ಶೀಘ್ರ ಸಾಧಕರಿಗೆ ಆಯುಸ್ಸು ಕಡಿಮೆ. ಇದು ನನ್ನ ಮಾತಲ್ಲ. ಚರಿತ್ರೆಯ ಪುಟಗಳೇ ಈ ಮಾತನ್ನು ಸಾರಿ ಹೇಳುತ್ತವೆ. ನಮ್ಮ ಭವ್ಯ ಪುರಾಣ, ಇತಿಹಾಸಗಳ ಗ್ರಂಥಗಳ ಒಂದೊಂದೇ ಹಾಳೆಗಳನ್ನು ತಿರುವುತ್ತಾ ಹೋದಂತೆ ಈ ಮಾತಿಗೆ ಸಾಕಷ್ಟು ಪುರಾವೆಗಳು ದೊರಕುತ್ತವೆ. ಹಾಗೆಂದು ಎಲ್ಲರೂ ಹೀಗೆಂದು ಅರ್ಥವಲ್ಲ. ಆದರೆ ಪೂರಕವಾಗಿ ತುಂಬಾ ಉದಾಹರಣೆಗಳು ಸಿಗುತ್ತವೆ ಅಷ್ಟೇ.
ನಮಗೆಲ್ಲಾ ಅದರ್ಶಪ್ರಾಯರಾಗಿರುವ ಭರತಖಂಡದ ಜನರು ಕಂಡ ಮಹಾನ್ ಆಡಳಿತಗಾರ ಶ್ರೀ ಶಿವಾಜಿ ಮಹಾರಾಜರು ಬದುಕಿದ್ದು ಕೇವಲ ಐವತ್ತು ವರ್ಷಗಳು ಮಾತ್ರ. ಹಾಗೆಯೇ ಸ್ವಾಮಿ ವಿವೇಕಾನಂದ, ಸುಭಾಸ್ಚಂದ್ರ ಬೋಸ್, ಭಗತ್ಸಿಂಗ್, ಚಂದ್ರಶೇಖರ ಆಜಾದ್, ಅಡೋಲ್ಫ್ ಹಿಟ್ಲರ್, ರಾಜೀವ್ ಗಾಂಧಿ, ಪ್ರಮೋದ್ ಮಹಾಜನ್ ಹಾಗೂ ಇತ್ತೀಚೆಗೆ ನಿಧನರಾದ ಅನಂತಕುಮಾರ್ ಇವರೆಲ್ಲಾ ಸಣ್ಣ ವಯಸ್ಸಿನಲ್ಲೆ ಸಾಧನೆಯನ್ನು ಮಾಡಿ ಈ ಲೋಕದಿಂದ ಕಣ್ಮರೆಯಾದವರು. ನಾವು ಯುಗಾಂತರದಷ್ಟು ಹಿಂದಕ್ಕೆ ನೋಡಿದರೆ ಅಲ್ಲಿಯೂ ನಮಗೆ ಇಂತಹಾ ನಿದರ್ಶನಗಳು ಕಾಣಸಿಗುತ್ತವೆ. ಎಳೆಯ ಹರೆಯದಲ್ಲೆ ಅದ್ಭುತವನ್ನು ಸಾಧಿಸಿ ಅಕಾಲ ವೀರಸ್ವರ್ಗವನ್ನು ಪಡೆದ ಅಭಿಮನ್ಯುವಿನ ಕತೆ ನೆನಪಾಗುತ್ತದೆ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಇನ್ನು ಈ ಕಾಲಕ್ಕೆ ಬಂದರೆ ತನ್ನ 35ನೆಯ ವಯಸ್ಸಿನಲ್ಲಿಯೇ ಪ್ರಖ್ಯಾತರಾಗಿ ಕಾಲನ ಕರೆಗೆ ಓಗೊಟ್ಟ ಸಿನಿಮಾ ರಂಗದ ಖ್ಯಾತ ನಟ ಶಂಕರ್ ನಾಗ್ ಮನಸ್ಸನ್ನು ತುಂಬಾ ಕಾಡುತ್ತಾರೆ. ಅದರಂತೆ ಮಿನುಗು ತಾರೆ ಕಲ್ಪನಾ, ನಟಿ ಸೌಂದರ್ಯಾ, ದಿವ್ಯಾ ಭಾರತಿ- ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಕ್ಷರಂಗದ ಬೆರಗು, ತನ್ನ ಅಪೂರ್ವ ಕಂಚಿನ ಕಂಠದಿಂದ ರಂಗವನ್ನು ಆಳಿದ ಜಿ.ಆರ್. ಕಾಳಿಂಗ ನಾವಡರ ಅಕಾಲ ಅಗಲಿಕೆಯ ನೋವು ಕೂಡಾ ಈ ಸಂದರ್ಭದಲ್ಲಿ ಮಾಸದ ನೆನಪಾಗಿ ಉಳಿದಿದೆ. ಅವರು ತನ್ನ 31ನೆಯ ವಯಸ್ಸಿನಲ್ಲೆ ನಮ್ಮನ್ನು ಬಿಟ್ಟು, ಯಕ್ಷರಂಗವನ್ನು ಬಡವಾಗಿಸಿ ಕೇವಲ ನೆನಪಾಗಿ ಉಳಿದು ಹೋದರು.

ವರ್ಷದ ಹಿಂದೆ ಇಹಲೋಕವನ್ನು ತ್ಯಜಿಸಿದ ಯಕ್ಷಗಾನದ ಖ್ಯಾತ ಮದ್ದಳೆಗಾರರಲ್ಲಿ ಒಬ್ಬರಾಗಿದ್ದ ಶ್ರೀ ಅಡೂರು ಗಣೇಶ್ ರಾವ್ ಕೂಡಾ ಅಕಾಲ ಮೃತ್ಯುವಶರಾದವರು. ಯಕ್ಷಗಾನ ಕಲಾ ಜಗತ್ತಿನಲ್ಲಿ ‘ಅಡೂರು ಗಣೇಶ್ ರಾವ್’ ಎಂಬ ಹೆಸರನ್ನು ಕೇಳದ ಯಕ್ಷಗಾನ ಪ್ರಿಯರು ಇರಲಿಕ್ಕಿಲ್ಲ. ಹಾಗೆ ನೋಡಿದರೆ ಸಾಯಬೇಕಾದ ವಯಸ್ಸು ಖಂಡಿತಾ ಅವರದಲ್ಲ. ಇಷ್ಟು ಸಣ್ಣ ಪ್ರಾಯದಲ್ಲೇ ಅಷ್ಟನ್ನೂ ಸಾಧಿಸಿ ಹೋದವರು.
‘ಛೇ… ಬದುಕಬೇಕಾಗಿತ್ತು ಅವರು. ಬಹಳಷ್ಟು ಅಪರಿಮಿತ ಕೊಡುಗೆಗಳು ಅವರಿಂದ ಯಕ್ಷಗಾನಕ್ಕೆ ಸಲ್ಲುವುದಿತ್ತು’ ಎಂದು ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಾ ಉಂಟು. ಆದರೆ ಕಾಲನ ನಿರ್ಣಯಕ್ಕೆ ತಲೆಬಾಗದಿರುವುದುಂಟೇ? ಕೇವಲ ಮಧ್ಯವಯಸ್ಸಿನಲ್ಲೆ ಅಂದರೆ ತನ್ನ 50ರ ಹರೆಯದಲ್ಲೇ ತನ್ನ ಕಾಯವನ್ನು ಅಳಿದ ಅಡೂರು ಗಣೇಶ್ ರಾವ್ ಇನ್ನಿಲ್ಲ ಎಂಬ ವಾರ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ಅಧೀರನಾದದ್ದು ಸತ್ಯ. ಈ ಜಗತ್ತಿನಲ್ಲಿ ಜೀವರಾಶಿಗಳಾಗಿ ಜನಿಸಿದ ಮೇಲೆ ಸಾವು ಕೂಡಾ ನಿರೀಕ್ಷಿತವೇ ಆಗಿರುವುದರಿಂದ ‘ಇಂದು ಅವರು, ನಾಳೆ ನಾವು… ಸಾವು ಯಾವ ವಯಸ್ಸಿನಲ್ಲಿಯೂ ಬರಬಹುದು’ ಎಂದು ಸಮಾಧಾನಪಟ್ಟುಕೊಳ್ಳುವುದೇ ನಮ್ಮ ಮುಂದಿರುವ ಏಕೈಕ ದಾರಿ ಎನ್ನದೆ ವಿಧಿಯಿಲ್ಲ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಗಣೇಶ ಎಂಬ ಬಾಲಕ ‘ಅಡೂರು ಗಣೇಶ್ ರಾವ್’ ಆಗಿ ರೂಪುಗೊಂಡದ್ದು : ಅಡೂರು, ಮಧೂರು, ಮುಜುಂಗಾವು, ಕುಂಬಳೆ ಎಂಬ ನಾಲ್ಕು ಪ್ರಸಿದ್ಧ ಕ್ಷೇತ್ರಗಳಿಂದ ಕಾಸರಗೋಡು ಜಿಲ್ಲೆಯನ್ನು ಗುರುತಿಸುತ್ತಾರೆ. ಈ ಪಟ್ಟಿಗೆ ಅನಂತಪುರ ಮತ್ತು ಮಲ್ಲ ದೇವಳಗಳನ್ನೂ ಸೇರಿಸಬಹುದು. ಈ ಹಿನ್ನೆಲೆಯಲ್ಲಿ ಅಡೂರು ಎಂಬ ಊರು ಇತಿಹಾಸ ಪ್ರಸಿದ್ಧವಾಗಿದೆ. ಕಾಸರಗೋಡಿನ ಅನೇಕ ಯಕ್ಷಗಾನದ ಮಹನೀಯರನ್ನು ಗುರುತಿಸುವಾಗ ಅಡೂರು ಎಂಬ ಊರು ಕೂಡಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಹಲವಾರು ಕಲಾವಿದರನ್ನು ಯಕ್ಷಗಾನಕ್ಕೆ ಪರಿಚಯಿಸಿದ ಕೀರ್ತಿ ಅಡೂರು ಎಂಬ ಊರಿಗೆ ಸಲ್ಲುತ್ತದೆ.
ಇಂತಹಾ ಐತಿಹಾಸಿಕವಾಗಿಯೂ ಕಲಾಪೋಷಕತ್ವದ ನೆಲೆಯಲ್ಲಿಯೂ ಪ್ರಸಿದ್ಧವಾದ ನಾಡಿನಲ್ಲಿ ಯಕ್ಷಗಾನದ ಕಂಪು ಪಸರಿಸಿದ ಕುಟುಂಬವೊಂದರಲ್ಲಿ ಗಂಡು ಮಗುವೊಂದರ ಜನನವಾಗುತ್ತದೆ. ತಂದೆ ಕೃಷ್ಣ ರಾವ್ ಮತ್ತು ತಾಯಿ ಪಾರ್ವತಿ ಅಮ್ಮ ದಂಪತಿ ತಮ್ಮ ಪುತ್ರನಿಗೆ ಗಣೇಶ ಎಂದು ಹೆಸರನ್ನಿಟ್ಟರು. ಕುಟುಂಬ ಪೂರ್ತಿ ಯಕ್ಷಗಾನದ ಕಲಾವಿದರೇ. ಅಡೂರು ಗಣೇಶರ ತಂದೆ ಕೃಷ್ಣ ರಾವ್ ಚೆಂಡೆವಾದಕರು. ಅಜ್ಜ (ತಂದೆಯ ಚಿಕ್ಕಪ್ಪ) ಕೂಡಾ ಮದ್ದಳೆವಾದಕರಾಗಿದ್ದವರು. ಹೀಗಾಗಿ ಬಾಲಕ ಗಣೇಶನಿಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಯಾಗಿರುವಾಗಲೇ ಚೆಂಡೆ ಬಾರಿಸುವ ಬಗ್ಗೆ ಅತೀವ ಕುತೂಹಲವಿತ್ತು. ಆದ್ದರಿಂದ 1968ರಲ್ಲಿ ಜನಿಸಿದ್ದ ಗಣೇಶ ಯಕ್ಷಗಾನದ ಆಸಕ್ತಿಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು 7ನೇ ತರಗತಿಗೆ ಮೊಟಕುಗೊಳಿಸಿದರೂ ಯಕ್ಷಗಾನವನ್ನು ತನ್ನ ಉಸಿರಾಗಿ ಸ್ವೀಕರಿಸಿದ್ದ.

ಚೆಂಡೆ ಬಾರಿಸುವುದು ಅವರ ಕುಲವೃತ್ತಿಯಾಗಿದ್ದುದು ಮತ್ತು ಅಜ್ಜ, ತಂದೆಯಾದಿಯಾಗಿ ಕುಟುಂಬದ ಎಲ್ಲರೂ ಚೆಂಡೆ, ಮದ್ದಳೆವಾದಕರಾದುದರಿಂದ ಸಹಜವಾಗಿಯೇ, ರಕ್ತಗತವಾಗಿಯೇ ಬೆಳೆದು ಬಂದ ಆಸಕ್ತಿ ಗಣೇಶನನ್ನು ಯಕ್ಷಗಾನ ಕಲಾವಿದನಾಗಿ ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿತು. ಚಿಕ್ಕಂದಿನಲ್ಲಿ ಕುತೂಹಲದಿಂದ ತಂದೆಯವರು ಇತರರಿಗೆ ಕಲಿಸುವುದನ್ನು ಆಸಕ್ತಿಭರಿತ ಕಣ್ಣುಗಳಿಂದ ನೋಡುತ್ತಿದ್ದರು. ಸಹಜವಾಗಿಯೇ ತಂದೆ ಮಗನ ಆಸಕ್ತಿಯನ್ನು ಗಮನಿಸಿದರು. ಮನೆಯಲ್ಲಿ ತಂದೆ ಕೃಷ್ಣ ರಾವ್ ಅವರಿಂದ ಚೆಂಡೆಯ ಪಾಠ ಸುರು ವಾಯಿತು. ಆಮೇಲೆ ಕಲಿಕೆಯ ಸ್ವಲ್ಪ ಭಾಗ ಅಜ್ಜ ಶಾಮ ಮದ್ದಲೆಗಾರರಿಂದ ಮತ್ತು ಕುಂಡಂಕುಳಿ ರಾಮಕೃಷ್ಣಯ್ಯನವರಿಂದ ಆಯಿತು. ತನ್ನ 9ನೆಯ ವಯಸ್ಸಿನಿಂದಲೇ ಚೆಂಡೆಯ ಬಡಿತದ ಪ್ರದರ್ಶನವನ್ನು ಆರಂಭಿಸಿದ್ದರು. ಹೀಗೆ ತನ್ನ 14ನೆಯ ವಯಸ್ಸಿನಲ್ಲಿ ಅಡೂರು ಗಣೇಶ್ ರಾವ್ ಅವರು ಮೇಳದ ಕಲಾವಿದನಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಬೆಳೆಯತೊಡಗಿದರು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಮೊದಲ ಮೇಳದ ಪಯಣ : 1983ರಲ್ಲಿ ತನ್ನ 15ನೆಯ ವಯಸ್ಸಿನಲ್ಲಿ ಕಲಾಯಾನದ ಪಯಣವನ್ನು ಆರಂಭಿಸಿದ ಅಡೂರು ಗಣೇಶ್ ರಾವ್ ಮೊದಲಾಗಿ ಸೇರಿಕೊಂಡದ್ದು ಸುರತ್ಕಲ್ ಮೇಳಕ್ಕೆ. ಅಲ್ಲಿ ಒಂದು ವರ್ಷದ ಅನುಭವ ಪಡೆದರು. ಮುಂದಿನ ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಆರಂಭಿಸಿದ ಅವರು ಅಲ್ಲಿ ಪಕ್ವತೆಯ ಅನುಭವ ಪಡೆದರು. ಕಟೀಲು ಮೇಳದಲ್ಲಿ ಮೊದಲ ವರ್ಷ ಚಕ್ರತಾಳ ಬಾರಿಸುತ್ತಿದ್ದರು. ಆ ವರ್ಷ ವೇಷಧಾರಿಯಾಗಿಯೂ ಗುರುತಿಸಲ್ಪಟ್ಟಿದ್ದರು. ಕಟೀಲು ಮೇಳದಲ್ಲಿ ಇರಾ ಗೋಪಾಲಕೃಷ್ಣ ಭಾಗವತರ ಜೊತೆ ತಿರುಗಾಟ ಮಾಡಿದ್ದರು. ಜೊತೆ ಜೊತೆಯಲ್ಲಿ ಇರಾ ಗೋಪಾಲಕೃಷ್ಣ ಭಾಗವತರಿಂದ ಮದ್ದಳೆಯನ್ನೂ ಅಭ್ಯಾಸ ಮಾಡಿದ್ದರು. ಕಟೀಲು ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿದ ನಂತರ 5 ವರ್ಷಗಳ ಕಾಲ ಪುತ್ತೂರು ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಈ ನಡುವೆ ಕುಕ್ಕಿಲ ಶಂಕರ ಭಟ್ಟರಿಂದ ಶಾಸ್ತ್ರೀಯ ಸಂಗೀತದ ಮೃದಂಗವನ್ನೂ ಕಲಿತು ಕೊಂಡಿದ್ದರು. ಇದಾದ ಮೇಲೆ ಪುನಃ ಕಟೀಲು ಮೇಳಕ್ಕೆ ಸೇರಿದ್ದರು. ಅಲ್ಲಿ 6 ವರ್ಷ ಹಿಮ್ಮೇಳ ವಾದಕರಾಗಿದ್ದು ಮುಂದಿನ 1 ವರ್ಷ ಕದ್ರಿ ಮೇಳ ದಲ್ಲಿ ಕಲಾ ವ್ಯವಸಾಯ ಮಾಡಿದ್ದರು. ಆ ಬಳಿಕ ನಿರಂತರ 22 ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲಿಯೇ ಸೇವೆ ಸಲ್ಲಿಸಿದ್ದರು.
ಅಡೂರು ಗಣೇಶ್ ರಾವ್ ಮತ್ತು ಮೇಳನಿಷ್ಟೆ: ತನ್ನ ವೃತ್ತಿಜೀವನದ ಪೂರ್ವಾರ್ಧದ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿದರೆ ಅಡೂರು ಗಣೇಶರೆಂದೂ ಮೇಳಗಳನ್ನು ಆಗಾಗ ಬದಲಾಯಿಸಿದವರಲ್ಲ. ತನ್ನ ಜೀವನಕ್ಕೆ ಸ್ಥಿರತೆ ಬಂದ ಮೇಲೆ ಅಥವಾ ತಾನು ಸೆಟ್ಲ್ ಆದ ಮೇಲೆ ಸ್ಥಿರವಾಗಿ ಧರ್ಮಸ್ಥಳ ಮೇಳವೊಂದರಲ್ಲೇ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಶ್ರೀ ಧರ್ಮಸ್ಥಳ ಮೇಳವನ್ನು ಕಲಾವಿದರ ನೆಚ್ಚಿನ ಮೇಳವೆಂದು ಅಡೂರು ಗಣೇಶ ರಾಯರು ಹೇಳುತ್ತಿದ್ದರು.

ಮಾರ್ಗದರ್ಶಕರು ಹಾಗೂ ಸಹಕಲಾವಿದ ರೊಂದಿಗೆ ಅಡೂರು: ಅಡೂರು ಗಣೇಶ್ ರಾವ್ ಅವರು ತನ್ನನ್ನು ಕಲಿಸಿ ಪ್ರೋತ್ಸಾಹಿಸಿದ ಇರಾ ಗೋಪಾಲಕೃಷ್ಣ ಭಾಗವತರು, ರಂಗಮಾಹಿತಿ ಮತ್ತು ನಡೆಗಳನ್ನು ಉಪದೇಶಿಸಿದ ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ ಇವರನ್ನು ಆಗಾಗ ಉಲ್ಲೇಖಿಸುತ್ತಿದ್ದರು. ಅಡೂರು ಗಣೇಶ್ ರಾವ್ ಅವರು ಚೆಂಡೆ ಹಾಗೂ ಮದ್ದಳೆಗಳ ಸುಲ್ತಾನ್ ಮಾಡುವುದರಲ್ಲೂ (ಶ್ರುತಿಗೆ ತಕ್ಕಂತೆ ನಾದವನ್ನು ಹೊಂದಿಸುವುದು) ನಿಪುಣರಾಗಿದ್ದರು.
ಅಡೂರು ಮತ್ತು ಭಾಗವತಿಕೆ: ಅಡೂರು ಗಣೇಶ್ ರಾವ್ ಚೆಂಡೆಯ ಊರುಳಿಕೆಗಳಲ್ಲಿ, ಮದ್ದಲೆಯ ನುಡಿತಗಳಲ್ಲಿ ಮಾತ್ರ ನಿಪುಣರಲ್ಲ. ಅವರು ಭಾಗವತಿಕೆಯನ್ನೂ ಮಾಡಬಲ್ಲವರಾಗಿದ್ದರು. ಉತ್ತಮ ಶಾರೀರ ಹೊಂದಿರುವ ಅವರು ಧರ್ಮಸ್ಥಳ ಮೇಳದಲ್ಲಿ ಭಾಗವತರ ಅನುಪಸ್ಥಿತಿಯಲ್ಲಿ ಆಗಾಗ ಸಂಗೀತ ಭಾಗವತಿಕೆ ಮತ್ತು ಪ್ರಸಂಗ ಭಾಗವತಿಕೆಯನ್ನೂ ಮಾಡಿದ್ದಾರೆ. ಕೆಲವೊಂದು ಅನಿವಾರ್ಯತೆ ಎದುರಾದಾಗ ಬೆಳಗ್ಗಿನ ವರೆಗೂ ಹಾಡಿದ್ದುಂಟು ಎಂದು ಸ್ವತಃ ಅವರೇ ಹೇಳುತ್ತಿದ್ದರು.
ಭಾವನಾತ್ಮಕ ಅಡೂರು: ಯಕ್ಷಗಾನ ಕಲಾವಿದರಿಗೆ ಈಗ ಜೀವನ ನಿರ್ವಹಣೆಗೆ ಹೇಳಿಕೊಳ್ಳುವಂತಹಾ ಕಷ್ಟವೇನಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಅಡೂರು ಗಣೇಶ್ ರಾವ್ ಆಗಾಗ ತಮ್ಮ ಮನದಾಳದ ನೋವನ್ನು ಹೊರಹಾಕುತ್ತಿದ್ದರು. ಈಗಿನ ಅಭಿಮಾನಿ ಸಂಘಗಳ ಕಾಲಘಟ್ಟದಲ್ಲಿ ಹಿಮ್ಮೇಳವಾದಕರು ಕಳೆದು ಹೋಗುತ್ತಿದ್ದಾರೆ ಎಂಬುದು ಅವರ ಭಾವನೆಯಾಗಿತ್ತೆಂದು ತೋರುತ್ತದೆ. ಮುಮ್ಮೇಳ ಕಲಾವಿದರು ಮತ್ತು ಭಾಗವತರಿಗಿರುವಷ್ಟು ಮನ್ನಣೆ ಮದ್ದಳೆಗಾರರಿಗೆ ಸಿಗುತ್ತಿಲ್ಲವೆಂದು ಅವರು ವಿಷಾದಿಸುತ್ತಿದ್ದರು. “ಕಲಾವಿದನೊಬ್ಬ ಎಷ್ಟು ನಾಟ್ಯ ಮಾಡಿದ, ಎಷ್ಟು ಧೀಂಗಿಣ ಹಾರಿದ ಹಾಗೂ ಭಾಗವತರೊಬ್ಬರು ಎಷ್ಟು ಚೆನ್ನಾಗಿ ಹಾಡಿದರು ಎಂಬುದನ್ನು ಲೆಕ್ಕ ಹಾಕುತ್ತಾರೆಯೇ ವಿನಃ ಸಾಥ್ ನೀಡಿದ ವಾದಕರನ್ನು ಉಲ್ಲೇಖಿಸುವುದು ವಿರಳ” ಎಂಬ ಮಾತುಗಳು ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಅದೇನೇ ಇರಲಿ. ಪೌರಾಣಿಕ ಪ್ರಸಂಗಗಳ ನಡೆ, ರಂಗಮಾಹಿತಿಗಳನ್ನು ಬಲ್ಲ ಅಪರೂಪದ ಹಿಮ್ಮೇಳವಾದಕ ಅಡೂರು ಗಣೇಶ್ ರಾವ್ ಓರ್ವ ಅಪರೂಪದ ಸಾಧಕ. ಕ್ಲಿಷ್ಟ ಪ್ರಸಂಗಗಳಾದ ದುಶ್ಶಾಸನ ವಧೆ, ಅಭಿಮನ್ಯು ಕಾಳಗ, ಕುಮಾರ ವಿಜಯ ಹಾಗೂ ತಾಮ್ರಧ್ವಜ ಕಾಳಗವೇ ಮೊದಲಾದ ಅಪೂರ್ವ ಪ್ರಸಂಗಗಳ ನುಡಿಸಾಣಿಕೆ ಯಲ್ಲೂ ನಿಪುಣರಾಗಿದ್ದ ಅವರ ಅಗಲಿಕೆ ಇಡೀ ಯಕ್ಷಗಾನ ರಂಗಕ್ಕಾದ ನಷ್ಟ. ಈ ಸಾವು ನ್ಯಾಯವಲ್ಲ. ಕೇವಲ 50 ವರ್ಷಗಳ ವಯಸ್ಸು. ಇನ್ನೂ 15 ಸಂವತ್ಸರಗಳ ಕಾಲ ಯಕ್ಷಗಾನದ ಹಿಮ್ಮೇಳದಲ್ಲಿ ಅದ್ವಿತೀಯರಾಗಿ ಮೆರೆಯಬಹುದಾಗಿದ್ದ ರತ್ನವೊಂದನ್ನು ಕಳೆದುಕೊಂಡಿದ್ದೇವೆ.
ನಾವು ಆಗಾಗ ಕೇರಳಕ್ಕೆ ಹೋಗುತ್ತಿದ್ದಾಗ ಅಡೂರು ಎಂಬ ಊರನ್ನು ದಾಟಿಯೇ ಹೋಗುವುದು. ಇತ್ತೀಚೆಗೆ ಹೋದಾಗ ಅಡೂರು ಎಂಬ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಗಣೇಶ್ ರಾವ್ ನೆನಪಾದರು. ಅಡೂರಿನ ಸ್ವಚ್ಛಂದ ಗಾಳಿಯ ಸುಂಯ್ ಎನ್ನುವ ಸಂಗೀತದ ನಿನಾದದ ಜೊತೆ ದೂರದಲ್ಲೆಲ್ಲೋ ಶ್ರುತಿ, ಲಯಬದ್ಧವಾದ ಚೆಂಡೆಯ ಧ್ವನಿ ಕೇಳಿಬರುತ್ತಿರುವ ಹಾಗೆ ಅಪೂರ್ವವಾದ ಅನುಭವ. ಹೌದು… ಅದು ಅಡೂರು ಗಣೇಶ್ ರಾವ್ ಅವರ ಚೆಂಡೆಯ ನುಡಿತವೇ ಇರಬೇಕು.
ಲೇಖನ: ಮನಮೋಹನ್ ವಿ.ಎಸ್
