Thursday, May 14, 2026
Homeಯಕ್ಷಗಾನಕಲ್ಲಾಡಿ ಎಂಬ ಊರಿಗೆ ಜನಮಾನ್ಯತೆ ತಂದಿತ್ತ ಕಲ್ಲಾಡಿ ಮನೆತನ ಮತ್ತು ಕಲ್ಲಾಡಿ ದೇವಿಪ್ರಸಾದ ಶೆಟ್ಟಿ 

ಕಲ್ಲಾಡಿ ಎಂಬ ಊರಿಗೆ ಜನಮಾನ್ಯತೆ ತಂದಿತ್ತ ಕಲ್ಲಾಡಿ ಮನೆತನ ಮತ್ತು ಕಲ್ಲಾಡಿ ದೇವಿಪ್ರಸಾದ ಶೆಟ್ಟಿ 

ಯಾವುದೇ ಒಂದು ಊರು ಅಥವಾ ಸ್ಥಳದ ಹೆಸರು ಪ್ರಸಿದ್ಧಿಯನ್ನು ಪಡೆಯುವುದು ಹೇಗೆ? ಊರೊಂದಕ್ಕೆ ಸುಂದರವಾದ ಹೆಸರನ್ನಿಟ್ಟ ಕೂಡಲೇ ಮುಂದಕ್ಕೆ ಆ ಸ್ಥಳ ಪ್ರಖ್ಯಾತಿಯನ್ನು ಪಡೆಯಲಾರದು. ಹಾಗಾದರೆ ಒಂದು ಸ್ಥಳವು ಪ್ರಸಿದ್ಧಿಯನ್ನು ಪಡೆಯಬೇಕಾದರೆ ಹಲವಾರು ಪೂರಕ ಕಾರಣಗಳಿರಬಹುದೆಂದಾಯಿತು.

ಊರಿನ ಮಹಿಮೆ, ಚಾರಿತ್ರಿಕ ಘಟನೆಗಳು, ರಾಜ ಮನೆತನಗಳು, ಸ್ಮಾರಕಗಳು, ಕಲೆ, ಸಂಸ್ಕೃತಿ, ಪುಣ್ಯಕ್ಷೇತ್ರಗಳು, ಪ್ರವಾಸಿ ತಾಣಗಳು, ಪುರಾಣ ಪುಣ್ಯಪುರುಷರು, ಪೌರಾಣಿಕ ಹಿನ್ನೆಲೆ, ಬೆಳೆ, ಆಹಾರ ಮೊದಲಾದುವುಗಳು ಆ ಊರಿನ ಪ್ರಸಿದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಇವೆಲ್ಲವುಗಳ ಹೊರತಾಗಿಯೂ ವ್ಯಕ್ತಿಯಾಗಿ ಪ್ರಸಿದ್ಧಿಯನ್ನು ಪಡೆದವರೂ, ಸಾವಿರಾರು ಜನರ ಬಾಯಿಯಲ್ಲಿ ತನ್ನ ಊರಿನ ಹೆಸರನ್ನು ನಲಿಯುವಂತೆ ಮಾಡಬಹುದು. ಅಂತಹಾ ಹಲವಾರು ಮಹನೀಯರಿದ್ದಾರೆ. ಕಲಾರಂಗದಲ್ಲೂ ಅಂತಹಾ ಹಲವಾರು ವ್ಯಕ್ತಿಗಳಿದ್ದಾರೆ. ಯಕ್ಷಗಾನ ರಂಗದಲ್ಲಂತೂ ಇಂತಹಾ ಉದಾಹರಣೆಗಳು ಹೇರಳ. ಕೀರಿಕ್ಕಾಡು, ಕೆರೆಮನೆ, ಶೇಣಿ, ಮಲ್ಪೆ, ಕೊಳಂಬೆ, ಕುರಿಯ, ಅಳಿಕೆ, ಚಿಟ್ಟಾಣಿ, ಕಡತೋಕ ಮುಂತಾದ ಹಲವಾರು ಅಳಿದುಹೋದ ಮಹಾನ್ ಕಲಾವಿದರು ತಮ್ಮ ಕಲಾಕೈಂಕರ್ಯದಿಂದ ತಮ್ಮ ಜೊತೆಗೆ ತಾವು ಬಾಳಿ ಬದುಕಿದ ಊರಿಗೂ ಪ್ರಸಿದ್ಧಿಯನ್ನು ತಂದು ಕೊಟ್ಟವರು. 

ಯಕ್ಷಗಾನ ಕಲಾವಿದರಲ್ಲದೆ ಸಂಘಟಕರಾಗಿಯೂ ಮೇಳವನ್ನು ನಡೆಸುವ ಸಂಚಾಲಕರಾಗಿಯೂ ತನ್ನ ಊರಿನ ಹೆಸರನ್ನು ಔನ್ನತ್ಯಕ್ಕೇರಿಸಿದವರು ಕಲ್ಲಾಡಿ ಮನೆತನದ ಯಜಮಾನರು. ಅದಕ್ಕಾಗಿ ಕಲ್ಲಾಡಿ ಕೊರಗ ಶೆಟ್ಟಿಯವರನ್ನು ಇಲ್ಲಿ ನೆನಪಿಸಲೇ ಬೇಕು. 1939ರಲ್ಲಿ ಕಲ್ಲಾಡಿ ಕೊರಗ ಶೆಟ್ಟಿಯವರು ಕಟೀಲು ಮೇಳದ ಸಂಚಾಲಕರಾಗಿ ಯಜಮಾನಿಕೆಯನ್ನು ವಹಿಸಿಕೊಂಡ ಮೇಲೆ ಇಲ್ಲಿಯವರೆಗೆ (ಮಧ್ಯದಲ್ಲಿ ಒಂದೆರಡು ವರ್ಷಗಳನ್ನು ಹೊರತುಪಡಿಸಿ) ಕಲ್ಲಾಡಿ ಕುಟುಂಬದ ಸದಸ್ಯರೇ ಕಟೀಲು ಮೇಳಗಳನ್ನು ಮುನ್ನಡೆಸುತ್ತಾ ಬಂದಿದ್ದಾರೆ.

ಮೇಳಗಳನ್ನು ನಡೆಸುವಲ್ಲಿ ಇವರಿಗಿರುವ ಚಾಣಾಕ್ಷತೆ, ಪರಿಪಕ್ವತೆಗಳೇ ಇವರನ್ನು ಯಶಸ್ವೀ ‘ಯಜಮಾನ’ರನ್ನಾಗಿಸಿದೆ. ಇಲ್ಲದಿದ್ದರೆ ಆರು ಮೇಳಗಳನ್ನು ಒಬ್ಬಾತ ವ್ಯಕ್ತಿಯಾಗಿ, ಯಜಮಾನನಾಗಿ ಮುನ್ನೆಡೆಸುವುದು ಸುಲಭದ ಕಾರ್ಯವಲ್ಲ. ಹಾಗೆ ನೋಡಿದರೆ ಕಲ್ಲಾಡಿ ಎಂಬ ಊರಿನ ಹೆಸರನ್ನು ಜನರು ಆಡಿಕೊಳ್ಳುವಂತಾದುದು ಕೊರಗ ಶೆಟ್ಟಿಯವರು ಮೇಳದ ಯಜಮಾನಿಕೆ ವಹಿಸಿಕೊಂಡ ಮೇಲೆಯೇ.

ಕಲ್ಲಾಡಿ ಎಂಬುದು  ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಒಂದು ಪುಟ್ಟ ಊರು. ಮೊದಲೇ ಹೇಳಿದಂತೆ 1939ರಿಂದ ಆರಂಭಿಸಿ ಇಂದಿನ ವರೆಗೂ ಕಟೀಲು ಮೇಳಗಳನ್ನು ಕಲ್ಲಾಡಿಯ ಕುಟುಂಬವೇ ಸಮರ್ಥವಾಗಿ ಮುನ್ನಡೆಸುತ್ತಿದೆ. ಪ್ರಸ್ತುತ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರು ಮೇಳದ ಸಂಚಾಲಕರಾಗಿದ್ದಾರೆ. ಕಲಾವಿದರ ಹಾಗೂ ನೌಕರರ ವಲಯದಲ್ಲಿ ಇವರನ್ನು ‘ಯಜಮಾನ’  (ಮೊದಲಿನಿಂದಲೂ ಈ ಶಿಷ್ಟಾಚಾರ ಮುಂದುವರಿದುಕೊಂಡು ಬಂದಿದೆ) ಎಂದೇ ಗೌರವದಿಂದ ಸಂಭೋದಿಸಲಾಗುತ್ತದೆ.

ಕಲಾಭಿಮಾನಿಗಳೂ ಸಾರ್ವಜನಿಕರೂ ಕೂಡಾ ಅವರನ್ನು ಹಾಗೆಯೆ ಸಂಭೋದಿಸುವುದನ್ನು ಕೇಳಿದ್ದೇನೆ. ಇದು ಕಲ್ಲಾಡಿ ಮನೆತನದ ಬಗ್ಗೆ ಜನರಿಗಿರುವ ಗೌರವವನ್ನು ಸೂಚಿಸುತ್ತದೆ. ಹೀಗೆ ಮುಂದುವರಿದುಕೊಂಡು ಬಂದ ಯಜಮಾನಿಕೆಯು ಪ್ರಸ್ತುತ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟಿಯವರ ಕೈಯಲ್ಲಿದೆ. ಕಳೆದ 15 ವರ್ಷಗಳಿಂದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರು  ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

2005ರಲ್ಲಿ ಕಟೀಲು ಮೇಳದ ಆಡಳಿತವನ್ನು ಕೈಗೆತ್ತಿಕೊಂಡ ಅವರು ಶಿಸ್ತು, ಕಟ್ಟಿನಿಟ್ಟಿನ ಕ್ರಮಗಳಿಗೆ ಹೆಸರಾದರೂ ಅಷ್ಟೇ ದಯೆ, ದಾಕ್ಷಿಣ್ಯಗಳನ್ನು ಹೊಂದಿದವರು. ಮೇಳಗಳನ್ನು ನಡೆಸುವುದು ಈ ಕಾಲದಲ್ಲಿ ಬಹಳ ಕಷ್ಟಕರವಾದ ಕಾರ್ಯ. ಸ್ವಭಾವತಃ ಕಲಾವಿದರು ಸೂಕ್ಷ್ಮಹೃದಯಿಗಳಾದುದರಿಂದ ನಯ, ವಿನಯ ಸಜ್ಜನಿಕೆಗಳಿಂದ ವ್ಯವಹರಿಸುತ್ತಾರೆ. ಆದುದರಿಂದ ಕಲಾವಿದರೊಂದಿಗೆ ನೋವಾಗುವ ರೀತಿಯಲ್ಲಿ ವ್ಯವಹರಿಸಲು ಅಸಾಧ್ಯ. ಇತರ ಸಂಸ್ಥೆಗಳಿಗೆ ಹೋಲಿಸಿದರೆ ಯಕ್ಷಗಾನ ಮೇಳಗಳಲ್ಲಿ ಈ ಒಂದು ತೊಡಕು ಕಾಣಿಸುತ್ತದೆ.

ಇಂತಹಾ ಸಂದರ್ಭಗಳಲ್ಲಿ ಪ್ರಮುಖ ಕಲಾವಿದರು ಮೇಳಗಳನ್ನು ಬದಲಾಯಿಸುವುದೇ ಮೊದಲಾದ ಸಾಧ್ಯತೆಯಿರುವುದರಿಂದ ಬಹಳ ಜಾಗರೂಕತೆಯಿಂದ ವ್ಯವಹರಿಸಬೇಕಾಗುತ್ತದೆ. ಈಗೀಗ ಮೇಳಗಳನ್ನು ನಡೆಸುವವರಿಗೆ ಸಂಕಷ್ಟದ ಕಾಲ.  ಒಂದು ಮೇಳದ ಯಜಮಾನರಾದವರು ಅರ್ಧಕ್ಕೆ ಸೋತು ಸುಣ್ಣವಾಗಿ ಕೈ ಸುಟ್ಟುಕೊಂಡು ಮೇಳವನ್ನು ತಿರುಗಾಟದ ನಡುವಿನಲ್ಲೇ ನಿಲ್ಲಿಸುವುದೂ ಇದೆ. ಅಥವಾ ಸಾಕಷ್ಟು ಆಟಗಳಿಲ್ಲದೆ ನಷ್ಟ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕುವುದೂ ಇದೆ. 

ಆದುದರಿಂದ ಮೇಳದ ಯಜಮಾನರಾದವರು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಮೇಳದ ಯಜಮಾನನಾದವರ ಜಾಣ್ಮೆಯು ಬೆಣ್ಣೆಯಿಂದ ಕೂದಲು ತೆಗೆದ ರೀತಿಯಲ್ಲಿ ಇರಬೇಕಾಗುತ್ತದೆ. ಈ ಎಲ್ಲ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರು ಆಡಳಿತ ಮತ್ತು ನಿರ್ವಹಣೆಯಲ್ಲಿ ಎತ್ತಿದ ಕೈ. ಬಹುಶಃ ತಂದೆ ಮತ್ತು ಅಜ್ಜನಿಂದ ಬಳುವಳಿಯಾಗಿ ಪಡೆದಿರುವ ಯಜಮಾನಿಕೆಯ ಸೂಕ್ಷ್ಮತೆಗಳನ್ನು ಅತಿ ಸಣ್ಣ ಪ್ರಾಯದಲ್ಲಿಯೇ ಅರ್ಥಮಾಡಿಕೊಂಡುದೇ ಇವರ ಯಶಸ್ಸಿಗೆ ಕಾರಣವಿರಬೇಕು.

ಅಜ್ಜ ಹಾಗೂ ತಂದೆಯಿಂದ ಮೇಳ ನಡೆಸುವ ತಂತ್ರಗಾರಿಕೆಯನ್ನು ತಿಳಿದುಕೊಂಡರೂ ದೇವಿಪ್ರಸಾದರು ಆಡಳಿತದಲ್ಲಿ ತನ್ನದೇ ಆದ ಕೆಲವು ಸುಧಾರಣೆಗಳನ್ನೂ ತಂದಿದ್ದಾರೆ. ಬದಲಾದ ಕಾಲ ಹಾಗೂ ಪರಿಸ್ಥಿತಿಗೆ ಹೊಂದಿಕೊಂಡು ತನ್ನ ಕಾರ್ಯಚತುರತೆಯಲ್ಲಿ ಕೆಲವು ಬದಲಾವಣೆಯನ್ನೂ ಹೊಂದಿಸಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ತನ್ನ ಮೇಳಗಳ ನಿರ್ವಹಣೆ ಹಾಗೂ ವ್ಯವಹಾರ ಕೌಶಲತೆಯನ್ನು ಮೇಲ್ದರ್ಜೆಗೆ (Update) ಏರಿಸಲು ಅನುಕೂಲವಾಯಿತು. 

ಕಲ್ಲಾಡಿ ಮನೆತನದ ಬಗ್ಗೆ ತಿಳಿಯಲು ನಾವು ಕೊರಗ ಶೆಟ್ಟಿಯವರ ಯಜಮಾನಿಕೆಯ ಕಾಲಕ್ಕೆ ಅಂದರೆ ಸುಮಾರು 1939ರಷ್ಟು ಹಿಂದಕ್ಕೆ ಹೋಗಬೇಕು. ಮತ್ತೆ ಕಟೀಲು ಶ್ರೀ  ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ವಿಚಾರಕ್ಕೆ ಬರೋಣ.  1939ರಿಂದ ಆರಂಭಿಸಿ ಇಂದಿನ ವರೇಗೂ ಕಟೀಲಿನ ಎಲ್ಲಾ  ಮೇಳಗಳನ್ನು ಕಲ್ಲಾಡಿ ಮನೆಯ ಸದಸ್ಯರೇ ಯಜಮಾನರಾಗಿ ಮುನ್ನಡೆಸುತ್ತಿದ್ದಾರೆ.

ಕಲ್ಲಾಡಿ ಕೊರಗ ಶೆಟ್ಟಿ

1939ರಲ್ಲಿ ದಿ| ಕಲ್ಲಾಡಿ ಕೊರಗ ಶೆಟ್ಟಿಯವರು ಮೇಳವನ್ನು ನಡೆಸಲು ತೀರ್ಮಾನಿಸಿದ್ದರು. ಆಗಿನ ಕಾಲದ ಯಕ್ಷಗಾನದ ಸ್ಥಿತಿ ಬಹಳಷ್ಟು ಕಷ್ಟದ ಪರಿಸ್ಥಿತಿಯಿಂದ ಕೂಡಿತ್ತು. ಕಾಡಿ ಬೇಡಿ ಆಟಗಳನ್ನು ಪಡೆಯಬೇಕಾಗಿತ್ತು. ಆದರೆ ಆ ಕಷ್ಟದ ದಿನಗಳಲ್ಲಿಯೂ ಎದೆಗುಂದದೆ ಕಲಾವಿದರ ಜತೆಯಾಗಿ ನಿಂತು ಹೆಜ್ಜೆ ಹಾಕಿದವರು ಶ್ರೀ ಕಲ್ಲಾಡಿ ಕೊರಗ ಶೆಟ್ಟಿಯವರು. ಆಗ ಕಟೀಲು ಮೇಳದೊಂದಿಗೆ ಕುಂಡಾವು ಮೇಳವನ್ನೂ ಕೊರಗ ಶೆಟ್ಟಿಯವರು ಸ್ಥಾಪಿಸಿದ್ದರು.

ಕಲಾವಿದರ ಕಷ್ಟಕ್ಕೆ ಧ್ವನಿಯಾಗಿ ಊರಿನ ಗಣ್ಯರು ಹಾಗೂ ಶ್ರೀಮಂತರ ಸಹಾಯದಿಂದ ಪ್ರದರ್ಶನಗಳನ್ನು ಏರ್ಪಡಿಸಿ ಬಂದ ಹಣವನ್ನು ಕಲಾವಿದರಿಗೆ ಹಂಚಿದ ಕಲ್ಲಾಡಿಯವರು 1966ರ ವರೆಗೆ ಮೇಳದ ಯಜಮಾನರಾಗಿ ಸೇವೆ ಸಲ್ಲಿಸಿದ್ದರು. ಆಮೇಲೆ ಅಂದರೆ 1967ರಿಂದ ಕಲ್ಲಾಡಿ ಕೊರಗ ಶೆಟ್ಟಿಯವರು ತನ್ನ ಪುತ್ರ ಕಲ್ಲಾಡಿ ವಿಠಲ ಶೆಟ್ಟಿಯವರಿಗೆ ಮೇಳಗಳ ಯಜಮಾನಿಕೆಯನ್ನು  ಹಸ್ತಾಂತರಿಸಿದರು. ಕಲ್ಲಾಡಿ ವಿಠಲ ಶೆಟ್ಟಿಯವರ ಸಮರ್ಥ ನಾಯಕತ್ವದಲ್ಲಿ ಕಟೀಲು ಮೇಳಗಳು ವಿಜೃಂಭಿಸಿದುವು.

1975ರಲ್ಲಿ  ಕಟೀಲು ಶ್ರೀ  ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಎರಡನೆಯ ಮೇಳ ಆರಂಭವಾಯಿತು. ಹರಕೆ ಆಟಗಳು ಹೆಚ್ಚಾಗತೊಡಗಿದುವು. 1983ರಲ್ಲಿ ಮೂರನೆಯ ಮೇಳ ಆರಂಭವಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದಯೆಯಿಂದ ಕಟೀಲು ಮೇಳಗಳ ಯಕ್ಷಗಾನ ಪ್ರದರ್ಶನಗಳು ಹಾಗೂ ಹರಕೆ ಆಟಗಳು ದಿನೇ ದಿನೇ  ಹೆಚ್ಚಾಗತೊಡಗಿದುವು. ಕಲ್ಲಾಡಿ ವಿಠಲ ಶೆಟ್ಟಿಯವರ ಸಮರ್ಥ ಸಾಯಕತ್ವದಲ್ಲಿ 1993ರಲ್ಲಿ ನಾಲ್ಕನೆಯ ಮೇಳ ಆರಂಭವಾಗಿತ್ತು.

ಕಲ್ಲಾಡಿ ವಿಠಲ ಶೆಟ್ಟಿ

ಕರ್ನಾಟಕ ಮೇಳವನ್ನೂ ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ವಿಠಲ ಶೆಟ್ಟಿಯವರದು. ಈ ಮಧ್ಯೆ ವಿಠಲ ಶೆಟ್ಟಿಯವರ ಸಹೋದರರಾದ ಕಲ್ಲಾಡಿ ನಾಗರಾಜ ಶೆಟ್ಟಿಯವರೂ ಕಟೀಲು ಮೇಳಗಳ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು. 2004ರ ವೆರೆಗೆ ಸಂಚಾಲಕರಾಗಿದ್ದ ಕಲ್ಲಾಡಿ ವಿಠಲ ಶೆಟ್ಟಿಯವರು ಸುಮಾರು 37 ವರ್ಷಗಳ ಕಾಲ ಕಟೀಲು ಮೇಳಗಳನ್ನು ಮುನ್ನಡೆಸಿದ್ದರು. 

ಪ್ರಸ್ತುತ 2005ರಿಂದ ಆರಂಭಿಸಿ ಕಳೆದ ನಿರಂತರ ಹದಿನೈದು ವರ್ಷಗಳಿಂದ ಮೇಳಗಳ ಸಂಚಾಲಕರಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿರುವವರು ವಿಠಲ ಶೆಟ್ಟಿಯವರ ಸುಪುತ್ರರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟಿ. ತಂದೆಯವರ ಗರಡಿಯಲ್ಲಿ ಮೊದಲೇ ಪಳಗಿದ್ದ ದೇವಿಪ್ರಸಾದ ಶೆಟ್ಟಿಯವರಿಗೆ ಕರ್ನಾಟಕ ಮೇಳವನ್ನು ನಡೆಸಿದ ಅನುಭವವೂ ಇತ್ತು. ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಗುಣವುಳ್ಳ ದೇವಿಪ್ರಸಾದ ಶೆಟ್ಟಿಯವರು ಮೇಳಗಳ ನಿರ್ವಹಣೆಯಲ್ಲಿ ಅಪಾರ ಅನುಭವವನ್ನು ಗಳಿಸಿಕೊಂಡವರು.

ವಿಠಲ ಶೆಟ್ಟಿಯವರು ಸಂಚಾಲಕರಾದ ಆರಂಭದಲ್ಲಿ ಒಂದೇ ಮೇಳವಿದ್ದ ಕಟೀಲು ಮೇಳಗಳು ಆಮೇಲೆ ನಾಲ್ಕಾಯಿತು. ದೇವಿಪ್ರಸಾದ್ ಶೆಟ್ಟಿಯವರ ಸಂಚಾಲಕತ್ವದಲ್ಲಿ ಈಗ ಆರು ಮೇಳಗಳಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ. ಅಗತ್ಯವಿದ್ದಲ್ಲಿ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ದೇವಿಪ್ರಸಾದ ಶೆಟ್ಟಿಯವರು ‘ವಜ್ರಾದಪಿ ಕಠೋರಾನಿ, ಮೃದೂನಿ ಕುಸುಮಾದಪಿ’ ಎಂಬ ಗುಣವುಳ್ಳವರು. ಇಂತಹ ಗುಣಗಳಿಂದಲೇ ಇಂದು ಅವರ ನಾಯಕತ್ವದಲ್ಲಿ  ಕಟೀಲು ಶ್ರೀ  ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಯಶಸ್ವಿಯಾಗಿ ಪ್ರದರ್ಶನಗಳನ್ನು ನೀಡುತ್ತಿವೆ.

ದೇವಿಪ್ರಸಾದ ಶೆಟ್ಟಿಯವರು ಮೇಳಗಳ ಸಂಖ್ಯೆಯನ್ನು ಹೆಚ್ಚು ಮಾಡುವುದರ ಜೊತೆಗೆ ಕಲಾವಿದರ ಕುಂದುಕೊರತೆಗಳ ಪರಿಹಾರ ಮತ್ತು ಅವರಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರ ಕಡೆಗೂ ಗಮನ ನೀಡಿದರು. ಎತ್ತರದ ರಂಗಸ್ಥಳ, ಕಲಾವಿದರಿಗೆ ಮೇಳದ ಸ್ವಂತ ಬಸ್ ವ್ಯವಸ್ಥೆ, ಏರಿಕೆಯಾದ ವರಮಾನ, ಮಳೆಗಾಲದ ಸಂಬಳ ಮೊದಲಾದ ವ್ಯವಸ್ಥೆಗಳನ್ನು ಅನೇಕ ಮಹನೀಯರ ಸಹಕಾರದಿಂದ ಮಾಡಿದ್ದಾರೆ.

ಸನ್ಮಾನ ಗೌರವಗಳನ್ನು ನಯವಾಗಿ ತಿರಸ್ಕರಿಸುವ ದೇವಿಪ್ರಸಾದರು ‘ಏನಿದ್ದರೂ ಕಲಾವಿದರಿಗೆ ಮತ್ತು ನೇಪಥ್ಯ ಕಲಾವಿದರಿಗೆ ಮಾಡಿ, ರಂಗದಲ್ಲಿ ದುಡಿಯುವವರು ಅವರು’ ಎಂದು ಸಮಾಧಾನಿಸುತ್ತಾರೆ. ಕಲಾವಿದರಂತೆ ಮೇಳದ ಯಜಮಾನರಾದ ಕಲ್ಲಾಡಿಯವರೂ ಕಠಿಣ ಪರಿಶ್ರಮದ ಜೀವನ ನಡೆಸುತ್ತಾರೆ. ರಾತ್ರಿಯ ಹೊತ್ತಿನಲ್ಲಿ ದಿನವೊಂದಕ್ಕೆ ಮೂರು ಮೇಳಗಳ ಪ್ರದರ್ಶನಗಳು ನಡೆಯುವಲ್ಲಿಗೆ ಭೇಟಿ ನೀಡುತ್ತಾರೆ. ಕಟೀಲು ದೇವಸ್ಥಾನದ ಪರಮ ಭಕ್ತರಾಗಿರುವ ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರು ‘ಶ್ರೀ ದೇವರ ಅನುಗ್ರಹವಿರುವವರೆಗೂ ಎಲ್ಲರ ಸಹಕಾರದಿಂದ ಕಟೀಲು ದೇವರ ಮತ್ತು ಯಕ್ಷಗಾನದ ಕಲಾಸೇವೆ ಮಾಡುತ್ತೇನೆ’ ಎಂದು ವಿನಯದಿಂದ ನುಡಿಯುತ್ತಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments