Friday, September 20, 2024
Homeಯಕ್ಷಗಾನಕೀರ್ತಿಶೇಷ ಯಕ್ಷಗಾನ ಕಲಾವಿದರ ಸ್ಮರಣೆಯಲ್ಲಿ 'ಯಕ್ಷಾನುಗ್ರಹ' ವಾಟ್ಸಾಪ್ ಗ್ರೂಪ್ 

ಕೀರ್ತಿಶೇಷ ಯಕ್ಷಗಾನ ಕಲಾವಿದರ ಸ್ಮರಣೆಯಲ್ಲಿ ‘ಯಕ್ಷಾನುಗ್ರಹ’ ವಾಟ್ಸಾಪ್ ಗ್ರೂಪ್ 

ಸದಾ ಏನಾದರೊಂದು ಸದ್ವಿಚಾರಗಳ ಚಟುವಟಿಕೆಯಲ್ಲಿ ಸುದ್ದಿ ಮಾಡುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ತನ್ನ ಕಲಾಪರ ಕಾರ್ಯಕ್ರಮಗಳನ್ನು ಮುಂದುವರಿಸುತ್ತಲೇ ಇದೆ. ಈ ಬಾರಿ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನಗಳು ಬೇಗನೆ ನಿಂತಿರಬಹುದು. ಆದರೆ ಪ್ರತಿಷ್ಠಾನ ಕಲೆಯ ಹೊರತು ಬೇರೇನನ್ನೂ ಯೋಚಿಸುವುದಿಲ್ಲ. ಈಗಾಗಲೇ ಸಿರಿಬಾಗಿಲು ಪ್ರತಿಷ್ಠಾನ ಹಲವಾರು ಕಲಾಸಂಬಂಧಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾ ಇದೆ. 

ಇಂತಹಾ ಕಾರ್ಯಕ್ರಮಗಳಿಗೆ ಇದೀಗ ಇನ್ನೊಂದು ಸೇರ್ಪಡೆಯಾಗಿದೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನಿರ್ವಾಹಕರಾಗಿರುವ ‘ಯಕ್ಷಾನುಗ್ರಹ’ ಎಂಬ ವಾಟ್ಸಾಪ್ ಗ್ರೂಪ್ ಇದೀಗ ಇಂತಹುದೇ ಒಂದು ಚಟುವಟಿಕೆಯಲ್ಲಿ ತೊಡಗಿದೆ.  ಪ್ರತಿದಿನವೂ ತಿಟ್ಟುಗಳ ಭೇದವಿಲ್ಲದೆ, ಅಳಿದುಹೋದರೂ ಜನಮಾನಸದಲ್ಲಿ ಕೀರ್ತಿವಂತರಾಗಿ ನೆಲೆಸಿದ ಕಲಾವಿದರನ್ನು ದಿನಕ್ಕೊಬ್ಬರಂತೆ ಲೇಖನಗಳ ಮೂಲಕ ನೆನೆಯುವ ಸತ್ಕಾರ್ಯವನ್ನು ಈ ವಾಟ್ಸಾಪ್ ಗುಂಪು ಮಾಡುತ್ತಿದೆ. ಈಗಾಗಲೇ 11 ದಿನಗಳಲ್ಲಿ ಹನ್ನೊಂದು ಪ್ರಸಿದ್ಧ ಕಲಾವಿದರ ಲೇಖನಗಳು ಬಂದಿವೆ. ಎಲ್ಲಾ ಲೇಖನಗಳು ಉತ್ತಮ ವಿಚಾರಗಳನ್ನೊಳಗೊಂಡಿದ್ದುವು.

ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಈ ಗ್ರೂಪಿನ ಸದಸ್ಯರ ಹೆಸರುಗಳನ್ನೂ ಗಮನಿಸಿದಾಗ ಆಶ್ಚರ್ಯವಾಗುತ್ತದೆ.  ಕಲಾವಿದರು, ಪ್ರಸಂಗಕರ್ತರು, ವಿದ್ವಾಂಸರು ತುಂಬಿರುವ ಈ ಗುಂಪು ಸದ್ವಿಚಾರಗಳ ಚರ್ಚೆಯನ್ನೇ ನಡೆಸುತ್ತದೆ. ಈ ವರೆಗೆ ಪ್ರಸ್ತುತಗೊಂಡ ಲೇಖನಗಳು ವಾಸ್ತವತೆಯನ್ನು ಪ್ರತಿಬಿಂಬಿಸಿವೆ. ಆದರೆ ಲೇಖನಕ್ಕಿಂತಲೂ ಆಮೇಲೆ ನಡೆಯುವ ಅದರ ಮೇಲಿನ  ಅನಿಸಿಕೆಗಳು ಮತ್ತು ಚರ್ಚೆಗಳು ಇನ್ನೂ ಹೆಚ್ಚಿನ  ಕುತೂಹಲಕರವಾದ  ಮಾಹಿತಿಗಳನ್ನೊಳಗೊಂಡಿರುತ್ತವೆ. ಇದುವರೆಗೆ ಅಗರಿ, ದಾಸರಬೈಲು, ಅರಾಟೆ, ಪಕಳಕುಂಜ, ಚಿಪ್ಪಾರು, ಹೊಸ್ತೋಟ, ಹಿರಿಯ ಬಲಿಪ, ಕಡತೋಕ, ಕುರಿಯ, ಹೆರಿಯ ನಾಯ್ಕ್, ವೀರಭದ್ರ ನಾಯಕ್ ಮೊದಲಾದ ಗತಿಸಿಹೋದ ಪ್ರಸಿದ್ಧ ಕಲಾವಿದರ ಲೇಖನಗಳು ಬಂದಿರುತ್ತವೆ.

ಈಗಾಗಲೇ 11 ದಿನಗಳಲ್ಲಿ 11 ಕಲಾವಿದರ  ಸ್ವಾರಸ್ಯಕರ ವಿಚಾರಗಳನ್ನು ಆಸ್ವಾದಿಸಿದ ಗುಂಪಿನ ಸದಸ್ಯರು ಇಂದು ಹನ್ನೆರಡನೆಯ ಲೇಖನದ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ಅತ್ಯುತ್ತಮ ವಾಟ್ಸಾಪ್ ಗ್ರೂಪ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಹೆಚ್ಚಿನ ಚಟುವಟಿಕೆಗಳಿಂದ ಈ ಗುಂಪು ಕಾರ್ಯನಿರ್ವಹಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

RELATED ARTICLES

Most Popular

Recent Comments