್ಯ ಉಪಾಧ್ಯರಿಗೆ ಶ್ರೀ ಮಂದಾರ್ತಿ ಮೇಳದ ಆಟ ಆಡಿಸುವ ಖಯಾಲಿ. ಅಂದು ಮುಂಜಾನೆಯೇ ಹಾರಾಡಿ ರಾಮ, ಕುಷ್ಟ, ನಾರಾಯಣ ಹಾಗೂ ಅರಾಟೆ ಮಂಜು ಮೊದಲಾದ ಕಲಾವಿದರು ಹೆಬ್ಬಾಗಿಲಿನಲ್ಲಿ ಹಾಜರ್! ಶ್ರೀಮತಿ ಮನೋರಮ ಉಪಾಧ್ಯರಿಗಂತೂ ಕಲಾವಿದರ ಆರೈಕೆ, ಉಪಚಾರ ಮಾಡುವ ಸಂಭ್ರಮ. ಬೆಳಿಗ್ಗಿನ ಇಡ್ಲಿ ಚಹದೊಡನೆ ನಿದ್ದೆಗೆಟ್ಟ ಕಲಾವಿದರನ್ನು ವಿಶ್ರಾಂತಿಗೆ ಈ ದಂಪತಿಗಳು ಬಿಡಲಾರರು. ಹಲವು ಊರುಗಳ ಆಟದ ಅನುಭವ, ಪಾತ್ರಪರಿಚಯ, ಪ್ರಸಂಗ ಹಂಚಿಕೆ ವಿಚಾರಗಳ ಸೋದಾಹರಣ ಚರ್ಚೆಯಲ್ಲಿಯೇ ನಿರತರಾಗುತ್ತ ಮಧ್ಯಾಹ್ನದ ಆರೋಗಣೆಯ ತಯಾರಿ ನಡೆಸುತ್ತಿದ್ದರು.
ರಾತ್ರಿ ಆಟಕ್ಕೆ ಪ್ರಸಂಗ ನಿಶ್ಚಯ ಮಾಡಲು ಕಲಾವಿದರೂ, ಮನೆಯವರೂ, ಪಕ್ಕದ ಅಭಿಮಾನಿಗಳೂ ಜಮಾಯಿಸುತ್ತಿದ್ದರು. ಹಾರಾಡಿ ರಾಮ, ಕುಷ್ಟ, ನಾರಾಯಣರು ಕ್ರಮವಾಗಿ ಮೂರೂ ಪ್ರಸಂಗಗಳಲ್ಲಿಯೂ ಎರಡನೆಯ ವೇಷ, ಪುರುಷವೇಷ, ಸ್ತ್ರೀವೇಷ ಮಾಡಿಯೇ ಮಣೆಗಾರ ಉಪಾಧ್ಯರ ಮನ ತಣಿಸಬೇಕಾಗಿತ್ತು. ಕಲಾವಿದರಿಗೆ ಹೆಬ್ಬಾಗಿಲು ಪ್ರವೇಶವನ್ನೂ ಪ್ರಧಾನ ವೇಷಗಳ ನಿರ್ವಹಣೆಯ ಹೊಣೆಯನ್ನೂ ಅಂದೇ ನಮ್ಮವರು ನೆರವೇರಿಸಿದ್ದರು!
ದೇವರ ಮುಡಿಗೆ ಹೂ ತಪ್ಪಿದರೂ ತಪ್ಪಬಹುದು! ಆದರೆ ಯಕ್ಷಗಾನ ಚೌಕಿಯಲ್ಲಿ ಮಲ್ಲಿಗೆ ಹೂ ತಪ್ಪುತ್ತಿರಲಿಲ್ಲ. ಗಣಪತಿ ಪೂಜೆಗೆ, ಶ್ರೀ ಅಮ್ಮನವರಿಗೆ ಏರಿಸಿದ ಹೂವನ್ನು ಅಂದು ಸ್ತ್ರೀಪಾತ್ರಧಾರಿಗಳು ಮುಡಿಯಲೇಬೇಕು. ಅಂದೇ ಇಲ್ಕಲ್ ಅಂಚಿನ ಹೊಸ ಸೀರೆ ‘ಬಾಲ ಗೋಪಾಲ’, ‘ಸ್ತ್ರೀಭೂಮಿಕೆ’ ನಿರ್ವಹಿಸುವವರಿಗೆ ನೀಡಬೇಕು. ಇಂಥಹ ವಿಷಯಗಳಲ್ಲಿ ತಮ್ಮ ಪ್ರೀತಿ, ಅಭಿಮಾನವನ್ನು ಮೌನವಾಗಿ ಮಂದಹಾಸದಿಂದಲೇ ಅನುಭವಿಸುತ್ತಿದ್ದರು. ಮಣೆಗಾರರ ಮನೆ, ಆಟಕ್ಕೆ ಹಾಗಾಗಿಯೇ ಮಣೆ! ಮನ್ನಣೆ!!
ಸಾಧಾರಣ ಪ್ರಧಾನ ಭಾಗವತರು ಮಧ್ಯರಾತ್ರಿ ಕಳೆದು ರಂಗಸ್ಥಳಕ್ಕೆ ಬರುವ ವಾಡಿಕೆ. ಆದರಣೀಯರೆಂತ ತಿಳಿದ ಕಲಾವಿದರು, ಭಾಗವತರು, ಹಿಮ್ಮೇಳದವರೂ ಜಾಗೃತರಾಗಿ ಉಪಾಧ್ಯರ ಮನೆ ಆಟವೆಂತಲೇ ‘ನಿಗಾ’ ತೆಗೆದುಕೊಂಡು ಕುಟುಂಬದ ಅಂತಃಕರಣಕ್ಕೆ ಮಿಡಿದು ನಗದೀಕರಿಸಿಕೊಳ್ಳುತ್ತಿದ್ದರು. ಸಮಯಕ್ಕಿಂತ ಮೊದಲೇ ಸನ್ನದ್ಧರಾಗಿ ಇಡೀ ಬಯಲಾಟದ ಇಪ್ಪತ್ತನಾಲ್ಕು ಗಂಟೆಗಳನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದರು.
ರಾಮ-ಕೃಷ್ಣ-ನಾರಾಯಣರ ಹೆಸರು ಇಂದಿಗೂ ಜನರ ಬಾಯಲ್ಲಿ ದೇವರನಾಮದಂತೆ ಪ್ರತಿದಿನವೂ ನಲಿದಾಡುತ್ತಿದೆ. ಶಿರಿಯಾರ ಮಂಜು, ಚಂಡೆ ಕಿಟ್ಟು, ಶೇಷಗಿರಿ ಭಾಗವತರು, ಹಾಸ್ಯದ ಕೊರ್ಗು, ಉಡುಪಿ ಬಸವ, ಕೆಮ್ಮಣ್ಣು ಆನಂದ ಮುಂತಾದ ಅಸಂಖ್ಯ ಕಲಾತಪಸ್ವಿಗಳನ್ನು ಮರೆಯಲಾಗದು. ಅವರೆಲ್ಲರೂ ಪರಸ್ಪರ ರಂಗನಿರ್ದೇಶಕ ರಾಗಿಯೂ ಕೆಲಸ ಮಾಡಿದ್ದರು. ಮರುದಿನದ ಆಟ ನಿಶ್ಚಿತವಿಲ್ಲ! ನಾಳೆಯ ಚಿಂತೆ ನಾರಾಯಣ ಬಲ್ಲ. ಎಲ್ಲವನ್ನೂ ಮರೆತು ಯಕ್ಷಗಾನ ಕಲಾ ಸಂಪತ್ತನ್ನು ಮೆರೆಯಿಸಿದರು. ‘‘ಸಹೃದಯ ವೀಕ್ಷಕರು ರಂಗಸ್ಥಳದ ಮುಂಭಾಗದ ಚಪ್ಪರದಡಿ ಕುಳಿತರೆ ಕಲಾವಿದರಿಗೂ ಹುಮ್ಮಸ್ಸು ಬರುತ್ತದೆ. ನೀವು ತಿದ್ದಿ ತೀಡುವುದು ನಾವು ಬಯಸುವ ವಿಚಾರವೇ ಆಗಿದೆ. ನಾಳೆಯೂ ಹತ್ತಿರದಲ್ಲಿ ನಡೆಯುವ ಬಯಲಾಟಕ್ಕೆ ಕೂಡ ಬನ್ನಿ’’ ಅಂತ ಸಜ್ಜನ ಕಲಾವಿದರು ಕರೆಕೊಡುತ್ತಾರೆ.
ಮೇಳ, ಮೇಳಾವ, ಮೇಲ ಮುಂತಾದ ಶಬ್ದಗಳಿಗೆ ಸಂತೆ, ಜಾತ್ರೆ, ಉತ್ಸವಗಳೆಂಬ ಅರ್ಥವ್ಯಾಖ್ಯಾನಿಸಿದ್ದಾರಂತೆ. ಹತ್ತಿಪ್ಪತ್ತು ಜನರ ಸಂಗವೂ, ಅವರಾಡಿ ತೋರುವ ‘ಪ್ರಸಂಗ’ವೂ ಸರ್ವಸಂಗ ಪರಿತ್ಯಾಗಿಗಳಿಂದಲು ಮೆಚ್ಚುಗೆ ಪಡೆದಿವೆ! ಸಂಚಾರಿ ಮೇಳಗಳಿಂದ ಸದಾ ಕಲಾವೈಭವ ‘ಮೇಳ’ವಿಸಲಿ. ು

ಅಧ್ಯಕ್ಷರು, ಕರ್ಣಾಟಕ ಯಕ್ಷಧಾಮ
‘ಸಿಯಾರಾ ವಿಸ್ಟಾ’, ಪ್ಲಾಟ್ ಎ-1
ಕೊಡಿಯಾಲಗುತ್ತು ಪಶ್ಚಿಮ
ಮಂಗಳೂರು-3,
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
